Advertisement

ಧಾರವಾಡ ಸಂಗೀತ ವಿದ್ಯಾಕಾಶಿ ಎಂದಾಗಲಿ: ಪಂ|ಗುರವ 

05:21 PM Aug 31, 2018 | Team Udayavani |

ಧಾರವಾಡ: ವಿದ್ಯಾಕಾಶಿ ಎಂಬ ಖ್ಯಾತಿ ಹೊಂದಿರುವ ಧಾರವಾಡವು ಸಂಗೀತ ವಿದ್ಯಾಕಾಶಿ ಎಂಬುದಾಗಿ ಹೆಸರಿಸಿ ಈ ನಗರಕ್ಕೆ ನಾಮಕರಣ ಆಗುವಂತೆ ಸಂಗೀತಾಸಕ್ತರೆಲ್ಲ ಪ್ರಯತ್ನಿಸಬೇಕು ಎಂದು ಸಂಗೀತ ವಿದ್ವಾಂಸ ಪಂ| ಕೈವಲ್ಯಕುಮಾರ ಗುರವ ಹೇಳಿದರು.

Advertisement

ನಗರದ ಕವಿಸಂನಲ್ಲಿ ಕಲಾ ಮಂಟಪವು ಆಯೋಜಿಸಿದ್ದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಧಾರವಾಡವು ಜಗತ್ತಿನಲ್ಲಿಯೇ ಖ್ಯಾತಿ ಹೊಂದಿದ ಶ್ರೇಷ್ಠ ಸಂಗೀತಗಾರರನ್ನು ನೀಡಿದೆ. ಅಲ್ಲದೆ, ಲಲಿತಕಲಾ ಹಾಗೂ ಸಂಗೀತ ಮಹಾವಿದ್ಯಾಲಯದ ಮೂಲಕ ಹೊಸ ಹೊಸ ಸಂಗೀತ ಕಲಾ ಪ್ರತಿಭೆಯನ್ನು ಬೆಳೆಸುತ್ತಿದೆ. ಇಂತಹ ಧಾರವಾಡಕ್ಕೆ ಬರುವ ಹೊರರಾಜ್ಯದ ಬಂಧುಗಳಿಗೆ ಸಂಗೀತ ದಿಗ್ಗಜರ ನೆನಪನ್ನು ಕೊಡಲು ನಗರದ ಮುಖ್ಯ ದ್ವಾರಗಳಲ್ಲಿ ಸಂಗೀತ ವಿದ್ಯಾಕಾಶಿ ಧಾರವಾಡಕ್ಕೆ ಸ್ವಾಗತ ಎಂಬ ಸುಂದರ ನಾಮಫಲಕ ಅಳವಡಿಸಬೇಕು ಎಂದರು.

ಡಾ| ಅರಣ್ಯಕುಮಾರ ಮುನೆನ್ನಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವಕರು ಸಂಗೀತ ಕಲಿಯುವತ್ತ ಒಲವು ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಅವರು ತಮ್ಮ ಅಭ್ಯಾಸದ ಸಾಧನೆಯ ಜೊತೆಗೆ ಮತ್ತೊಬ್ಬರ ಸಂಗೀತ ಕೇಳುವ ರೂಢಿ ಬೆಳೆಸಿಕೊಳ್ಳಬೇಕು. ಇದು ಅವರ ಅಧ್ಯಯನಕ್ಕೆ ಪೂರಕವಾಗಿರುತ್ತದೆ ಎಂದು ಹೇಳಿದರು.

ಸಂಘದ ಕೋಶಾಧ್ಯಕ್ಷ ಕೃಷ್ಣ ಜೋಶಿ ಇದ್ದರು. ಮೇಘಾ ಹುಕ್ಕೇರಿ ಪ್ರಾರ್ಥಿಸಿದರು. ಪ್ರಕಾಶ ಎಸ್‌. ಉಡಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಶಂಕರ ಕುಂಬಿ ಸ್ವಾಗತಿಸಿದರು. ಕೆ.ಎಚ್‌. ನಾಯಕ ನಿರೂಪಿಸಿದರು. ಎಸ್‌.ಸಿ. ನೀರಾವರಿ ವಂದಿಸಿದರು. ನಂತರ ಮೈಸೂರಿನ ಗಾಯಕ ರಮೇಶಕುಮಾರ ಕೋಲಕುಂದ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಜರುಗಿತು. ಸಂವಾದಿನಿಯಲ್ಲಿ ಡಾ| ಅರ್ಜುನ ವಠಾರ ಹಾಗೂ ತಬಲಾದಲ್ಲಿ ಅಲ್ಲಮಪ್ರಭು ಕಡಕೋಳ ಸಾಥ್‌ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next