Advertisement

Yelahanka constituency; ಬಿಜೆಪಿ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರು : S.R.ವಿಶ್ವನಾಥ್

05:03 PM Apr 20, 2023 | Team Udayavani |

ಯಲಹಂಕ: ಯಲಹಂಕ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಆರ್.ವಿಶ್ವನಾಥ್ ಅವರು ಬುಧವಾರ ಬೃಹತ್ ರೋಡ್ ಶೋ ನಡೆಸಿ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಬೆಳಗ್ಗೆಯಿಂದಲೇ ಯಲಹಂಕ ಅಕ್ಷರಶಃ ಕೇಸರಿಮಯವಾಗಿತ್ತು. ಕ್ಷೇತ್ರದ ಎಲ್ಲಾ ದಿಕ್ಕುಗಳಿಂದ ಬಿಜೆಪಿ ಧ್ವಜಗಳನ್ನು ಹಿಡಿದು ಪಕ್ಷ ಮತ್ತು ವಿಶ್ವನಾಥ್ ಪರ ಘೋಷಣೆಗಳನ್ನು ಕೂಗುತ್ತಾ ಸಹಸ್ರಾರು ಕಾರ್ಯಕರ್ತರು ಮತ್ತು ಬೆಂಬಲಿಗರು ವಿಶ್ವನಾಥ್ ಅವರ ನಾಮಪತ್ರ ಸಲ್ಲಿಕೆ ವೇಳೆ ಜಮಾಯಿಸಿದ್ದರು.

Advertisement

ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿಶ್ವನಾಥ್, ಈ ಬಾರಿ  ಅತ್ಯಧಿಕ ಮತಗಳ ಅಂತರದ ಗೆಲುವಿನ ಕಡೆಗೆ ಲಕ್ಷ್ಯ ಹರಿಸಿದ್ದೇವೆ. ಇಲ್ಲಿ ಸೇರಿರುವ ಕಾರ್ಯಕರ್ತರ ಉತ್ಸಾಹವನ್ನು ಗಮನಿಸಿದರೆ ಈ ಗುರಿಯನ್ನು ತಲುಪುತ್ತೇವೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.

ಇಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಕ್ಷೇತ್ರದ ಹೊರಗಿನಿಂದ ಬಂದವರಾಗಿದ್ದಾರೆ, ಅವರು ಸ್ಟಾರ್ ಪ್ರಚಾರಕರನ್ನು ಕರೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ನನಗೆ ನನ್ನ ಕ್ಷೇತ್ರದಲ್ಲಿ ಬಿಜೆಪಿ ಮುಖಂಡರು ಮತ್ತು ಅಸಂಖ್ಯಾತ ಕಾರ್ಯಕರ್ತರೇ ಸ್ಟಾರ್ ಪ್ರಚಾರಕರಾಗಿದ್ದಾರೆ. ಅವರು ನಡೆಸುವ ಪ್ರಚಾರದಿಂದಲೇ ನನ್ನ ಗೆಲುವು ನಿಶ್ಚಿತ ಎಂದು ವಿಶ್ವನಾಥ್ ಹೇಳಿದರು.

Advertisement

ನನ್ನ ಬಗ್ಗೆ ಎದುರಾಳಿಗಳು ಯಾವುದೇ ರೀತಿಯಲ್ಲಿ ಅಪಪ್ರಚಾರ ಮಾಡಿದರೂ ನಾನು ಅವರಿಗೆ ಪ್ರತಿ ಹೇಳಿಕೆಯನ್ನು ನೀಡುವುದಿಲ್ಲ. ನಾನು ಕಳೆದ ಮೂರು ಬಾರಿ ಶಾಸಕನಾಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಮಾಡಿರುವ ಕೆಲಸವನ್ನು ನೋಡಿ ಎಲ್ಲಾ ವರ್ಗದ ಮತದಾರರು ನನ್ನ ಬೆಂಬಲಕ್ಕೆ ನಿಲ್ಲಲಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಕ್ಷೇತ್ರದ ಪ್ರತಿ ಗ್ರಾಮ, ಪ್ರತಿ ವಾರ್ಡ್ ನಿಂದಲೂ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು ಎಂದರು.

ವಿರೋಧ ಪಕ್ಷಗಳ ಅಭ್ಯರ್ಥಿಗಳು ಹೊರಗಿನಿಂದ ಕೆಲವರನ್ನು ಕರೆಯಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ ಕೆಲವರು ರೌಡಿಶೀಟರ್ ಗಳು, ಸಮಾಜ ಘಾತುಕ ಹಿನ್ನೆಲೆ ಇರುವ ಬಗ್ಗೆ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ ಎಂದು ವಿಶ್ವನಾಥ್ ತಿಳಿಸಿದರು.

ನಾನು ಯಾವುದೇ ಒಂದು ಜಾತಿಗೆ, ವರ್ಗಕ್ಕೆ ಸೀಮಿತನಾಗಿರುವ ವ್ಯಕ್ತಿಯಲ್ಲ. ನನಗೆ ಎಲ್ಲಾ ವರ್ಗದವರೂ ಸಮಾನರು. ಎಂದಿಗೂ ಜಾತಿ ರಾಜಕಾರಣ ಅಥವಾ ಜಾತಿಯ ಹೆಸರಿನಲ್ಲಿ ತಾರತಮ್ಯ ಮಾಡಿದವನಲ್ಲ. ನಾನೂ ಸಹ ಒಕ್ಕಲಿಗನಾಗಿದ್ದು, ನಾಡಪ್ರಭು ಕೆಂಪೇಗೌಡರ ಹೆಸರಿನಲ್ಲೇ ಪ್ರಮಾಣ ವಚನ ಸ್ವೀಕರಿಸಿ ಅವರ ಆದರ್ಶಗಳನ್ನು ಪಾಲಿಸುತ್ತಾ ಬಂದಿರುವವನಾಗಿದ್ದೇನೆ. ಯಲಹಂಕ ಕ್ಷೇತ್ರದಲ್ಲಿ 45 ವರ್ಷಗಳ ಹಿಂದೆ ಸೈಕಲ್ ನಲ್ಲಿ ಪರ್ಯಟನೆ ಮಾಡಿ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡಿದ್ದೇವೆ. ನನ್ನ ಪರಿಶ್ರಮಕ್ಕೆ ತಕ್ಕೆ ಪ್ರತಿಫಲ ದೊರೆತಿದ್ದು, ಇಂದು, ಮುಂದು, ಎಂದೆಂದೂ ಸಹ ಪಕ್ಷ ಸಂಘಟನೆಯ ವಿಷಯದಲ್ಲಿ ನಾನು ಅದೇ ಪ್ರಾಮಾಣಿಕ ಪರಿಶ್ರಮದ ಹಾದಿಯಲ್ಲೇ ಸಾಗುತ್ತೇನೆ ಎಂದರು.

ಯೋಗಿ ಆದಿತ್ಯನಾಥ್ ಪ್ರಚಾರ
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಯಲಹಂಕ ಕ್ಷೇತ್ರದಲ್ಲಿ ಪ್ರಚಾರಕ್ಕೆ ಆಹ್ವಾನಿಸಲಾಗಿದೆ. ಈ ಬಗ್ಗೆ ಸದ್ಯದಲ್ಲೇ ಸಮಯ ನಿಗದಿ ಮಾಡಿ ತಿಳಿಸಲಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next