Advertisement

ಕೆಟ್ಟ ಮೇಲೆ ಬುದ್ಧಿ ಬಂತು

06:30 AM Nov 16, 2017 | Harsha Rao |

ಒಂದೂರಲ್ಲಿ ವೋಹಿ ಎಂಬ ಯುವಕನಿದ್ದ. ಊಟಕ್ಕೆ ಕುಳಿತರೆ ನಾಲ್ಕು ಮಂದಿ ತಿನ್ನುವ ಆಹಾರವನ್ನು ಒಬ್ಬನೇ ಕಬಳಿಸುತ್ತಿದ್ದ. ಕೆಲಸ ಮಾತ್ರ ಮಾಡುತ್ತಿರಲಿಲ್ಲ. ಅವನ ಬಳಿ ಒಂದು ಆಮೆ ಇತ್ತು. ಆ ಆಮೆಯ ಸ್ವಭಾವವೂ, ಇವನ ಸ್ವಭಾವವೂ ಒಂದೇ ಆಗಿತ್ತು. ಹೀಗಾಗಿ ಅವನ ಸೋಮಾರಿತನದಿಂದಾಗಿ ಊರಿನವರು ಅವನಿಗೆ 
“ಆಮೆ’ ಎಂಬ ಅಡ್ಡ ಹೆಸರು ದಯಪಾಲಿಸಿದ್ದರು. ಆಮೆಯೊಡನೆ ಆಟ ಮತ್ತು ಕನಸು ಕಾಣುವುದು ಇವೆರಡೇ ಅವನು ಮಾಡುತ್ತಿದ್ದ ಕೆಲಸಗಳು.

Advertisement

ವೋಹಿ°ಯ ಸೋಮಾರಿತನದಿಂದ ಆತನ ತಾಯಿಯೂ ರೋಸಿ ಹೋಗಿದ್ದಳು. ಆಕೆ ಎಷ್ಟು ಬುದ್ಧಿವಾದ ಹೇಳಿದರೂ ಅವನು ಕೇಳುತ್ತಿರಲಿಲ್ಲ. ಅದಕ್ಕೆ ವೋಹಿ°, “ನಾನೇನು ಸುಮ್ಮನೆ ಮಲಗಿ ಗೊರಕೆ ಹೊಡೆಯುತ್ತೇನೆಂದು ಭಾವಿಸಿದೆಯಾ? ನಿದ್ರೆ ಮಾಡುವಾಗ ಎಂತೆಂಥ ಸುಂದರವಾದ ಕನಸುಗಳು ಬೀಳುತ್ತವೆ ಗೊತ್ತಾ? ಚೆಲುವಾದ ಅಪ್ಸರೆಯರನ್ನು ಕಂಡು, ಅವರಲ್ಲಿ ಒಬ್ಬಳನ್ನು ಆರಿಸಿ ಮದುವೆಯಾದಂತೆ, ಈ ದೇಶದ ರಾಜನಾಗಿ ಆನೆಯ ಮೇಲೆ ಸವಾರಿ ಮಾಡಿದಂತೆ, ಬಂಗಾರದ ನಾಣ್ಯಗಳ ರಾಶಿಯ ಮೇಲೆ ಮಲಗಿದಂತೆ ಕನಸುಗಳನ್ನು ಕಂಡು ಸಂತೋಷಪಡುತ್ತೇನೆ. ಮುಂದೊಂದು ದಿನ ಈ ಕನಸುಗಳೆಲ್ಲ ದಿಟವಾಗಲಿವೆ’ ಎನ್ನುತ್ತಿದ್ದ. 

ಮಗನ ಉದ್ಧಟತನವನ್ನು ನೋಡಿ ನೋಡಿ ತಾಯಿಯೂ ಬುದ್ಧಿವಾದ ಹೇಳುವುದನ್ನು ನಿಲ್ಲಿಸಿದಳು. ಅನಾರೋಗ್ಯಗೊಂಡ ತಾಯಿ ಹಠಾತ್ತನೆ ಒಂದು ದಿನ ನಿಧನ ಹೊಂದಿದಳು. ಒಂದೆರಡು ದಿನ ಬೇಜಾರಿನಲ್ಲಿದ್ದ ವೋಹಿ° ಮೂರನೆ ದಿನಕ್ಕೆ ಯಥಾಸ್ಥಿತಿಗೆ ಮರಳಿದ. ಮನೆಯಲ್ಲಿದ್ದ ಆಹಾರದ ದಾಸ್ತಾನು ಮುಗಿಯುವವರೆಗೆ ಕಾದ. ಆಮೇಲೆ ಆಮೆಯನ್ನು ಹಣಕ್ಕೆ ಮಾರಿದ. ಆ ಹಣವೂ  ಖರ್ಚಾದ ಮೇಲೆ ಅಕ್ಕಪಕ್ಕದವರ ಮನೆಯವರ ಬಳಿ ಕೈಚಾಚಿದ. ಇವನ ಬಂಡವಾಳ ತಿಳಿದಿದ್ದರಿಂದ ಅವರಲ್ಲಿ ಯಾರೊಬ್ಬರೂ ಸಹಾಯ ಮಾಡಲಿಲ್ಲ. ಬದಲಿಗೆ “ದುಡಿದು ತಿನ್ನಲು ಏನು ಧಾಡಿ ನಿನಗೆ’ ಎಂದು ಬೈದು ಕಳಿಸಿದರು.

ಆದರೂ ಅವನಿಗೆ ದುಡಿಯಲು ಮನಸ್ಸಾಗಲಿಲ್ಲ. ಆಹಾರ ಹುಡುಕುತ್ತ ಮುಂದೆ ಹೋದಾಗ ಒಂದೆಡೆ ಮದುವೆಯೊಂದು ನಡೆಯುತ್ತಿತ್ತು. ಬಂದವರು ಊಟಕ್ಕೆ ಕುಳಿತಿದ್ದರು. ಅವನು ಅವರ ಪಂಕ್ತಿಯಲ್ಲಿ ಸೇರಿಕೊಂಡ. ಬಗೆಬಗೆಯ ಕಜ್ಜಾಯಗಳ ರುಚಿಕರವಾದ ಭೋಜನದಿಂದ ಹೊಟ್ಟೆ ತುಂಬಿತು. ಆಗ ಅವನಿಗೆ ತಾನೂ ಮದುವೆಯಾದರೆ ಇಂತಹ ಊಟ ಮಾಡಬಹುದೆಂಬ ಯೋಚನೆಯುಂಟಾಯಿತು. ಅಲ್ಲಿದ್ದ ಒಬ್ಬ ಯುವತಿಯೊಂದಿಗೆ, “ನೀನು ನನ್ನನ್ನು ಮದುವೆಯಾಗುತ್ತೀಯಾ?’ ಎಂದು ಕೇಳಿದ. ಯುವತಿ ಕಿಸಕ್ಕನೆ ನಕ್ಕಳು. “ಯಾವ ಸೀಮೆಯ ರಾಜಕುಮಾರ ಅಂತ ನಿನ್ನನ್ನು ಮದುವೆಯಾಗಲಿ? ನಿನಗೆ ದುಡಿಯಲು ಬರುವುದಿಲ್ಲ. ವಾಸಕ್ಕೊಂದು ಮನೆಯಿಲ್ಲ. ತಾಯಿಯನ್ನು ದುಡಿಸಿ ತಿಂದು ಹಗಲಿರುಳೂ ಮಲಗಿ ಕನಸು ಕಾಣುತ್ತಿದ್ದ ನಿನಗೆ ಜೊತೆಯಾಗಲು ಯಾರೂ ಬರುವುದಿಲ್ಲ’ ಎಂದು ಕಟುವಾಗಿ ಹೇಳಿದಳು.

ಯುವತಿಯ ಮಾತು ಕೇಳಿ ವೋಹಿ°ಗೆ ಬೇಸರವಾಯಿತು. ತನಗೂ ದುಡಿಯಲು ಬರುತ್ತದೆಂಬುದನ್ನು ಈ ಯುವತಿಗೆ ತೋರಿಸಿ ಕೊಟ್ಟು ಅವಳನ್ನೇ ಮದುವೆಯಾಗುವಂತೆ ಮನಮೊಲಿಸ ಬೇಕೆಂದು ನಿರ್ಧರಿಸಿದ. ಕೆಲಸ ಹುಡುಕಿಕೊಂಡು ಹೊರಟ. ಆದರೆ ಯಾವ ಕೆಲಸವೂ ಅವನಿಗೆ ಇಷ್ಟವಾಗಲಿಲ್ಲ. ಆಗ ಒಂದೆಡೆ ಮಣ್ಣಿನ ಗಡಿಗೆಗಳನ್ನು ಮಾರಲು ಕುಳಿತವನನ್ನು ವೋಹಿ° ನೋಡಿದ. ಅವನು ನೂರಾರು ಗಡಿಗೆಗಳನ್ನು ಹರಡಿಕೊಂಡಿದ್ದರೂ ಏನೂ ಶ್ರಮವಿಲ್ಲದೆ ಅರೆ ಘಳಿಗೆಯಲ್ಲಿ ಅವೆಲ್ಲವೂ ಮಾರಾಟವಾಯಿತು. ಮಾರಾಟಗಾರ ಚೀಲದಲ್ಲಿ ಹಣ ತುಂಬಿಕೊಂಡು ಮನೆಗೆ ಹೊರಟ. ಇದು ಸುಲಭವಾದ ಕೆಲಸ ಅಂತ ಅನಿಸಿತು ಅವನಿಗೆ. ಅವನ ಬಳಿಗೆ ಹೋದ. “ಈ ಗಡಿಗೆಗಳನ್ನು ನೀನು ಶ್ರಮಪಟ್ಟು ಮಾಡಿದ್ದೀಯಾ?’ ಎಂದು ಕೇಳಿದ. “ಇಲ್ಲ, ಸಮೀಪದಲ್ಲಿ ಒಬ್ಬ ಕುಂಬಾರನಿದ್ದಾನೆ. ಅವನು ಇವನ್ನೆಲ್ಲ ತಯಾರಿಸಿ ನನಗೆ ಕೊಡುತ್ತಾನೆ. ಮಾರಾಟದಲ್ಲಿ ಬಂದ ಹಣದಲ್ಲಿ ಅರ್ಧ ಪಾಲನ್ನು ಅವನಿಗೆ ಕೊಡುತ್ತೇನೆ. ಇದು ತುಂಬ ಸುಲಭವಾದ ವ್ಯಾಪಾರ’ ಎಂದು ಹೇಳಿದ ಮಾರಾಟಗಾರ.

Advertisement

ಇದು ಹಣ ಸಂಪಾದನೆಗೆ ಯೋಗ್ಯವಾದ ಮಾರ್ಗ ಎಂದು ವೋಹಿ°ಗೆ ಅನಿಸಿತು. ಕುಂಬಾರನ ಬಳಿಗೆ ಹೋದ. ತನಗೂ ಮಾರಾಟ ಮಾಡಲು ಗಡಿಗೆಗಳನ್ನು ಕೊಡಬೇಕು, ಸಿಕ್ಕಿದ ಹಣದಲ್ಲಿ ಸಮಪಾಲು ಕೊಡುವುದಾಗಿ ಹೇಳಿದ. ಕುಂಬಾರ ಸಂತೋಷದಿಂದ ಬಿದಿರಿನ ಗಳುವಿಗೆ ಮಡಕೆಗಳನ್ನು ಕಟ್ಟಿ ಅವನಿಗೆ ಕೊಟ್ಟ. ಅದನ್ನು ಹೊತ್ತು ಮನೆಗೆ ತರುವಾಗ   ವೋಹಿ°ಗೆ ತುಂಬ ಆಯಾಸವಾಯಿತು. ಮಡಕೆಗಳನ್ನು ಕೆಳಗಿಳಿಸಿ ಕಾಲು ಚಾಚಿ ಮಲಗಿಕೊಂಡ. ಗಾಢವಾದ ನಿದ್ರೆ ಬಂದಿತು. ನಿದ್ರೆಯಲ್ಲಿ ಕನಸೊಂದನ್ನು ಕಂಡ. ಮಕ್ಕಳಿಲ್ಲದ ರಾಜ ತನ್ನ ಉತ್ತರಾಧಿಕಾರಿಯನ್ನು  ಹುಡುಕುತ್ತಿದ್ದ. ಆಗ ಅರಮನೆಯ ಆನೆ ಬಂದು ವೋಹಿ°ಯ ಕೊರಳಿಗೆ ಹೂಮಾಲೆ ಹಾಕಿತು. ರಾಜ ವೋಹಿ°ಯನ್ನೇ ಉತ್ತರಾಧಿಕಾರಿಯನ್ನಾಗಿ ಮಾಡಿದ. ಆಗ ಅವನನ್ನು ಮದುವೆಯಾಗಲು ನಿರಾಕರಿಸಿದ್ದ ಯುವತಿ ಎದುರಿಗೆ ಬಂದು ತನ್ನನ್ನು ಜೊತೆಗೆ ಕರೆದೊಯ್ಯುವಂತೆ ಗೋಗರೆದಳು. ಅವನು ತಿರಸ್ಕಾರದಿಂದ ಅವಳಿಗೆ ಬಲವಾಗಿ ಜಾಡಿಸಿ ಒದ್ದ. 
ಹೀಗೆ ಮಲಗಿ ಕನಸು ಕಾಣುತ್ತಿದ್ದಾಗ ದೊಡ್ಡ ಸದ್ದಾಯಿತು. ಆ ಸದ್ದಿಗೆ ಬೆಚ್ಚಿದ ವೋಹಿ°ಗೆ ತಕ್ಷಣ  ಎಚ್ಚರವಾಯಿತು. ಕನಸಿನಲ್ಲಿ ಅವನು ಯುವತಿ ಎಂದುಕೊಂಡು  ತಾನು ತಂದಿಟ್ಟ ಗಡಿಗೆಗಳಿಗೆ ಒದ್ದಿದ್ದ. ಅವೆಲ್ಲವೂ ಒಡೆದು ಚೂರುಚೂರಾಗಿ ಬಿದ್ದಿದ್ದವು.

ವೋಹಿ°ಗೆ ಇದನ್ನು ಕಂಡು ದುಃಖವೂ, ನಾಚಿಕೆಯೂ ಏಕಕಾಲದಲ್ಲಿ ಆಯಿತು. ಆ ಕ್ಷಣವೇ ಆಲಸ್ಯವನ್ನು ತೊರೆದ. ಇನ್ನುಮುಂದೆ ಮೈ ಮುರಿದು ಕೆಲಸ ಮಾಡಿಯೇ ಜೀವನ ನಡೆಸುತ್ತೇನೆಂದು ನಿರ್ಧರಿಸಿದ ಮತ್ತು ಹಾಗೆಯೇ ಬದುಕು ನಡೆಸಿದ. 

– ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next