Advertisement

ನಮ್ಮಲ್ಲಿ ಇಂದಿಗೂ ಅಸ್ಪೃಶ್ಯ, ಸ್ಪೃಶ್ಯ ಭಾರತವಿದೆ

12:09 PM Aug 11, 2018 | |

ಮೈಸೂರು: ಇಂದಿಗೂ ದಲಿತರು ತಮ್ಮ ಕೇರಿಬಿಟ್ಟು ಹೊರಬರುವುದನ್ನು ಸಹಿಸಿದ ಮನಸ್ಥಿತಿ ಜೀವಂತವಾಗಿರುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್‌.ಮಹೇಶ್‌ ಆತಂಕ ವ್ಯಕ್ತಪಡಿಸಿದರು. 

Advertisement

ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಿತಿ ವತಿಯಿಂದ ಮೈಸೂರು ವಿವಿ ಮಾನಸಗಂಗೋತ್ರಿಯ ರಾಣಿಬಹದ್ದೂರ್‌ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ನಮ್ಮಲ್ಲಿ ಇಂದಿಗೂ ಅಸ್ಪೃಶ್ಯ ಭಾರತ’ ಹಾಗೂ “ಸ್ಪೃಶ್ಯ ಭಾರತ’ ಎಂಬ ಎರಡು ದೇಶಗಳಿವೆ. ಇದರಿಂದಾಗಿ 21ನೇ ಶತಮಾನದಲ್ಲೂ ದಲಿತರ ಕೇರಿ, ಓಣಿಗಳು ಹಾಗೆ ಉಳಿದುಕೊಂಡಿದ್ದು, ಈ ಕೇರಿಗಳಲ್ಲಿ ಅನೇಕ ಪ್ರತಿಭಾವಂತರಿದ್ದಾರೆ ಎಂದರು.

ಆದರೆ ಅನೇಕ ದಲಿತರು ಅಕ್ಷರ ಬಲದಿಂದ ಮಾತನಾಡಲು ಶುರು ಮಾಡಿದ್ದು, ಇಂದಿನ ಜಾಗತೀಕರಣದ ಪ್ರಭಾವದಿಂದ ದಲಿತರನ್ನು ಸ್ವೀಕಾರ ಮಾಡುವ ಮನಸುಗಳೂ ಸೃಷ್ಟಿಯಾಗಿವೆ. ಹೀಗಾಗಿ ದಲಿತರ ಬಗ್ಗೆ ಹಿಂದಿನಷ್ಟು ತಿರಸ್ಕಾರ, ವಿರೋಧಗಳು ವ್ಯಕ್ತವಾಗದ ಮಟ್ಟಿಗೆ ಮನಸ್ಸುಗಳು ಬದಲಾವಣೆಯಾಗಿವೆ ಎಂದು ತಿಳಿಸಿದರು. 

ಶೋಷಿತರು, ಅಲ್ಪಸಂಖ್ಯಾತರು, ಹಿಂದುಳಿದವರೆಲ್ಲ ದಲಿತರು ಎಂದು ಸಾಹಿತಿ ಪ್ರೊ.ಸಿ.ಪಿ.ಕೃಷ್ಣಕುಮಾರ್‌ ಹೇಳಿದ್ದಾರೆ. ಆದರೆ ಹಿಂದುಳಿದವರು, ಶೋಷಿತರು ಯಾರು ದಲಿತರಲ್ಲ, ಬದಲಿಗೆ ಸಮಾಜದಲ್ಲಿರುವ ಅಸ್ಪೃಶ್ಯರು ಮಾತ್ರವೇ ದಲಿತರಾಗಿದ್ದಾರೆ.

ಇವರು ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ರಾಜಕೀಯ ಕಾರಣದಿಂದ ಇಂದಿಗೂ ಊರ ಹೊರಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಹೀಗಾಗಿ ಊರು ಕೇರಿ ಎಂಬ ಬೇಧ ಭಾವ ದೂರವಾಗಿ, ದಲಿತ ಕೇರಿಯಲ್ಲಿರುವವರು ಊರಿನ ಮಧ್ಯಭಾಗದಲ್ಲಿ ನೆಲಸುವಂತಾಗಬೇಕು. ಈ ಮೂಲಕ ಊರನ್ನು ಬದಲಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯಬೇಕಿದೆ ಎಂದು ಹೇಳಿದರು.

Advertisement

ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್‌ ಮಾತನಾಡಿ, ಅರವಿಂದ ಮಾಲಗತ್ತಿ ಅವರು ಒಬ್ಬ ಸೀಮಾತೀತ ಲೇಖಕರಾಗಿದ್ದು, ಅವರ ಸಾಹಿತ್ಯದಲ್ಲಿ ಸಾಮಾಜಿಕ, ಸಾಂಸ್ಕೃತಿಕ ಅಂಶಗಳಿವೆ. ಇಂದು ಆಧುನಿಕ ಸಾಹಿತ್ಯ ತಿರುವಿನಲ್ಲಿದ್ದು, ಈ ಬದಲಾವಣೆಗೆ ಕಾರಣರಾದವರ ಸಾಲಿನಲ್ಲಿ ಅರವಿಂದ ಮಾಲಗತ್ತಿ ಮುಂಚೂಣಿಯಲ್ಲಿದ್ದಾರೆ. ಅವರು “ಮೂಕನಿಗೆ ಬಾಯಿ ಬಂದಾಗ’ ಎಂಬ ಕೃತಿ ಬರೆದ ಸಂದರ್ಭದಲ್ಲಿ ನಾನು ಹೇಳಿದ ಮಾತುಗಳು ಸತ್ಯವಾಗಿವೆ.

ಮಾಲಗತ್ತಿ ಅವರ ಈ ಕೃತಿಯು ಬಂದ್‌ ಆಗಿದ್ದ ಬಾಯಿಗಳನ್ನು ತೆರೆಸಿ, ಮೂಕರಿಗೆ ನಾಲಗೆ ಕೊಟ್ಟಿದೆ. ಹೀಗಾಗಿ ಮಾಲಗತ್ತಿ ಅವರನ್ನು ಕನ್ನಡದ ದಲಿತ ಸಾಹಿತ್ಯದ ದೈತ್ಯ ಎಂದು ಕರೆಯಬಹುದಾಗಿದೆ. ದಲಿತ ಎನ್ನುವುದು ಒಂದು ಅವಸ್ಥೆ, ಶೋಷಿತರು, ದಮನಿತರು, ಅವಕಾಶ ವಂಚಿತರು ಎಲ್ಲರೂ ದಲಿತರೆ ಎಂದು ಪ್ರತಿಪಾದಿಸಿದರು. 

ಡಾ.ಅರವಿಂದ ಮಾಲಗತ್ತಿ ಅವರ ಕವಿತೆಗಳ ಗಾಯನ, ನೃತ್ಯ ರೂಪಕ “ಗಿಳಿ ಕುಂತು ಕೇಳಾವೋ’ ಧ್ವನಿ ಮುದ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸಂಗೀತ ನಿರ್ದೇಶಕ ಹಂಸಲೇಖ, ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಟಿ.ಕೆ.ಉಮೇಶ್‌, ಕುಲಸಚಿವ ಪ್ರೊ.ಆರ್‌.ರಾಜಣ್ಣ, ಪ್ರೊ.ಅರವಿಂದ ಮಾಲಗತ್ತಿ ಅಭಿನಂದನಾ ಸಮಿತಿ ಕಾರ್ಯಾಧ್ಯಕ್ಷ$ಪ್ರೊ.ಎನ್‌.ಎಂ.ತಳವಾರ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next