Advertisement

ಯೋಗಿ ಮಾತಲ್ಲಿ ಹಿಡಿತವಿರಲಿ: ಪರಮೇಶ್ವರ್‌

09:21 AM Jan 10, 2018 | Team Udayavani |

ಬೆಂಗಳೂರು: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದ ಮುಖ್ಯಮಂತ್ರಿ ಕುರಿತು ಮಾತನಾಡುವಾಗ ಹಿಡಿತವಿರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾವಿ ತೊಟ್ಟ ಸನ್ಯಾಸಿಗಳಿಗೆ ನಾವು ಶ್ರೀ ಶ್ರೀ ಎಂದು ಗೌರವ ಸೂಚಿಸುತ್ತೇವೆ. ಆದರೆ, ಯೋಗಿ ಆದಿತ್ಯನಾಥರಿಗೆ ಆ ರೀತಿಯ ಗೌರವ ಕೊಡಬೇಕೆನಿಸುತ್ತಿಲ್ಲ. ಅವರು ಒಂದು ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಕ್ಕೆ ಆಗಮಿಸಿ,
ನಮ್ಮ ಮುಖ್ಯಮಂತ್ರಿ ಮೇಲೆ ಸುಳ್ಳು ಆರೋಪ ಮಾಡಿರುವುದು ಅಸಾಂವಿಧಾನಿಕ. ಈ ರೀತಿ ಯಾವುದೇ ಮುಖ್ಯಮಂತ್ರಿಗಳು ಬೇರೆ ರಾಜ್ಯದ 
ಮುಖ್ಯಮಂತ್ರಿಯ ಬಗ್ಗೆ ಆರೋಪ ಮಾಡಬಾರದು ಎಂದು ಹೇಳಿದರು.

ಸಿದ್ದರಾಮಯ್ಯ ಅವರೂ ಉತ್ತರ ಪ್ರದೇಶಕ್ಕೆ ಹೋದರೆ, ಯೋಗಿ ಆದಿತ್ಯನಾಥ ಅವರ ವಿರುದ್ಧ ಈ ರೀತಿಯ ಆರೋಪ ಮಾಡದಂತೆ ಹೇಳುತ್ತೇನೆ. ಮುಖ್ಯಮಂತ್ರಿಯ ಆಹಾರ ಪದ್ಧತಿಯ ಬಗ್ಗೆ ಮಾತನಾಡುವ ಜರೂರತ್ತು ಅವರಿಗೇನಿದೆ? ನಮ್ಮ ದೇಶದಲ್ಲಿ ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು
ಅಪರಾಧ ಪ್ರಕರಣಗಳು ಜರುಗುತ್ತಿವೆ. ಕೋಮುಗಲಭೆಗಳು ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ನಡೆಯುತ್ತಿವೆ. ಯೋಗಿ ಆದಿತ್ಯನಾಥ ಅದನ್ನು ಕಡಿಮೆ ಮಾಡುವ ಪ್ರಯತ್ನ ಮಾಡಲಿ. ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಸಾಮೂಹಿಕ ಸಾವಿನ ಪ್ರಕರಣದ ದಾಖಲೆಗಳಿರುವ ಕೊಠಡಿಯೇ ಬೆಂಕಿಗಾಹುತಿಯಾಗಿದೆ. ಸರ್ಕಾರವೇ ಪ್ರಕರಣ ಮುಚ್ಚಿ ಹಾಕಲು ಉದ್ದೇಶ ಪೂರ್ವಕವಾಗಿ ಮಾಡಿದೆ ಎಂದು ಪರಮೇಶ್ವರ್‌ ಆರೋಪಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ದೇವಸ್ಥಾನಕ್ಕೆ ಭೇಟಿ ನೀಡಿದರೆ, ಮೃದು ಹಿಂದುತ್ವ ಧೋರಣೆ ಎನ್ನಲಾಗುತ್ತಿದೆ. ಬಿಜೆಪಿಯವರದು ಹಾರ್ಡ್‌ ಕೋರ್‌ ಹಿಂದುತ್ವ ಎಂದರೆ ಕೊಲೆ ಮಾಡುವುದೇ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಈಗಾಗಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಅದರ ಹೆಸರಿನಲ್ಲಿ
ಜನರ ಮೇಲೆ ದಾಳಿ ಮಾಡುವುದು ಸರಿಯಲ್ಲ. ರೈತರ ಆತ್ಮಹತ್ಯೆಯ ಬಗ್ಗೆ ಯೋಗಿ ಆದಿತ್ಯನಾಥ ಸುಳ್ಳು ಮಾಹಿತಿ ನೀಡಿದ್ದು, ರಾಜ್ಯದ ರೈತರ ಆತ್ಮಹತ್ಯೆಯಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲಮನ್ನಾ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಯೋಗಿ  ಆದಿತ್ಯನಾಥ ತಮ್ಮ ಪ್ರಭಾವ ಬಳಸಿ, ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಮನ್ನಾ ಮಾಡಿಸಲಿ ಎಂದರು.

ಸತ್ಯಕ್ಕೆ ದೂರ: ಬೆಂಗಳೂರಿನಲ್ಲಿ ಬಾಂಗ್ಲಾ ವಲಸಿಗರಿಗೆ ಮತದಾರರ ಚೀಟಿ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರ. ಆ ರೀತಿಯ ಮಾಹಿತಿ ಇದ್ದರೆ, ದೂರು ನೀಡಲಿ. ಬಿಜೆಪಿಯವರು ಬಿಬಿಎಂಪಿ ಚುನಾವಣೆಯಲ್ಲಿ ಅಲ್ಪ ಸಂಖ್ಯಾತರ ಹೆಸರನ್ನು ವೋಟರ್‌ ಲಿಸ್ಟ್‌ನಿಂದ ಡಿಲೀಟ್‌ ಮಾಡಿಸಿದ್ದು ನಾನೇ ನೋಡಿದ್ದೇನೆ ಎಂದು ಆರೋಪಿಸಿದರು. ದೀಪಕ್‌ ರಾವ್‌ ಕೊಲೆ ಪ್ರಕರಣದಲ್ಲಿ ಬಿಜೆಪಿ ಕಾರ್ಪೋರೇಟರ್‌ ಕೈವಾಡವಿದೆ ಎಂಬ ಕುಮಾರಸ್ವಾಮಿ ಹೇಳಿಕೆಯನ್ನು ಅಲ್ಲಗಳೆಯಲು ಆಗುವುದಿಲ್ಲ ಎಂದರು. ಇದೇ ವೇಳೆ, ಚಿಕ್ಕಮಗಳೂರಿನ ಯುವತಿಯ ಸಾವಿಗೆ ಕಾರಣನಾದ
ಭಜರಂಗ ದಳದ ಅನಿಲ್‌ಕುಮಾರ್‌ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

Advertisement

ಯಾತ್ರೆಗೆ ಉತ್ತಮ ಪ್ರತಿಕ್ರಿಯೆ: ರಾಜ್ಯದಲ್ಲಿ ಮುಖ್ಯಮಂತ್ರಿ ಹಾಗೂ ತಾವು ನಡೆಸುತ್ತಿರುವ ಪ್ರತ್ಯೇಕ ಯಾತ್ರೆಗೆ ಅಭೂತ ಪೂರ್ವ ಜನಬೆಂಬಲ
ವ್ಯಕ್ತವಾಗುತ್ತಿದೆ. ನಾವು ಜನರನ್ನು ಹಣ ಕೊಟ್ಟು ಕರೆದುಕೊಂಡು ಬರುತ್ತಿಲ್ಲ. ಸ್ವಯಂ ಪ್ರೇರಿತರಾಗಿ ಕಾರ್ಯಕ್ರಮಗಳಿಗೆ ಆಗಮಿಸುತ್ತಿದ್ದಾರೆ. ಸೋತ
ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತವಾಗುತ್ತಿದೆ ಎಂದು ಪರಮೇಶ್ವರ್‌ ಹೇಳಿದರು.

ಇಂದಿನಿಂದ ಕೆಪಿಸಿಸಿ ಅಧ್ಯಕ್ಷರ ಪ್ರವಾಸ 
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಇಂದಿನಿಂದ ಮೂರು ದಿನ ಬೀದರ್‌, ಕಲಬುರಗಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಕಾಂಗ್ರೆಸ್‌ ನಡಿಗೆ ಜಯದ ಕಡೆಗೆ ಸಮಾವೇಶ ನಡೆಸಲಿದ್ದಾರೆ. ಬುಧವಾರ ಬೆಳಗ್ಗೆ ಬೀದರ್‌ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡು, ಮಧ್ಯಾಹ್ನ ಔರಾದ ಹಾಗೂ ಸಂಜೆ ಬಸವಕಲ್ಯಾಣದಲ್ಲಿ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.  ಜ.11 ರಂದು ಆಳಂದ
ಮತ್ತು ಕಲಬುರಗಿಯಲ್ಲಿ ಕಾರ್ಯಕರ್ತರ ಸಮಾವೇಶ ನಡೆಸಲಿದ್ದಾರೆ. ಅಂದು ಅಲ್ಲೇ ವಾಸ್ತವ್ಯ ಹೂಡಿ, ಜ.12 ರಂದು ರಾಯಚೂರು ಜಿಲ್ಲೆಯ ದೇವದುರ್ಗ, ರಾಯಚೂರು ನಗರ ಮತ್ತು ಗ್ರಾಮಾಂತರ ವಿಧಾನ ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯಕರ್ತರ ಸಮಾವೇಶನಗಳಲ್ಲಿ ಪಾಲ್ಗೊಂಡು ಅಂದು ರಾತ್ರಿ ಬೆಂಗಳೂರಿಗೆ ವಾಪಸ್‌ ಆಗಮಿಸುವರು.

ವಕ್ತಾರರಾಗಲು ಸಂದರ್ಶನ
ಬೆಂಗಳೂರು: ಮಾಧ್ಯಮಗಳಲ್ಲಿ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳಲು ಕಾಂಗ್ರೆಸ್‌ ಹೊಸ ಮುಖಗಳ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆ ಎಐಸಿಸಿ ಮಾಧ್ಯಮ ಸಂಯೋಜಕಿ ಪ್ರಿಯಾಂಕಾ ಚತುರ್ವೇದಿ ಮಂಗಳವಾರ ಪಕ್ಷದ ವಕ್ತಾರರಾಗಲು ಯುವ ಮುಖಂಡರ ಸಂದರ್ಶನ ನಡೆಸಿದರು. ಪ್ರತಿ ಜಿಲ್ಲೆಗೂ ಮೂವರು ಯುವ ನಾಯಕರನ್ನು ಆಯ್ಕೆ ಮಾಡಿಕೊಳ್ಳಲು ಪಕ್ಷ ನಿರ್ಧರಿಸಿದೆ. ಪಕ್ಷದ ಸಿದ್ಧಾಂತಗಳನ್ನು ಪ್ರಾದೇಶಿಕ ಹಾಗೂ ರಾಷ್ಟ್ರೀಯ ಚಾನೆಲ್‌ಗ‌ಳಲ್ಲಿ ವ್ಯಕ್ತಪಡಿಸುವ ಸಾಮರ್ಥ್ಯ, ಭಾಷೆಗಳ ಮೇಲೆ ಹಿಡಿತ, ವಿಷಯಗಳ ಬಗ್ಗೆ ಜ್ಞಾನ ಎಲ್ಲವನ್ನೂ ಪರೀಕ್ಷೆ ಮಾಡಲಾಗುತ್ತಿದೆ. 

ಪರಮೇಶ್ವರ್‌ಗೆ ಚಮಚಾ ಎಂದ ವೈಜನಾಥ ಪಾಟೀಲ್‌
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ಮಾಜಿ ಸಚಿವ ವೈಜನಾಥ ಪಾಟೀಲ್‌ ಮಾಧ್ಯಮಗಳ ಎದುರೇ ಚಮಚಾ ಎಂದು ಕರೆಯುವ ಮೂಲಕ ಅವರನ್ನು ಮುಜುಗರಕ್ಕೀಡು ಮಾಡಿದ ಪ್ರಸಂಗ ನಡೆಯಿತು. ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪರಮೇಶ್ವರ್‌ ಅವರು ಪತ್ರಿಕಾ ಗೋಷ್ಠಿ ನಡೆಸುತ್ತಿದ್ದ ಸ್ಥಳಕ್ಕೆ ಆಗಮಿಸಿದ ವೈಜನಾಥ ಪಾಟೀಲ್‌ “ಅಧ್ಯಕ್ಷರೆ’ ಎಂದು ಕರೆದರು. ಆದರೂ ಹೊರಳಿ ನೋಡದ ಪರಮೇಶ್ವರ್‌ ಅವರನ್ನು ಚಮಚಾ ನಿಂತ್ಕೊ ಎಂದು ಗದರಿದರು. ತಮ್ಮ ಪುತ್ರ ವಿಕ್ರಂ ಪಾಟೀಲ್‌ಗೆ ವಿಧಾನ ಪರಿಷತ್‌ ಚುನಾವಣೆಗೆ ಟಿಕೆಟ್‌ ನೀಡುವಂತೆ ಕೇಳಿದರೂ ನೀಡದೇ ಮಾಜಿ ಸಿಎಂ ಧರ್ಮಸಿಂಗ್‌ ಅವರ ಪುತ್ರನಿಗೆ ನೀಡಿದ್ದು ಪಾಟೀಲರನ್ನು ಕೆರಳಿಸಿತ್ತು. ಅಲ್ಲದೇ ಪಕ್ಷದಲ್ಲಿ ಉ.ಕ. ಭಾಗದ ನಾಯಕರಿಗೆ ಆದ್ಯತೆ ನೀಡುತ್ತಿಲ್ಲ. ಅದಕ್ಕಾಗಿ ಅಧ್ಯಕ್ಷರು ಅಥವಾ ಮುಖ್ಯಮಂತ್ರಿ ಯಾರಾದರೂ ಉತ್ತರ ಕರ್ನಾಟ ಕದವರಾಗಬೇಕು ಎಂದು ಆಗ್ರಹಿಸಿದರು. ಇತ್ತೀಚೆಗೆ ನಡೆದ ಸರ್ಕಾರಿ ನೇಮಕಾತಿಯಲ್ಲಿ ಸಹ ಹೈ.ಕ. ಭಾಗದವರನ್ನು ಕಡೆಗಣಿಸಲಾಗುತ್ತಿದೆ ಎಂದೂ ಆರೋಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next