Advertisement

ಯುವ ಪೀಳಿಗೆಗೆ ಧರ್ಮ ಮಾರ್ಗದರ್ಶನ ಅಗತ್ಯ

03:03 PM Aug 12, 2017 | |

ಶ್ರವಣಬೆಳಗೊಳ (ಪಟ್ಟಮಹಾದೇವಿ ಶಾಂತಲಾವೇದಿಕೆ): ಮಕ್ಕಳು ಸನ್ಮಾರ್ಗದಲ್ಲಿ ಸಾಗುವಂತೆ ನೋಡಿಕೊಂಡು ಸಚ್ಚಾರಿತ್ರ್ಯ ವಂತರಾಗುವಂತೆ ನೋಡಿಕೊಳ್ಳುವುದು ಹೆತ್ತವರ ಕರ್ತವ್ಯ. ಮುಂದಿನ ಯುವಪೀಳಿಗೆಗೆ ಧರ್ಮದ ಮಾರ್ಗ ದರ್ಶನ ಲಭ್ಯವಾಗಬೇಕು ಎಂದು ರಾಷ್ಟೀಯ ಜೈನ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷೆ ಹೇಮಾವತಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಶ್ರವಣಬೆಳಗೊಳದ ಗೊಮ್ಮಟನಗರದ ಪಟ್ಟಮಹಾದೇವಿ ಶಾಂತಲಾ ವೇದಿಕೆಯಲ್ಲಿ ಅಧ್ಯಕ್ಷ ಪೀಠದಿಂದ ಮಾತನಾಡಿದ ಅವರು, ಹಿಂದೆ 8 ನೇ ವರ್ಷದಲ್ಲಿ ಜೈನ ಧರ್ಮದ ಮಕ್ಕಳು ವ್ರತ ಸ್ವೀಕಾರ ಮಾಡಿ ಮಕರಾತ್ರಗಳ ಬಗ್ಗೆ ಔದುಂಬರಫ‌ಲ, ಜಲಗಾಲನ, ರಾತ್ರಿ ಭೋಜನ ತ್ಯಾಗ, ದೇವರದರ್ಶನ, ಜಪಾದಿ ದೀಕ್ಷೆ ಪಡೆಯುತ್ತಿದ್ದರು. ಇಂದು ಮದುವೆಗೆ ಮೊದಲು ವ್ರತ ಸ್ವೀಕಾರ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಆಚರಣೆ ಬಗ್ಗೆ ಮಕ್ಕಳಿಗೆ ಆಸಕ್ತಿ ಕಡಿಮೆಯಾಗುತ್ತದೆ. ಮಕ್ಕಳು ಗೆಳೆಯರ ಆಮಿಷಕ್ಕೆ ಭಾಗದೆ ನಮ್ಮ ಮಕ್ಕಳ ಮನಸ್ಸು ಜೈನಧರ್ಮದ ತತ್ವಾದರ್ಶಗಳಲ್ಲಿ ಸ್ಥಿರವಾಗುವಂತೆ ನೋಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಪಂಚಾಣುವ್ರತದ ಬಗ್ಗೆ ಬೋಧಿಸುತ್ತಿದ್ದ ಆಚಾರ್ಯ ತುಳಸಿ ಅವರ ಅಣುವ್ರತ ಆಂದೋಲನ ಮಾದರಿಯಲ್ಲಿ ಮತ್ತೂಂದು ಕಾರ್ಯವಾಗಬೇಕಿದೆ ಎಂದು ಪೋಷಕರಿಗೆ ಕಿವಿಮಾತು ಹೇಳಿದರು. ಸಂಸ್ಕೃತಿ ಬದಲಾವಣೆ ಎಂದರೆ ಹೊರಗಿನ ವೇಷಭೂಷಣ, ಆಹಾರ ಪದ್ಧತಿ ಆಚರಣೆ ಅಷ್ಟೇ ಅಲ್ಲ. ಬದಲಾಗಿ ಅತಿಥಿ ಸತ್ಕಾರ, ಗುರು ಹಿರಿಯಲ್ಲಿ ಗೌರವ, ಕೌಟುಂಬಿಕ ಸಾಮರಸ್ಯ, ನಡವಳಿಕೆ ಇವೆಲ್ಲವನ್ನು ನಿರ್ಮಿಸುವುದು ಹೆತ್ತವರ ಕರ್ತವ್ಯವಾಗಿದೆ ಎಂದ ಅವರು. ಮುಂದಿನ ಪೀಳಿಗೆಗೆ ಸರಿಯಾದ ಮಾರ್ಗದರ್ಶನ ಮಾಡಿ ಸಚ್ಛಾರಿತ್ರವಂತರೂ, ಸನ್ಮಾರ್ಗಿಗಳಾಗುವಂತೆ ನೋಡಿಕೊಳ್ಳುವುದು ಪಾಲಕರ ಕರ್ತವ್ಯ, ವಿದ್ಯೆ, ಉದ್ಯೋಗಕ್ಕಾಗಿ ಅನಿವಾರ್ಯವಾಗಿ ದೂರದ ಊರಿಗೆ ಮಕ್ಕಳು ಹೋಗಬೇಕಾಗುತ್ತದೆ ಈ ವೇಳೆ ಅವರ ಮೇಲೆ ಹೆತ್ತವರ ಕಣ್ಗಾವಲು ಇಡುವುದು ಕಷ್ಟ, ಅದಕ್ಕಾಗಿ ಚಿಕ್ಕ ವಯಸ್ಸಿನಲ್ಲಿ ಜೈನ ಧರ್ಮದ ಸಂಸ್ಕಾರ ನೀಡಿದರೆ ಯಾವುದೆ ಸಂದರ್ಭದಲ್ಲಿ ದಾರಿ ತಪ್ಪುವುದಿಲ್ಲ ಎಂದು ಹೇಳಿದರು. ಜೈನರು ಅಲ್ಪಸಂಖ್ಯಾತ ಧರ್ಮದವರಾದರೂ ಜೈನಧರ್ಮದ ಸಚ್ಚಾರಿತ್ರ್ಯ ಅಹಿಂಸೆ, ಶೀಲ, ಸಂಯಮ ಇತ್ಯಾದಿ ಮೌಲ್ಯಗಳಿಂದ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ, ಮನ್ನಣೆಗೆ ಪಾತ್ರರಾಗಿದ್ದೇವೆ, ಜೈನಧರ್ಮಿಯರು ಸಮಾಜಕ್ಕೆ ಮಾದರಿಯಾಗಬೇಕು ಎಂದರು. ಅಹಿಂಸೆ, ದಯೆ ಯಾವಾಗಲು ನಕಾರಾತ್ಮಕವಾಗಬಾರದು. ದಯೆ, ಕರುಣೆ
ಪ್ರತಿಯೊಬ್ಬರಲ್ಲು ಇರಬೇಕು, ವಾಯು, ಅರಣ್ಯ, ಪೃಥ್ವಿ, ಸಾಕುಪ್ರಾಣಿಗಳನ್ನು ಉಳಿಸುವಲ್ಲಿ, ಗಿಡ-ಮರ ಬೆಳೆಸುವಲ್ಲಿ ನಾವು ವಿಫ‌ಲರಾಗಿದ್ದೇವೆ. ವೈಜ್ಞಾನಿಕ ದೃಷ್ಟಿಕೋನವನ್ನು ಮಹಿಳೆಯರು ಬೆಳೆಸಿಕೊಳ್ಳಬೇಕು. ಪರಿಸರ ಕಾಳಜಿ, ಗಿಡನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದೂ ಹೆಗ್ಗಡೆ ಕರೆ ನೀಡಿದರು. ಜೈನಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ , ಶಾಸಕ ಸಿ.ಎನ್‌.ಬಾಲಕೃಷ್ಣ , ಮಹಾಮಸ್ತಕಾಭಿಷೇಕ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಜೈನ್‌, ಜಿಪಂ ಸದಸ್ಯೆಯರಾದ ಸಿ.ಕೆ.ಕುಸುಮಾರಾಣಿ, ಮಮತಾ, ಚನ್ನರಾಯಪಟ್ಟಣ ತಾಪಂ ಸದಸ್ಯೆ ಮಹಾಲಕ್ಷ್ಮೀ, ಶ್ರವಣಬೆಳಗೊಳ ಗ್ರಾಪಂ ಅಧ್ಯಕ್ಷೆ ಹೇಮಾ, ಜೆ.ಆರ್‌.ಗೀತಾ, ತಾರಾ, ಶಿಲಾಜೈನ್‌, ಲತಾಜೈನ್‌ ಮತ್ತಿತರರು ಉಪಸ್ಥಿರಿದ್ದರು ಸಮ್ಮೇಳನಾಧ್ಯಕರ ಮೆರವಣಿಗೆಗೆ ಕಾಲ ತಂಡಗಳ ಮೆರಗು ಹಾಸನ: ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳದಲ್ಲಿ ಸಮ್ಮೇಳನಾಧ್ಯಕ್ಷೆ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಮೆರವಣಿಗೆಯು ಕಲಾ ತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಅದ್ದೂರಿಯಾಗಿ ನಡೆಯಿತು. ಶ್ರವಣಬೆಳಗೊಳದ ಜೈನ ಮಠದ ಆವರಣದಲ್ಲಿರುವ ಚಾವುಂಡರಾಯ ಸಭಾ ಮಂಟಪದಲ್ಲಿ ಶ್ರವಣಬೆಳಗೊಳದ ದಿಗಂಬರ ಜೈನಮಠದ ಪೀಠಾಧ್ಯಕ್ಷ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಕಳಶ ಪೂಜೆ ನೆರವೇರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮಂಗಳ ಕಳಶದ ಶೇಷ ಪೂಜೆಯ ನಂತರ ಸಮ್ಮೇಳನಾಧ್ಯಕ್ಷೆ ಹೇಮಾವತಿ ವೀರೇಂದ್ರ ಹೆಗ್ಗಡೆ, ಸ್ವಾಗತ ಸಮಿತಿ ಅಧ್ಯಕ್ಷೆ ಶೀಲಾ, ಮಹಾ ಮಸ್ತಕಾಭಿಷೇಕ ರಾಷ್ಟ್ರೀಯ ಸಮಿತಿ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌ ಅವರನ್ನು ಭಂಡಾರ ಬಸದಿಯಿಂದ ಸಾರೋಟಿನಲ್ಲಿ ಮೆರವಣಿಗೆ ಮೂಲಕ ಗೊಮ್ಮಟೇಶ್ವರ ನಗರದಲ್ಲಿನ ಪಟ್ಟಮಹಾದೇವಿ ಶಾಂತಲಾ ಸಭಾಮಂಟಪಕ್ಕೆ
ಕರೆತರಲಾಯಿತು. ಮೆರವಣಿಗೆಯಲ್ಲಿ 27 ಮಹಿಳಾ ಕಲಾ ತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರುಗು ನೀಡಿದವು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ರಸ್ತೆಯಲ್ಲಿ ಸಾಗುತ್ತಿದ್ದಂತೆ ಸಮ್ಮೇಳನಾಧ್ಯಕ್ಷರಿಗೆ ಸಾರ್ವಜನಿಕರು ಕೈಬೀಸಿ ಶುಭ ಕೋರಿದರೆ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿನಿಯರು ರಸ್ತೆಬದಿ ಯಲ್ಲಿ ನಿಂತು ಶ್ರೀಗೊಮ್ಮಟೇಶ್ವರ ಹಾಗೂ ಸಮ್ಮೇಳನಾಧ್ಯಕ್ಷೆಗೆ ಜೈಕಾರ ಹಾಕಿದರು. ಸುಮಾರು ಎರಡು ಕಿ.ಮೀ ವರೆಗೆ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಸ್ಯಾಕೋಫೋನ್‌, ಚಂಡೆವಾದ್ಯ ಡೋಲ್‌ ಸೆಟ್‌, ಲೆಜಿಮ್‌ ತಂಡಗಳು, ಕೋಲಾಟ ಹಾಗೂ ಡೊಳ್ಳು ಕುಣಿತದ ಮಹಿಳಾ ಕಲಾತಂಡಗಳು ಪಾಲ್ಗೊಂಡಿದ್ದವು. 

Advertisement

ವಿಶಿಷ್ಟ ರೀತಿ ಉದ್ಘಾಟನೆ : ಸಮ್ಮೇಳನಗಳನ್ನು ದೀಪ ಹಚ್ಚಿ ಉದ್ಘಾಟಿಸುವುದು ಸಹಜ. ಆದರೆ ಶ್ರವಣಬೆಳಗೊಳದಲ್ಲಿ
ಶ್ರುಕ್ರವಾರದಿಂದ ಆರಂಭವಾದ ಮೂರು ದಿನಗಳ ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳದ ಉದ್ಘಾಟನೆ ಶುಕ್ರವಾರ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆಯಾಯಿತು. ಜೈನ ಧರ್ಮದ ಪ್ರಥಮ ತೀರ್ಥಂಕರ ಆದಿನಾಥ ಋಷಿಯ ತಾಯಿ, ಭಗವಾನ್‌ ಬಾಹುಬಲಿಯ ಅಜ್ಜಿ ಮರುದೇವಿಯವರ ಮೂರ್ತಿಯ ಅನಾವರಣದೊಂದಿಗೆ ಸಮ್ಮೇಳನ ಉದ್ಘಾಟನೆಯಾಯಿತು. ಉದ್ಘಾಟನೆಯ ಬಗ್ಗೆ ವಿವರಣೆ ನೀಡಿದ ಶ್ರೀ ಚಾರುಕೀರ್ತಿ ಸ್ವಾಮೀಜಿ ಶ್ರವಣಬೆಳಗೊಳದಲ್ಲಿ ಮರುದೇವಿಯವರ ಮೂರ್ತಿಯ ಪೂಜೆ ನಡೆಯುವುದು ಸಹಜ. ಆದರೆ ಮಹಿಳಾ ಸಮ್ಮೇಳನದಲ್ಲಿ ಆ ಮೂರ್ತಿಯ ಅನಾವರಣ ಮಾಡುವುದು ಸಮಂಜಸ ಎಂದು ವ್ಯವಸ್ಥೆ ಮಾಡಲಾಗಿದೆ ಎಂದರು. ಸಚಿವೆ ಉಮಾಶ್ರೀ ಅವರು ಮರುದೇವಿಯವರ ಮೂರ್ತಿಯ ಅನಾವರಣ ಮಾಡಿ ಮೂರ್ತಿಗೆ ಅಷ್ಟ ಮಂಗಲ ದ್ರವ್ಯ ಪ್ರೋಕ್ಷಿಸಿ ಸಮ್ಮೇಳನಕ್ಕೆ ಚಾಲನೆ ನೀಡಿದರು

ಮಹಿಳೆಯರು ಸಂಸ್ಕೃತಿಯ ಬೇರುಗಳು: ಉಮಾಶ್ರೀ ಹಾಸನ: ಮಹಿಳೆಯರು ಭಾರತೀಯ ಸಂಸ್ಕೃತಿಯ ಬೇರುಗಳಿದ್ದಂತೆ. ಆಬೇರುಗಳು ಗಟ್ಟಿಯಾದರೆ ಸಮಾಜ ಸನ್ಮಾರ್ಗದಲ್ಲಿ ನಡೆಯುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ.ಉಮಾಶ್ರೀ ಅಭಿಪ್ರಾಯಪಟ್ಟರು. ಶ್ರವಣಬೆಳಗೊಳದಲ್ಲಿ ಆರಂಭವಾದ ರಾಷ್ಟ್ರೀಯ ಜೈನ ಮಹಿಳಾ ಸಮ್ಮೇಳದ ಉದ್ಘಾಟನಾ ಸಮಾರಂಭದಲ್ಲಿ ಶ್ರವಣಬೆಳಗೊಳದ ಶ್ರೀಗೊಮ್ಮಟೇಶ್ವರ ನಗರದಲ್ಲಿ ಜೈನ ಮಠದಿಂದ ಒಂದು ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಪಾಲಿಟೆಕ್ನಿಕ್‌ ಕಾಲೇಜು ವಿದ್ಯಾರ್ಥಿನಿಯರ ಹೈಟೆಕ್‌ ವಸತಿ ನಿಲಯದ 24 ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಪ್ರತಿ ಸಂಸ್ಕೃತಿಯೂ ಪರಂಪರೆ ಹಾಗೂ ಇತಿಹಾಸದ ಭಾಗವಾಗಿದೆ. ಭಾರತದ ಸಂಸ್ಕೃತಿಗೆ ಜೈನ ಸಂಸ್ಕೃತಿ ಕೊಡುಗೆ ಅಪಾರ ಎಂದು ಪ್ರಶಂಸಿಸಿದರು. ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಯನ್ನೂ ಜೈನ ಧರ್ಮ ಪೋಷಿಸಿಕೊಂಡು ಬಂದಿದೆ. ಸಂಸಕೃತಿ ಭಾಷೆ ವಿಚಾರ ಬಂದಾಗ ಅತ್ತಿಮಬ್ಬೆಯನ್ನು ನಾವು ಸ್ಮರಿಸಬೇಕಾಗಿದೆ. ಅತ್ತಿಮಬ್ಬೆಯವರು 1501 ದೇವಾಲಯಗಳನ್ನು ನಿರ್ಮಿಸಿ ಬಹುದೊಡ್ಡ ಕೊಡುಗೆ ನೀಡಿದ್ದಾರೆ. ಹೊಯ್ಸಳರ ಅರಸರು, ನಾಟ್ಯರಾಣಿ ಶಾಂತಲಾ ಸಾಧನೆ ಅನನ್ಯ. ಕನ್ನಡ ಭಾಷೆಗೆ ರನ್ನ, ಪೊನ್ನರ ಕೊಡುಗೆ ಅಪಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಜೈನ ಮಹಿಳೆಯರು ಉದ್ಯಮದಲ್ಲಿಯೂ ಸಾಧನೆ ಮಾಡುತ್ತಿರುವುದ ಶ್ಲಾಘನೀಯ ಎಂದರು.

ವಿಚಾರ ಮಂಡನೆ: ಜೈನ ಮಹಿಳಾ ಸಮ್ಮೇಳದಲ್ಲಿ ವಿವಿಧ ವಿಚಾರಗಳ ಮಂಡನೆ ನಡೆಯಿತು.”ಇತಿಹಾಸಕ್ಕೆ ಜೈನ ಮಹಿಳೆಯರ ಕೊಡುಗೆ” ವಿಷಯ ಕುರಿತು ಮೈಸೂರಿನ ಡಾ. ಎಂ.ಎಸ್‌.ಪದ್ಮ ವಿಚಾರ ಮಂಡಿಸಿದರು.” “ಮಾನವೀಯ ಮೌಲ್ಯಗಳ ಬೆಳವಣಿಗೆಯಲ್ಲಿ
ಮಹಿಳೆಯರ ಪಾತ್ರ” ಕುರಿತು ಬೆಂಗಳೂರಿನ ವಕೀಲೆ ಎಂ.ಸಿ.ನಾಗಶ್ರೀ ವಿಚಾರ ಮಂಡನೆ ಮಾಡಿದರು. ಗುಹವಾಟಿಯ ರತನ್‌ ಪ್ರಭಾ ಸೇಠಿ ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಇಂದೋರ್‌ನ ಡಾ. ಸಂಗೀತಾ ಮೆಹತಾ, ಜೈಪುರದ ಡಾ. ಕಾಮಿನಿ ಜೈನ್‌, ಡಾ. ರಶ್ಮಿ ಕೊಠಾರಿ ವಿಚಾರ ಮಂಡನೆ ಮಾಡಿದರು. ಗ್ವಾಲಿಯರ್‌ನ ಮಾಧವಿ ಶಹಾ ನಿರೂಪಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next