Advertisement

Uv Fusion; ನಮ್ಮ ಗುರಿಗೆ ಆಯಾಮ ನೀಡಬೇಕಾದವರು ನಾವೇ

03:38 PM Oct 13, 2023 | Team Udayavani |

ಬದುಕಿನಲ್ಲಿ ಸಾಧಿಸಲು ಅಸಾಧ್ಯ ವಾದುದು ಯಾವುದೂ ಇಲ್ಲ ಎನ್ನುವುದು ಸತ್ಯ. ಆದರೆ ನಮ್ಮ ಗುರಿಯನ್ನು ಗುರುತು ಪಡಿಸಿಕೊಳ್ಳುವಾಗ ನಮ್ಮ ನಿಜವಾದ ಅರ್ಹತೆಯನ್ನು ಗಮನದಲ್ಲಿರಿಸಿಕೊಳ್ಳುವುದು ಬಹಳ ಮುಖ್ಯ. ಎಲ್ಲರಿಗೂ ಎಲ್ಲ ವಿಷಯಗಳಲ್ಲೂ ಸಹಜವಾದ ಸಾಮರ್ಥ್ಯವಿರುವುದಿಲ್ಲ. ಆದ್ದರಿಂದ ನಮ್ಮ ಪ್ರತಿಭೆಯನ್ನು ಕಂಡುಕೊಂಡ ಮೇಲೆ ನಮ್ಮ ಗುರಿಯನ್ನು ನಿರ್ಧರಿಸಿಕೊಳ್ಳುವುದು, ಒಮ್ಮೆ ಗುರಿಯನ್ನು ತೀರ್ಮಾನಿಸಿಕೊಂಡ ಮೇಲೆ ಆತ್ಮವಿಶ್ವಾಸಪೂರ್ವಕವಾಗಿ ಪ್ರಯತ್ನಶೀಲರಾಗುವುದು ಸರಿಯಾದ ರೀತಿ. ಇಲ್ಲದಿದ್ದರೆ ಉದಾತ್ತವಾದ ಚಿಂತನೆಗಳನ್ನು ಮನದಲ್ಲಿ ತಂದುಕೊಂಡರೂ ಎಷ್ಟೇ ತುಂಬಿಕೊಂಡರೂ, ಅವು ಸ್ಥಾಯಿಯಾಗಿ ನಿಲ್ಲುವುದಿಲ್ಲ. ಯಶಸ್ಸಿಗೆ ಪೂರಕವಾದ ಸಹಕಾರವನ್ನು ನೀಡುವುದಿಲ್ಲ.

Advertisement

ಪ್ರಯೋಜನಮನುದ್ದಿಶ್ಯನ ಮಂದೋಪಿ ಪ್ರವರ್ತತೇ (ಪ್ರಯೋಜನವನ್ನು ಬಯಸದೇ ದಡ್ಡನೂ ಕೂಡ ಕಾರ್ಯವನ್ನು ಮಾಡಲಾರ). ಹಾಗಾಗಿ ಗುರಿಯನ್ನು ಗುರುತಿಸುವಾಗಲೇ ಭವಿಷ್ಯದಲ್ಲಿ ಉತ್ತಮ ಪ್ರಯೋಜನವನ್ನು ನೀಡುವ, ವ್ಯಕ್ತಿತ್ವಕ್ಕೆ ಗರಿಮೆಯನ್ನು ತಂದುಕೊಡಬಹುದಾದ ಗುರಿಯನ್ನು ಹೊಂದುವುದು ಜಾಣತನ.

ಹೊರಗಿನ ಆಕರ್ಷಣೆಗೆ ಮರುಳಾಗದೆ ಅಂತರ್ಯದ ಕೂಗನ್ನು ಆಲಿಸುತ್ತಾ, ಹೆಜ್ಜೆಯನ್ನಿಡಬೇಕು. ಆ ಗುರಿ ಚಿಕ್ಕದಿದ್ದರೂ,  ಕೀಳರಿಮೆಗೊಳಗಾಗಬೇಕಾಗಿಲ್ಲ. ತಾಯಿ ತನ್ನ  ಮಗುವನ್ನು ಬೆಳೆಸಿ, ಹೇಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತಾಳೆಯೋ ಹಾಗೆಯೇ, ನಮ್ಮ ಗುರಿಗೆ ಆಯಾಮ ನೀಡಬೇಕಾದವರು ನಾವೇ. ಇತರರ ಮಾತನ್ನು ಕೇಳಿ, ಅವರು ಹಾಗೆ ಹೇಳಿದ ಕಾರಣ ನಾನು ಈ ತೀರ್ಮಾನಕ್ಕೆ ಬಂದೆ ಎಂದು ಮತ್ತೆ ಗೊಣಗುವುದರಲ್ಲಿ ಅರ್ಥವಿಲ್ಲ. ಗುರಿಯೆಡೆಗೆ ನಡೆಯುವಾಗ ನಾವು ನಮ್ಮದೇ ಕನಸಿನ ಪಥದಲ್ಲಿ ಹೆಜ್ಜೆ ಹಾಕಬೇಕು. ತೀರಾ ಪರಿಚಿತ ಗೆಳೆಯನ ಗುರಿಯೂ ನಮ್ಮ ಉದ್ದೇಶವೂ ಒಂದೇ ಆಗಿದ್ದರೂ ಕೂಡಾ, ಅನುಕರಣೆ ಸಲ್ಲದು. ಅವರು ಹಾಗೆ ಮಾಡಿ ಸಾಧಿಸಿದ್ದು, ನಾನೂ ಅದೇ ರೀತಿ ಮಾಡುತ್ತೇನೆ ಎನ್ನುವ ಮನಸ್ಥಿತಿಯಿಂದ ಹೊರಬಂದು, ನಾನು ನನ್ನದೇ ಹೆಜ್ಜೆಗಳನ್ನಿಡುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿರಬೇಕು.

ಗೆಲ್ಲುವ ಛಲ ನಮ್ಮಲ್ಲಿದ್ದು, ನಿರಂತರ ಪ್ರಯತ್ನ ಮಾಡುತ್ತಿದ್ದರೆ ಯಶಸ್ಸು ಲಭಿಸಿಯೇ ಲಭಿಸುತ್ತದೆ. ಆದರೆ, ಕಠಿನ ಪರಿಶ್ರಮದ ಜೊತೆಗೆ ಮೇಲ್ನೋಟಕ್ಕೆ ಕಾಣದೆ ಇರುವ, ಅತ್ಯಂತ ಸರಳವಾಗಿರುವ ಕೆಲವು ತಂತ್ರಗಳನ್ನು ಉಪಯೋಗಿಸುವ ಚಾಕಚಕ್ಯತೆಯನ್ನು ಬೆಳೆಸುವುದು ಅಗತ್ಯ. ಉದಾಹರಣೆಗೆ ಅಧ್ಯಯನ ನಡೆಸಿದರೆ ಮಾತ್ರ ಸಾಲದು, ಅದನ್ನು ನೆನಪಿನಲ್ಲಿಟ್ಟುಕೊಳ್ಳುವ ಸೂತ್ರಗಳನ್ನು ಕೂಡ ರೂಢಿಸಿಕೊಳ್ಳಬೇಕು. ತಂತ್ರಗಳು ಇಲ್ಲವಾದಲ್ಲಿ, ನೆಲಗಡಲೆ ಕೂಡಾ ಕಬ್ಬಿಣದ ಕಡಲೆಯಂತೆ!

ಪ್ರಯತ್ನಿಸುತ್ತಿರುವಾಗ ಸೋಲುಗಳು ಎದುರಾಗುವುದು ಸಾಮಾನ್ಯ. ಅದು ಗುರಿಯೆಡೆಗಿರುವ ಮೆಟ್ಟಿಲುಗಳು, ಆ ಹಂತಗಳನ್ನು ದಾಟಿ ಮುಂದೆ ಸಾಗಿದಾಗ ಮಾತ್ರ ಯಶಸ್ಸು ಸ್ಥಿರವಾಗಿ ನಿಲ್ಲಲು ಸಾಧ್ಯ ಎನ್ನುವ ಸರಳ ತತ್ತÌ ನಮ್ಮೊಳಗೆ ಜಾಗೃತವಾಗಿರಬೇಕು. ಆದರೆ, ನಾವು ಸೋತಾಗ ಒಂದಷ್ಟು ಮಂದಿ ನಮ್ಮ ಸೋಲಿಗೆ ಹಪಹಪಿಸುತ್ತಿದ್ದವರು ನಿಂದಿಸಲು, ಹಂಗಿಸಲು ತೊಡಗುತ್ತಾರೆ. ಅದನ್ನು ಪುರಂದರ ದಾಸರು ಹೇಳಿದಂತೆ

Advertisement

“ನಿಂದಕರಿರಬೇಕು ಇರಬೇಕು, ಹಂದಿ ಇದ್ದರೆ ಕೇರಿ ಹ್ಯಾಂಗೆ ಶುದ್ಧಿಯೊ ಹಾಂಗೆ ನಿಂದಕರಿರಬೇಕು’ ಎಂದು ಭಾವಿಸಿ, ನಿಂದನೆಗಳನ್ನೆÇÉಾ ಸಕಾರಾತ್ಮಕವಾಗಿ ಹೊಟ್ಟೆಯೊಳಗೆ ಹಾಕಿಕೊಂಡು ನಮ್ಮ ಗುರಿಯತ್ತ ದೃಷ್ಟಿ ನೆಡಬೇಕು. ಜೀವನದ ಕೊನೆಯವರೆಗೂ ಹೆಸರಿನೊಂದಿಗೆ ಗುರುತಿಸಲ್ಪಡುವುದು ಸಾಧನೆಗಳೇ ಹೊರತು, ಯಾರು ಯಾರೋ ಯಾವಾಗ ಯಾವಾಗಲೋ ನುಡಿದ ಕೊಂಕು ಮಾತುಗಳಲ್ಲ ಎಂಬುದನ್ನು ನಮ್ಮ ಅಂತರಂಗಕ್ಕೆ ಅರ್ಥಮಾಡಿಸಬೇಕು; ಅಭ್ಯಾಸ ಮಾಡಿಸಿಬಿಡಬೇಕು ಅಷ್ಟೇ!

ಗುರಿ ಸಾಧನೆಯೆಂದು ದಿನದ ಇಪ್ಪತ್ತನಾಲ್ಕು ಗಂಟೆಯೂ ಅದರೆಡೆಗೆ ತುಡಿಯುತ್ತಾ ಬದುಕನ್ನು ಯಾಂತ್ರಿಕಗೊಳಿಸಬಾರದು. ಒಂದಷ್ಟು ಮನೋರಂಜನೆಯನ್ನು, ಮನಸ್ಸಿಗೆ ನೆಮ್ಮದಿಯನ್ನು ತುಂಬುವ ಕಾರ್ಯಕಲಾಪಗಳಲ್ಲಿಯೂ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕು. ಗುರಿಯತ್ತ ಸಾಗುತ್ತಾ, ಅÇÉೇ ಜೀವನದ ಪ್ರತಿ ಗಳಿಗೆಯನ್ನು ಮನಃಪೂರ್ವಕವಾಗಿ ಅನುಭವಿಸಬೇಕು; ಪ್ರತಿಕ್ಷಣವೂ ನಮ್ಮದೆಂದು ಜೀವಿಸಬೇಕು.

-ಪಂಚಮಿ ಬಾಕಿಲಪದವು,

ಅಂಬಿಕಾ ಮಹಾವಿದ್ಯಾಲಯ,

ಬಪ್ಪಳಿಗೆ ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next