Advertisement

ಪಾನಿಪೂರಿ ಮಾರಿ ಏಷ್ಯಾ ಗೆದ್ದವನ ಕಥೆ!

02:03 PM Oct 20, 2018 | Team Udayavani |

ಕಳೆದ ವರ್ಷ ದೇಶಕ್ಕೆ ಅಂಡರ್‌-19 ವಿಶ್ವಕಪ್‌ ಗೆದ್ದು ಕೊಟ್ಟ ಬಟ್ಟೆ ವ್ಯಾಪಾರಿ ಮಗ ಪೃಥ್ವಿ ಶಾ, ಈಗ ಟೀಮ್‌ ಇಂಡಿಯಾದ ಫೇವರಿಟ್‌ ಆಟಗಾರ. ಅದೇ ರೀತಿ ಈ ವರ್ಷ ಪಾನಿ ಪೂರಿ ವ್ಯಾಪಾರಿಯ ಮಗ ಯಶಸ್ವಿ ಜೈಸ್ವಾಲ್‌, ಅಂಡರ್‌-19 ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆಯುವ ಮೂಲಕ ಭಾರತ ಕಿರಿಯರ ಕ್ರಿಕೆಟ್‌ ತಂಡದ ಹೀರೋ ಆಗಿ ಹೊರ ಹೊಮ್ಮಿದ್ದಾರೆ. 

Advertisement

17 ವರ್ಷದ ಯಶಸ್ವಿ ಜೈಸ್ವಾಲ್‌, ಏಷ್ಯಾಕಪ್‌ ಸರಣಿ ಯುದ್ದಕ್ಕೂ ಅತ್ಯುತ್ತಮವಾಗಿ ಬ್ಯಾಟ್‌ ಬೀಸಿ ಟೂರ್ನಿಯಲ್ಲಿ ಆಡಿದ 4 ಪಂದ್ಯಗಳಲ್ಲಿ ಒಂದು ಶತಕ, 2 ಅರ್ಧಶತಕ ಸೇರಿದಂತೆ ಶೇ. 79.5 ಸರಾಸರಿಯಲ್ಲಿ ಒಟ್ಟು 318 ರನ್‌  ಹೊಡೆದಿದ್ದಾರೆ. ಬೌಲಿಂಗ್‌ನಲ್ಲಿ 18 ವಿಕೆಟ್‌ ಪಡೆಯುವ ಮೂಲಕ, ತಂಡ ಆರನೇ ಬಾರಿ ಏಷ್ಯಾಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಡೈರಿ ಶಾಪ್‌ನಿಂದ ಮುಂಬೈ ಜೀವನ ಆರಂಭ
ಯಶಸ್ವಿ ಜೈಸ್ವಾಲ್‌, ಮಹಾರಾಷ್ಟ್ರದ ಬದೋನಿ ಎಂಬ ಸಣ್ಣ ಹಳ್ಳಿಯ ಪಾನಿಪೂರಿ ವ್ಯಾಪಾರಿಯ ಮಗ. ಈತ ಚಿಕ್ಕ ವಯಸ್ಸಿನಲ್ಲೇ ಕ್ರಿಕೆಟಿಗನಾಗುವ ಬಯಕೆ ಹೊಂದಿದ್ದ. ಹಳ್ಳಿಯಲ್ಲಿದ್ದರೇ ಏನೂ ಸಾಧಿಸಲು ಸಾಧ್ಯವಿಲ್ಲ ಎಂದರಿತು, 2012ರಲ್ಲಿ ಚಿಕ್ಕಪ್ಪನೊಂದಿಗೆ ಮುಂಬೈಗೆ ಕಾಲಿಟ್ಟ. ಆಗ ಆತನಿಗೆ ಕೇವಲ 11 ವರ್ಷ. ಮುಂಬೈನ ಚಿಕ್ಕದೊಂದು ಡೈರಿಯಲ್ಲಿ ಕೆಲಸ ಮಾಡುತ್ತಲೇ ಬೆಳಗ್ಗೆ ಹಾಗೂ ಸಂಜೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಿದ್ದ. ಕೆಲಸ, ಅಭ್ಯಾಸ ಎರಡನ್ನು ಸರಿದೂಗಿಸಲು ಸಾಧ್ಯವಾಗದ ಪರಿಣಾಮ, ಡೈರಿ ಮಾಲೀಕ ಇವನನ್ನು ಕೆಲಸದಿಂದ ತೆಗೆದು ಹಾಕಿದ.

ಅವಕಾಶ ಕೊಟ್ಟ ಮುಸ್ಲಿಂ ಯುನೈಟೆಡ್‌ ಕ್ಲಬ್‌
ಊಟಕ್ಕೆ ದುಡ್ಡಿಲ್ಲದೆ, ಮಲಗಲು ಜಾಗವಿಲ್ಲದೇ ಅನಾಥವಾಗಿದ್ದ ಜೈಸ್ವಾಲಗೆ, ಮುಸ್ಲಿಂ ಯುನೈಟೆಡ್‌ ಕ್ಲಬ್‌ ಪರ ಆಡಲು ಅವಕಾಶ ದೊರೆಯಿತು. ಅಲ್ಲೇ ಮಲಗಲು ಜಾಗವೂ ಸಿಕ್ಕಿತು. ಆದರೆ,  ಕ್ರಿಕೆಟ್‌ ಕಿಟ್‌, ಊಟದ ವ್ಯವಸ್ಥೆ ಈತನೇ ನೋಡಿಕೊಳ್ಳಬೇಕಿತ್ತು. ಹಾಗಾಗಿ ಬಿಡುವಿನ ವೇಳೆ ಪಾನಿಪುರಿ ಮಾರಾಟ ಮಾಡಲು ಶುರುಮಾಡಿದ.

Advertisement

ಬ್ಯಾಟ್‌ ನೀಡಿದ ದಿಗ್ಗಜರು 
ಜೈಸ್ವಾಲ್‌ ಎಂಬ ಯುವ ಆಟಗಾರನ ಬಗ್ಗೆ ತಿಳಿದ ಕೂಡಲೇ ಮೊದಲ ಬಾರಿಗೆ ಮುಂಬೈ ತಂಡದ ಆಟಗಾರ ವಾಸಿಂ ಜಾಫ‌ರ್‌ ಹೊಸ ಬ್ಯಾಟ್‌ ಉಡುಗೊರೆಯಾಗಿ ನೀಡಿ ಪ್ರೋತ್ಸಾಹಿಸಿದ್ದರು. ನಂತರ ವೆಂಗ್‌ಸರ್ಕಾರ್‌, ಸಚಿನ್‌ ತೆಂಡುಲ್ಕರ್‌ ಹೀಗೆ ಅನೇಕ ದಿಗ್ಗಜ ಆಟಗಾರರು ಈತನ ಕ್ರಿಕೆಟ್‌ ಬೆಳವಣಿಗೆಗೆ ಸಹಕಾರಿಯಾದರು.

ಬದುಕು ಬದಲಿಸಿದ ಕೋಚ್‌ ಜ್ವಾಲಾ ಸಿಂಗ್‌
ಬಡಕುಟುಂಬದಿಂದ ಬಂದು ಇದೇ ರೀತಿಯ ಕ್ಷಣಗಳನ್ನು ಎದುರಿಸಿದ್ದ ಕೋಚ್‌ ಜ್ವಾಲಾ ಸಿಂಗ್‌, ಯುವಕನ ಪ್ರತಿಭೆಯನ್ನು ಗುರುತಿಸಿ,  ಪ್ರತಿದಿನ ಬೆಳಗ್ಗೆ, ಸಂಜೆ ಕೋಚಿಂಗ್‌ ನೀಡಿ ಹಾಗೂ ಆತನಿಗೆ ಅಗತ್ಯವಿದ್ದ  ಕಿಟ್‌ ಕೊಡಿಸಿ, ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಜ್ವಲಿಸುವಂತೆ ಮಾಡಿ¨ªಾರೆ.

ಶ್ರೀಲಂಕಾ ಸರಣಿ, ಏಷ್ಯಾಕಪ್‌ಗೆ ಆಯ್ಕೆ 
ಲಂಕಾ ವಿರುದ್ಧದ ಸರಣಿಗೆ ಆಯ್ಕೆಯಾಗುವ ಮುನ್ನ ಜೈಸ್ವಾಲ್‌ ತನ್ನ 5 ವರ್ಷದ ಕ್ರಿಕೆಟ್‌ ಜೀವನದಲ್ಲಿ 49 ಶತಕ  ಸೇರಿದಂತೆ  5000ಕ್ಕೂ ಹೆಚ್ಚು ರನ್‌ಗಳಿಸಿದ್ದರು. ನಂತರ ಇದೇ ವರ್ಷ ಭಾರತ ಅಂಡರ್‌-19 ತಂಡಕ್ಕೆ ಆಯ್ಕೆಯಾಗಿದ್ದರು. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೆ ಆಯ್ಕೆಯಾಗಿ ಮೂರು ಪಂದ್ಯಗಳಲ್ಲಿ ಅವಕಾಶ ಪಡೆದಿದ್ದು, ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದರು.

ಕ್ರಿಕೆಟರ್‌ ಆಗಿಯೇ ಊರಿಗೆ ಬರುವೆ
ಮುಂಬೈನಲ್ಲಿ ಮಗನ ಕಷ್ಟ ನೋಡಿದ್ದ  ಜೈಸ್ವಾಲ್‌ ತಂದೆ-ತಾಯಿ, ಊರಿಗೆ ವಾಪಸ್‌ ಬರುವಂತೆ ಅನೇಕ ಬಾರಿ ಹೇಳಿದ್ದರಂತೆ, ಖಂಡಿತವಾಗಿ ಊರಿಗೆ ಬರುತ್ತೇನೆ. ಆದರೆ ಈಗಲ್ಲಾ. ಒಂದಲ್ಲ ಒಂದು ದಿನ ನಾನು ಕ್ರಿಕೆಟರ್‌ ಆಗುವೆ. ನಂತರವೇ ಬರುತ್ತೇನೆ ಎಂದು ಹೇಳಿದ್ದರಂತೆ.  ಇಂದು ಏಷ್ಯಾಕಪ್‌ನಲ್ಲಿ ಜೈಸ್ವಾಲ್‌ ಸರಣಿ ಶ್ರೇಷ್ಠ ಗೌರವ ಬಂದಿರುವುದನ್ನು ನೋಡಿದ ಪೋಷಕರು ಮಗನ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಕಷ್ಟದ ದಿನಗಳ ನೆನೆದು ಜೈಸ್ವಾಲ್‌ ನಿಟ್ಟುಸಿರು
ಹೇಗಾದರೂ ಸರಿ, ಕ್ರಿಕೆಟರ್‌ ಆಗಬೇಕು, ಅದು ಮುಂಬೈ ತಂಡದಲ್ಲೇ ಆಡಬೇಕೆಂಬ ಆಸೆ ಇತ್ತು. ಮುಂಬೈಗೆ ಬಂದ ಹೊಸದರಲ್ಲಿ ನಾನು ಟೆಂಟ್‌ನಲ್ಲಿ ವಾಸ್ತವ್ಯ ಹೂಡಿದ್ದೆ ಅಲ್ಲಿ ಸರಿಯಾದ ವಿದ್ಯುತ್‌, ವಾಷ್‌ ರೂಂ, ನೀರಿನ ವ್ಯವಸ್ಥೆ ಸಹ ಇರಲಿಲ್ಲ. ದೈನಂದಿನ ಖರ್ಚಿಗೆ  ತುಂಬಾ ಕಷ್ಟ  ಆಗುತ್ತಿತ್ತು, ನಂತರ ಒಂದು ರೆಸ್ಟೋರೆಂಟ್‌ನಲ್ಲಿ ಕೆಲಸಕ್ಕೆ ಸೇರಿದೆ. ಮುಂಜಾನೆ, ಸಂಜೆ ಕ್ರಿಕೆಟ್‌ ಅಭ್ಯಾಸ ಮಾಡುತ್ತಾ, ಕೆಲಸ ಮಾಡುತ್ತಾ ಅಡುಗೆ ಮನೆಯಲ್ಲಿ ರೊಟ್ಟಿ ತಯಾರಿಸ್ತಾ ಇದ್ದೆ. ಹಾಗೆಯೇ ಫ‌ುಡ್‌ ವೆಂಡರ್‌ ಆಗಿ ಕೆಲಸ ಮಾಡುತ್ತಿದ್ದೆ. ಕೆಲವು ಬಾರಿ ನನ್ನ ಟೀಂನ ಸಹ ಆಟಗಾರರು ನಾನು ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್‌ಗೆ ಬರುತ್ತಿದ್ದರು. ನಾನೇ ಸರ್ವಿಸ್‌ ಮಾಡಬೇಕಾದ ಪರಿಸ್ಥಿತಿ ಇತ್ತು, ಆಗ ನನ್ನ ಮನಸ್ಸಿಗೆ ತುಂಬಾ ಬೇಸರ ಆಗೋದು. ಅದು ನನಗೆ ಅನಿವಾರ್ಯವಾಗಿತ್ತು ಹಾಗೂ ನಾನು ಮಾಡಲೇ ಬೇಕಿತ್ತು ಎಂದು ಜೈಸ್ವಾಲ್‌ ತನ್ನ ಕಷ್ಟದ ದಿನಗಳ ಬಗ್ಗೆ ಹೇಳಿಕೊಂಡಿದ್ದಾರೆ.

ಧನಂಜಯ ಆರ್‌. ಮಧು

Advertisement

Udayavani is now on Telegram. Click here to join our channel and stay updated with the latest news.

Next