Advertisement

ಕೆಎಸ್‌ಆರ್‌ಟಿಸಿ ಪಾಸುದಾರರಿಗೆ ಸಿಹಿಸುದ್ದಿ

12:23 PM Apr 22, 2020 | Team Udayavani |

ಬೆಂಗಳೂರು: “ಲಾಕ್‌ಡೌನ್‌ನಿಂದ 10-15 ದಿನಗಳ ಪ್ರಯಾಣ ದರ ನಷ್ಟವಾಯಿತು’ ಎಂದು ಕೈ-ಕೈ ಹಿಸುಕಿಕೊಳ್ಳುತ್ತಿರುವ ಮಾಸಿಕ ಪಾಸು ಹೊಂದಿದ ಪ್ರಯಾಣಿಕರಿಗೆ ಕೆಎಸ್‌ಆರ್‌ಟಿಸಿ ಸಿಹಿ ಸುದ್ದಿ ನೀಡಿದೆ. ಬಸ್‌ ಸೇವೆ ಪುನರಾರಂಭಗೊಳ್ಳುತ್ತಿದ್ದಂತೆ ಎಲ್ಲ ಮಾಸಿಕ ಪಾಸು ಹೊಂದಿದ ಪ್ರಯಾಣಿಕರಿಗೆ ಅವಧಿ ವಿಸ್ತರಣೆ ಮಾಡಿ, ಬಾಕಿ ಉಳಿದ ದಿನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸುತ್ತಿದೆ. ಇದು ನಿಗಮದ ವ್ಯಾಪ್ತಿಯ ಎಲ್ಲ 16 ಜಿಲ್ಲೆಗಳಿಗೂ ಅನ್ವಯ ಆಗಲಿದೆ.

Advertisement

ಕೆಎಸ್‌ಆರ್‌ಟಿಸಿ ವ್ಯಾಪ್ತಿಯಲ್ಲಿ ಸುಮಾರು 55 ಸಾವಿರ ಜನ ಮಾಸಿಕ ಪಾಸು ಪಡೆದು ಪ್ರಯಾಣಿಸುತ್ತಾರೆ. ಪಾಸಿನ ದರ 300 ರೂ.ಗಳಿಂದ ಗರಿಷ್ಠ 2,500 ರೂ.ವರೆಗೂ ಇದೆ. ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ 1,000-1,200 ರೂ. ಒಳಗಿನ ಪಾಸು ಹೊಂದಿದ ಪ್ರಯಾಣಿಕರಿದ್ದಾರೆ. ಪಾಸು ವಿತರಿಸಿದ ದಿನಾಂಕದಿಂದ 30 ದಿನಗಳು ಪ್ರಯಾಣಿಸಲು ಅವಕಾಶ ಇರುತ್ತದೆ. ಅದನ್ನು ಆಧರಿಸಿ ವಿಸ್ತರಣಾ ಅವಧಿ ನವೀಕರಿಸಲಾಗುತ್ತದೆ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ಪ್ರಭಾಕರ ರೆಡ್ಡಿ ಸ್ಪಷ್ಟಪಡಿಸಿದರು.

ನವೀಕರಣ ಹೇಗೆ?: ಮಾ. 23ರಂದು ಲಾಕ್‌ಡೌನ್‌ ಘೋಷಿಸಲಾಗಿದೆ. ಅದಕ್ಕೂ ಹಿಂದೆ ಒಂದು ದಿನ ಜನತಾ ಕರ್ಫ್ಯೂ ಜಾರಿಯಲ್ಲಿತ್ತು. ಒಟ್ಟಾರೆ ಕಳೆದ ತಿಂಗಳು ಹೆಚ್ಚು-ಕಡಿಮೆ ಹತ್ತು ದಿನಗಳು ಬಸ್‌ ಸೇವೆ ಸ್ಥಗಿತಗೊಂಡಿತ್ತು. ಉದಾಹರಣೆಗೆ ಯಾವೊಬ್ಬ ಪ್ರಯಾಣಿಕ ಮಾರ್ಚ್‌ 10ಕ್ಕೆ ಪಾಸು ಪಡೆದಿದ್ದರೆ, ಅಲ್ಲಿಂದ 30 ದಿನಗಳು ಮಾಸಿಕ ಪಾಸಿನ ಅವಧಿ ಆಗಿರುತ್ತದೆ. ಆದರೆ, ಲಾಕ್‌ಡೌನ್‌ನಿಂದ ಕೇವಲ ಹತ್ತು ದಿನಗಳು ಪಾಸು ಬಳಕೆ ಆಗಿರುತ್ತದೆ. ಅಂತಹವರಿಗೆ ಬಸ್‌ ಸೇವೆ ಪುನರಾರಂಭಗೊಂಡ ನಂತರ 20 ದಿನಗಳು ನವೀಕರಿಸಿದ ಮುದ್ರೆ ಹಾಕಿ, ಪ್ರಯಾಣಿಸಲು ಅವಕಾಶ ನೀಡಲಾಗುವುದು. ಇದಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಈ ಸೇವೆ ಆಯಾ ಬಸ್‌ ನಿಲ್ದಾಣದ ನಿಯಂತ್ರಕರಲ್ಲೇ ಲಭ್ಯ ಇರಲಿದೆ ಎಂದು ಅವರು ಸ್ಪಷ್ಟಪಡಿಸಿದರು.ಇನ್ನು ಪ್ರೀಮಿಯಂ ಸೇವೆಗಳಲ್ಲಿ ಪಾಸು ಹೊಂದಿದವರ ಪ್ರಮಾಣ ಅತಿ ವಿರಳ ಎಂದೂ ಅವರು ಮಾಹಿತಿ ನೀಡಿದರು.

ಬಿಎಂಟಿಸಿ ಇನ್ನೂ ಯೋಚಿಸಿಲ್ಲ: ಆದರೆ, ಬಿಎಂಟಿಸಿ ವ್ಯಾಪ್ತಿಯಲ್ಲಿ ವಿತರಿಸಲಾಗುವ ಮಾಸಿಕ ಪಾಸುಗಳ ವ್ಯವಸ್ಥೆ ತುಸು ಭಿನ್ನವಾಗಿದ್ದು, ತಿಂಗಳಲ್ಲಿ ಯಾವುದೇ ದಿನ ಪಾಸು ಹೊಂದಿ
ದರೂ ಅದು 1ನೇ ತಾರೀಖೀನಿಂದಲೇ ಪರಿಗಣಿಸಲ್ಪಡುತ್ತದೆ. ಆದ್ದರಿಂದ ಸದ್ಯಕ್ಕಂತೂ ನವೀಕರಿಸುವ ಆಲೋಚನೆ ಇಲ್ಲ.

Advertisement

Udayavani is now on Telegram. Click here to join our channel and stay updated with the latest news.

Next