Advertisement

ಕೋವಿಡ್‌ ನಡುವೆ ದೂರದೂರಿನಲ್ಲಿ ಐಪಿಎಲ್‌ ಬೇಕಿತ್ತಾ? ಈ ಕುರಿತು ಯುವಜನರು ಹೇಳುವುದೇನು?

02:54 PM Sep 04, 2020 | Karthik A |

ಐಪಿಎಲ್‌ (ಇಂಡಿಯನ್‌ ಪ್ರೀಮಿಯರ್‌ ಲೀಗ್‌) ಹೆಸರೇ ಸಾಕು ಕೋಟ್ಯಂತರ ಭಾರತೀಯರು ರೋಮಾಂಚಿತರಾಗಲು.

Advertisement

ಯುವ ಜನತೆಯಲ್ಲಿ ಉತ್ಸಾಹ ಉಕ್ಕಿಸುವ ಕ್ರಿಕೆಟ್‌ನ ಈ ಟಿ-20 ಟೂರ್ನಮೆಂಟ್‌ ವಿಶ್ವದ ಕ್ರೀಡಾ ಪ್ರೇಮಿಗಳ ಗಮನಸೆಳೆದಿದೆ. ಸರಕಾರಕ್ಕೆ ಕೋಟ್ಯಂತರ ರೂಪಾಯಿಗಳ ಆದಾಯವೂ ಇದರಿಂದ ಹರಿದು ಬರುತ್ತದೆ. ಪ್ರತಿ ವರ್ಷ ನಡೆಯುವ ಈ ಪಂದ್ಯಾಟಕ್ಕೆ 2008ರಲ್ಲಿ ನಾಂದಿ ಹಾಡಲಾಗಿತ್ತು.

ಈ ವರ್ಷಾರಂಭದಲ್ಲಿ ನಡೆಯಬೇಕಿದ್ದ ಟೂರ್ನಮೆಂಟ್‌ ಕೋವಿಡ್‌ ಕಾರಣದಿಂದ ಮುಂದೂಡಲ್ಪಟ್ಟಿತ್ತು. ಇದೀಗ ಐಪಿಎಲ್‌ ನಡೆಸಲು ಅನುಮತಿ ಸಿಕ್ಕಿದ್ದು, ಸೆಪ್ಟಂಬರ್‌ 19ರಿಂದ ನವೆಂಬರ್‌ 10ರ ವರೆಗೆ ಯು.ಎ.ಇ.ಯಲ್ಲಿ ಜರಗಲಿದೆ. ಕೋವಿಡ್‌ ಪೂರ್ತಿಯಾಗಿ ಮರೆಯಾಗುವ ಮುನ್ನ ಐಪಿಎಲ್‌ ಆಯೋಜಿಸಿದ್ದು ಸರಿಯೇ ಎಂಬ ಪ್ರಶ್ನೆಗೆ ರಾಜ್ಯದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದು ಹೀಗೆ.

ಕೋವಿಡ್‌ ಸಂಕಷ್ಟದ ನಡುವೆಯೂ ಐಪಿಎಲ್‌ ಆಯೋಜನೆ ವಿಭಿನ್ನ ಹಾಗೂ ವಿನೂತನ ಪ್ರಯತ್ನ. ಪ್ರೇಕ್ಷಕರಿಲ್ಲದೇ ಆಟ ಆಡುವುದು ಆಟಗಾರರಿಗೆ ಹೊಸತು. ಐಪಿಎಲ್‌ನಿಂದ ಕಳೆದ ವರ್ಷಕ್ಕಿಂತ ಈ ವರ್ಷ ಚಾನಲ್‌ಗ‌ಳ ಟಿಆರ್‌ಪಿ ರೇಟ್‌ ಕೂಡ ಹೆಚ್ಚುವುದರಲ್ಲಿ ಅನುಮಾನವಿಲ್ಲ. ಕೋವಿಡ್‌-19ರ ಅಟ್ಟಹಾಸ ಮುಂದುವರಿದರೆ ಈ ಬಾರಿ ಐಪಿಎಲ್‌ ಆಯೋಜನೆಗಿಂತ ಮುಂದಿನ ವರ್ಷ ಇನ್ನೂ ಸಿದ್ಧತೆಯೊಂದಿಗೆ ನಡೆಸಲು ಅನುಕೂಲವಾಗುತ್ತದೆ. ಅಲ್ಲದೆ ಆಟಗಾರರೂ ತಯಾರಿ ನಡೆಸಿ ಆಡುತ್ತಾರೆ.

ಕೋವಿಡ್‌ ಸೋಂಕು ಹೆಚ್ಚುತ್ತಿರುವ ಇಂತಹ ಸಂದರ್ಭದಲ್ಲಿ, ಪ್ರೇಕ್ಷಕರಿಗೆ ಅನುಮತಿ ನೀಡಿದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಸಾಮಾಜಿಕ ಅಂತರಕ್ಕೆ ಮಹತ್ವ ನೀಡಬೇಕಾದ ಅನಿವಾರ್ಯತೆ ಇದೆ. ಇದು ಮನರಂಜನೆಗೆ ಸೀಮಿತವಾಗಿರುವುದರಿಂದ, ಕ್ರಿಕೆಟ್‌ ಹಬ್ಬ ಆಯೋಜನೆಗಿಂತ ಜನರ ಆರೋಗ್ಯದ ಕುರಿತು ಚಿಂತನೆ ನಡೆಸುವುದು ಒಳಿತು.

Advertisement

ನನ್ನ ಪ್ರಕಾರ ಐಪಿಎಲ್‌ ಆಯೋಜಿ ಸಿರುವುದು ಸೂಕ್ತ ನಿರ್ಧಾರ. ಇದರಿಂದ ಎಷ್ಟೋ ಜನರ ಮನಸಿಗೆ ನೆಮ್ಮದಿ ಸಿಗುತ್ತದೆ. ಕೆಲಸದ ಒತ್ತಡದ ಮಧ್ಯೆ ಐಪಿಎಲ್‌ನಿಂದ ಮನೋರಂಜನೆ ದೊರೆಯಲಿದೆ. ಆ ಟೀಮ್‌ನಂದು ಎನ್ನುವ ಆಪ್ತ ಭಾವದಲ್ಲಿ ಕ್ರಿಕೆಟ್‌ ಆಸ್ವಾದಿಸಿ ನಿರಾಳರಾಗುತ್ತಾರೆ.

ಈಗ ಐಪಿಎಲ್‌ ಆಯೋಜಿಸಿದ್ದು ಸರಿ ಯಲ್ಲ. ತಂಡದ ಮಾಲಕರ ಹಗೂ ಪ್ರಾಯೋಜಕರ ಲಾಭಕ್ಕಾಗಿ ಆಟಗಾರರ, ಸಿಬಂದಿ ಇನ್ನಿತರರ ಪ್ರಾಣವನ್ನು ಒತ್ತೆ ಇಡುವುದು ಸರಿಯಲ್ಲ. ಐಪಿಎಲ್‌ಗೆ ಖರ್ಚು ಮಾಡುವ ಹಣವನ್ನು ಬಡವರಿಗೆ, ಕೆಲಸ ಕಳೆದುಕೊಂಡವರಿಗೆ ಪ್ರಯೋಜನವಾಗುವಂತೆ ಬಳಕೆ ಮಾಡುವುದು ಉತ್ತಮ.

ಇಡೀ ವಿಶ್ವವೇ ಸಾವಿನ ಮನೆಯಾಗಿರುವ ಈ ಸಂದರ್ಭ ಐಪಿಎಲ್‌ ಆಯೋಜನೆ ತಪ್ಪೆಂದರೆ ಅತಿಶಯೋಕ್ತಿಯಾಗಲಾರದು. ಕೋವಿಡ್‌ ಸಂಕಷ್ಟ ದಿಂದ ಮಾನಸಿಕವಾಗಿ ಕುಗ್ಗಿಹೋಗಿರುವ ಜನ ತೆಗೆ ಐಪಿಎಲ್‌ ಕೊಂಚ ನೆಮ್ಮದಿ ನೀಡುವುದಾದರೂ, ಆಟಗಾರರು ಭಯದ ವಾತಾವರಣದಲ್ಲಿ ಆಡಬೇಕಾಗಿದೆ. ಆರ್‌ಸಿಬಿ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದಂತೆ ಯಾರಾದರೂ ಚೂರು ಎಡವಟ್ಟು ಮಾಡಿದರೆ ಟೂರ್ನಮೆಂಟೇ ನಿಂತು ಹೋಗಬಹುದು.

ಹಲವು ವಿರೋಧಗಳ ನಡುವೆ ಐಪಿಎಲ್‌ ನಡೆಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಆಟಗಾರರು ಕೂಡ ಆಡಲು ತುದಿಗಾಲಿನಲ್ಲಿ ನಿಂತಿದ್ದರು. ಕಳೆದ ಐದಾರು ತಿಂಗಳಿನಿಂದ ಯಾವುದೇ ಕ್ರಿಕೆಟ್‌ ಟೂರ್ನಿ ನಡೆದಿಲ್ಲ. ದೇಶೀಯ ಟೂರ್ನಿಗಳೂ ಕೂಡ ಕೋವಿಡ್‌ ಕಾರಣದಿಂದ ನಡೆದಿಲ್ಲ. ಇದರಿಂದಾಗಿ ಅಟಗಾರರು, ಕ್ರಿಕೆಟ್‌ ವಲಯದ ಕಾರ್ಮಿಕರು ಸೇರಿದಂತೆ ಕ್ರಿಕೆಟ್‌ ವಲಯದ ಮಂದಿ ಭಾರೀ ನಷ್ಟ ಅನುಭವಿಸಿದ್ದಾರೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿ ಐಪಿಎಲ್‌ ನಡೆಸುವುದು ಸೂಕ್ತ.

ಮನೆಯಲ್ಲೇ ಕೂತಿರುವ ಜನರಿಗೆ ಇದೊಂದು ಸಿಹಿ ಸುದ್ದಿ. ಆದರೆ ಇದರಲ್ಲಿ ಹಲವು ಅಪಾಯಗಳೂ ಕಂಡು ಬರುವ ಸಾಧ್ಯತೆ ಇದೆ. ಐಪಿಎಲ್‌ನಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಟಗಾರರು ಪಾಲ್ಗೊಳ್ಳುವುದರಿಂದ ಅಪಾಯ ಉಂಟಾಗುವ ಸಾಧ್ಯತೆ ಹೆಚ್ಚು. ಅಲ್ಲದೆ ಕೋವಿಡ್‌ ಸೋಂಕಿನ ಲಕ್ಷಣಗಳು ಇದೆಯೋ ಇಲ್ಲವೋ ಎಂಬುದನ್ನು ಥರ್ಮಾಮೀಟರ್‌ ನಿರ್ಣಯಿಸಲು ಸಾಧ್ಯವಾಗದು. ಆದ್ದರಿಂದ ಪ್ರೇಕ್ಷಕರು ಇಲ್ಲದೆ ಸ್ಪರ್ಧೆ ನಡೆಸುವುದು ಉತ್ತಮ.

ಐಪಿಎಲ್‌ ಆಯೋಜಿಸುವ ನಿರ್ಧಾರ ಸೂಕ್ತವಾದುದು. ಇತ್ತೀಚೆಗೆ ಕೋವಿಡ್‌-19ರ ಹಾವಳಿ ಹೆಚ್ಚಾಗಿದ್ದರೂ ಜನರು ದೈನಂದಿನ ಚಟುವಟಿಕೆಗಳಿಗಾಗಿ ಸುರಕ್ಷಿತಾ ಕ್ರಮ ಕೈಗೊಳ್ಳುತ್ತಿದ್ದಾರೆ. ಪರೀಕ್ಷೆಗಳನ್ನು ಮತ್ತು ಕೆಲವು ಧಾರ್ಮಿಕ ಆಚರಣೆಗಳನ್ನು ನಾಜೂಕಾಗಿ ಮಾಡಿ ಮುಗಿಸಲಾಗಿದೆ. ಹೀಗಿರುವಾಗ ಐಪಿಎಲ್‌ ಪಂದ್ಯಾವಳಿಯ ಆಯೋಜನೆ ಆರ್ಥಿಕ ಸುಧಾರಣೆಗೆ ಪೂರಕವಾಗಿದ್ದು, ಸಮರ್ಪಕವಾಗಿ ಆಯೋಜಿಸಿದರೆ ದೇಶದ ಆರ್ಥಿಕತೆ ಚೇತರಿಸಿ ಕೊಳ್ಳಬಹುದು.

ಚೆರ್ಚೆಯಲ್ಲಿ ಭಾಗವಹಿಸಿದವರು 

ಶ್ರೀಹರಿ ಆರ್‌., ಸಂತ ಫಿಲೋಮಿನಾ ಕಾಲೇಜು ಮೈಸೂರು


ಚಂದನ್‌ ನಂದರಬೆಟ್ಟು, ಎಫ್ಎಂಸಿ ಮಡಿಕೇರಿ


ಮುಕ್ತಿವರ್ಧನಾ, ಎಂಪಿಎಂ ಕಾಲೇಜು ಕಾರ್ಕಳ


ಮಹಿಮಾ, ಗೋವಿಂದದಾಸ ಕಾಲೇಜು ಸುರತ್ಕಲ್‌


ಮಹಮ್ಮದ್‌ ಅಶ್ರಫ್, ಸಂತ ಫಿಲೋಮಿನಾ ಕಾಲೇಜು ಪುತ್ತೂರು


ರಾಮ ಕಿಶನ್‌ ಕೆ.ವಿ., ವಿವೇಕಾನಂದ ಕಾಲೇಜು ಪುತ್ತೂರು


ಐಶ್ವರ್ಯಾ ಎಸ್‌., ಸಂತ ಫಿಲೋಮಿನಾ ಕಾಲೇಜು ಮೈಸೂರು

ಶ್ರೀಪ್ರಭಾ, ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜು ಪುತ್ತೂರು

 

 

 

 

 

Advertisement

Udayavani is now on Telegram. Click here to join our channel and stay updated with the latest news.

Next