Advertisement

ಸಂಸ್ಕೃತಿ, ಸಂಸ್ಕಾರಗಳ ಮೇರು ಕಲೆ ಯಕ್ಷಗಾನ

11:10 PM Jun 13, 2023 | Team Udayavani |

ನಮ್ಮ ಸಂಸ್ಕೃತಿಯ ಧಾರ್ಮಿಕ ಇತಿಹಾಸಗಳು ಉಳಿಯಬೇಕಾದರೆ ಯಕ್ಷಗಾನದಂತಹ ಕಲೆ ಗಳ ಪಾತ್ರ ಅತೀ ಮಹತ್ವದ್ದಾಗಿದೆ. ಇಂದಿನ ಕಾಲಘಟ್ಟದಲ್ಲಿ ಯುವ ಸಮುದಾಯವು ಯಕ್ಷಗಾನ ಕಲೆಯತ್ತ ಹೆಚ್ಚಿನ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದದೇ ಇರುವು ದರಿಂದ ಅವರಲ್ಲಿ ಸಂಸ್ಕಾರಗಳ ಕೊರತೆ ಎದ್ದು ಕಾಣುವಂತಾಗಿದೆ.

Advertisement

ಯಕ್ಷಗಾನ ಕಲೆಯು ನಮ್ಮ ಪುರಾಣದಲ್ಲಿ ನಡೆದ ಘಟನೆಯನ್ನು ಮೆಲುಕು ಹಾಕುವುದರ ಜತೆಗೆ ಸಂಸ್ಕೃತಿ, ಸಂಸ್ಕಾರ ಹಾಗೂ ಸಮಾಜದಲ್ಲಿ ಸಜ್ಜನಿಕೆಯ ನಡವಳಿಕೆಗಳಿಗೆ ಪ್ರೇರಣಾದಾಯಕವಾಗಿದೆ.

ತಾಳಬದ್ಧವಾದ ನಾಟ್ಯದಿಂದ, ಪ್ರಾಸ ಬದ್ಧವಾದ ಸಂಗೀತ ಗಾಯನದಿಂದ ಪಾರಂ ಪರಿಕವಾಗಿ ಯಕ್ಷಗಾನ ಕಲೆಯು ಬೆಳೆದು ಬಂದಿದೆ. ಪಾರಮಾರ್ಥಿಕ ಹಾಗೂ ಆಧ್ಯಾ ತ್ಮಿಕವಾದ ಒಂದು ದೈವಿಕ ಶಕ್ತಿಯು ಯಕ್ಷಗಾನ ಕಲೆಯಲ್ಲಿ ಅಂತರ್ಗತವಾಗಿದೆ. ಗತಕಾಲದಲ್ಲಿ ನಡೆದಂತಹ ಮಹಾಭಾರತ, ರಾಮಾಯಾಣ ಹಾಗೂ ಅನೇಕ ಪುಣ್ಯ ಕಥೆಗಳನ್ನು ನಾವು ಯಕ್ಷಗಾನದ ಮೂಲಕ ಕಣ್ತುಂಬಿಕೊಂಡು ಧಾರ್ಮಿಕ ಭಾವನೆಗಳಿಂದ ಕೃತಾರ್ಥ ರಾಗುತ್ತೇವೆ.

ಯಕ್ಷಗಾನವನ್ನು ನಾವು ನಿರಂತರ ವಾಗಿ ಪ್ರೋತ್ಸಾಹಿಸಿದ್ದೇ ಆದರೆ ಈ ಕಲೆಯನ್ನು ಶಾಶ್ವತವಾಗಿ ಉಳಿಸಬಹುದು. ಯಕ್ಷಗಾನ ಕಲೆಗೆ ನಾವು ಪ್ರೋತ್ಸಾಹದ ಮೂಲಕ ನೆಲೆಯನ್ನು ಕೊಟ್ಟು ಅಮೃತ ಶಿಲೆಯಾಗಿ ಉಳಿಸಿದರೆ ಧರ್ಮದ ಸಾಮ್ರಾಜ್ಯವನ್ನು ನಮ್ಮ ಆಧುನಿಕತೆಯಲ್ಲಿ ಕಾಣಲು ಸಾಧ್ಯ. ಕಲಾಕ್ಷೇತ್ರದಲ್ಲಿ ಒಂದು ವ್ಯಕ್ತಿಯ ಸೃಜನಶೀಲ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಕ್ರಿಯಾಶೀಲ ಮನೋಭಾವನೆಯಿಂದ ಕಲೆಗೆ ವಿಶೇಷ ಆಸಕ್ತಿಯನ್ನು ಕೊಟ್ಟಲ್ಲಿ ಕಲಾ ಸರಸ್ವತಿಯು ಬಹಳ ಬೇಗನೆ ಒಲಿಯುತ್ತಾಳೆ ಎಂಬ ನಂಬಿಕೆಯಲ್ಲಿ ಎರಡು ಮಾತಿಲ್ಲ. ಶ್ರದ್ಧಾಪೂರ್ವಕ ಭಕ್ತಿ ಮಾರ್ಗದಿಂದ ಯಕ್ಷಗಾನ ಸೇವೆಯ ಮುಖೇನ ಭಗವಂತನ ಸಾಮೀಪ್ಯಕ್ಕೆ ಹೋಗಬಹುದು.

ಯಕ್ಷಗಾನ, ನಾಟಕ, ಭಜನೆ, ಪೂಜೆ-ಪುನಸ್ಕಾರಗಳು, ಯಜ್ಞ-ಯಾಗಾದಿಗಳು ಭಗವಂತನ ಸಾನಿಧ್ಯವನ್ನು ಬೇಗನೆ ತಲುಪಿ ಭಕ್ತರಿಗೆ ಸಾಕ್ಷಾತ್ಕಾರದ ಮೂಲಕ ಆರೋಗ್ಯಪೂರ್ಣ ಜೀವನಕ್ಕೆ ಪ್ರೇರಣೆಯಾಗುತ್ತದೆ. ಆಂತರಿಕವಾಗಿ ಧಾರ್ಮಿಕ ಪ್ರಜ್ಞೆಯುಂಟಾಗಿ ಜೀವನದಲ್ಲಿ ಧರ್ಮವನ್ನು ಪರಿಪಾಲಿಸಲು ಪರೋಕ್ಷವಾದ ಸಂದೇಶವು ನಮ್ಮಲ್ಲಿ ಜಾಗೃತಿಯನ್ನು ಉಂಟು ಮಾಡುತ್ತದೆ.

Advertisement

ಕಲಾಭಿಮಾನಿಗಳಾಗಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮೂಲಕ ಕಲಾ ಕ್ಷೇತ್ರಕ್ಕೆ ನಾವು ಶಾಶ್ವತವಾದ ಕೊಡುಗೆಯನ್ನು ಕೊಟ್ಟಲ್ಲಿ ಸಮಾಜದಲ್ಲಿ ಧರ್ಮ ಜಾಗೃತಿ ಉಂಟಾಗಿ ಒಂದು ಸುವ್ಯಸ್ಥಿತ ನೆಮ್ಮದಿಯ ಮಾನವ ಜೀವನಕ್ಕೆ ನಾಂದಿಯಾಗಬಹುದು. ಒಬ್ಬ ಕಲಾವಿದನನ್ನು ಸಮಾಜವು ಬೇಗನೆ ಗುರುತಿಸಿ ಗೌರವವನ್ನು ಕೊಡುವಷ್ಟರ ಮಟ್ಟಿಗೆ ಕಲೆಗೆ ತನ್ನದೇ ದೈವಿಕವಾದ ಶಕ್ತಿಯು ಇದೆ. ತಮ್ಮದೇ ಆದ ಆಕರ್ಷಕ ಕಲಾ ಶೈಲಿಯಿಂದ ಅನೇಕ ಕಲಾವಿದರು, ಕಲಾಭಿಮಾನಿ ಬಳಗದ ಸ್ಮತಿ ಪಟಲದ ನೆನಪಿನಂಗಳದಲ್ಲಿ ಉಳಿದಿರುತ್ತಾರೆ. ಕನಿಷ್ಠ ಶಿಕ್ಷಣ ಪಡೆದವರೂ ಕಲಾಕ್ಷೇತ್ರದಲ್ಲಿ ಮೇರು ಕಲಾವಿದರಾಗಿ ಬೆಳೆದು ಇಂದಿನ ಯುವ ಸಮುದಾಯಕ್ಕೆ ಪ್ರೇರಕರಾಗಿದ್ಧಾರೆ.

ಕಲೆಯಲ್ಲಿ ಶ್ರದ್ಧೆ, ಭಕ್ತಿಗಳ ಜತೆಗೆ ವೃತ್ತಿ ಗೌರವವನ್ನು ಕಾಪಾಡಿಕೊಂಡು ಸಾಧನಾಶೀಲ ಕಲಾವಿದರಾಗಿ ಗುರುತಿಸಿಕೊಂಡಿರುವ ಅನೇಕ ಕಲಾವಿದರನ್ನು ನಾವು ಕಲಾಕ್ಷೇತ್ರದಲ್ಲಿ ಕಾಣುತಿದ್ದೇವೆ.

ಇಂತಹ ಒಂದು ಅದ್ಭುತ ಸಮಾಜ ಸುಧಾರಣೆ ಕಾರ್ಯಕ್ಕೆ ತನ್ನದೇ ಆದ ಕೊಡುಗೆ ನೀಡುತ್ತ ಬಂದಿರುವ ಯಕ್ಷಗಾನ ಕಲೆ ಮತ್ತು ಕಲಾವಿದರಿಗೆ ಸರಕಾರವು ನಿರೀಕ್ಷಿತ ಪ್ರಮಾಣದಲ್ಲಿ ಪ್ರೋತ್ಸಾಹ ನೀಡುತ್ತಿಲ್ಲ. ಕಲಾವಿದರಿಗೆ ಜೀವನ ನಿರ್ವಹಣೆಗೆ ಬೇಕಾದ ಸೌಲಭ್ಯಗಳು ಮತ್ತು ಆವಶ್ಯಕತೆಗಳಿಗೆ ಸ್ಪಂದಿಸದಿರುವುದು ಬಹಳ ಬೇಸರದ ಸಂಗತಿ. ಕಳೆದ ಹಲವಾರು ವರ್ಷಗಳಿಂದ ಸರಕಾರವು ಕಲಾಕ್ಷೇತ್ರವನ್ನು ಅವಗಣಿಸುತ್ತಲೇ ಬಂದಿದೆ. ಅನೇಕ ಪ್ರಸಿದ್ಧ ಮೇಳಗಳು ಆರ್ಥಿಕವಾಗಿ ಒಳ್ಳೆಯ ರೀತಿಯಲ್ಲಿ ನಡೆಯುತ್ತಿದ್ದರೂ ಕಲಾವಿದರಿಗೆ ಸಮರ್ಪಕವಾದ ಸೌಲಭ್ಯಗಳು ಸಿಗುತ್ತಿಲ್ಲ. ಯಕ್ಷಗಾನ ಪರಂಪರೆ ಉಳಿಯಬೇಕಾದರೆ ಸರಕಾರವು ಈ ಬಗ್ಗೆ ವಿಶೇಷ ಕಾಳಜಿಯನ್ನು ತೋರಬೇಕಿದೆ.

ಬಡ ಕಲಾವಿದರ ಬದುಕಿಗೆ ಗುಣಾತ್ಮಕವಾಗಿ ಸ್ಪಂದಿಸಬೇಕು. ಮುಖ್ಯವಾಗಿ ನಿವೃತ್ತಿ ವೇತನ, ಗೃಹ ಸಾಲ, ಮಕ್ಕಳ ಶಿಕ್ಷಣ ಮೊದಲಾದ ಸೌಲಭ್ಯಗಳನ್ನು ಕಾರ್ಮಿಕ ಕಾನೂನು ನಿಬಂಧನೆಗಳಿಗೆ ಒಳಪಟ್ಟು ಜಾರಿ ಮಾಡಬೇಕು. ಸಾತ್ವಿಕ ಬದುಕಿಗೆ ಸಾರ್ಥಕತೆಯನ್ನು ಕೊಡುವ ಯಕ್ಷಗಾನವನ್ನು ಉಳಿಸಿ, ಬೆಳೆಸಿ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ಉಳಿಸೋಣ.

ಹರಿಶ್ಚಂದ್ರ, ಕುಪ್ಪೆಪದವು

Advertisement

Udayavani is now on Telegram. Click here to join our channel and stay updated with the latest news.

Next