Advertisement

ವಿಶ್ವದರ್ಜೆ ರೈಲು ನಿಲ್ದಾಣ ಯೋಜನೆ ಮತ್ತೆ ಮಂಗಳೂರು ಸೆಂಟ್ರಲ್‌ನತ್ತ

08:23 PM Sep 23, 2021 | Team Udayavani |

ಮಹಾನಗರ: ಮಂಗಳೂರು ನಗರದ ಪಾಲಿಗೆ ಮಹತ್ವದ್ದು ಎಂದು ಪರಿಗಣಿಸಲ್ಪಟ್ಟಿದ್ದ ವಿಶ್ವದರ್ಜೆ ರೈಲು ನಿಲ್ದಾಣ ಯೋಜನೆಯನ್ನು ಮಂಗಳೂರು ಸೆಂಟ್ರಲ್‌ ನಿಲ್ದಾಣದಲ್ಲೇ ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದ್ದು, ಇದರೊಂದಿಗೆ ಯೋಜನೆಯ ಮಂಗಳೂರು ಜಂಕ್ಷನ್‌ – ಮಂಗಳೂರು ಸೆಂಟ್ರಲ್‌ ನಡುವಣ ಹನ್ನೆರಡು ವರ್ಷಗಳ ಅಲೆದಾಟ ಕೊನೆಯಾಗುವ ಲಕ್ಷಣಗಳು ಗೋಚರಿಸಿವೆ.

Advertisement

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ಸೌಲಭ್ಯ ಗಳನ್ನು ಅಳವಡಿಸಿಕೊಂಡು ಮರು ಅಭಿವೃದ್ಧಿ ಗೊಳಿಸುವ ಯೋಜನೆ ರೂಪುಗೊಳ್ಳುತ್ತಿದೆ. ಮಂಗಳೂರು ಜಂಕ್ಷನ್‌ ಬದಲು ಮಂಗ ಳೂರು ಸೆಂಟ್ರಲ್‌ ನಿಲ್ದಾಣವನ್ನೇ ವಿಶ್ವ ದರ್ಜೆ ನಿಲ್ದಾಣವಾಗಿ ಅಭಿವೃದ್ಧಿಪಡಿಸುವ ನಿಟ್ಟಿ ನಲ್ಲಿ ಪೂರಕ ಕ್ರಮಗಳನ್ನು ಕೈಗೊಳ್ಳುವಂತೆ ರೈಲ್ವೇ ಸಚಿವಾಲಯ ರೈಲು ಭೂಅಭಿವೃದ್ಧಿ ಪ್ರಾಧಿಕಾರಕ್ಕೆ (ಆರ್‌ಎಲ್‌ಡಿಎ) ಸೂಚಿಸಿದೆ.

ಯೋಜನೆಗೆ 12 ವರ್ಷಗಳು:

ಮಂಗಳೂರಿನ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಪ್ರಸ್ತಾವ ಘೋಷಣೆ ಯಾಗಿ 12 ವರ್ಷಗಳು ಸಂದಿವೆ. ಮಮತಾ ಬ್ಯಾನರ್ಜಿ ಅವರು ಕೇಂದ್ರ ರೈಲ್ವೇ ಸಚಿವೆ ಯಾಗಿದ್ದ ಸಂದರ್ಭ 2009ರ ಜು. 3ರಂದು ರೈಲ್ವೇ ಬಜೆಟ್‌ ಮಂಡನೆ ಮಾಡುತ್ತಾ ದೇಶದ ಮಂಗಳೂರು ಸಹಿತ 50 ರೈಲು ನಿಲ್ದಾಣಗಳನ್ನು ವಿಶ್ವದರ್ಜೆಗೇರಿಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವದರ್ಜೆಗೇರಿಸುವ ಪ್ರಸ್ತಾವಕ್ಕೆ ಜಾಗದ ಸಮಸ್ಯೆಯನ್ನು ಮುಂದೊಡ್ಡಿ ವಿಳಂಬ ಮಾಡುತ್ತಾ ಬರಲಾಗಿದೆ.

ಮಂಗಳೂರು ಸೆಂಟ್ರಲ್‌ ನಿಲ್ದಾಣ ನಗರದ ಕೇಂದ್ರಭಾಗದಲ್ಲಿದ್ದು, ಆವಶ್ಯಕ ಜಾಗ ದೊರೆ ಯುವುದು ಕಷ್ಟ ಎಂಬ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಇದ್ದ ಪ್ರದೇಶವನ್ನು ಮರುಹೊಂದಾಣಿಕೆ ಮಾಡಿಕೊಂಡು ಈ ಆವಶ್ಯಕತೆಯನ್ನು ಪೂರೈಸಲು ಸಾಧ್ಯವಿದೆ. ರೈಲು ನಿಲ್ದಾಣ ಬಳಿ ರೈಲ್ವೇ ಇಲಾಖೆಗೆ ಸೇರಿದ ಜಾಗದಲ್ಲಿ ಹಲವಾರು ಕಟ್ಟಡಗಳು, ವಸತಿ ನಿಲಯಗಳಿವೆ. ವ್ಯವಸ್ಥಿತವಾಗಿ ಒಂದೆಡೆ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಿ ಇವು ಗಳನ್ನು ಅಲ್ಲಿಗೆ ಸ್ಥಳಾಂತರಿಸಿದರೆ ಬಹಳಷ್ಟು ಜಾಗ ದೊರೆಯಬಹುದು ಎಂಬುದಾಗಿ ರೈಲ್ವೇ ಇಲಾಖೆಗೆ ಮನದಟ್ಟು ಮಾಡುವ ಕಾರ್ಯವೂ ನಡೆದಿತ್ತು. ಇದೆಲ್ಲರ ನಡುವೆ ಕೇಂದ್ರದಲ್ಲಿ ಜಿಲ್ಲೆಯವರೇ ಆದ ಡಿ.ವಿ. ಸದಾನಂದ ಗೌಡ ಅವರು ರೈಲ್ವೇ ಸಚಿವರಾದ ಬಳಿಕ ಯೋಜನೆ ಮತ್ತೂಮ್ಮೆ ಸುದ್ದಿ ಮಾಡಿತ್ತು. ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣವನ್ನು ಅಂತಾರಾಷ್ಟ್ರೀಯ ರೈಲು ನಿಲ್ದಾಣವಾಗಿ ಅಭಿವೃದ್ಧಿ ಪಡಿಸಲು ಚಿಂತನೆ ನಡೆಯಸಲಾಯಿತು. ಇದಕ್ಕೆ ಸುಮಾರು 100 ಎಕ್ರೆ ಜಾಗದ ಆವಶ್ಯಕತೆ ಇದ್ದು ರೈಲ್ವೇ ಇಲಾಖೆಗೆ ಸೇರಿದ 60 ಎಕ್ರೆ ಜಾಗವಿದೆ. ಉಳಿದಂತೆ 40 ಎಕ್ರೆ ಹೊಂದಿಕೆಯಾಗಬೇಕಾಗಿದೆ. ಇದನ್ನು ಒದಗಿಸಿಕೊಡುವಂತೆ ರಾಜ್ಯ ಸರಕಾರಕ್ಕೆ ಕೋರಿಕೆ ಸಲ್ಲಿಸಲಾಗಿತ್ತು. ಇದು ಕೂಡ ನನೆಗುದಿಗೆ ಬಿದ್ದಿದೆ.

Advertisement

ವಿಶ್ವದರ್ಜೆ ರೈಲು ನಿಲ್ದಾಣ :

ವಿಶ್ವದರ್ಜೆ ಮಟ್ಟದ ರೈಲು ನಿಲ್ದಾಣ ಬಹುಮಾದರಿ ಸಂಚಾರ ಕೇಂದ್ರ (ಮಲ್ಟಿ ಮೊಡೆಲ್‌ ಟ್ರಾನ್ಸಿಟಿ ಹಬ್‌) ರೀತಿಯಲ್ಲಿ ವಿನ್ಯಾಸವನ್ನು ಹೊಂದಿರುತ್ತದೆ. ವಿಮಾನ ನಿಲ್ದಾಣ ಮಾದರಿಯಲ್ಲಿ ಪ್ರತ್ಯೇಕ ಆಗಮನ, ನಿರ್ಗಮನ ಲಾಂಜ್‌ಗಳು, ಶಾಪಿಂಗ್‌ ಮಾಲ್‌, ಮಲ್ಟಿ ಫ್ಲೆಸ್‌, ಸುಸಜ್ಜಿತ ರೆಸ್ಟೋರೆಂಟ್‌, ಕಚೇರಿಗಳನ್ನು ಹೊಂದಿರುತ್ತದೆ. ಪ್ರಯಾಣಿಕರಿಗೆ ವಿಶಾಲ ವೈಟಿಂಗ್‌ ಲಾಂಜ್‌, ಸಾಕಷ್ಟು ಆಸನಗಳು, ನಿಲ್ದಾಣಕ್ಕೆ ವಿಶಾಲ ಸಂಪರ್ಕ ರಸ್ತೆಗಳು, ವಿಶಾಲ ಪಾರ್ಕಿಂಗ್‌ ವ್ಯವಸ್ಥೆ ಮುಂತಾದ ಅಂಶಗಳನ್ನು ಹೊಂದಿರುತ್ತದೆ. ವಿಶ್ವದರ್ಜೆ ರೈಲು ನಿಲ್ದಾಣ ನಿರ್ಮಾಣವನ್ನು ಖಾಸಗಿ ಹಾಗೂ ಸರಕಾರಿ ಸಹಭಾಗಿತ್ವದಲ್ಲಿ (ಪಿಪಿಮಾದರಿ)ಕೈಗೊಳ್ಳುವುದು ಪ್ರಸ್ತಾವನೆ ಯಲ್ಲಿದೆ. ಇದರಲ್ಲಿ ಗಣನೀಯ ಮೊತ್ತದ ಹೊಡಿಕೆ ಅವಶ್ಯವಿರುವುದರಿಂದ ಆಸಕ್ತ ಪಾಲುದಾರರನ್ನು ಸೇರಿಸಿಕೊಂಡು ಯೋಜನೆಯನ್ನು ಕೈಗೆತ್ತಿಕೊಳ್ಳುವ ಚಿಂತನೆ ರೈಲ್ವೇ ಇಲಾಖೆಯದ್ದಾಗಿದೆ.

ಮಂಗಳೂರಿನಲ್ಲಿ ವಿಶ್ವದರ್ಜೆ ಮಟ್ಟದ ರೈಲು ನಿಲ್ದಾಣ ಯೋಜನೆ ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಪೂರಕ ಕ್ರಮಗಳು ನಡೆಯುತ್ತಿವೆ. ಮಂಗಳೂರು ಸೆಂಟ್ರಲ್‌ ನಿಲ್ದಾಣವನ್ನು ಈ ನಿಟ್ಟಿನಲ್ಲಿ ಮರು ಅಭಿವೃದ್ಧಿ ಪಡಿಸುವ ಯೋಜನೆ ಸಿದ್ಧಪಡಿಸಲಾಗಿದೆ. ನಳಿನ್‌ ಕುಮಾರ್‌ ಕಟೀಲು, ಸಂಸದರು, ದ.ಕ. ಲೋಕಸಭಾ ಕ್ಷೇತ್ರ

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವದರ್ಜೆ ಸೌಲಭ್ಯ ಗಳೊಂದಿಗೆ ಅಭಿವೃದ್ಧಿಪಡಿಸುವ ಕೆಲವು ವರ್ಷಗಳ ಹಿಂದಿನ ಯೋಜನೆಯನ್ನು ಅನುಷ್ಠಾನ ಗೊಳಿಸುವ ನಿಟ್ಟಿನಲ್ಲಿ ರೈಲು ಭೂಅಭಿವೃದ್ಧಿ ಪ್ರಾಧಿಕಾರ ಕಾರ್ಯಯೋಜನೆ ರೂಪಿಸಲಿದೆ. ಮಂಗಳೂರು ಜಂಕ್ಷನ್‌ನಿಂದ ಮಂಗಳೂರು ಸೆಂಟ್ರಲ್‌ಗೆ ಯೋಜನೆ ವರ್ಗಾ ವಣೆ ಯಾಗುತ್ತಿದ್ದು, ಹಿಂದಿನ ಮೂಲ ಯೋಜನೆ ಸಾಕಾಗಬ ಹುದೇ ಅಥವಾ ಇದರಲ್ಲಿ ಈಗಿನ ಆವಶ್ಯಕತೆಗಳಿಗನುಗುಣವಾಗಿ ಬದಲಾವಣೆಗಳು ಅವಶ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಯೋಜನೆ ಕಾರ್ಯಗತಗೊಳ್ಳಲಿದೆ.ತ್ರಿಲೋಕ್‌ ಕೊಠಾರಿ,ಡಿಆರ್‌ಎಂ ಪಾಲ್ಗಾಟ್‌ ವಿಭಾಗ

 

Advertisement

Udayavani is now on Telegram. Click here to join our channel and stay updated with the latest news.

Next