Advertisement

ನಾವು ಕೊಡ್ತೀವಿ, ಹಾಗಾಗಿಯೇ ಜೀವಂತವಿದೆ ಇದೆ ಲಂಚ!

12:13 PM Jan 29, 2018 | |

ಜನರು ತಮಗೆ ಕಂಡುಬಂದ ಅವ್ಯವಹಾರಗಳ ಬಗ್ಗೆ ಈಗ ನೇರವಾಗಿ ಕೇಂದ್ರೀಯ ಜಾಗೃತ ಆಯೋಗಕ್ಕೆ ಕರೆ ಮಾಡಿ ತಿಳಿಸಬಹುದು. ಅದೂ ಉಚಿತವಾಗಿ. ಆಯೋಗ ಸಂದೇಶ, ಇ.ಮೇಲ್‌ ಆಧಾರಿತ ಭ್ರಷ್ಟಾಚಾರ ವಿರೋಧಿ ಹಾಟ್‌ಲೈನ್‌ ಆರಂಭಿಸಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಟೋಲ್‌ ಫ್ರೀ ಸಂಖ್ಯೆಯಾದ 1800-11-0180 ಅಥವಾ 011-24651000ಗೆ ಸಲ್ಲಿಸಬಹುದು. 

Advertisement

ಹೊಸ ಹೊಸ ತಂತ್ರಜ್ಞಾನಗಳು ಬಂದ ನಂತರ ನಾವು ಹೆಚ್ಚು ಹೆಚ್ಚು ಪ್ರಾಮಾಣಿಕರು, ಸಭ್ಯರು ಆಗಬೇಕಿತ್ತು. ಈ ಸಿಸಿ ಕ್ಯಾಮರಾಗಳ ಕಾರಣದಿಂದಾಗಿ ಕಳ್ಳತನ, ದರೋಡೆ ಕಡಿಮೆಯಾಗಬೇಕಿತ್ತು. ಕೊನೇಪಕ್ಷ, ಕ್ರಿಮಿನಲ್‌ಗ‌ಳು ಸುಲಭವಾಗಿ ಸಿಕ್ಕು ಬಿದ್ದು, ಆ ಭಯದಿಂದಲಾದರೂ ಅಪರಾಧಗಳ ಸಂಖ್ಯೆ ಕುಗ್ಗಬೇಕಿತ್ತು. ಊಹೂn, ಎಟಿಎಂನಲ್ಲಿ ಮಳೆಯ ಮೇಲೆ ಹಲ್ಲೆ ಮಾಡಿದವನ ಚಿತ್ರ ವಿಡಿಯೋದಲ್ಲಿ ಸಿಕ್ಕರೂ ಆ ಕೇಡಿಗ ವರ್ಷಗಟ್ಟಲೆ ಸಿಗುವುದಿಲ್ಲ. ಕೆಲವು ಗಣ್ಯರ ಕೊಲೆಗಾರರಂತೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ. ಅಲ್ಲೆಲ್ಲೋ ಕಣ್ಮರೆಯಾದ ವಿಮಾನದ ತುಣುಕು ಕೂಡ ಪತ್ತೆಯಾಗುವುದಿಲ್ಲ. 

ಈ ಮಾತುಗಳು ಲಂಚ, ಭ್ರಷ್ಟಾಚಾರಕ್ಕೂ ಅನ್ವಯವಾಗುತ್ತದೆ. ಸಕಾಲ ಯೋಜನೆ ಜಾರಿಯಾಗಿದೆ. ಅರ್ಜಿಗಳ ಕುಲಗೋತ್ರ ಜಾಲಾಡಲು ಮಾಹಿತಿ ಹಕ್ಕಿನ ಕಾಯ್ದೆಯ ಬೆಂಬಲವಿದೆ. ಆದರೂ ಬಹುಸಂಖ್ಯಾತರು ಕೆಲಸ ಮಾಡಿಸಿಕೊಳ್ಳಲು ಲಂಚ ನೀಡುತ್ತಲೇ ಇದ್ದಾರೆ. ಪಾನ್‌ ನಂಬರ್‌, ಆಧಾರ್‌ ಕಾರ್ಡ್‌ ಆದಾಯಕ್ಕೆ ಕೊಂಡಿ ಹಾಕಿಕೊಂಡಿದ್ದರೂ ಅಧಿಕಾರಿಗಳ ಲಂಚ ದಾಹ ಕಡಿಮೆಯಾಗಿಲ್ಲ. ಅವರು ಸಿಕ್ಕಿಹಾಕಿಕೊಳ್ಳುತ್ತಿಲ್ಲ.

ತಳಮಟ್ಟದಲ್ಲಿಯೇ ಸಮಸ್ಯೆ!
ಒಂದು ವಿಷಯದಲ್ಲಂತೂ ನಾವು ದೇಶೀಯರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕಾಮಗಾರಿಗಳ ಗುಣಮಟ್ಟ ಕಡಿಮೆ ಎಂಬರ್ಥದ ದೂರುಗಳು ದೊಡ್ಡ ದೊಡ್ಡ ಯೋಜನೆಗಳಲ್ಲಿ ಕೇಳಿಬರುತ್ತಿಲ್ಲ. ಉದಾಹರಣೆಗೆ, ರಸ್ತೆ ಡಾಂಬರೀಕರಣ, ಕಾಂಕ್ರಿಟ್‌ ರಸ್ತೆ, ಕಟ್ಟಡ ನಿರ್ಮಾಣಗಳಲ್ಲಿ ಕಾಮಗಾರಿಗೆ ನಿಗದಿಪಡಿಸುವ ಮೊತ್ತವೇ ಅಸಲಿಗಿಂತ ಅತ್ಯಧಿಕ. ಒಬ್ಬ ಗುತ್ತಿಗೆದಾರ, ಶಾಸಕರು, ಎಂಜಿನಿಯರ್‌ಗಳು ಮೊದಲಾದವರಿಗೆ ನಿಗದಿಯಾಗಿರುವ ಕಮೀಶನ್‌ ಅನ್ನು ಕೊಟ್ಟ ನಂತರವೂ ಅವನಿಗೆ ದೊಡ್ಡ ರಖಂ ಹಣ ಉಳಿಯುತ್ತದೆ. ಇಂತಹ ಕಮೀಶನ್‌ ಕೊಡುವ ಪದ್ಧತಿಯ ಮೊದಲ ಅರಿವು ನಮಗಾಗಿದ್ದು ಬೋಫೋರ್ಸ್‌ ಹಗರಣದಲ್ಲಿ.

ಸಮಸ್ಯೆ ಇರುವುದು ತಳಮಟ್ಟದಲ್ಲಿ. ಇವತ್ತಿಗೂ ಗ್ರಾಮ ಲೆಕ್ಕಿಗ, ರೆವಿನ್ಯೂ ಇನ್ಸ್‌ಪೆಕ್ಟರ್‌, ಒಂದು ಡೆತ್‌ ಸರ್ಟಿಫಿಕೇಟ್‌ ಕೊಡಲು ಲಂಚ ಪಡೆಯದೆ ಸರಿದಾಡುವುದಿಲ್ಲ.  ಹಕ್ಕುಪತ್ರದ ವಿಚಾರದಲ್ಲಂತೂ ಅವರು ಹಣ ಪಡೆಯದಿದ್ದರೆ ಶಾಂತಂಪಾಪಂ! ಇದೇ ರೀತಿ ಕೃಷಿ, ತೋಟಗಾರಿಕಾ ಇಲಾಖೆಯಲ್ಲಿ ಸಹಾಯಧನದ ಅರ್ಜಿಗಳು ಮುಂದೆ ಸಾಗಬೇಕಾದರೆ ಅವಕ್ಕೆ “ವಿಟಮಿನ್‌ ಎಂ’ ಬೇಕು. ತಪ್ಪು ದಾಖಲೆ, ಸುಳ್ಳು ದಾಖಲೆ ಸೃಷ್ಟಿಗಂತೂ ಝಣಝಣ ಕಾಂಚಾಣ ಮಾತನಾಡಬೇಕು. ಆರ್‌ಟಿಓ, ಅರಣ್ಯ ಇಲಾಖೆ, ಕಂದಾಯ, ಸ್ಥಳೀಯ ಆಡಳಿತಗಳು ಲಂಚದ ಆಮ್ಲಜನಕವನ್ನೇ ಉಸಿರಾಡುತ್ತಿವೆ. 

Advertisement

ವಾಸ್ತವವಾಗಿ ಲಂಚವನ್ನು ಕಡಿಮೆ ಮಾಡಬಹುದಿತ್ತು. ಆದರೆ ಜನಕ್ಕೆ ಅಂತಹ ಮಾರ್ಗದ ಅರಿವಿಲ್ಲ. ಕಾಯುವ ತಾಳ್ಮೆ ಇಲ್ಲ. ಅಂದರೆ ಜನ ಅರ್ಥಾತ್‌ ನಾವು ಕೊಡುತ್ತಿದ್ದೇವೆ ಎಂಬ ಕಾರಣಕ್ಕೆ ಅವರು ಪಡೆಯುತ್ತಿದ್ದಾರೆ ಮತ್ತು ನಮ್ಮ ಕಾರಣಕ್ಕಾಗಿಯೇ ಲಂಚ ಇಂದಿಗೂ ಚಾಲ್ತಿಯಲ್ಲಿದೆ. ನಾವು ಸರಿಪಡಿಸಬಹುದಾದ ಮಾರ್ಗ ಯಾವುದಿತ್ತು, ನೋಡೋಣ. ಕೃಷಿ ಇಲಾಖೆಗೆ ಒಂದು ಅರ್ಜಿ ಸಲ್ಲಿಸಲಾಗಿದೆ. ಫೈಲ್‌ ಮೇಲೆ ಕರೆನ್ಸಿ ಬಿದ್ದಿಲ್ಲ ಎಂಬ ಕಾರಣಕ್ಕೆ ಮೂರು ತಿಂಗಳು ತಡವಾಗಿದೆ ಎಂದುಕೊಳ್ಳೋಣ. ಆ ಸ್ವೀಕೃತ ಅರ್ಜಿಯನ್ನು ಯಾವ ರೀತಿ ವಿಲೇ ಮಾಡಿದಿರಿ ಎಂದು ಒಂದು ಮಾಹಿತಿ ಹಕ್ಕಿನ ಅರ್ಜಿ ಸಲ್ಲಿಸಿದರೆ ಅಧಿಕಾರಿ ಇಕ್ಕಟ್ಟಿನಲ್ಲಿ ಸಿಲುಕುತ್ತಾನೆ. ಒಬ್ಬರು ಈ ಕ್ರಮ ಅನುಸರಿಸಿದರೆ ಸಾಲದು. ನಂದೊಂದು ಅರ್ಜಿ ಬೇಗ ಇತ್ಯರ್ಥವಾಗಲಿ ಎಂದು ಕೊಡುವ ಲಂಚ ಈ ರೋಗವನ್ನು ಹೆಚ್ಚು ಮಾಡಿದೆ. ಮೊದಲು ನಮಗೆ ಶಿಕ್ಷೆಯಾಗಬೇಕು.

ಬೀದಿ ದೀಪಕ್ಕೆ “ಸಕಾಲ’ವೇ ವಿದ್ಯುತ್‌! 
ಸಕಾಲದ ಪ್ರಭಾವವನ್ನು ಬಳಸಿಕೊಂಡರೂ ಲಂಚ ಕಡಿಮೆ ಮಾಡಬಹುದು. ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ,  ನಮ್ಮ ಗ್ರಾಮದ ಬೀದಿ ದೀಪಗಳು ಉರಿಯದಿದ್ದರೆ ಅವುಗಳನ್ನು ದೂರು ಕೊಟ್ಟ ಮೂರೇ ದಿನದಲ್ಲಿ ಸರಿಪಡಿಸಬೇಕು. ಇಲ್ಲದಿದ್ದರೆ ನಮಗೆ ದಿನಕ್ಕೆ 20 ರೂ.ಯನ್ನು ಪಂಚಾಯಿತಿ ದಂಡ ತೆರಬೇಕು.

 ಆಶ್ಚರ್ಯಪಡಬೇಡಿ, ‘ಸಕಾಲ’ ಯೋಜನೆಯ ಸಕಾಲ ಯೋಜನೆಯಡಿ ಗ್ರಾಪಂಗೆ 10 ಸೇವೆಗಳನ್ನು ಸೇರಿಸಿದ್ದು, ಅದರಲ್ಲಿ ಬೀದಿ ದೀಪಗಳನ್ನು ದುರಸ್ತಿ ಮಾಡಿಸಿಕೊಡಲು ಮೂರು ದಿನಗಳ ಕಾಲಾವಕಾಶ ನಿಗದಿಪಡಿಸಲಾಗಿದೆ. ತಿಂಗಳು ಗಟ್ಟಲೇ ಉರಿಯದ ಬೀದಿ ದೀಪಗಳ ಕಾರಣ ತಿರುಗಾಡಿ ಸುಸ್ತಾಗುವ ಗ್ರಾಮೀಣ ನಾಗರಿಕ ಪಂಚಾಯಿತಿ ಅಧಿಕಾರಿಗಳಿಗೆ ಕಾಡಿಬೇಡುವುದು ಬೇಡ. ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗೆ ಅರ್ಜಿಯನ್ನು ಸಲ್ಲಿಸಬೇಕು. ಇದರೊಂದಿಗೆ‌ ಯಾವುದೇ ದಾಖಲೆ ಸಲ್ಲಿಸಬೇಕಾಗಿಲ್ಲ. ಬಿಳಿ ಹಾಳೆಯಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ದೂರವಾಣಿ ಮೂಲಕವೂ ದೂರು ಸಲ್ಲಿಸಬಹುದು. ಆದರೆ 15 ಅಂಕಿಗಳ ಸಕಾಲ ಡಾಕೆಟ್‌ ಸಂಖ್ಯೆಯನ್ನು ಕಡ್ಡಾಯವಾಗಿ ಪಡೆಯಬೇಕು. ದೂರು ಸ್ವೀಕರಿಸಿದ 3 ದಿನಗಳಲ್ಲಿ ಬೀದಿ ದೀಪದ ದುರಸ್ಥಿಯಾಗಿ ಅವು ಉರಿಯುವಂತೆ ಮಾಡಲೇಬೇಕಿದೆ.

ಇಲ್ಲದಿದ್ದರೆ? 
080-44554455ಗೆ ಕರೆ ಮಾಡಿ ನಿಮ್ಮ ಸಕಾಲ ಡಾಕೆಟ್‌ ಸಂಖ್ಯೆ, ದೂರು ತಿಳಿಸಿ. ವಿಳಂಬಕ್ಕೆ ಪಿಡಿಓ ದಿನಕ್ಕೆ 20 ರೂ.ನಂತೆ ಪರಮಾವಧಿ 500 ರೂ. ತೆರಬೇಕಾಗುತ್ತದೆ. ಆತನ ವೇತನದಲ್ಲಿ ಕಡಿತವಾಗಿ ಸಕಾಲ ಅರ್ಜಿದಾರನ ಕೈ ಸೇರುವ ಈ ತಪ್ಪು ಸದರಿ ಅಧಿಕಾರಿಯ ಸೇವಾ ದಾಖಲೆಯಲ್ಲಿ ನಮೂದಾಗುತ್ತದೆ. ಇದರರ್ಥ, ಆತನ ಬಡ್ತಿ ವಿಚಾರದಲ್ಲಿ ಈ ಸೇವಾ ನ್ಯೂನತೆ ಪರಿಗಣಿತವಾಗುತ್ತದೆ. ಅದಕ್ಕವರು ಅವಕಾಶ ಕೊಡುವುದಿಲ್ಲ ಎಂದು ನಂಬೋಣ!

ವೆಬ್‌ನಲ್ಲಿ ವೈರಲ್‌!
ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯನ್ನು “ವೈರಲ್‌’ ಮಾಡುವುದನ್ನು ನಾವು ಕಾಣುತ್ತೇವೆ. ಯಾವುದೋ ಧರ್ಮದ ವಿಚಾರ, ಹೇಳಿಕೆ ಕುರಿತಾದ ವೈರಲ್‌ಗಿಂತ ಭ್ರಷ್ಟಾಚಾರವನ್ನು ವಿರೋಧಿಸಿ, ಭ್ರಷ್ಟರ ಬೇಡಿಕೆಗಳ ವಿಡಿಯೋವನ್ನೇ ಅಪ್‌ಲೋಡ್‌ ಮಾಡಿ ವೈರಲ್‌ ಮಾಡಿದರೆ? ಆನ್‌ಲೈನ್‌ ಹುಡುಕಾಟದಲ್ಲಿ ಒಂದು ವಿಶಿಷ್ಟ ವೆಬ್‌ ಕಾಣುತ್ತದೆ. ಜಠಿಠಿಟ://ಡಿಡಿಡಿ.ಜಿಟಚಜಿಛಚಚಿrಜಿಚಿಛಿ.cಟಞ . ಈ ವೆಬ್‌ ಒಂದು ಲಂಚ ವಿರೋಧಿ ಆಂದೋಲನವನ್ನು ಹುಟ್ಟುಹಾಕುವ ಪ್ರಯತ್ನದಲ್ಲಿದೆ. ಈಗಾಗಲೇ 1,54,43,366ಗಳಷ್ಟು ಜನ ಈ ವೆಬ್‌ ಇಣುಕಿದ್ದಾರೆ. ಈ ವೆಬ್‌ ಮೂಲಕ ನಾವು ನಾವು ಲಂಚ ನೀಡಿದ ಪ್ರಕರಣವನ್ನು ಅಥವಾ ಲಂಚ ನೀಡದೆ ನಮ್ಮ ಕೆಲಸ ಮಾಡಿಸಿಕೊಂಡಿದ್ದನ್ನು ದಾಖಲಿಸಬಹುದು. ಒಂದೊಮ್ಮೆ ದಾಖಲೆ ಪಡೆಯುವಲ್ಲಿ ಅಥವಾ ಲಂಚ ಕೇಳಿದಲ್ಲಿ ಮಾಡಬೇಕಾದ ಕ್ರಮಗಳನ್ನು ಅರಿತುಕೊಳ್ಳಲು ಬೇಕಾದ ಕಾನೂನು ಸಲಹೆಯನ್ನು ಕೂಡ ಈ ವೆಬ್‌ನ ಪರಿಣತರ ತಂಡದಿಂದ ಪಡೆಯಬಹುದು.

ಲಂಚದ ನಿರ್ಮೂಲನೆಯಲ್ಲಿ ಪ್ರಾಮಾಣಿಕ ಅಧಿಕಾರಿಗಳನ್ನು ಸಮಾಜ ಆತ್ಮಪೂರ್ವಕವಾಗಿ ಗೌರವಿಸುವ ಸಂಪ್ರದಾಯ ಬೆಳೆಯಬೇಕು. ಕೇವಲ ದುಡ್ಡಿನಿಂದ ಗಮನಾರ್ಹ ಎನ್ನಿಸಿಕೊಳ್ಳಲಾಗುವುದಿಲ್ಲ ಎಂಬ ಸತ್ಯ ಖುದ್ದು ಲಂಚಕೋರರಿಗೆ ಅನಿಸಬೇಕು. ಆ ನಿಟ್ಟಿನಲ್ಲಿ ಈ ವೆಬ್‌ ನಾನು ಕಂಡ ಪ್ರಾಮಾಣಿಕ ಅಧಿಕಾರಿ ಎಂಬ ವಿಶೇಷ ಫೋಲ್ಡರ್‌ ಒದಗಿಸಿ ಅಲ್ಲಿ ಸ್ವತ್ಛ ಅಧಿಕಾರಿಗಳ ಮಾಹಿತಿ ನೀಡಿರುವುದು ಗಮನಾರ್ಹ. ಈ ತರಹದ ವೆಬ್‌ ಹಾಗೂ ಫೇಸ್‌ಬುಕ್‌, ವಾಟ್ಸ್‌ಅಪ್‌ ಮಾದರಿಯ ಸಾಮಾಜಿಕ ತಾಣಗಳಲ್ಲಿ ಸ್ವತಃ ನಾವು ಅಪ್ರಾಮಾಣಿಕ ಕೆಲಸ ಅಥವಾ ನಿಸ್ಪೃಹ ಅಧಿಕಾರಿಯ ಬಗ್ಗೆ ಫೋಟೋ, ವೀಡಿಯೋ ಸಮೇತ ವಿವರಿಸುವಂತಾಗಬೇಕು. 

ತಡೆ ಒಡ್ಡಬಹುದು ಕೊಂಚ!
ಜನರು ತಮಗೆ ಕಂಡುಬಂದ ಅವ್ಯವಹಾರಗಳ ಬಗ್ಗೆ ಈಗ ನೇರವಾಗಿ ಕೇಂದ್ರೀಯ ಜಾಗೃತ ಆಯೋಗಕ್ಕೆ ಕರೆ ಮಾಡಿ ತಿಳಿಸಬಹುದು. ಅದೂ ಉಚಿತವಾಗಿ. ಆಯೋಗ ಸಂದೇಶ, ಇ.ಮೇಲ್‌ ಆಧಾರಿತ ಭ್ರಷ್ಟಾಚಾರ ವಿರೋಧಿ ಹಾಟ್‌ಲೆçನ್‌ ಆರಂಭಿಸಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಟೋಲ್‌ ಫ್ರೀ ಸಂಖ್ಯೆಯಾದ 1800-11-0180 ಅಥವಾ 011-24651000ಗೆ ಸಲ್ಲಿಸಬಹುದು. ಯಾವುದೇ ಸರಕಾರಿ ಅಧಿಕಾರಿ ಸಾರ್ವಜನಿಕರ ಕೆಲಸಗಳನ್ನು ಅನಗತ್ಯವಾಗಿ ವಿಳಂಬ ಮಾಡಿದಲ್ಲಿ ಅಥವಾ ಲಂಚ ಕೇಳಿದಲ್ಲಿ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ತಮ್ಮ ದೂರು ಸಲ್ಲಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 6.30ರಿಂದ ಸಂಜೆ ಆರರವರೆಗೆ ಇವು ತೆರೆದಿರುತ್ತವೆ. ಆನ್‌ಲೈನ್‌ನಲ್ಲೂ ದೂರು ದಾಖಲು ಸಾಧ್ಯ. //www.ipaidabribe.com / ಮೂಲಕ ಕೂಡ ಈ ಕೆಲಸ ಮಾಡಬಹುದು. ಮೊದಲು ನಮ್ಮ ವಿವರಗಳನ್ನು ನಮೂದಿಸಿ ನಮ್ಮದೇ ಆದ ಐಡಿಯನ್ನು ರೂಪಿಸಿಕೊಳ್ಳಬೇಕು. ನಂತರ ನಮ್ಮ ಐಡಿ ಮುಖಾಂತರ ಲಾಗಿನ್‌ ಆಗಿ ದೂರು ದಾಖಲಿಸಬಹುದು. ದೂರಿನ ನಂತರದ ಪ್ರಕ್ರಿಯೆ, ಆದ ಪ್ರಗತಿಯ ಮಾಹಿತಿಯೂ ಈ ವೆಬ್‌ನಲ್ಲಿ ದಕ್ಕುತ್ತದೆ.

ಮತ್ತೆ ಮೊದಲಿನ ಮಾತುಗಳಿಗೆ ಹಿಂತಿರುಗೋಣ, ಮೇಲಿನ ಯಾವ ಹೆಜ್ಜೆಗಳನ್ನೂ ಇಡದೆ ನಂದೊಂದು ಅರ್ಜಿ ಬೇಗ ಇತ್ಯರ್ಥವಾಗಲಿ ಎಂದು ಕೊಡುವ ಲಂಚ ರೋಗವನ್ನು ಹೆಚ್ಚು ಮಾಡಿದೆ. ಅದುವೇ ನಿಜವಾಗಿದ್ದರೆ, ಮೊದಲು ನಮಗೆ ಶಿಕ್ಷೆಯಾಗಬೇಕು. 

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

Advertisement

Udayavani is now on Telegram. Click here to join our channel and stay updated with the latest news.

Next