ಮೈಸೂರು: ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ತ್ರಿನೇಶ್ವರ ಸ್ವಾಮಿಗೆ ಚಿನ್ನದ ಕೊಳಗ ಧಾರಣೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಮುಂಜಾನೆಯೇ ದೇವಾಲಯಕ್ಕೆ ಆಗಮಿಸಿದ್ದ ಸಹಸ್ರಾರು ಭಕ್ತರು, ಚಿನ್ನದ ಕೊಳಗ ಧಾರಣೆ ಮಾಡಲಾಗಿದ್ದ ತ್ರಿನೇಶ್ವರಸ್ವಾಮಿಯ ದರ್ಶನ ಪಡೆದು ಧನ್ಯರಾದರು.
ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ತ್ರಿಷಿಕಾಕುಮಾರಿ ಒಡೆಯರ್ ಅವರು ಪುತ್ರ ಆದ್ಯವೀರ್ ಒಡೆಯರ್ ಜೊತೆಗೆ ತೆರಳಿ ತ್ರಿನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರ ಮುಂಜಾನೆ 3 ಗಂಟೆಯಿಂದಲೇ ದೇವಾಲಯದಲ್ಲಿ ಪೂಜಾ ಕಾರ್ಯ ಆರಂಭಿಸಲಾಯಿತು.
4.30ಕ್ಕೆ ದೇವರಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾ ನಿವೇದನೆ ಸೇರಿದಂತೆ ವಿಶೇಷ ಅಭಿಷೇಕ ಮಾಡಲಾಯಿತು. ನಂತರ, ಜಿಲ್ಲಾ ಖಜಾನೆಯಿಂದ ಶನಿವಾರ ಹಸ್ತಾಂತರಿಸಲಾಗಿದ್ದ ಮಹಾರಾಜ ಜಯಚಾಮರಾಜ ಒಡೆಯರ್ ಕೊಡುಗೆಯಾಗಿ ನೀಡಿರುವ 11 ಕೆ.ಜಿ. ತೂಕದ ಚಿನ್ನದ ಮುಖವಾಡವನ್ನು ಪೊಲೀಸ್ ಬಂದೋಬಸ್ತ್ನಲ್ಲಿ ಚಾಮುಂಡಿಬೆಟ್ಟದ ಕಾರ್ಯ ನಿರ್ವಾಹಣಾಧಿಕಾರಿ, ಮುಜರಾಯಿ ತಹಶೀಲ್ದಾರ್, ಮುಖ್ಯಆಗಮಿಕರು, ಅರಮನೆ ಮಂಡಳಿ ಅಧಿಕಾರಿಗಳ ಸಮ್ಮುಖದಲ್ಲಿ ತ್ರಿನೇಶ್ವರ ಸ್ವಾಮಿಗೆ ಧಾರಣೆ ಮಾಡಲಾಯಿತು.
ಬಳಿಕ ಮಹಾ ನಿವೇದನೆ ಸೇರಿ ಇನ್ನಿತರ ವಿಶೇಷ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ಮಾಡುವ ಮೂಲಕ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಮಹಾ ಶಿವರಾತ್ರಿಯ ಪ್ರಯುಕ್ತ ತ್ರಿನೇಶ್ವರ ಸ್ವಾಮಿಗೆ ಆಹೋರಾತ್ರಿ ಪೂಜೆ ಸಲ್ಲಿಸಲಾಯಿತು. ಜೊತೆಗೆ ಅಹೋರಾತ್ರಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.