Advertisement

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

11:06 AM Apr 13, 2024 | Team Udayavani |

ಇಂಗ್ಲೆಂಡಿನಲ್ಲಿ, ಚಳಿಗಾಲದ ತಿಂಗಳುಗಳು ಸಾಮಾನ್ಯವಾಗಿ ಶೀತ ಮತ್ತು ಮಂಕಾಗಿರುತ್ತವೆ. ಆದ್ದರಿಂದ ಜನರು ಆಫೀಸ್‌ ಬಿಟ್ಟರೆ ಬಹಳಷ್ಟು ಮನೆಯ ಒಳಗೆಯೇ ಬಂಧಿಯಾಗಿ ಇರುತ್ತಾರೆ. ಶೀತ ಚಳಿಗಾಲದ ತಿಂಗಳುಗಳಲ್ಲಿ ದಿನವೂ ಚಿಕ್ಕದಾಗಿರುತ್ತದೆ ಹಾಗೂ ಜನಜೀವನವೂ ರಗ್ಗಿನೊಳಗೆ ಮುದುಡಿ ಶಾಂತವಾಗಿರುತ್ತದೆ.

Advertisement

ಆದರೆ ವಸಂತಕಾಲ ಸಮೀಪಿಸುತ್ತಿದ್ದಂತೆ, ಜನರು ಜಾಗಿಂಗ್‌, ವ್ಯಾಯಾಮ, ಈಜು ಮತ್ತು ವಾಹನ ಚಾಲನೆಯಂತಹ ಹೊರಾಂಗಣ ಚಟುವಟಿಕೆಗಳ ಬಗ್ಗೆ ಹೆಚ್ಚು ಸಕ್ರಿಯ ಮತ್ತು ಉತ್ಸುಕರಾಗಲು ಪ್ರಾರಂಭಿಸುತ್ತಾರೆ. ವಾತಾವರಣವನ್ನು ಅನುಭವಿಸುವುದೇ ಆಹ್ಲಾದಕರವಾಗುತ್ತದೆ.

ಉತ್ತಮ ಹವಾಮಾನವನ್ನು ಆನಂದಿಸುತ್ತಾ ಜನರು ಮನೆಯಿಂದ ಹೊರಬರುತ್ತಾರೆ ಹಾಗೂ ನಗರಗಳು ಮತ್ತೆ ಜೀವಂತವಾಗುತ್ತವೆ, ಜಿಗಿಜಿಗಿಗೊಡುತ್ತವೆ. ನಮ್ಮ ಭಾರತದಲ್ಲಿ ತಿಂಗಳಿಗೆ ಒಂದೊಂದು ಹಬ್ಬದಂತೆ ವರ್ಷಪೂರ್ತಿ ಉತ್ಸಾಹಭರಿತ ವಿವಿಧ ಹಬ್ಬಗಳನ್ನು ಆಚರಿಸಲಾಗುತ್ತದೆ!

ಹಬ್ಬವಿಲ್ಲದ ಋತುವನ್ನು ಹೇಳಿನೋಡೋಣ. ಮಳೆಗಾಲಕ್ಕೂ ಹಬ್ಬ, ಬೇಸಗೆಗೂ ಉತ್ಸವ. ಚಳಿಗಾಲದಲ್ಲೂ ಸಂಭ್ರಮ ಭಾರತದಲ್ಲಿ. ಇಂಗ್ಲೆಂಡಿನಂತಹ ಹೊರದೇಶದ ಚಳಿಗಾಲದ ನೀರಸತೆಯು, ವರ್ಷವಿಡೀ ಹಬ್ಬಗಳ ಸಂಭ್ರಮಕ್ಕೆ ಒಗ್ಗಿಹೋಗಿರುವ ಭಾರತೀಯರಿಗೆ ತಮ್ಮ ತವರಿನ ಈ ಆಚರಣೆಗಳು ನೆನಪಿನ ಭಾವೋದ್ವೇಗದ ಅಲೆಯನ್ನೇ ಎಬ್ಬಿಸುತ್ತದೆ. ಈ ಭಾವೋದ್ವೇಗದಿಂದ ಹೊರಬರಲು ಹಾಗೂ ಮನಸ್ಸನ್ನು ಪುನರುಜ್ಜೀವನಗೊಳಿಸಲು, ಚಳಿಗಾಲ ಮುಗಿಯುತ್ತಾ ಬಂದಂತೆ ಇಂಗ್ಲೆಂಡಿನಲ್ಲಿರುವ ಆನೇಕ ಭಾರತೀಯ ಸಮುದಾಯಗಳು ದೇಶೀ ಹಬ್ಬಗಳನ್ನು ಆಚರಿಸಲು ಒಂದು ಈವೆಂಟ್‌ಗಳನ್ನು, ಕೂಟಗಳನ್ನು ಆಯೋಚಿಸಿ ಭಾರತೀಯರನ್ನು ಒಗ್ಗೂಡಿಸುತ್ತಾರೆ.

ಇಂತಹ ಕೂಟಗಳಲ್ಲಿ ಅಥವಾ ಆಚರಣೆಯಲ್ಲಿ ಪಾಲ್ಗೊಳ್ಳುವ ಮೂಲಕ ದೂರದ ದೇಶದಲ್ಲಿರುವ ಎಲ್ಲರಿಗೂ ಮತ್ತೆ ತಮ್ಮ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಮರುಸಂಪರ್ಕಿಸಲು ಸಹಾಯವಾಗುತ್ತದೆ ಹಾಗೂ ಅದೆಷ್ಟೋ ನಮ್ಮದೇ ದೇಶದ ಜನರ ಪರಿಚಯವಾಗುತ್ತಾರೆ. ವಿಶ್ವದಾದ್ಯಂತ ಚದುರಿದ ಭಾರತೀಯರು ತಮ್ಮ ರಾಜ್ಯದ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಜೀವಂತವಾಗಿರಿಸಲು ಅನೇಕ ಸಂಘಗಳನ್ನು ರಚಿಸಿದ್ದಾರೆ.

Advertisement

ಈ ಸಂಘಗಳು ನೃತ್ಯ, ಸಂಗೀತ, ಭಾಷೆ ಮತ್ತು ರಾಜ್ಯ-ನಿರ್ದಿಷ್ಟ ಆಚರಣೆಗಳಂತಹ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ಪ್ರಯತ್ನಗಳು ವಿದೇಶದಲ್ಲಿ ನೆಲೆಸಿರುವ ಭಾರತೀಯ ಕುಟುಂಬಗಳಿಗೆ, ವಿಶೇಷವಾಗಿ ಮಕ್ಕಳಿಗೆ ತಮ್ಮ ಮೂಲಗಳನ್ನು ತಿಳಿದುಕೊಳ್ಳಲು ಮತ್ತು ಅವರ ತಾಯ್ನಾಡಿನ ಸಂಪ್ರದಾಯಗಳೊಂದಿಗೆ ಸಂಪರ್ಕ ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ. ಇಲ್ಲಿ ಹೇಳಹೊರಟಿರುವುದೂ ಅಂತಹುದೇ ಸಂಘದ ಕಲಾಕಾಣ್ಕೆಯನ್ನು.

ಶ್ರೀ ಸಂತೋಷ್‌ ಮತ್ತು ಸುಪ್ರಿಯಾ ದೇಶಪಾಂಡೆ ದಂಪತಿಯವರು ಸ್ಥಾಪಿಸಿದ “ಗಮಭನ’ ಸಂಸ್ಥೆಯು, ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಭಾರತೀಯ ಹಾಗೂ ಮಹಾರಾಷ್ಟ್ರದ ಸಂಸ್ಕೃತಿಯನ್ನು ಉತ್ತೇಜಿಸುವ ಮಹತ್ವದ ಕಾರ್ಯವನ್ನು ನಿರ್ವಹಿಸುತ್ತಿದೆ. ಮರಾಠಿ ಭಾಷೆ, ಅಭಂಗಗಳು ಮತ್ತು ನಾಟ್ಯ ಸಂಗೀತದಂತಹ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಹಾಗೂ ಸಾಹಿತ್ಯವನ್ನು ವಿದೇಶದಲ್ಲೂ ಉಳಿಸುವ ಹಾಗೂ ಮಕ್ಕಳಿಗೆ ಕಲಿಸುವ ಗುರಿಯನ್ನು ಸಾಧಿಸುತ್ತಿದೆ.”ಗಮಭನ’ ಈಗಾಗಲೇ ಹಲವು ಯಶಸ್ವಿ ಕಾರ್ಯಕ್ರಮಗಳನ್ನು ನಡೆಸಿದೆ.

ಈ ವರ್ಷ, ಖ್ಯಾತ ಗಾಯಕರಾದ ಪಂಡಿತ್‌ ಆನಂದ್‌ ಭಾಟೆ ಅವರ “ಸ್ವರ ಆನಂದ್‌’ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿತು. ಭಾರತ ರತ್ನ ಪಂಡಿತ್‌ ಭೀಮಸೇನ್‌ ಜೋಶಿ ಅವರಿಂದಲೇ ಶಿಕ್ಷಣ ಪಡೆದ ಭಾಟೆಯವರು, ಜೋಶಿ ಅವರ ಶ್ರೀಮಂತ ಕಿರಾನಾ ಘರಾನಾ ಸಂಗೀತ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಭಾಟೆಯವರ ಪ್ರವಾಸದಲ್ಲಿ ಸಂಗೀತ ಝರಿಯಾಗಿ ಪ್ರವಹಿಸಿದ್ದು- ತೀರ್ಥ ವಿಠಲ ಕ್ಷೇತ್ರ ವಿಠಲ, ಮಾಂಝೆ ಮಾಹೆರ ಪಂಢರಿ, ಇಂದ್ರಾಯಣಿ ಕಾಠಿ ಮುಂತಾದವುಗಳು. ಅವರು ರಾಗ ಮುಲ್ತಾನಿ, ದೇವಾಚಿ ಆಳಂದಿ, ಜೋ ಭಜೇ ಹರಿ ಕೊ ಸದಾ ರಾಗ್‌ ಪೂರಿಯಾ ಧನಶ್ರೀ, ಕಲಾಶ್ರೀ ಗಳನ್ನೂ ಪ್ರಸ್ತುತ ಪಡಿಸಿದರು. ವಿವಿಧ ಬಂದಿಶ್‌ಗಳು ನೋಡುಗರ‌ನ್ನು ಬಹುವಾಗಿ ಆಸ್ವಾದಿಸಲು ಕಾರಣವಾಯಿತು.

ಭಾಟೆಯವರ ಜತೆ ತಬಲಾದಲ್ಲಿ ಪಂಡಿತ್‌ ಭರತ್‌ ಕಾಮತ್‌ ಮತ್ತು ಹಾರ್ಮೋನಿಯಂನಲ್ಲಿ ಪಂಡಿತ್‌ ಸುಯೋಗ್‌ ಕುಂಡಲ್ಕರ್‌ ಅವರು ಸಾಥ್‌ ನೀಡಿದ್ದರು. ಇವರೀರ್ವರ ಸಂಗೀತ ಸಾಧನೆಯೂ ಪ್ರೌಢವೇ. ಆನಂದ್‌ ಭಾಟೆಯವರ ತಂಡದ ಸಂಗೀತ ಪ್ರದರ್ಶನ, ಸಂಗೀತ ಪ್ರಿಯರಿಗೆ ಮರೆಯಲಾಗದ ಅನುಭವವನ್ನು ನೀಡಿತು. ವಿವಿಧ ರಾಗಗಳು, ಭಕ್ತಿಗೀತೆಗಳು, ನಾಟ್ಯಸಂಗೀತಗಳು ಮತ್ತು ಭಾರತೀಯ ಶಾಸ್ತ್ರೀಯ ಸಂಗೀತ ಪದ್ಧತಿಗಳ ಬಗ್ಗೆ ಭಾಟೆಯವರು ಹಂಚಿಕೊಂಡ ಕಥೆಗಳು ಮತ್ತು ಉಪನ್ಯಾಸಗಳು ಕಾರ್ಯಕ್ರಮಕ್ಕೆ ಮತ್ತಷ್ಟು ಶ್ರೀಮಂತಿಕೆ ಸೇರಿಸಿತು.

ಪಂಡಿತ್‌ ಭಾಟೆಯವರ ಎಲ್ಲ ಮೂರು ಕಾರ್ಯಕ್ರಮಗಳು ಕಿಕ್ಕಿರಿದ ಸಭಾಂಗಣದಲ್ಲಿ ನಡೆದವು. ಸಂಗೀತಾರಾಧಕರು ಬಹುವಾಗಿ ಮೆಚ್ಚಿದ ಕಾರ್ಯಕ್ರಮವಾಯಿತು. ಯೂರೋಪಿನ ಮೂಲೆಮೂಲೆಗಳಿಂದಲೂ ಆಸಕ್ತರು ಬಂದು ಭಾಗವಹಿಸಿದ್ದರು. ವಿದೇಶದಲ್ಲಿ ಈ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಸುಲಭದ ಸಂಗತಿ ಅಲ್ಲ. ಭಾರತದಿಂದ ಕಲಾವಿದರನ್ನು ಆಹ್ವಾನಿಸುವುದು, ವ್ಯವಸ್ಥಾಪನ ಕಾರ್ಯಗಳನ್ನು ನಿಭಾಯಿಸುವುದು ಮತ್ತು ಇವಿಷ್ಟಾಗಿದ್ದರೂ ಪ್ರೇಕ್ಷಕರನ್ನು ಸೆಳೆಯುವುದು ಸಂಕೀರ್ಣ ಪ್ರಕ್ರಿಯೆ. ಗಮಭನ ಸಂಸ್ಥೆಯ ಪ್ರಯತ್ನಗಳು ಈ ನಿಟ್ಟಿಲ್ಲಿನಲ್ಲಿ ಶ್ಲಾಘನಾರ್ಹ. ಯುಕೆಯ ಭಾರತೀಯ ಸಮುದಾಯಕ್ಕೆ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯವಾಗಿವೆ.

ಏಕೆಂದರೆ ಅವು ತಮ್ಮ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ಹೊಸ ಪೀಳಿಗೆಯವರಿಗೆ ಈ ಶ್ರೀಮಂತ ಪರಂಪರೆಯನ್ನು ಪರಿಚಯಿಸಲು ಅವಕಾಶ ನೀಡುತ್ತವೆ. ಬೇಸಗೆಯ ಆಗಮನದೊಂದಿಗೆ, ಸಂಗೀತ, ನೃತ್ಯ ಮತ್ತು ಇತರ ಕಲಾ ಪ್ರಕಾರಗಳನ್ನು ಒಳಗೊಂಡ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಯುಕೆಯಾದ್ಯಂತ, ವಿಶೇಷವಾಗಿ ಲಂಡನ್‌ನಲ್ಲಿ ನಡೆಯುವ ನಿರೀಕ್ಷೆಯಿದೆ.

ಒಂದೆಡೆ, ಗೌರವಾನ್ವಿತ ಭಾರತೀಯ ಕಲಾವಿದರನ್ನು ಆಹ್ವಾನಿಸಿ ಮತ್ತು ವೇದಿಕೆಗಳನ್ನು ಒದಗಿಸುವುದು ಸಮುದ್ರದಾಚೆಯ ದೇಶದ ಕೂಟಗಳಿಗೆ ನಿರ್ಣಾಯಕವಾಗಿದೆ. ಅದೇ ಸಮಯದಲ್ಲಿ ಭಾರತೀಯ ಸಂಗೀತ ಮತ್ತು ವಾದ್ಯಗಳ ಸಾರವು ವಿಶ್ವಾದ್ಯಂತ ಹರಡುತ್ತದೆ. ಆದ್ದರಿಂದ, ಯುಕೆಯಲ್ಲಿ ವಾಸಿಸುವ ಭಾರತೀಯ ಸಮುದಾಯವು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಬೆಂಬಲಿಸಬೇಕು ಮತ್ತು ಭಾಗವಹಿಸಲೇಬೇಕು.

ಈಗಾಗಲೇ ಮುಂದಿನ ಸಾಕಷ್ಟು ಕಾರ್ಯಕ್ರಮಗಳು ಹಾಗೂ ಕಲಾವಿದರು ನಿಗದಿಯಾಗಿವೆ. ಇದಲ್ಲದೆ ಭಾರತವು ಯುಗಾದಿ, ರಾಮ ನವಮಿ ಮತ್ತು ಚೈತ್ರ ನವರಾತ್ರಿಯಂತಹ ಹಬ್ಬಗಳಿಗೆ ಸಜ್ಜಾಗುತ್ತಿದ್ದಂತೆ, ಯುಕೆ ಮೂಲದ ಹಲವಾರು ಸಂಸ್ಥೆಗಳು ಈಗಾಗಲೇ ಕಾರ್ಯಕ್ರಮಗಳು ಮತ್ತು ಕೂಟಗಳನ್ನು ನಿಗದಿಪಡಿಸಿವೆ. ವಲಸಿಗರು ಒಗ್ಗೂಡಲು, ತಮ್ಮ ಬೇರುಗಳನ್ನು ಆನಂದಿಸಲು ಮತ್ತು ಶಾಶ್ವತ ನೆನಪುಗಳನ್ನು ರಚಿಸಲು ಇದು ಒಂದು ಅವಕಾಶವಾಗಿದೆ.

ಈ ಎಲ್ಲ ಕಾರ್ಯಕ್ರಮಗಳನ್ನು ಯಶಸ್ಸು ಮಾಡಿ ನಮ್ಮ ಸಾಂಸ್ಕೃತಿಕ ಪರಂಪರೆಯೊಂದಿಗೆ ತೊಡಗಿಸಿಕೊಳ್ಳುವ ಅವಕಾಶವನ್ನು ಕೈಚೆಲ್ಲುವುದು ಬೇಡ. ಪಾಪ್‌ ಮತ್ತು ರಾಕ್‌ ಸಂಗೀತದ ಪ್ರವೃತ್ತಿಯ ನಡುವೆ, ಭಾರತೀಯ ಶಾಸ್ತ್ರೀಯ ಮತ್ತು ಪ್ರಶಾಂತ, ಸುಮಧುರ ಗೀತೆಗಳನ್ನು ಪೋಷಿಸುವುದನ್ನು ಮರೆಯದಿರೋಣ. ನಮ್ಮ ಸಂಸ್ಕೃತಿಯನ್ನು ಸಕ್ರಿಯವಾಗಿ ಬೆಂಬಲಿಸುವ ಮೂಲಕ, ನಾವು ಅದರ ಬೆಳವಣಿಗೆ ಮತ್ತು ಚೈತನ್ಯವನ್ನು ಖಚಿತಪಡಿಸುವ, ಮುಂದಿನ ಪೀಳಿಗೆಗೆ ಅದನ್ನು ರಕ್ಷಿಸುವ.

*ವಿಟ್ಲ ತನುಜ ಶೆಣೈ, ಚೆಲ್ಟೆನ್‌ಹ್ಯಾಮ್‌

Advertisement

Udayavani is now on Telegram. Click here to join our channel and stay updated with the latest news.

Next