Advertisement

ಬಂಧ ಎಂಬುದು ಬಂಧನವಾದದ್ದು ಯಾವಾಗ?

03:45 AM Jun 23, 2017 | |

ಕನಸು ಕಾಣುವುದೆಲ್ಲ ಆಯಿತು, ಇನ್ನು ನೈಜ ನೋಟದಿಂದ ಬದುಕಿನ ಕುರಿತು ಮಾತನಾಡಲು ಶುರುವಿಟ್ಟುಕೊಳ್ಳುವ ಅಂತ. ಇದೀಗ ಮಳೆಗಾಲ. ಆಷಾಢ ಬರುವವರೆಗೂ ವಿವಾಹ ಕಾಲ. ಅದರ ಕುರಿತೇ ಮಾತನಾಡೋಣವೆ?

Advertisement

ಸರಳ ವಿವಾಹ ಮತ್ತು ಅದ್ದೂರಿ ವಿವಾಹ- ಇವೆರಡೂ ಇವತ್ತಿನ ಫ್ಯಾಶನ್‌. ಬುದ್ಧಿಜೀವಿ ಅನ್ನಿಸಿಕೊಂಡವರದು ಸರಳ ವಿವಾಹವಾದರೆ ಸಮಾಜದ ಪ್ರಮುಖ ವ್ಯಕ್ತಿಗಳೆಂದು ಅನ್ನಿಸಿಕೊಂಡವರದು ಅದ್ದೂರಿ ವಿವಾಹ !

ವಿವಾಹದ ಸಂಪ್ರದಾಯದಲ್ಲೇನಾದರೂ ಬದಲಾವಣೆ ಇದೆಯೆ? ಊಹೂಂ… ಎರಡರಲ್ಲಿಯೂ ಪದ್ಧತಿ ಒಂದೇ, ಹೆಣ್ಣಿಗೆ ತಾಳಿ ಕಟ್ಟು, ಆಕೆಯನ್ನು ತನ್ನ ಒಡೆತನಕ್ಕೆ ಒಪ್ಪಿಸಿಕೋ ಎಂಬುದೇ ಇಲ್ಲಿ ಮುಖ್ಯವಾಗಿ ಕಾಣುವ ಎರಡು ಅಂಶಗಳು. ಇವತ್ತಿಗೂ ಜಗದ ಗ್ರಹಿಕೆ ಹೇಗಿದೆಯೆಂದರೆ ಮನುಷ್ಯನ ಒಡೆತನಕ್ಕೆ ಅಂತ ಇರುವ ಸಂಗತಿಗಳೆಂದರೆ ಮನೆ, ದುಡ್ಡು, ಹೆಂಡತಿ, ಮಕ್ಕಳು. ಇಲ್ಲಿ ಮನುಷ್ಯ ಎಂದರೆ ಪುರುಷ ಎಂದೇ ಅರ್ಥ !

ಅಲ್ಲ, ಒಡೆತನ, ಹೊಂದುವಿಕೆ ಇವುಗಳಿಲ್ಲದೇ ಬದುಕು ಸಾಧ್ಯವಿಲ್ಲವೆ? ನಾನು, ನೀವು ಎಲ್ಲಾ ಒಪ್ಪುತ್ತೇವೆ- ಪ್ರೀತಿಗೆ ಚೌಕಟ್ಟಿಲ್ಲ ಅಂತ. ಹಾಗೆಂದ ಮೇಲೆ ಅದಕ್ಕೆ ಒಡೆತನವೂ ಇರಬಾರದಲ್ಲ? ವಿವಾಹ ಅನ್ನೋದು ಪ್ರೀತಿಯೆಂಬ ಕನಸಿನ ತೇರು ತಾನೆ, ಇಲ್ಲೇಕೆ ಒಡೆತನ? ಇಲ್ಲೇಕೆ ತಾಳಿ? ತಾನು ಒಡೆತನಕ್ಕೆ ಒಪ್ಪಿಸಲ್ಪಟ್ಟವಳು ಅನ್ನೋ ಕುರುಹು? ಕೈಯ ಹಿಡಿದು ಜೊತೆ ನಡೆಯುವ ಪ್ರೀತಿಗೆಂಥ ಪ್ರಮಾಣ?

ಹಣೆಯ ಕುಂಕುಮ, ಕಾಲಂದುಗೆ, ಕತ್ತಿನ ಸರ ಕೇವಲ ಅಲಂಕಾರಕ್ಕಲ್ಲವೆ? ಮತ್ತೆ ಇವುಗಳಿಗೇಕೆ ಬೇರೆ ಬೇರೆ ಅರ್ಥ ಕಲ್ಪಿಸುವುದು? ಇವುಗಳನ್ನೆಲ್ಲ ಧರಿಸಿ ಕೃಷ್ಣನು ಓಡಾಡಿದರೆ ಗೋಪಿಕೆಯರಿಗೆ ತುಂಬ ಸಂತೋಷ ಉಂಟಾಗುತ್ತದೆ. ಕೃಷ್ಣನ ಅಲಂಕಾರ, ಸೌಂದರ್ಯವನ್ನು ಹೆಚ್ಚಿಸುತ್ತದೆಯೇ ಹೊರತು ಬೇರೆ ಯಾವ ಅರ್ಥವೂ ಇಲ್ಲ. ಆದರೆ, ಅದೇ ರುಕ್ಮಿಣಿಯ ಹಣೆಯ ಕುಂಕುಮ, ಕಾಲಂದುಗೆ, ಕತ್ತಿನ ತಾಳಿಗಳಲ್ಲಿ ಕೇವಲ ಅಲಂಕಾರದ ಅರ್ಥಗಳಷ್ಟೇ ಇರುವುದಲ್ಲ. ಅವು ಅವಳು ಒಂದು ನಿರ್ದಿಷ್ಟ ಒಡೆತನಕ್ಕೆ ಒಪ್ಪಿಸಿಕೊಂಡ ಸಂಗತಿಗಳೂ ಹೌದು. ಅವು ರುಕ್ಮಿಣಿಯ ಸೌಂದರ್ಯದ ಪ್ರತೀಕಗಳಷ್ಟೇ ಆಗಬಾರದೇಕೆ?

Advertisement

ಪ್ರೀತಿಯ ಕನಸು, ವಿವಾಹದ ಬಂಧ… ಇಲ್ಲೆಲ್ಲ “ಒಬ್ಬರಿಗೊಬ್ಬರು’ ಎಂಬ  ಪರಸ್ಪರ ಭಾವದ ಸಮನ್ವಯದ ಧ್ವನಿಗಳಿವೆ. ಆದರೆ, ಇದು ಕೇವಲ ಮಾತಿಗೆ ಮಾತ್ರ. ವ್ಯವಹಾರದಲ್ಲಿ ಹೆಣ್ಣಿಗೆ ಇವು ಒಡೆತನಕ್ಕೆ ಒಪ್ಪಿಸಿಕೊಳ್ಳುವ ಪರೋಕ್ಷ ಸೂಚನೆಗಳು. ಬಂಧ ಎಂಬುದು ಯಾವಾಗ ಬಂಧನವಾಯಿತೋ ತಿಳಿಯಲಿಲ್ಲ. 

ನಿಜವಾಗಿ ಆಧುನಿಕ ಕಾಲದ ಮದುವೆಯಾದ ಹೆಣ್ಣು  ಒದೆಯಬೇಕಾಗಿರುವುದು ಹೊಸ್ತಿಲ ಮೇಲಿಟ್ಟ ಸೇರಕ್ಕಿಯನ್ನಲ್ಲ ; ಪರಂಪರೆ, ಸಂಪ್ರದಾಯಗಳ  ಸುರಕ್ಷಿತ ಗುರಾಣಿಯ ಹಿಂದೆ ಅವಿತಿರುವ ಪುರುಷಾಹಂಕಾರವನ್ನು.ಒಡೆತನದ ಸಂಕುಚಿತತೆಯ ಆಚೆಯೂ ಬದುಕಿದೆ, ಕನಸಿದೆ.

ಅಯ್ಯೋ! ಇವೆಲ್ಲ ಸ್ತ್ರೀವಾದಿಗಳ ಗೋಳು ಅಂತ ಮೂಗು ಮುರಿಯಬೇಡಿ, ಪ್ರಗತಿಪರರು ಎಂದು ತಮ್ಮನ್ನು ತಾವು ಭಾವಿಸಿಕೊಂಡವರು ಕೂಡ ಒಮ್ಮೆ ತಮ್ಮೊಳಗೆ ಇಣುಕಿ ನೋಡಬೇಕು. ಯಾರಾದರೂ ವಿವಾಹದ ಪದ್ಧತಿಯನ್ನು ಬದಲಾಯಿಸಿದ್ದಾರಾ? ಬುದ್ಧಿಜೀವಿಗಳು ಈ ಕುರಿತು ಯೋಚಿಸಿದ್ದಾರಾ? 

ನಿಜವಾಗಿ ಹೊಸತನ ಎಂಬುದು ಸಂಪ್ರದಾಯದಲ್ಲಿ ಬರಬೇಕು;  ತೋರಣ ಕಟ್ಟುವುದರಲ್ಲಿ ಅಲ್ಲ !

– ರಶ್ಮಿ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next