Advertisement

ಶೇಷನ್‌ ಹಾದಿಯಲ್ಲಿ ಶ್ರೀಧರನ್‌ ಸಾಗುವರೆ?

10:36 PM Apr 02, 2021 | Team Udayavani |

ರಾಜಕೀಯದಿಂದ ಹೊರತಾದ ಕಾರ್ಯಾಂಗ, ಚಲನಚಿತ್ರ, ಕ್ರೀಡೆ ಇತ್ಯಾದಿ ಕ್ಷೇತ್ರಗಳಲ್ಲಿ ತುತ್ತತುದಿಗೇ ರಿದ ವ್ಯಕ್ತಿಗಳು ನಿವೃತ್ತಿ ವಯಸ್ಸಿನಲ್ಲಿ ರಾಜಕೀಯ ಪ್ರವೇಶ ಮಾಡುವುದಿದೆ. ಆದರೆ ಅಷ್ಟು ವರ್ಷಗಳ ಸಂಸ್ಕಾರಗಳು ಹೊಸ ಕ್ಷೇತ್ರಕ್ಕೆ ಹೊರತಾಗಿರುತ್ತದೆ. ಹೊಸ ಕ್ಷೇತ್ರಕ್ಕೆ ಬೇಕಾದ ಸಂಸ್ಕಾರಗಳು ಅವರಲ್ಲಿಲ್ಲದ ಕಾರಣ ಅವರು ವಿಫ‌ಲರಾಗುವುದೇ ಜಾಸ್ತಿ. ಒಂದೋ ಹೊಸ ಕ್ಷೇತ್ರ (ರಾಜಕೀಯ ಅಥವಾ ಪಕ್ಷಗಳು) ಇವರನ್ನು ಜೀರ್ಣಿಸಿಕೊಳ್ಳಲು ವಿಫ‌ಲವಾಗುತ್ತದೆ ಅಥವಾ ಇವರು ಆ ಕ್ಷೇತ್ರದ ಸಂಸ್ಕಾರಕ್ಕೆ ಒಗ್ಗಿಕೊಳ್ಳುವುದಿಲ್ಲ ಎಂದು ಅರ್ಥೈಸಬಹುದು.

Advertisement

ಟಿ.ಎನ್‌.ಶೇಷನ್‌ ಭಾರತದ ಚುನಾವಣ ವ್ಯವಸ್ಥೆಯಲ್ಲಿ ಅಚ್ಚಳಿಯದ ಹೆಸರು. ನಾಗರಿಕ ಸೇವಾ ಶ್ರೇಣಿಯಲ್ಲಿ ಅತ್ಯುನ್ನತ ಸ್ಥಾನವಾದ ಸಂಪುಟ ಕಾರ್ಯದರ್ಶಿಯಾಗಿದ್ದರು. 1990ರಿಂದ 96ರ ವರೆಗೆ ದೇಶದ 10ನೇ ಮುಖ್ಯ ಚುನಾವಣ ಆಯುಕ್ತರಾಗಿ ತುಕ್ಕು ಹಿಡಿದಂತಿದ್ದ ಸಮಗ್ರ ಚುನಾವಣ ವ್ಯವಸ್ಥೆಗೆ ಒಪ್ಪ ಕೊಟ್ಟವರು. ಇವರು ನಿವೃತ್ತಿಯಾದ ಬಳಿಕ 1997ರಲ್ಲಿ ರಾಷ್ಟ್ರಪತಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಆಗ ಇವರಿಗೆ ಬೆಂಬಲ ನೀಡಿದ್ದು ಶಿವಸೇನೆ ಮಾತ್ರ. ಕಾಂಗ್ರೆಸ್‌ ಬೆಂಬಲದಲ್ಲಿ ಸ್ಪರ್ಧಿಸಿದ್ದ ಕೆ.ಆರ್‌.ನಾರಾಯಣನ್‌ ಆಗ ಪ್ರಚಂಡ ಬಹುಮತದಲ್ಲಿ ರಾಷ್ಟ್ರಪತಿಗಳಾಗಿ ಆಯ್ಕೆಯಾದದ್ದು ಇತಿಹಾಸ.

1999ರ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನ ಗಾಂಧೀನಗರದಲ್ಲಿ ಸ್ಪರ್ಧಿಸಿದ್ದ ಮಾಜಿ ಗೃಹ ಸಚಿವ ಎಲ್‌.ಕೆ.ಆಡ್ವಾಣಿ ಅವರ ವಿರುದ್ಧ ಟಿ.ಎನ್‌.ಶೇಷನ್‌ ಕಾಂಗ್ರೆಸ್‌ ಟಿಕೆಟ್‌ನಿಂದ ಸ್ಪರ್ಧಿಸಿ ಎರಡು ಲಕ್ಷಕ್ಕೂ ಹೆಚ್ಚಿನ ಮತಗಳಿಂದ ಪರಾಭವಗೊಂಡರು.
ಶಿವಸೇನೆಯು ಬಿಜೆಪಿ ಸಖ್ಯದಲ್ಲಿರುವಾಗಲೇ 2007ರ ರಾಷ್ಟ್ರಪತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಪ್ರತಿಭಾ ಪಾಟೀಲರಿಗೆ ಬೆಂಬಲ ನೀಡಿದ್ದರೆ, 2012ರ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿದ್ದ ಪಿ. ಎ. ಸಂಗ್ಮಾರಿಗೆ ಬೆಂಬಲ ಕೊಡದೆ ಕಾಂಗ್ರೆಸ್‌ ಅಭ್ಯರ್ಥಿ ಪ್ರಣವ್‌ ಮುಖರ್ಜಿ ಅವರಿಗೆ ಬೆಂಬಲ ಕೊಟ್ಟಿತ್ತು. ಇವೆಲ್ಲ ರಾಜಕೀಯ ಪಕ್ಷಗಳ ತಂತ್ರಗಾರಿಕೆಗಳ ಕೆಲವೊಂದು ಉದಾಹರಣೆಗಳಷ್ಟೆ.

ಬುಲ್ಡೋಜರ್‌ ಮ್ಯಾನ್‌
ಮುಂಬಯಿ ಮಹಾನಗರಪಾಲಿಕೆ ಇತಿಹಾಸದಲ್ಲಿ “ಬುಲ್ಡೋಜರ್‌ ಮ್ಯಾನ್‌’ ಎಂದೇ ಹೆಸರು ದಾಖಲಿಸಿದ್ದ ಜಿ.ಆರ್‌.ಖೈರ್ನಾರ್‌ ಸಾಮಾನ್ಯ ಹುದ್ದೆಯಿಂದ ಉಪ ಆಯುಕ್ತರ ಹುದ್ದೆ ವರೆಗೆ ಏರಿದವರು. 1985ರಲ್ಲಿ ವಾರ್ಡ್‌ ಅಧಿಕಾರಿಯಾಗಿರುವಾಗ ಮುಖ್ಯಮಂತ್ರಿಗಳ ಪುತ್ರನ ಅನಧಿಕೃತ ಹೊಟೇಲ್‌ ಅನ್ನು ನೆಲಸಮಗೊಳಿಸಿದವರು. 1988ರಲ್ಲಿ ಉಪ ಆಯುಕ್ತರಾದಾಗ ಅವರು ಭೂಮಾಫಿಯಾ ವಿರುದ್ಧ ನಡೆಸಿದ ಹೋರಾಟಗಳು ಅಷ್ಟಿಷ್ಟಲ್ಲ. ಅವರನ್ನು ರಾಜಕೀಯ ಪಿತೂರಿಗಳಿಂದ ಅಮಾನತು ಗೊಳಿಸಲಾಯಿತು. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಿ ಗೆದ್ದರು. 2000ರಿಂದ 2002ರ ವರೆಗೆ ಮತ್ತೆ ಉಪ ಆಯುಕ್ತರಾಗಿ ಮಾಫಿಯಾ ವಿರುದ್ಧ ನಡೆಸಿದ ಹೋರಾಟಗಳು ಆ ಕಾಲದಲ್ಲಿ ಮಾಧ್ಯಮಗಳಿಗೆ ರೋಚಕ ಸುದ್ದಿಗಳಾಗಿದ್ದವು. ಖೈರ್ನಾರ್‌ ನಿವೃತ್ತಿಯಾಗುವಾಗ ಶಿವಸೇನೆಗೆ ಸೇರಿದ ಮೇಯರ್‌ ಇದ್ದರೂ ಸೇವಾ ವಿಸ್ತರಣೆಗೆ ಅವಕಾಶ ಕೊಟ್ಟಿರಲಿಲ್ಲ. ಅಮಾನತಿನ ಅವಧಿಯಲ್ಲಿ (1995) ಅಣ್ಣಾ ಹಜಾರೆ ಸಂಪರ್ಕಕ್ಕೂ ಬಂದಿದ್ದರು. ಈ ನಡುವೆ ಖೈರ್ನಾರ್‌ ಬಿಜೆಪಿ, ಶಿವಸೇನೆಯ ಸಂಪರ್ಕಕ್ಕೂ ಬಂದು ರಾಜಕೀಯ ಪಕ್ಷಗಳು ಖೈರ್ನಾರ್‌ ವರ್ಚಸ್ಸಿನ ಲಾಭವನ್ನು ಪಡೆದುಕೊಂಡಿದ್ದವು. 1995ರಲ್ಲಿ “ಏಕಾಕಿ ಜಾಂಜ್‌’ (“ಏಕಾಂಗಿ ಹೋರಾಟ’) ಎಂಬ ಮರಾಠಿ ಭಾಷೆಯ ಆತ್ಮಕಥನವನ್ನು ಹೊರತಂದಿದ್ದರು. ಕೊನೆಗೆ ಗುಜರಾತಿನಲ್ಲಿ ನೆಲೆಸಿ ಸಾಮಾಜಿಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡ ಖೈರ್ನಾರ್‌ ಅವರ ಜಾಣ್ಮೆ ಮೆಚ್ಚತಕ್ಕದ್ದು.

ಮೆಟ್ರೋ ಮ್ಯಾನ್‌
ಈಗ ಕೇರಳ ವಿಧಾನಸಭೆಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 88ರ ಹರೆಯದ ಇ. ಶ್ರೀಧರನ್‌ ಅವರು ಪಾಲಕ್ಕಾಡ್‌ನ‌ ಸರಕಾರಿ ವಿಕ್ಟೋರಿಯಾ ಕಾಲೇಜಿನಲ್ಲಿ ಓದುವಾಗ ಟಿ.ಎನ್‌.ಶೇಷನ್‌ ಅವರ ಸಹಪಾಠಿ. ಶ್ರೀಧರನ್‌ ನೇತೃತ್ವದಲ್ಲಿ ಕೊಂಕಣ ರೈಲ್ವೇ ಆರಂಭವಾಗುವಾಗ ಅವರ ಕಾರ್ಯದಕ್ಷತೆ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ಅವರು ದಿಲ್ಲಿ ಮೆಟ್ರೋ, ಕೊಚ್ಚಿ ಮೆಟ್ರೋ, ಲಕ್ನೋ ಮೆಟ್ರೋ.. ಹೀಗೆ ಅವರ ಸಾಧನೆ ಒಂದೆರಡಲ್ಲ, ಹೀಗಾಗಿ ಅವರು “ಮೆಟ್ರೋಮ್ಯಾನ್‌’ ಅನಿಸಿಕೊಂಡರು. ಅವರೀಗ ಬಿಜೆಪಿ ಸೈನಿಕನಾಗಿದ್ದಾರೆ. ಕೇರಳ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್‌ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿದ್ದಾರೆ. ಒಮ್ಮೆ ಇವರನ್ನು ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಮಾಧ್ಯಮಗಳಲ್ಲಿ ಪ್ರಚಾರವಾಯಿತಾದರೂ ಆ ಬಳಿಕ ಇದು ಅಲ್ಲಿಗೇ ತಣ್ಣಗಾಯಿತು. ಕೇರಳ ಚುನಾವಣೆಯಲ್ಲಿ ಬಿಜೆಪಿ ಏನಾದರೂ ಸಾಧನೆ ಮಾಡಿದರೂ 10ರಿಂದ 20 ಶಾಸಕರು ಗೆದ್ದು ಬರಬಹುದೋ ಏನೋ? ಶ್ರೀಧರನ್‌ ಗೆದ್ದರೂ ಮುಖ್ಯಮಂತ್ರಿಯಾಗುವುದು ಸಾಧ್ಯವೇ ಇಲ್ಲ. ಏಕೆಂದರೆ ಇಡೀ ದೇಶದಲ್ಲಿ ಇದೇ ರೀತಿ ಬಿಜೆಪಿ ವಿಜಯೋತ್ಸವ ಮುಂದುವರಿಸಿದರೂ ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಇನ್ನು 20 ವರ್ಷ ಬೇಕಾಗಬಹುದು. ಶ್ರೀಧರನ್‌ರಿಗೆ ಈಗಲೇ 88 ವರ್ಷ. ಈಗಲೇ ಬಿಜೆಪಿಯ ಅಲಿಖೀತ ಸಂವಿಧಾನದಂತೆ 75 ದಾಟಿದವರಿಗೆ ಸಚಿವ ಹುದ್ದೆ ಸಿಗುತ್ತಿಲ್ಲ. ಇನ್ನು ಶ್ರೀಧರನ್‌ರಿಗೆ ಅವಕಾಶವಾದರೂ ಹೇಗೆ ಸಾಧ್ಯ?

Advertisement

ಶೇಷನ್‌, ಶ್ರೀಧರನ್‌, ಖೈರ್ನಾರ್‌ರಂತಹವರು ಐಕಾನಿಕ್‌ ವ್ಯಕ್ತಿಗಳು. ಇನ್ನು ನವಜೋತ್‌ ಸಿಂಗ್‌ ಸಿಧು, ಅಮಿತಾಬ್‌ ಬಚ್ಚನ್‌ರಂತಹ ಸೆಲೆಬ್ರೆಟಿಗಳ ಕಥೆಯೂ ಇದೇ ತೆರನಾಗಿ ಕಂಡುಬರುತ್ತದೆ. ಬಚ್ಚನ್‌ ಕಾಂಗ್ರೆಸ್‌ ಟಿಕೆಟ್‌ನಲ್ಲಿ ಗೆದ್ದು ಬಂದಿದ್ದರು. ಆದರೆ ಅವರು ರಾಜಕೀಯ ಕ್ಷೇತ್ರದಲ್ಲಿ ಉಚ್ಛಾ†ಯ ಸ್ಥಿತಿಗೆ ಬರಲಾಗಲಿಲ್ಲ. ನವಜೋತ್‌ ಸಿಂಗ್‌ ಸಿಧು ಬಿಜೆಪಿ, ಕಾಂಗ್ರೆಸ್‌ ಎರಡೂ ಪಕ್ಷಗಳಿಗೆ ಸೇರಿಕೊಂಡು ಸಚಿವಗಿರಿ ಸಿಕ್ಕಿದರೂ ಆ ಪಕ್ಷಗಳಿಗೆ ತಲೆನೋವಾದರೆ ವಿನಾ ಮತ್ತೇನೂ ಆಗಲಿಲ್ಲ. ಆದರೆ ಉನ್ನತಾಧಿಕಾರಿಗಳು, ಸೆಲೆಬ್ರೆಟಿಗಳು ಇಂತಹ ಸಂಸ್ಕಾರಕ್ಕೆ ಎಂದೂ ಒಗ್ಗಿಕೊಂಡಿರುವುದಿಲ್ಲ. ಎಷ್ಟೇ ಉತ್ತಮ, ದಕ್ಷ, ಜನಸಾಮಾನ್ಯರಿಗೆ ಹತ್ತಿರವಾಗಿರುವ ಅಧಿಕಾರಿ, ಸಿನೆಮಾ ನಟ, ನಟಿಯರಿರಲಿ ಇವರ ಮನೆಗೆ ನಿತ್ಯ 50-100 ಸಾಮಾನ್ಯ ಜನರು ಬಂದರೆ ಸಹಿಸಿಕೊಳ್ಳುವ ಗುಣ ಇರಲು ಸಾಧ್ಯವೆ? ಅದೇ ರಾಜಕಾರಣಿ ಮನೆಗೆ ನಿತ್ಯ ನೂರಾರು ಜನರು ಎಡತಾಕಿದರೂ ಸಹನೆಯಿಂದ ನೋಡಿಕೊಳ್ಳದಿದ್ದರೆ ಆತ ಅದಕ್ಕೆ ನಾಲಾಯಕ್‌ ಆಗುತ್ತಾನೆ. ಚುನಾವಣ ಆಯುಕ್ತರಾಗಿ ಇಡೀ ದೇಶದ ಭ್ರಷ್ಟ ರಾಜಕಾರಣಿಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದ ಟಿ. ಎನ್‌.ಶೇಷನ್‌ ಒಂದು ವೇಳೆ ಗೆದ್ದಿದ್ದರೂ ಅವರು ಯಶಸ್ವೀ ರಾಜಕಾರಣಿಯಾಗಲು ಸಾಧ್ಯವಿತ್ತೇ?

ರಾಜಕೀಯ ಮೆತ್ತಿಕೊಳ್ಳದ ಕಲಾಂ
ಸೆಲೆಬ್ರೆಟಿಗಳು, ಐಕಾನಿಕ್‌ ವ್ಯಕ್ತಿಗಳನ್ನು ರಾಜಕೀಯ ಪಕ್ಷಗಳು ಬುಟ್ಟಿಗೆ ಹಾಕಲು ಯತ್ನಿಸುವುದು ಸಹಜ. ಪಕ್ಷಗಳಿಗೆ ಆ ಕಾಲದ ಗರಿಷ್ಠ ಬೆಳವಣಿಗೆ ಅಗತ್ಯವಷ್ಟೆ. ಅವರ ಬುಟ್ಟಿಗೆ ಬೀಳುವವರು ಬಹಳ ಎಚ್ಚರಿಕೆ ಯಿಂದ ನಡೆಯಬೇಕಾಗುತ್ತದೆ. ಉದಾಹರಣೆಗೆ ಅಟಲ್‌ ಬಿಹಾರಿ ವಾಜಪೇಯಿಯವರು ಪ್ರಧಾನಿ ಯಾಗಿದ್ದಾಗ ಎ.ಪಿ.ಜೆ. ಅಬ್ದುಲ್‌ ಕಲಾಂ ಅವರಿಗೆ ರಕ್ಷಣ ಸಚಿವ ಹುದ್ದೆಯನ್ನು ಕೊಡುವುದಾಗಿ ಹೇಳಿದ್ದರು. ಆದರೆ ಅವರು ನಯವಾಗಿ ತಿರಸ್ಕರಿಸಿದ್ದರು. ಏಕೆಂದರೆ ಒಬ್ಬ ರಕ್ಷಣ ಕ್ಷೇತ್ರದ ವಿಜ್ಞಾನಿ ರಕ್ಷಣ ಇಲಾಖೆ ಸಚಿವನಾಗಿರಬೇಕಾದರೆ ರಾಜಕೀಯದ ಮಗ್ಗುಲುಗಳನ್ನೂ ಕರತಲಾಮಲಕ ಮಾಡಿಕೊಂಡಿರಬೇಕೆಂಬ ಎಚ್ಚರ ಅವರಿಗಿತ್ತು. ಸಚಿವನಾಗಿ ಕೇವಲ ವೃತ್ತಿಪರತೆ ಸಾಕಾಗುವುದಿಲ್ಲ. ಒಂದು ವೇಳೆ ಅವರು ಸಚಿವರಾಗಿದ್ದರೆ ಅವರು ಮುಂದೆ ರಾಷ್ಟ್ರಪತಿಯಾಗುತ್ತಿದ್ದರೆ? ಬಿಜೆಪಿ ಬೆಂಬಲದಲ್ಲಿ ರಾಷ್ಟ್ರಪತಿಯಾದರೂ ಅವರಿಗೆ ಬಿಜೆಪಿ ಎಂಬ ರಾಜಕೀಯ ಮೆತ್ತಿಕೊಳ್ಳಲು ಅವಕಾಶ ಕೊಟ್ಟರೆ? ಶೇಷನ್‌, ಖೈರ್ನಾರ್‌ರಂತಹವರಿಂದ ರಾಜಕೀಯ ಪಕ್ಷಗಳು ಸಕಾಲಿಕ ಉಪಯೋಗ ಪಡೆದುಕೊಂಡರೂ ಮತ್ತೆ ಅವರಿಗೆ ರಾಜಕೀಯದಿಂದ ಯಾವ ನ್ಯಾಯವೂ ಸಿಗಲಿಲ್ಲ, ಸೇವಾವಧಿಯಲ್ಲಿ ಪಕ್ಷಭೇದವಿಲ್ಲದೆ ಸಾಕಷ್ಟು ಪೆಟ್ಟನ್ನೇ ತಿಂದವರು. ಪಕ್ಷಭೇದವಿಲ್ಲದೆ ಚಿಂತನೆ ನಡೆಸಿದರೆ ಶ್ರೀಧರನ್‌ರಿಗೂ ಈ ನ್ಯಾಯ ಸಿಗುವುದು ತುಸು ಕಷ್ಟವೆಂದೆನಿಸುತ್ತದೆ. ಕೊನೆಗೆ ರಾಜ್ಯಪಾಲರಂತಹ ಹುದ್ದೆ ಸಿಕ್ಕಿದರೂ ಅದು ಅವರು ಇದುವರೆಗೆ ಪಡೆದಂತಹ ಘನತೆಗಿಂತ ಮಿಗಿಲಾದುದು ಆಗಿರುವುದಿಲ್ಲ.

ಒಗ್ಗದ ಸಂಸ್ಕಾರ, ಸಂಸ್ಕೃತಿ
ಐಕಾನಿಕ್‌ ವ್ಯಕ್ತಿಗಳು, ಸೆಲೆಬ್ರೆಟಿಗಳು, ಉನ್ನತಾಧಿಕಾರಿಗಳಿಗೂ ರಾಜಕಾರಣಿಗಳಿಗೂ ಸಂಸ್ಕಾರ, ಸಂಸ್ಕೃತಿಯಲ್ಲಿ ವ್ಯತ್ಯಾಸಗಳಿರುವುದನ್ನು ಗಮನಿಸಬೇಕು. ರಾಜಕೀಯದಲ್ಲಿ ಪಳಗಿದವರು ಎಷ್ಟೇ ದೊಡ್ಡ ವ್ಯಕ್ತಿಯಾಗಿರಲಿ ಸಾಮಾನ್ಯ ಜನರಿಂದ ಬೈಸಿಕೊಳ್ಳಲು ತಯಾರಿರಲೇ ಬೇಕು. ಸಾಮಾನ್ಯ ಕಾರ್ಯಕರ್ತನಿಗೆ ಸಂಸದ, ಶಾಸಕ ದೊಡ್ಡ ಸಂಗತಿ ಆಗಿರುವುದಿಲ್ಲ. ಆದರೆ ಉನ್ನತಾಧಿಕಾರಿಗಳು, ಸೆಲೆಬ್ರೆಟಿಗಳು ಇಂತಹ ಸಂಸ್ಕಾರಕ್ಕೆ ಎಂದೂ ಒಗ್ಗಿಕೊಂಡಿರುವುದಿಲ್ಲ.

– ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next