Advertisement

ಯಾರಿಗೆ ಯಾರು ಕೊಡುವುದು ಬಾಳನ್ನು! 

03:50 AM Mar 19, 2017 | |

ದೇವಸ್ಥಾನವೊಂದರಲ್ಲಿ ನಡೆದ ಮದುವೆ ಮುಗಿಸಿ ಬಂದ ಆಕೆ ತನ್ನ ಸ್ನೇಹಿತೆಯ ಬಳಿ ಹೇಳುತ್ತಿದ್ದಳು, “”ಬಹಳ ಅಪರೂಪದ ಮದುವೆಯಿದು ಗೊತ್ತಾ? ಪಾಪ, ಅಪಘಾತವೊಂದರಲ್ಲಿ ತನ್ನ ಎಡಗಾಲಿನ ಮೂರು ಬೆರಳುಗಳನ್ನು ಕಳೆದುಕೊಂಡಿರುವ ಹುಡುಗಿಯನ್ನು ಮದುವೆಯಾಗಿದ್ದಾನೆ ನಮ್ಮೂರಿನ ಹುಡುಗ. ಆತನಿಗೆ ಸ್ವಲ್ಪ ಕಣ್ಣು ಮಂದ, ಸ್ವಲ್ಪ ಎಡಗೈ ವಾಲುತ್ತದೆ ಅಷ್ಟೆ ! ಮತ್ತೆಲ್ಲ ಆರಾಮಾಗಿದ್ದಾನೆ. ಪಾಪ ಆ ಹುಡುಗಿ ಸ್ವಲ್ಪ ಕುಂಟುತ್ತಾಳೆ… ಆದರೂ ಒಪ್ಪಿ ದೊಡ್ಡ ಮನಸ್ಸು ಮಾಡಿ ಬಾಳುಕೊಟ್ಟಿದ್ದಾನೆ”

Advertisement

ಅವಳ ಮಾತು ಕೇಳಿದ್ದೇ ನನಗೆ ನಾನು ಮೊದಲ ಬಾರಿ ಈ ಅಸಂಬದ್ಧ ಪದವನ್ನು ಕೇಳಿದ ಆ ದಿನದ ನೆನಪಾಯಿತು.
ನಾನು ಹೈಸ್ಕೂಲಿನಲ್ಲಿದ್ದಾಗ ಊರಿನಲ್ಲಿ ನಡೆದ ಒಂದು ಮದುವೆಗೆ ಅಮ್ಮನ ಜೊತೆ ಹೋಗಿದ್ದೆ. ಸಮೀಪದ ನೆಂಟರೊಬ್ಬರು ಮದುವೆಗೆ ಬಂದಿದ್ದ ಓರ್ವ ಮಹಿಳೆಯನ್ನು ತೋರುತ್ತ ಪಿಸುಗುಟ್ಟಿದ್ದರು. “ಪಾಪ, ಚಿಕ್ಕವಯಸ್ಸಿನಲ್ಲಿ ವಿಧವೆ ಆಗಿ ಪುಟ್ಟ ಮಗಳ ಜೊತೆ ಒಂಟಿಯಾಗಿದ್ದವಳಿಗೆ ಅಗೋ ಅಲ್ಲಿ ನೀಲಿ ಶರ್ಟಿನಲ್ಲಿದ್ದಾನಲ್ಲ, ಅವನೇ ಮದುವೆಯಾಗಿ ಬಾಳು ಕೊಟ್ಟಿದ್ದಾನೆ’ ಎಂದು. ಮೊತ್ತ ಮೊದಲ ಬಾರಿಗೆ ಈ “ಬಾಳು ಕೊಡುವುದು’ ಎಂಬ ಪದವನ್ನು ಅಂದು ಕೇಳಿದ್ದೆ. ಆಮೇಲೆ ಸೂಕ್ಷ್ಮವಾಗಿ ಗಮನಿಸುತ್ತಾ ಬಂದಾಗ ನನ್ನ ಸುತ್ತಮುತ್ತಲೂ ಅನೇಕ ಕಡೆ ಈ ಬಾಳನ್ನು ಕೊಡು, ತೆಗೆದುಕೊಳ್ಳುವ ವ್ಯವಹಾರ ಜೋರಾಗಿಯೇ ನಡೆಯುತ್ತಿತ್ತು. ಹಳೆಯ ಚಲನಚಿತ್ರಗಳಲ್ಲಂತೂ ಒಂದಾದರೂ ಬಾಳು ಕೊಡುವ ಸೀನು ಇರುವುದನ್ನು ಗಮನಿಸಿದೆ. ಆದರೆ, ಒಂದು ನನಗೆ ಅರ್ಥವಾಗಿರಲೇ ಇಲ್ಲ. ಈ ಬಾಳನ್ನು ಕೊಡುವುದು ಹೇಗೆ? ಯಾರು ಎಲ್ಲಿಂದ, ಯಾರಿಂದ ತೆಗೆದುಕೊಂಡು ಕೊಡುತ್ತಾರೆ? ಬಾಳು ಅಂದರೆ ಬದುಕು ಎಂದರ್ಥವಿರುವಾಗ ಅದನ್ನು ಕೊಡುವುದು ಸಾಧ್ಯವೆ? ಹೀಗೆಲ್ಲಾ ಚಿಂತನೆ ತಲೆ ತುಂಬಿಕೊಂಡು, ಅಲ್ಲಿ ಇಲ್ಲಿ ಏನೋ ಓದಿಕೊಂಡು ನನ್ನದೇ ಅರ್ಥವನ್ನು ಕೊಟ್ಟುಕೊಂಡು ಸುಮ್ಮನಿದ್ದೆ. ಆದರೆ ಕಾಲೇಜಿಗೆ ಬರುತ್ತಲೇ ಓದಿನ ವ್ಯಾಪ್ತಿ, ಅರಿವಿನ ವಿಸ್ತಾರ ತುಸು ಜಾಸ್ತಿಯಾದಂತೇ ಎಲ್ಲವೂ ಸ್ಪಷ್ಟವಾಯಿತು. ಬಾಳನ್ನು ಯಾರೂ ಯಾರಿಗೂ ಕೊಡಲಾಗದು, ಪರಸ್ಪರ ಹಂಚಿಕೊಂಡು ಕಟ್ಟಿಕೊಳ್ಳಬಹುದು ಎಂದು.

ಈಗ ಕಾಲ ಬಹಳ ಬದಲಾಗಿದೆ, ಸಾಮಾಜಿಕ ಪಿಡುಗುಗಳು ಕಡಿಮೆಯಾಗುತ್ತಿವೆ ಎಂಬಿತ್ಯಾದಿ ಮಾತುಗಳು ತುಸು ಮಟ್ಟಿಗೆ ನಿಜವೇ ಆಗಿದ್ದರೂ ಇಂದಿಗೂ ನಮ್ಮ ಸಮಾಜದಲ್ಲಿ ಹಿಂದಿನ ಆ ಎಲ್ಲ ಪಿಡುಗುಗಳ ಕರಿ ಛಾಯೆ ಎದ್ದೆದ್ದು ಕಾಣಿಸುತ್ತಿರುತ್ತದೆ. ತೀರಾ ಇತ್ತೀಚಿನ ಪ್ರಕರಣವನ್ನೇ ತೆಗೆದುಕೊಂಡರೆ… ಪ್ರಸಿದ್ಧ ಚಲನಚಿತ್ರ ನಟಿಯೋರ್ವರನ್ನು ಕೆಲವು ಅಧಮರು ಅಪಹರಿಸಿ ದೌರ್ಜನ್ಯ ಎಸಗಿದ್ದರು. ಆದರೆ ಆಕೆ ಹೆದರದೇ, ದಿಟ್ಟತನದಲ್ಲಿ ಅವರ ವಿರುದ್ಧ ದೂರು ಸಲ್ಲಿಸಿ, ಅವರನ್ನೆಲ್ಲ ಅರೆಸ್ಟ್‌ ಮಾಡಿಸಿ ಅನ್ಯಾಯಕ್ಕೆ ತಕ್ಕ ಶಾಸ್ತಿ ಮಾಡಿಸಿದ್ದರು. ಮೊನ್ನೆಯಷ್ಟೇ ಅವರ ನಿಶ್ಚಿತಾರ್ಥ ಈ ಮೊದಲೇ ನಿಶ್ಚಯವಾಗಿದ್ದ ನಟನೋರ್ವನ ಜೊತೆ ನೆರವೇರಿತು. ಆದರೆ ಸುದ್ದಿ ಚಾನೆಲ್‌ ಒಂದು, “ಅವಳಿಗೆ ಬಾಳು ಕೊಟ್ಟ ನಟ’ ಎಂದೆಲ್ಲ ಏನೇನೋ ಅಸಂಬದ್ಧ ಬರೆದು ಅವಳ ನೋವನ್ನು, ಹೋರಾಟವನ್ನು ಅಪಹಾಸ್ಯಮಾಡಿತು. ಈ ಬಾಳು ಕೊಡುವ ಪದ ಸದಾ ಇರಿಯುವುದು- ಕೊಟ್ಟಿದ್ದಾರೆ ಎಂದೆನಿಸಿಕೊಳ್ಳುವವರಿಗಿಂತ ಪಡೆದಿ¨ªಾರೆ ಎಂದವರಿಗೇ. ಇನ್ನು ಅಂಗವಿಕಲರ ವಿಷಯಕ್ಕೆ ಬಂದರಂತೂ ಸಮಾಜ ಈ ವಿಷಯದಲ್ಲಿ ಮತ್ತಷ್ಟು ಇನ್ನಷ್ಟು ಪಕ್ಷಪಾತಿ! 

ಓರ್ವ ದೈಹಿಕ ವಿಕಲಾಂಗನ ವಿಶೇಷ ಸಾಮರ್ಥ್ಯವನ್ನು ಮನಸಾರೆ ಮೆಚ್ಚಿ , ಅವನ ಸ್ವಾವಲಂಬನೆಗೆ ಮನಸೋತು ಓರ್ವ ಯೋಗ್ಯ ಯುವತಿ ವರಿಸಿದರೆ ಆತನ ಸಾಮರ್ಥ್ಯಕ್ಕೆ ಯೋಗ್ಯ ಹೆಣ್ಣು ಸಿಕ್ಕಿತು ಎನ್ನುವವರೇ ಹೆಚ್ಚು (ಇದು ವಾಸ್ತವವೂ ಕೂಡ). ಅದೇ ಅಂಗವಿಕಲ ಯುವತಿಯೋರ್ವಳನ್ನು, ಯೋಗ್ಯ ವರ ಮೆಚ್ಚಿ ವರಿಸಿದಾಗ ಮಾತ್ರ ಪಾಪ, ಈ ಹುಡುಗಿಗೆ ಅವನು ಬಾಳು ಕೊಟ್ಟ ಎಂದೇ ಹೇಳಿಬಿಡುತ್ತಾರೆ. ಇದೇ ಹಳವಂಡ ಮಾತುಗಳು ವಿಧವೆಯರ, ವಿಚ್ಛೇದಿತ ಮಹಿಳೆಯರ ವಿವಾಹಕ್ಕೂ ಅನ್ವಯಿಸುತ್ತದೆ. ವಿಧುರರ ವಿವಾಹಕ್ಕೆಂದೂ ಬಾಳುಕೊಡುವುದು ಪ್ರಸ್ತಾಪವಾಗದು. ಅಂದರೆ ತೊಂದರೆ ಯಾರಿಗೇ ಇದ್ದಿರಲಿ, ಈ ಬಾಳುಕೊಡುವುದು ಮಾತ್ರ ಹೆಣ್ಣಿಗೇ ಆಗಿರುತ್ತದೆ. ವಾಸ್ತವಿಕತೆಯಲ್ಲಿ ನೋಡಿದಾಗ, ಗಂಡು-ಹೆಣ್ಣು ಇಬ್ಬರಲ್ಲಿ ಯಾರೊಬ್ಬರೂ ಮತ್ತೂಬ್ಬರಿಗೆ ಬಾಳು ಕೊಡಲಾರರು. ಅವರಿಬ್ಬರೂ ಸೇರಿ ಬದುಕಿನ ಭಾರವನ್ನು ಸಮನಾಗಿ ಹಂಚಿಕೊಳ್ಳಬಹುದು ಅಷ್ಟೇ.

ಮದುವೆ ಎನ್ನುವುದು ಬದುಕಿನ ಹಲವಾರು ಮಹತ್ವದ ಘಟ್ಟಗಳಲ್ಲಿ ಒಂದು, ಆದರೆ ಅದೇ ಬದುಕು ಖಂಡಿತ ಅಲ್ಲ. ಮದುವೆ ಹೆಣ್ಣಿಗೆ ಅನಿವಾರ್ಯ, ಅದಿಲ್ಲದಿದ್ದರೆ ಬದುಕೇ ಇಲ್ಲ ಎಂಬ ಪರಿಸ್ಥಿತಿ ಇಂದಿಲ್ಲ. ಆದರೆ, ಆರ್ಥಿಕ ಸ್ವಾವಲಂಬನೆ ಎಲ್ಲಾ ಕಾಲಕ್ಕೂ ಅತ್ಯಗತ್ಯ ಮತ್ತು ಇದು ಬೇಕಾದ ಸಾಮಾಜಿಕ ಭದ್ರತೆಯನ್ನೂ ಕಲ್ಪಿಸುತ್ತದೆ.  ಮಾನಸಿಕ ಬಂಧ ಏರ್ಪಡಲು ಪರಸ್ಪರ ಗೌರವ, ಸ್ನೇಹ, ಪ್ರೀತಿ ಎಲ್ಲವೂ ಅತ್ಯಗತ್ಯ. ಇವುಗಳ ನಡುವೆ ಅನುಕಂಪ/ಕರುಣೆ ಹೊಕ್ಕಿಬಿಟ್ಟರೆ, ಅಂಥ ಬಂಧ ಕೇವಲ ಒಂದು ಬಂಧನವಾಗಿ ಮನಸುಗಳು ನರಳುವುದು ನಿಶ್ಚಿತ. ಇದನ್ನರಿಯದೇ ಹಲವರು ನೋಯಿಸುತ್ತಾರೆ, ಎಡವಿ ಸ್ವಯಂ ನೋಯುತ್ತಾರೆ ಕೂಡ.

Advertisement

ಮದುವೆಯ ಬಂಧ ಉಳಿಯಲು, ಉಳಿಸಿಕೊಳ್ಳಲು ಅಂಗವಿಕಲರಿಗೆ ಕಷ್ಟ, ಮುರಿದು ಬೀಳುವುದೇ ಹೆಚ್ಚು ಎಂಬಿತ್ಯಾದಿ ಸತ್ಯಕ್ಕೆ ಬಹಳ ದೂರವಾದ ಕಲ್ಪನೆಗಳು ನಮ್ಮಲ್ಲಿವೆ. ಅಂಗವಿಕಲರೇ ಇರಲಿ, ಸಾಮಾನ್ಯರೇ ಆಗಿರಲಿ,  ಈ ವೈವಾಹಿಕ ಜೀವನ ಸುಮಧುರವಾಗಿರಲು ಪರಸ್ಪರ ಸಹಯೋಗ, ಸಹಕಾರ, ಮನೋ ಸಂಕಲ್ಪವಿದ್ದರೆ ಸಾಕು. ಇದಲ್ಲದಿದ್ದರೆ ದೈಹಿಕವಾಗಿ ಸರ್ವ ರೀತಿಯಲ್ಲಿ ಸಮರ್ಥರಿರುವವರ ವೈವಾಹಿಕ ಜೀವನವೂ ಗಟ್ಟಿ ನಿಲ್ಲದು. ಹಾಗಾಗಿ, ಕೊರತೆಗಳನ್ನು ನಿರ್ಲಕ್ಷಿಸಿ, ಲಭ್ಯತೆಗಳನ್ನು ಎಣಿಸುತ್ತ, ಪ್ರೀತಿಯಿಂದ ಬಾಳ್ವೆ ಮಾಡಲು ಹೊರಟವರಿಗೆ ಮೆಚ್ಚುಗೆ, ಬೆಂಬಲ ನೀಡಿದರೆ ಎಷ್ಟೋ ಸಹಕಾರವಾಗುವುದು. ಅದು ನೀಡಲಾಗದಿದ್ದರೂ ಸರಿಯೇ, ಅನವಶ್ಯಕ ಕುತೂಹಲ, ಕೊಂಕು, ವ್ಯಂಗ್ಯ, ಕೆಲಸಕ್ಕೆ ಬಾರದ ಕರುಣೆಗಳನ್ನು ಬಿಟ್ಟಿಯಾಗಿ ನೀಡಿ ಅಸಹನೆ, ನೋವು ಉಂಟುಮಾಡದಿದ್ದರೂ ಮಹದುಪಕಾರವನ್ನೇ ಮಾಡಿದಂತಾಗುವುದು. ದೈಹಿಕ ನ್ಯೂನತೆಯುಳ್ಳ ಅನೇಕ ಸ್ನೇಹಿತರು ತಮ್ಮ ಮದುವೆಯ ಕುರಿತು ತಮಗಿರುವ ಆತಂಕಗಳನ್ನು ನನ್ನೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಆದರೆ, ಒಬ್ಬರ ಬದುಕು, ನಿರೀಕ್ಷೆ, ಆಶಯ ಎಲ್ಲವೂ ಮತ್ತೂಬ್ಬರಿಗಿಂತ ವಿಭಿನ್ನವಾಗಿರುತ್ತದೆ. ವಿವಾಹದಂಥ ಸೂಕ್ಷ್ಮ ವಿಷಯದಲ್ಲಿ ಅಂತರಾಳದ ಧ್ವನಿಗೆ ಮೊದಲ ಪ್ರಾಶಸ್ತ ಕೊಡಬೇಕೇ ವಿನಾ ಮತ್ತೂಬ್ಬರ ಒತ್ತಾಯ, ಒಲ್ಲದ/ಸಲ್ಲದ ಕನಿಕರಕ್ಕೆ ಬಾಗಲೇಬಾರದು ಎಂಬುದು ನನ್ನ ವೈಯಕ್ತಿಕ ಅನಿಸಿಕೆ. 

ವೃತ್ತಿಯಲ್ಲಿ ಕಂಪ್ಯೂಟರ್‌ ಇಂಜಿನಿಯರ್‌ ಆಗಿರುವ ನನ್ನ ಪತಿ ರಾಮಕೃಷ್ಣ ಹೆಗಡೆ ಅವರು ನನ್ನನ್ನು ಸಂಪೂರ್ಣವಾಗಿ ಮೆಚ್ಚಿ, ನಾನು ಅವರನ್ನು ಆಜೀವನ ಸಂಗಾತಿಯಾಗಿ ಸ್ವೀಕರಿಸಬಹುದು ಎಂಬ ವಿಶ್ವಾಸವನ್ನು ನನ್ನೊಳಗೆ ತುಂಬಿ ವರಿಸಿದ್ದು. ಅವರೆಂದೂ ನನ್ನ ಮೇಲೆ ಕರುಣೆ, ಅನುಕಂಪವನ್ನು ತೋರಿಲ್ಲ. ನಮ್ಮ ನಡುವೆ ಪರಸ್ಪರ ಅವಲಂಬನೆ, ಸಹಕಾರ, ಸಹಾನುಭೂತಿ (empathy), ಗೌರವ, ಪ್ರೀತ್ಯಾದರಗಳ ಸಾಂಗತ್ಯವಿರುವುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುವಂತೇ ಮುನಿಸು, ತಕರಾರು, ಪ್ರೀತಿ, ಸ್ನೇಹ  ಈ ಎಲ್ಲಾ ಭಾವಗಳೊಂದಿಗೆ, ನೋವು-ನಲಿವನ್ನು ಬಂದ ಹಾಗೆ ಸ್ವೀಕರಿಸಿ, ಭಾರವನ್ನು ಹಂಚಿಕೊಂಡು ಬದುಕುತ್ತಿರುವ ಹನ್ನೆರಡು ವರುಷಗಳ ದಾಂಪತ್ಯ ನಮ್ಮದು. ಆದರೆ ಈ ಬಾಳು ಕೊಡುವುದುದೆಂದರೆ ಏನೆಂದು ಮಾತ್ರ ನಮಗಿನ್ನೂ ಗೊತ್ತಾಗಿಲ್ಲ.

ತೇಜಸ್ವಿನಿ ಹೆಗಡೆ

Advertisement

Udayavani is now on Telegram. Click here to join our channel and stay updated with the latest news.

Next