Advertisement

Clearance ಸಿಕ್ಕ ತಾಸಿನೊಳಗೆ ಕ್ರಿಕೆಟಿಗ ಕಾರಿಯಪ್ಪಗೆ ವೀಸಾ: ಹೈಕೋರ್ಟ್‌ ಮೆಚ್ಚುಗೆ

08:56 AM Apr 03, 2024 | Team Udayavani |

ಬೆಂಗಳೂರು: ಪೊಲೀಸರಿಂದ “ನಿರಾಕ್ಷೇಪಣೆ’ (ಕ್ಲಿಯರೆನ್ಸ್‌) ಸಿಕ್ಕ 60 ನಿಮಿಷಗಳಲ್ಲಿ ಕ್ರಿಕೆಟಿಗ ಕೆ.ಸಿ ಕಾರ್ಯಪ್ಪ ಅವರಿಗೆ ಇಂಗ್ಲೆಂಡ್‌ ಪ್ರವಾಸಕ್ಕೆ ವೀಸಾ ಒದಗಿಸಲಾಗಿದೆ ಕೇಂದ್ರ ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ.

Advertisement

ತಮ್ಮ ವಿರುದ್ಧ ದಾಖಲಾದ ಪ್ರಕರಣದಿಂದಾಗಿ ಪೊಲೀಸ್‌ ಕ್ಲಿಯರೆನ್ಸ್‌ ಹಾಗೂ ವೀಸಾ ದೊರೆಯದ ಕಾರಣ ಕ್ರಿಕೆಟ್‌ ಆಡಲು ಇಂಗ್ಲೆಂಡ್‌ಗೆ ಪ್ರಯಾಣಿಸಲು ಅಡ್ಡಿ ಉಂಟಾದ ಹಿನ್ನೆಲೆಯಲ್ಲಿ ಕೆ.ಸಿ. ಕಾರಿಯಪ್ಪ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಕೇಂದ್ರ ಸರ್ಕಾರದ ಉಪ ಸಾಲಿಸಿಟರ್‌ ಜನರಲ್‌ ಎಚ್‌. ಶಾಂತಿಭೂಷಣ್‌ ಹಾಜರಾಗಿ, ಪೊಲೀಸ್‌ ಕ್ಲಿಯರೆನ್ಸ್‌ ನೀಡಿದ 60 ನಿಮಿಷಗಳಲ್ಲಿ ವೀಸಾ ಒದಗಿಸಲಾಗುವುದು ಎಂದು ಹಿಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಭರವಸೆ ನೀಡಲಾಗಿತ್ತು. ಅದರಂತೆ ಕೋರ್ಟ್‌ ಸೂಚನೆ ಮೇರೆಗೆ ಬೆಂಗಳೂರು ಪೊಲೀಸ್‌ ಇಲಾಖೆಯಿಂದ ಕ್ಲಿಯರೆನ್ಸ್‌ ದೊರಕಿದ 60 ನಿಮಿಷಗಳಲ್ಲೇ ಪ್ರಾದೇಶಿಕ ಪಾಸ್‌ಪೋರ್ಟ್‌ ಕಚೇರಿ ಕಾರಿಯಪ್ಪಗೆ ವೀಸಾ
ಒದಗಿಸಿಕೊಟ್ಟಿತು ಎಂದು ಮಾಹಿತಿ ನೀಡಿದರು.

ಇದನ್ನು ಪರಿಗಣಿಸಿದ ನ್ಯಾಯಪೀಠ, ಕೇವಲ 60 ನಿಮಿಷಗಳಲ್ಲಿ ವೀಸಾ ಒದಗಿಸಿದ ಪ್ರಾದೇಶಿಕ ಪಾಸ್‌ ಪೋರ್ಟ್‌ ಕಚೇರಿಯ ಕ್ರಮಕ್ಕೆ ಹಾಗೂ ಉಪ ಸಾಲಿಸಿಟರ್‌ ಜನರಲ್‌ ಅವರ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಅರ್ಜಿ ಇತ್ಯರ್ಥ ಪಡಿಸಿತು. “ಪ್ರೀತಿಸಿ ಮೋಸ ಮಾಡಿದ್ದಾರೆ’ ಎಂದು ಆರೋಪಿಸಿ ಯುವತಿಯೊಬ್ಬಳು ಕ್ರಿಕೆಟಿಗ ಕೆ.ಸಿ ಕಾರಿಯಪ್ಪ ವಿರುದ್ಧ ದೂರು ನೀಡಿದ್ದಳು. ಆರ್‌.ಟಿ. ನಗರ ಪೊಲೀಸ್‌ ಠಾಣೆಯಲ್ಲಿ ಎಫ್ಐಆರ್‌ ದಾಖಲಾಗಿತ್ತು. ಈ ಮಧ್ಯೆ ವಿದೇಶ ಪ್ರಯಾಣಕ್ಕೆ ಕಾರಿಯಪ್ಪ ಅವರಿಗೆ ನಿರ್ಬಂಧ ಹೇರಲಾಗಿತ್ತು. ಕ್ರಿಕೆಟ್‌ ಆಡಲು ಇಂಗ್ಲೆಂಡ್‌ಗೆ ಹೋಗಬೇಕಿದ್ದು, ಪೊಲೀಸರ ಕ್ಲಿಯೆರನ್ಸ್‌ ಸಿಗದೆ ವಿದೇಶ ಪ್ರಯಾಣಕ್ಕೆ ಅಡ್ಡಿಯಾಗುತ್ತಿದೆ ಎಂದು ಕಾರಿಯಪ್ಪ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next