Advertisement

ಅವನತಿ ಹಾದಿ ಹಿಡಿದ ವೃತಿ ರಂಗಭೂಮಿ: ಶ್ರೀಧರ

11:12 AM Mar 22, 2022 | Team Udayavani |

ಧಾರವಾಡ: ಸಿನಿಮಾಗೆ ಸಿಕ್ಕ ಪ್ರಚಾರದ ಪ್ರಾಶಸ್ತ್ಯವು ಓರೆ ಕೋರೆ ತಿದ್ದುವ ರಂಗಭೂಮಿಗೆ ಸಿಗುತ್ತಿಲ್ಲ. ಇದಲ್ಲದೇ ಯುವ ಕಲಾವಿದರ ಕೊರತೆಯಿಂದಲೂ ಪ್ರಸ್ತುತ ವೃತ್ತಿ ರಂಗಭೂಮಿ ಅವನತಿ ಹಾದಿ ಹಿಡಿದಿದೆ ಎಂದು ರಂಗ ಸಮಾಜದ ಸದಸ್ಯ ಶ್ರೀಧರ ಹೆಗಡೆ ಹೇಳಿದರು.

Advertisement

ಧಾರವಾಡದ ರಂಗಾಯಣ ವತಿಯಿಂದ ಖಾಸಗಿ ರೆಸಾರ್ಟ್‌ವೊಂದರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ರಂಗಭೂಮಿ ಮತ್ತು ಮಾಧ್ಯಮ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಪತ್ರಿಕೆಗಳಿಲ್ಲ ಕಾಲದಲ್ಲಿ ರಂಗಭೂಮಿ ಅತ್ಯಂತ ಪ್ರಭಾವಿ ಮಾಧ್ಯಮವಾಗಿತ್ತು. ಆದರೆ ಇದೀಗ ಅಂತರ್ಜಾಲ ಸೇರಿ ಸಮೂಹ ಮಾಧ್ಯಮಗಳ ಅಬ್ಬರದ ಮಧ್ಯೆ ರಂಗಭೂಮಿ ನಶಿಸುತ್ತಿದೆ. ಹೀಗಾಗಿ ಸಿನಿಮಾಗೆ ನೀಡಿದ ಪ್ರಚಾರದ ಪ್ರಾಶಸ್ತ್ಯವನ್ನು ಮಾಧ್ಯಮಗಳು ರಂಗಭೂಮಿಗೂ ನೀಡಿದಾಗ ಮಾತ್ರ ರಂಗಭೂಮಿ ಉಳಿದು, ಬೆಳೆದು ಬರಲು ಸಾಧ್ಯವಿದೆ ಎಂದರು.

ವಿಜಯ ಕರ್ನಾಟಕದ ಹುಬ್ಬಳ್ಳಿ ಸ್ಥಾನಿಕ ಸಂಪಾದಕ ಡಾ|ಬಂಡು ಕುಲಕರ್ಣಿ ಮಾತನಾಡಿ, 80-90ರ ದಶಕದಲ್ಲಿ ಪತ್ರಿಗಳಲ್ಲಿ ರಂಗಭೂಮಿಗೆ ವಿಶೇಷ ಸ್ಥಾನಮಾನ ನೀಡಿದ್ದವು. ಅಂದಿನ ಪತ್ರಕರ್ತರು ರಂಗಭೂಮಿ ಬಗ್ಗೆ ವಿಶೇಷ ಆಸಕ್ತಿಯ ಜತೆ ರಂಗಭೂಮಿಯಲ್ಲಿ ನಂಟು ಹೊಂದಿದ್ದರು. ಅಂದು ರಂಗಭೂಮಿ, ನಾಟಕಗಳು, ಉತ್ತಮ ನಟ-ನಟಿಯರ ಬಗ್ಗೆ ವಿಮರ್ಶೆ ಲೇಖನ ಬರುತ್ತಿದ್ದವು. ಆದರೆ ಬದಲಾದ ಕಾಲಘಟ್ಟದಲ್ಲಿ ಪತ್ರಿಕೆಗಳು ಸಿಂಗಲ್‌ ಕಾಲಂ ಸುದ್ದಿಗೆ ರಂಗಭೂಮಿ ಸೀಮಿತ ಮಾಡಿವೆ. ಈ ಧೋರಣೆ ಬದಲಾಗಬೇಕು ಎಂದರು.

ಹಿರಿಯ ಪತ್ರಕರ್ತ ಗಿರೀಶ ಪಟ್ಟಣಶೆಟ್ಟಿ ಮಾತನಾಡಿ, ಆಂಗ್ಲ ಪತ್ರಿಕೆಗಳಲ್ಲಿ ಜಾಗದ ಕೊರತೆಯಿಂದ ರಂಗಭೂಮಿ ಕುರಿತು ಹೆಚ್ಚಿನ ಪ್ರಚಾರ ಸಿಗುತ್ತಿಲ್ಲ. ಇದು ಈಚೆಗೆ ಕನ್ನಡ ಪತ್ರಿಕೆಗಳಿಗೆ ಅನ್ವಯಿಸುತ್ತಿದೆ. ಪ್ರಸ್ತುತ ರಂಗಭೂಮಿ ವ್ಯಾಖ್ಯಾನವೇ ಬದಲಾಗುತ್ತ ಸಾಗಿದೆ ಎಂದರು.

Advertisement

ರಂಗ ವಿಮರ್ಶಕ ತ್ಯಾಗಟೂರ ಸಿದ್ಧೇಶ ಮಾತನಾಡಿ, ರಂಗಭೂಮಿ ಜಗತ್ತಿನ ಎಲ್ಲ ಕ್ರಾಂತಿಗಳ ಕುರಿತು ಜನಜಾಗೃತಿ ಮೂಡಿಸಿದ ಮಾಧ್ಯಮ. ಇಂತಹ ಮಾಧ್ಯಮ ಆಧುನಿಕ ಮಾಧ್ಯಮಗಳ ಸುಳಿಗೆ ಸಿಲುಕಿ ಅವಸಾನದತ್ತ ಸಾಗುತ್ತಿದ್ದು, ಉಳಿಸುವ ಕೈಂಕರ್ಯ ನಡೆಯಬೇಕು ಎಂದರು. ಈ ಹಿಂದೆ ರಂಗಭೂಮಿ, ಸಾಂಸ್ಕೃತಿಕ ಕಲೆಗೆ ಪತ್ರಿಕೆಗಳು ಒಂದೊಂದು ಪುಟ ಮೀಸಲಿಡುತ್ತಿದ್ದವು. ಆದರೆ ಇಂದು ಬಹುತೇಕ ಪತ್ರಿಕೆಗಳಲ್ಲಿ ಸಾಂಸ್ಕೃತಿಕ ವರದಿಗೆ ಮನ್ನಣೆ ನೀಡುತ್ತಿಲ್ಲ. ಕಲಾವಿದರಿಗೆ ಉತ್ತೇಜಿಸಲು ಪ್ರಚಾರ ಅಗತ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ, ಧಾರವಾಡ ರಂಗಾಯಣ ಏಳು ಜಿಲ್ಲೆಗಳ ಆಸ್ತಿ. ಇದನ್ನು ಬೆಳೆಸುವಂತಹ ಕೈಂಕರ್ಯ ಮಾಡಿದ್ದು, ಮುಂದೆಯೂ ಉತ್ತಮ ಚಟುವಟಿಕೆ ಆಯೋಜಿಸುವ ಬಗ್ಗೆ ತಿಳಿಸಿದರು.

ನಂತರ ನಡೆದ ಗೋಷ್ಠಿಯಲ್ಲಿ ರಂಗಭೂಮಿ ಗೃಹಿಕೆ-ಅವಲೋಕನ-ವಿಮರ್ಶೆ ಮತ್ತು ಮಾಧ್ಯಮ ಬಗ್ಗೆ ಪತ್ರಕರ್ತ ಡಾ| ಬಂಡು ಕುಲಕರ್ಣಿ, ರಂಗಭೂಮಿ ಮತ್ತು ಮಾಧ್ಯಮ-ಸಮಕಾಲಿನ ಸವಾಲುಗಳು ಬಗ್ಗೆ ತ್ಯಾಗಟೂರ ಸಿದ್ಧೇಶ ವಿಷಯ ಮಂಡಿಸಿದರು. ರವಿ ಕುಲಕರ್ಣಿ ನಿರ್ದೇಶನದಲ್ಲಿ “ಪೊಲೀಸರಿದ್ದಾರೆ ಎಚ್ಚರಿಕೆ’ ನಾಟಕ ಪ್ರದರ್ಶನಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next