Advertisement

Women’s Reservation Bill: ನಾರಿ ಹೋರಾಟದ ಹೆಜ್ಜೆಗಳು

09:09 AM Sep 20, 2023 | Team Udayavani |

27 ವರ್ಷಗಳ ನಂತರ ಮಹಿಳಾ ಮೀಸಲಾತಿ ಮಸೂದೆಗೆ ತಾರ್ಕಿಕ ಅಂತ್ಯ ಸಿಗುವ ಲಕ್ಷಣಗಳು ಕಾಣಿಸುತ್ತಿವೆ. ಸೋಮವಾರ ರಾತ್ರಿ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಗೆ ಒಪ್ಪಿಗೆ ಸಿಕ್ಕಿದ್ದು, ಮಂಗಳವಾರ ಮಧ್ಯಾಹ್ನ ಕಾನೂನು ಸಚಿವ ಅರ್ಜುನ್‌ ರಾಮ್‌ ಮೇಘವಾಲ್‌ ಅವರು ಲೋಕಸಭೆಯಲ್ಲಿ ಮಸೂದೆ ಮಂಡಿಸಿದ್ದಾರೆ. ಏನಿದು ಮಹಿಳಾ ಮೀಸಲಾತಿ ಮಸೂದೆ? ಇತಿಹಾಸವೇನು? ಇಲ್ಲಿದೆ ಮಾಹಿತಿ…

Advertisement

1987 -1990- ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ: ಮೊದಲ ಬಾರಿಗೆ ಮಹಿಳಾ ಮೀಸಲಾತಿ ಮಸೂ ದೆ ಆಶಯ ಮೊಳಕೆಯೊಡೆಯಿತು. ರಾಜೀವ್‌ ಗಾಂಧಿ ಸರ್ಕಾರದಲ್ಲಿ ಮಾರ್ಗರೇಟ್‌ ಆಳ್ವ ಅವರ ನೇತೃತ್ವದಲ್ಲಿ 14 ಸದಸ್ಯರ ಸಮಿತಿ ರಚಿಸಲಾಯಿತು. ನಂತರದ ವರ್ಷವೇ ಈ ಸಮಿತಿ ಮಹಿಳೆಯರಿಗಾಗಿರಾಷ್ಟ್ರೀಯ ದೃಷ್ಟಿಕೋನ ಯೋಜನೆ ಯೊಂದನ್ನು ನೀಡಿತು. ಇದು 353 ಶಿಫಾರಸುಗಳನ್ನು ನೀಡಿತು. ಈ ಶಿಫಾರಸುಗಳನ್ನು ಜಾರಿಗೆ ತಂದಿದ್ದು ರಾಜೀವ್‌ ಗಾಂಧಿ ನಂತರದ ಪಿ.ವಿ.ನರಸಿಂಹರಾವ್‌ ಸರ್ಕಾರ. ಸಂವಿಧಾನದ 73 ಮತ್ತು 74ನೇ ವಿಧಿಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮೂರನೇ ಒಂದು ಭಾಗ ಮೀಸಲು ನೀಡಲಾಯಿತು. ಅಂದರೆ, ಗ್ರಾಪಂಗಳು, ತಾಲೂಕು, ಜಿಲ್ಲಾ, ನಗರ ಪಂಚಾಯಿತಿ ಗಳಲ್ಲಿ ಅಧ್ಯಕ್ಷ ಸ್ಥಾನವೂ ಸೇರಿ ಎಲ್ಲೆಡೆ ಮೀಸಲಾತಿ ಸಿಕ್ಕಿತು. ಕೆಲ ರಾಜ್ಯಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಒಬಿಸಿಗಳಿಗೂ ಮೀಸಲಾತಿ ನೀಡಲಾಗುತ್ತಿದೆ.

1996 – ದೇವೇಗೌಡ ಸರ್ಕಾರದಲ್ಲಿ ಮೊಳಕೆ : ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದ್ದು ಮೊದಲ ಐತಿಹಾಸಿಕ ನಿರ್ಧಾರವಾದರೆ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿಯೂ ಶೇ.33ರಷ್ಟು ಮೀಸಲಾತಿ ನೀಡಬೇಕು ಎಂಬ ಆಶಯ ಮೊಳಕೆಯೊಡೆದದ್ದು ಎಚ್‌.ಡಿ.ದೇವೇಗೌಡ ಅವರ ಸರ್ಕಾರದ ಅವಧಿಯಲ್ಲಿ. 1996ರ ಸೆ.12 ರಂದು ಆಗಿನ ಪ್ರಧಾನಿ ದೇವೇಗೌಡರ ಸರ್ಕಾರವು ಲೋಕಸಭೆ ಯಲ್ಲಿ ಸಂವಿಧಾನ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಈ ಪ್ರಕಾರವಾಗಿ ಲೋಕಸಭೆ, ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಲು ತೀರ್ಮಾನಿ ಸಲಾಯಿತು. ಈ ಮಸೂದೆಗೆ ಪ್ರತಿಪಕ್ಷಗಳಾದಿಯಾಗಿ ಎಲ್ಲರೂ ಬೆಂಬಲ ವ್ಯಕ್ತಪಡಿಸಿದರು. ಆದರೆ, ಒಬಿಸಿಗೆ ಸೇರಿದ ಸಂಸದರು ಮಾತ್ರ ಯಾವುದೇ ಕಾರಣ ನೀಡದೇ ಮಸೂದೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. ಅದೇ ಅವಧಿಯಲ್ಲಿ ಬಿಜೆಪಿ ಸಂಸದೆಯಾಗಿದ್ದ ಉಮಾಭಾರತಿಯವರು ಹಿಂದುಳಿದ ವರ್ಗಗಳ ಮಹಿಳೆಯರಿಗೆ ಮೀಸಲಾತಿ ಬೇಕು ಎಂದು ಒತ್ತಾಯಿಸಿದ್ದರು. ಇದಕ್ಕೆ ದೇವೇಗೌಡರು ಒಪ್ಪಿಗೆ ನೀಡಿದ್ದರು. ಬಳಿಕ ಈ ಮಸೂದೆಗೆ ಆಯ್ಕೆ ಸಮಿತಿಗೆ ಹೋಗಿತ್ತು. ಆಗ ಸಿಪಿಐ ನಾಯಕಿ ಗೀತಾ ಮುಖರ್ಜಿ ಅವರ ನೇತೃತ್ವದಲ್ಲಿ 21 ಸದಸ್ಯರ ಆಯ್ಕೆ ಸಮಿತಿ ರಚನೆ ಮಾಡಲಾಯಿತ್ತು. ಇದರಲ್ಲಿ ಲೋಕಸಭೆಯ 11 ಮತ್ತು ರಾಜ್ಯಸಭೆಯ 10 ಸದಸ್ಯರಿದ್ದರು. ಅಂದರೆ, ಶರದ್‌ ಪವಾರ್‌, ನಿತೀಶ್‌ ಕುಮಾರ್‌, ಮಮತಾ ಬ್ಯಾನರ್ಜಿ, ಉಮಾ ಭಾರತಿ, ಸುಷ್ಮಾ ಸ್ವರಾಜ್‌ ಈ ಸಮಿತಿಯಲ್ಲಿದ್ದ ಪ್ರಮುಖರು. ಈ ಸಮಿತಿಯು ಎಸ್ಸಿ ಮತ್ತು ಎಸ್ಟಿಗೆ ಸೇರಿದ ಮಹಿಳೆಯರಿಗೆ ಮೀಸಲಾತಿ ನೀಡಬಹುದು ಎಂದು ಶಿಫಾರಸು ಮಾಡಿತು. ಆದರೆ, ಒಬಿಸಿಗೆ ಮೀಸಲಾತಿ ನೀಡುವುದು ಕಷ್ಟ ಎಂದಿತು. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲದೇ ಇರುವ ಕಾರಣದಿಂದಾಗಿ ಮೀಸಲಾತಿ ಸಾಧ್ಯವಿಲ್ಲ ಎಂದಿತು. ಮುಂದಿನ ದಿನಗಳಲ್ಲಿ ಒಬಿಸಿ ಮಹಿಳೆಯರಿಗೆ ಮೀಸ ಲಾತಿ ನೀಡಬಹುದು ಎಂದಿತು. 1996ರ ಡಿ.9ರಂದು ಎರಡೂ ಸದನಗಳಲ್ಲಿ ಈ ಮಸೂದೆ ಮಂಡಿಸ ಲಾ ಯಿತು. ಆದರೆ, ಅನುಮೋದನೆ ಪಡೆಯಲಾಗಲಿಲ್ಲ.

1997- ಗುಜ್ರಾಲ್‌ ಸರ್ಕಾರ: ದೇವೇಗೌಡರ ಸರ್ಕಾರದ ನಂತರ ಬಂದ ಐ.ಕೆ.ಗುಜ್ರಾಲ್‌ ಅವರ ಸರ್ಕಾರವೂ ಮಹಿಳಾ ಮೀಸಲಾತಿ ಮಸೂದೆ ಜಾರಿಗಾಗಿ ಪ್ರಯತ್ನ ಪಟ್ಟಿತು. ಎರಡು ಬಾರಿ ಸರ್ವಪಕ್ಷಗಳ ಸಭೆ ನಡೆಸಲಾಯಿತು. ಆಗಲೂ ಬಿಹಾರದ ನಿತೀಶ್‌ ಕುಮಾರ್‌ ಅವರು ಈ ಮಸೂದೆಗೆ ತೀವ್ರವಾಗಿ ವಿರೋಧಿಸಿದ್ದರು. ಆಗ ಅವರು, ಒಬಿಸಿ ಮಹಿಳೆಯರ ಪ್ರಾತಿನಿಧ್ಯದ ಬಗ್ಗೆ ಮಾತನಾಡಿದ್ದರು. ಅಂದರೆ, ಸದ್ಯ ಲೋಕಸಭೆಯಲ್ಲಿ 39 ಮಹಿಳಾ ಸದಸ್ಯರಿದ್ದಾರೆ. ಇವರಲ್ಲಿ ಕೇವಲ 4 ಮಂದಿ ಮಾತ್ರ ಒಬಿಸಿಗೆ ಸೇರಿದವರಾಗಿದ್ದಾರೆ. ಹೀಗಾಗಿ, ಒಬಿಸಿಗೆ ಮೀಸಲಾತಿ ಬೇಕೇಬೇಕು ಎಂದು ಪಟ್ಟು ಹಿಡಿದಿದ್ದರು. ಅಷ್ಟೇ ಅಲ್ಲ, ದೇಶದಲ್ಲಿ ಮಹಿಳೆಯರ ಜನಸಂಖ್ಯೆ ಶೇ.50 ಇದ್ದರೆ, ಒಬಿಸಿ ಜನಸಂಖ್ಯೆ ಶೇ.60 ಇದೆ. ಆದರೂ, ಒಬಿಸಿಗೆ ಅನ್ಯಾಯವಾಗುತ್ತದೆ ಎಂದರೆ ಒಪ್ಪಲು ಸಾಧ್ಯವೇ ಎಂದು ಪ್ರಶ್ನಿಸಿದ್ದರು. ಆಗಿನ ಪ್ರಧಾನಿ ಐ.ಕೆ.ಗುಜ್ರಾಲ್‌ ಅವರು ರಾಜಕೀಯ ಪಕ್ಷಗಳಲ್ಲಿನ ಗೊಂದಲದ ಬಗ್ಗೆ ಮಾತನಾಡಿದ್ದರು. ಎಡಪಕ್ಷಗಳನ್ನು ಹೊರತುಪಡಿಸಿ, ಉಳಿದೆಲ್ಲಾ ಪಕ್ಷಗಳಲ್ಲಿ ಮಹಿಳಾ ಮಸೂದೆ ಕುರಿತಂತೆ ಎರಡು ಅಭಿಪ್ರಾಯಗಳಿವೆ ಎಂದಿದ್ದರು.

1998- ವಾಜಪೇಯಿ ಸರ್ಕಾರ: 1998ರಲ್ಲಿ ಬಿಜೆಪಿಯ ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರವೂ ಮಹಿಳಾ ಮಸೂದೆ ಜಾರಿಗೆ ಪ್ರಯತ್ನಿಸಿತು. ಆಗ ಕಾಂಗ್ರೆಸ್‌ನಿಂದ ಸಿಡಿದು ಹೊಸ ಪಕ್ಷ ಕಟ್ಟಿದ್ದ ಮಮತಾ ಬ್ಯಾನರ್ಜಿ ಮತ್ತು ಬಿಜೆಪಿ ಸಂಸದೆ ಸುಮಿತ್ರಾ ಮಹಾಜನ್‌ ಅವರು, ಮಹಿಳಾ ಮಸೂದೆ ಜಾರಿಗಾಗಿ ಸದನದ ಒಳಗೆ ಪ್ರತಿಭಟನೆ ನಡೆಸಿದ್ದರು. ಅದೇ ವರ್ಷದ ಜು.20ರಂದು ಕಾನೂನು ಸಚಿವ ತಂಬಿ ದೊರೈ ಅವರು, ಈ ಮಸೂದೆ ಮಂಡಿಸಿದ್ದರು. ಆಗ ಲೋಕಸಭೆಯಲ್ಲಿ ದೊಡ್ಡ ನಾಟಕವೇ ನಡೆಯಿತು. ಆರ್‌ಜೆಡಿ ಸಂಸದ ಸುರೇಂದ್ರ ಪ್ರಕಾಶ್‌ ಯಾದವ್‌ ಮತ್ತು ಅಜಿತ್‌ ಕುಮಾರ್‌ ಮೆಹ್ತಾ ತಂಬಿದೊರೈ ಅವರ ಕೈಯಿಂದ ಮಸೂದೆಯ ಪ್ರತಿಗಳನ್ನು ಪಡೆದು ಹರಿದು ಹಾಕಿದ್ದರು. ಆರ್‌ ಜೆಡಿಯ ಲಾಲೂ ಪ್ರಸಾದ್‌ ಯಾದವ್‌ ಮತ್ತು ಎಸ್‌ಪಿಯ ಮುಲಾಯಂ ಸಿಂಗ್‌ ಯಾದವ್‌ ಈ ನಡೆಯ ಬಗ್ಗೆ ಸಮರ್ಥಿಸಿಕೊಂಡಿದ್ದರು. ಆಗಲೂ ಆರ್‌ಜೆಡಿ, ಎಸ್‌ಪಿ ಮತ್ತು ಬಿಜೆಪಿಯ ಕೆಲವು ಒಬಿಸಿ ಸಂಸದರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದರು. ಐಯು ಎಂಎಲ್‌ ಮತ್ತು ಬಿಎಸ್‌ಪಿಯ ಇಲಿಯಾಸ್‌ ಅಜ್ಮಿ ಮುಸ್ಲಿಂ ಮಹಿಳೆಯರಿಗೂ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿದ್ದರು. ವಾಜಪೇಯಿ ಸರ್ಕಾರ ಬಿದ್ದು, ಮತ್ತೆ ಹೊಸದಾಗಿ ಅಧಿಕಾರಕ್ಕೆ ಬಂದಿತು. 1999ರ ಡಿ.23ರಂದು ಆಗಿನ ಕಾನೂನು ಸಚಿವ ರಾಂ ಜೇಠ್ಮಲಾನಿ ಮಸೂದೆ ಮಂಡಿಸಿದ್ದರು. ಆಗಲೂ ಎಸ್‌ಪಿ, ಆರ್‌ ಜೆಡಿ ಕಡೆಯಿಂದ ತೀವ್ರ ವಿರೋಧ ವ್ಯಕ್ತವಾಯಿತು. 2000ರ ಏಪ್ರಿಲ್‌ನಲ್ಲಿ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜಕೀಯ ಪಕ್ಷಗಳಿಂದ ಈ ಬಗ್ಗೆ ಮಾಹಿತಿ ಕೇಳಿತ್ತು. 2003ರ ಮಾ.7ರಂದು ವಾಜಪೇಯಿ ಸರ್ಕಾರ ಮತ್ತೂಮ್ಮೆ ಪ್ರಯತ್ನಿಸಿತು. ಸರ್ವಪಕ್ಷಗಳ ಸಭೆ ಕರೆದು ಒಮ್ಮತಕ್ಕೆ ಯತ್ನಿಸಿತಾದರೂ, ಅದು ಸಫ‌ಲವಾಗಲಿಲ್ಲ.

Advertisement

2005- ಡಾ.ಮನಮೋಹನ್‌ ಸಿಂಗ್‌ ಸರ್ಕಾರ: ಯುಪಿಎ ಸರ್ಕಾರದಲ್ಲೂ ಪ್ರಯತ್ನಗಳಾ ದವು. 2005ರಲ್ಲೇ ಸೋನಿಯಾ, ಮನಮೋ ಹನ್‌ ಸಿಂಗ್‌ ಅವರು ಈ ಬಗ್ಗೆ ಎಲ್ಲ ಪಕ್ಷಗಳ ಜತೆ ಮಾತುಕತೆ ನಡೆಸಿದರು. ಬಳಿಕ ಹೊಸ ದಾಗಿ ಸಮಿತಿ ಮಾಡಿ, ಮಸೂದೆಯಲ್ಲಿ ಕೆಲ ಬದಲಾವಣೆ ತರಲಾಯಿತು. 2008ರಲ್ಲಿ ರಾಜ್ಯಸಭೆಯಲ್ಲಿ ಈ ಮಸೂದೆ ಮಂಡಿಸಲಾಗಿತ್ತು. ಇದನ್ನು ಆಯ್ಕೆ ಸಮಿತಿಗೆ ಒಪ್ಪಿಸಲಾಗಿತ್ತು. 2009ರಲ್ಲಿ ಸ್ಟಾಂಡಿಂಗ್‌ ಕಮಿಟಿ ವರದಿ ಕೊಟ್ಟಿತ್ತು. 2010ರ ಫೆ.25ರಂದು ಕೇಂದ್ರ ಸಂಪುಟ ಸಭೆ ಇದಕ್ಕೆ ಒಪ್ಪಿಗೆ ನೀಡಿತ್ತು. ಅದೇ ವರ್ಷದ ಮಾ.9ರಂದು ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿತು. ಆದರೆ, ಮಸೂದೆಗೆ ಯುಪಿಎ ಸರ್ಕಾರದಲ್ಲೇ ವಿರೋಧ ವ್ಯಕ್ತವಾಗಿದ್ದರಿಂದ ಲೋಕಸಭೆಗೆ ಇದು ಬರದೇ ಬಿದ್ದು ಹೋಯಿತು. 2010ರಲ್ಲಿ ಗಂಭೀರವಾಗಿಯೇ ಈ ಬಗ್ಗೆ ಪ್ರಯತ್ನಗಳಾಗಿ ದ್ದವು. ಆಗ ಕಾಂಗ್ರೆಸ್‌ ಜತೆ ಬಿಜೆಪಿ, ಎಡಪಕ್ಷಗಳು ಗಟ್ಟಿಯಾಗಿ ನಿಂತಿದ್ದವು. ಆದರೂ, ಸರ್ಕಾರದೊ ಳಗೇ ವಿರೋಧ ವ್ಯಕ್ತವಾಗಿ ಮುಂದಕ್ಕೆ ಹೋಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next