Advertisement

ಮಹಾರಾಷ್ಟ್ರದಲ್ಲಿದೆ 3,264 ಡ್ಯಾಂ; ಮಹಾಮಳೆ ಬಂದ್ರೆ ಮಹಾನಗರದ ಗತಿಯೇನು

04:47 PM Aug 27, 2018 | Team Udayavani |

ಥಾಣೆ: ಮಹಾಮಳೆ, ಜಲಾಶಯದಿಂದ ಹೊರ ಬಿಟ್ಟ ನೀರಿನಿಂದ ಉಂಟಾದ ಪ್ರವಾಹದಿಂದ ಕೇರಳ ತತ್ತರಿಸಿ ಹೋಗಿತ್ತು. ಏತನ್ಮಧ್ಯೆ ಮಹಾರಾಷ್ಟ್ರ ಸೇರಿದಂತೆ ಹಲವಾರು ನಗರಗಳು ಇಂತಹ ದುರಂತಗಳನ್ನು ಎದುರು ನೋಡುತ್ತಿವೆ ಎಂದು ವರದಿ ತಿಳಿಸಿದೆ.

Advertisement

ಭಾರೀ ಮಳೆ, ಕಳಪೆ ರೀತಿಯ ಡ್ಯಾಂ ನಿರ್ವಹಣೆ ಹಾಗೂ ರಿಯಲ್ ಎಸ್ಟೇಟ್ ದಂಧೆಯ ಅತಿಕ್ರಮಣದಿಂದಾಗಿ ಪ್ರವಾಹ ಪರಿಸ್ಥಿತಿ ಎದುರಿಸೋದು ಹೇಗೆ…ಹೀಗಾದರೆ ಮಹಾರಾಷ್ಟ್ರದಲ್ಲಿ 2005ರ ಜುಲೈ 26ರ ಸ್ಥಿತಿ ಮರುಕಳಿಸಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಕೇರಳದಲ್ಲಿ ಸುರಿದ ಭಾರೀ ಮಳೆಯಿಂದಾಗಿ 38 ಜಲಾಶಯಗಳು ತುಂಬಿ ಹೋಗಿ ನೀರನ್ನು ಹೊರ ಬಿಟ್ಟಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಬರೋಬ್ಬರಿ 3,264 ಡ್ಯಾಂಗಳಿವೆ! ಈಗ ಇರುವ (3,200) ಡ್ಯಾಂಗಳಲ್ಲಿ ಹೆಚ್ಚು ನೀರು ಸಂಗ್ರಹಿಸಲು ಸಾಧ್ಯವಿಲ್ಲ. ನಿರಂತರ ಮಳೆಗೆ ಡ್ಯಾಂ ತುಂಬಿದಾಗ ಹೊರಗಡೆ ಬಿಡುವುದು ಅನಿವಾರ್ಯ. ಇದರಿಂದಾಗಿ ಮುಂಬೈಯಂತಹ ನಗರಗಳಾದ ಧಾಣೆ, ನಾಂದೇಡ್ ಪ್ರದೇಶ ಪ್ರವಾಹಕ್ಕೆ ಸುಲಭವಾಗಿ ತತ್ತರಿಸಿ ಹೋಗುತ್ತದೆ.

ನಿರಂತರ ಮಳೆಗೆ ಮೊದಲು ಎದುರಾಗುವುದು ಪ್ರವಾಹ. ಏನೇ ಆಗಿದ್ದರು ಮಾನವ ನಿರ್ಮಿತ ದುರಂತ ಮತ್ತು ಪ್ರಾಕೃತಿಕ ವಿಪತ್ತುಗಳು ಸಂಭವಿಸಿದರೆ ಏನು ಪರಿಹಾರ ಎಂಬ ಬಗ್ಗೆ ಆದ್ಯತೆ ಕೊಡಬೇಕಾಗಿದೆ ಎಂದು ನೀರು ಮತ್ತು ಪ್ರವಾಹ ನಿರ್ವಹಣೆ ತಜ್ಞ ಡಾ.ಸುಧೀರ್ ಬೋಂಗ್ಲೆ ತಿಳಿಸಿದ್ದಾರೆ.

Advertisement

ಇನ್ನಾದರೂ ಎಚ್ಚೆತ್ತುಕೊಳ್ಳಿ:

ಇನ್ನಾದರೂ ಸರ್ಕಾರ ಡ್ಯಾಂ ನಿರ್ವಹಣೆ ಮತ್ತು ವಾಟರ್ ಶೆಡ್ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತ ಮುಖ್ಯ ಅಂಶಗಳನ್ನು ಕಡೆಗಣಿಸದೇ ದೊಡ್ಡ, ದೊಡ್ಡ ಡ್ಯಾಂ ನಿರ್ವಹಣೆಯತ್ತ ಗಮನಹರಿಸಬೇಕಾಗಿದೆ ಎಂದು ಡಾ.ಬೋಸ್ಲೆ ತಿಳಿಸಿದ್ದಾರೆ. ಪ್ರಕೃತಿ ಯಾವಾಗ ಮುನಿಸಿಕೊಳ್ಳುತ್ತದೆ ಎಂಬುದು ಊಹಿಸುವುದು ಕಷ್ಟ. ಹೀಗಾಗಿ ಸರ್ಕಾರಗಳು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಬ್ಬಾ 2005ರಲ್ಲಿ ಮುಂಬೈ, ಮಹಾರಾಷ್ಟ್ರ ನಲುಗಿ ಹೋಗಿತ್ತು!

2018ರ ಆಗಸ್ಟ್ ತಿಂಗಳ ಮಹಾಮಳೆ, ಪ್ರವಾಹಕ್ಕೆ ಕೇರಳ ನಲುಗಿ ಹೋಗಿದ್ದರೆ, 2005ರಲ್ಲಿ ಮಹಾರಾಷ್ಟ್ರದ ಮುಂಬೈ ಸೇರಿದಂತೆ ಬಹುಭಾಗಗಳು ಮಳೆ, ಪ್ರವಾಹಕ್ಕೆ ತತ್ತರಿಸಿ ಹೋಗಿತ್ತು. ಸುಮಾರು ಒಂದು ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ನೂರಾರು ಮನೆಗಳು ನಾಶಗೊಂಡಿದ್ದವು. ಸಾವಿರಾರು ಮಂದಿ ದಾರಿಮಧ್ಯೆ ಸಿಲುಕಿಕೊಂಡಿದ್ದರು. ತಮ್ಮ, ತಮ್ಮ ಮನೆಗಳಿಗೆ ಹೋಗಲು ಕಿಲೋ ಮೀಟರ್ ಗಟ್ಟಲೇ ನಡೆದುಕೊಂಡೇ ಹೋಗಿದ್ದರು. 24ಗಂಟೆಯಲ್ಲಿ 944 ಮಿಲಿ ಮೀಟರ್ ನಷ್ಟು ಧಾರಾಕಾರ ದಾಖಲೆಯ ಮಳೆ ಸುರಿದಿತ್ತು. ಆ ನಂತರ 644 ಮಿ.ಮೀ…ಹೀಗೆ ಒಂದು ವಾರಗಳ ಕಾಲ ವರುಣನ ಆರ್ಭಟ ಮುಂದುವರಿದಿತ್ತು. 1974ರಲ್ಲಿಯೂ ಮುಂಬೈಯಲ್ಲಿ 24ಗಂಟೆಯಲ್ಲಿ 575 ಮಿ.ಮೀಟರ್ ಮಳೆ ಸುರಿದಿತ್ತು.

5.50 ಬಿಲಿಯನ್ ಡಾಲರ್ ನಷ್ಟು ನಷ್ಟ ಸಂಭವಿಸಿತ್ತು. ವ್ಯಾಪಾರ-ವಹಿವಾಟು, ಬ್ಯಾಂಕ್ ವಹಿವಾಟಿನ ಮೇಲೆ ಹೊಡೆತ ಬಿದ್ದಿತ್ತು. ಸುಮಾರು 30ಗಂಟೆಗಳ ಕಾಲ ಮುಂಬೈ ವಿಮಾನ ನಿಲ್ದಾಣ ಬಂದ್ ಮಾಡಲಾಗಿತ್ತು. 700 ವಿಮಾನಗಳ ಪ್ರಯಾಣ ರದ್ದು ಮಾಡಲಾಗಿತ್ತು. ಮುಂಬೈ-ಪುಣೆ ಎಕ್ಸ್ ಪ್ರೆಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಅನೇಕ ಭೂ ಕುಸಿತ ಸಂಭವಿಸಿತ್ತು. ಈ ದಾರಿಯನ್ನೂ ಇತಿಹಾಸದಲ್ಲಿ ಮೊದಲ ಬಾರಿಗೆ ಎಂಬಂತೆ 24ಗಂಟೆಗಳ ಕಾಲ ಬಂದ್ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next