Advertisement

ರಸ್ತೆಯಲ್ಲ ಯಮಪುರಿಗೆ ರಹದಾರಿ

04:23 PM Sep 07, 2017 | |

ದೇವದುರ್ಗ: ಪಟ್ಟಣದ ಬೆಟ್ಟದ ಶಂಭುಲಿಂಗೇಶ್ವರ ಮಾರ್ಗವಾಗಿ ವಿವಿಧ ಗ್ರಾಮ, ತಾಂಡಾಗಳಿಗೆ ತೆರಳುವ ರಸ್ತೆ ಆರೇಳು ವರ್ಷಗಳಿಂದ ಹದಗಟ್ಟು ಹೋಗಿದ್ದರೂ, ಜನಪ್ರತಿನಿಧಿಗಳಾಗಲಿ, ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ದುರಸ್ತಿ ಗೋಜಿಗೆ ಹೋಗದ್ದರಿಂದ ವಾಹನ ಸವಾರರು ಪರದಾಡುವಂತಾಗಿದೆ.

Advertisement

ಮರಿಗೆಮ್ಮದಿಬ್ಬಿ, ತುಗ್ಲೆರದೊಡ್ಡಿ, ಕಾಳಪ್ಪನ ತಾಂಡಾ, ಎಚ್‌.ಎನ್‌.ತಾಂಡಾ, ಕುರ್ಲೆರದೊಡ್ಡಿ, ಬೂದೆಪ್ಪನ ತಾಂಡಾ,
ನಾಮನಾಯ್ಕ ತಾಂಡಾ, ಧರ್ಮನಾಯ್ಕ ತಾಂಡಾ, ತಳವಾರದೊಡ್ಡಿ, ಅರಕೇರಾ ಸೇರಿ ಇತರೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಳೆದ ಆರೇಳು ವರ್ಷಗಳಿಂದ ತೀರಾ ಹದಗೆಟ್ಟು ಹೋಗಿದೆ. ಅರಕೇರಾ, ಕೊತ್ತದೊಡ್ಡಿ, ಕೋತಿಗುಡ್ಡ, ಮನಸಗಲ್‌, ಹೇಮನೂರು ಸೇರಿ ಇತರೆ ಗ್ರಾಮಗಳ ಜನರು ಈ ಮಾರ್ಗದ ಮೂಲಕವೇ ಪಟ್ಟಣಕ್ಕೆ ಆಗಮಿಸುತ್ತಾರೆ. ರಸ್ತೆಯ ಡಾಂಬರ್‌, ಕಲ್ಲು ಖಡಿ ಕಿತ್ತುಹೋಗಿ ಬೃಹತ್‌ ಗಾತ್ರದ ಗುಂಡಿಗಳು ಬಿದ್ದಿವೆ. ಬರೀ ಗುಂಡಿಗಳೇ ತುಂಬಿರುವ ರಸ್ತೆಯಲ್ಲಿ ವಾಹನ ಸವಾರರು, ಚಾಲಕರು ಸರ್ಕಸ್‌ ಮಾಡುವಂತಾಗಿದೆ.

ಇಲ್ಲಿನ ರಸ್ತೆಯಲ್ಲಿ ಬಹುತೇಕರು ಬಿದ್ದು, ಕೈ, ಕಾಲು ಮುರಿದುಕೊಂಡ ಘಟನೆಗಳು ಜರುಗಿವೆ. ಸಂಬಂಧಪಟ್ಟ ಅಧಿಕಾರಿಗಳು ಕನಿಷ್ಠಪಕ್ಷ ತಗ್ಗುಗಳಿಗೆ ಮರಂ ಹಾಕಿ ಸರಿಪಡಿಸುವ ಗೋಜಿಗೂ ಹೋಗಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ. ಸರಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ವ್ಯಯಿಸಿದರೂ,
ಅಧಿಕಾರಿಗಳು, ಗುತ್ತಿಗೆದಾರರು ಮಿಲಾಪಿಯಾಗಿ ಕಳಪೆ ಕಾಮಗಾರಿ ಮಾಡಿ ಅನುದಾನ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

ಇಲ್ಲಿನ ಬಹುತೇಕ ಗ್ರಾಮಗಳಿಗೆ ದಶಕ ಕಳೆದರೂ ಸಾರಿಗೆ ಬಸ್‌ ಭಾಗ್ಯ ಕಾಣದಾಗಿದೆ. ಗ್ರಾಮಸ್ಥರು, ಗ್ರಾಮೀಣ ಶಾಲೆಗೆ ಬರುವ ಶಿಕ್ಷಕರು ಟಂಟಂ ರಿಕ್ಷಾಗಳನ್ನೇ ಅವಲಂಬಿಸುವಂತಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next