Advertisement

ಉತ್ಸಾಹದಿಂದ ಗಣತಿಯಲ್ಲಿ ಸ್ವಯಂ ಸೇವಕರು ಭಾಗಿ

12:19 PM May 19, 2017 | Team Udayavani |

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ 8 ವಲಯಗಳ ಎಲ್ಲ 63 ಬೀಟ್‌ಗಳಲ್ಲೂ ಗುರುವಾರ ಬೆಳಗ್ಗೆ 6 ರಿಂದಲೇ ಗಜಗಣತಿ ಆರಂಭವಾಗಿದ್ದು, ಗಣತಿ ಕಾರ್ಯದಲ್ಲಿ ಭಾಗವಹಿಸಿದ್ದ ಸ್ವಯಂ ಸೇವಕರು, ಸಿಬ್ಬಂದಿ ಕಾಡಿನೊಳಗಿನ ಪ್ರಕೃತಿ ಸಿರಿಯ ಸೊಬಗು ಮೆಲಕು ಹಾಕುತ್ತಾ ಗಣತಿ ಕಾರ್ಯ ದಲ್ಲಿ ಕಾಡಿನೊಳಗಿನ ವ್ಯಾಘ್ರ ಸೇರಿದಂತೆ ಇತರೆ ಪ್ರಾಣಿಗಳನ್ನು ಕಂಡು ಖುಷಿಯಿಂದಲೇ ಸಂಜೆ  ಕ್ಯಾಂಪಿನತ್ತ ಹೆಜ್ಜೆ ಹಾಕಿದರು.

Advertisement

ಚೈನ್‌ ಲಿಂಕ್‌ ಮಾದರಿ ಉದ್ಯಾನವನ: ಪಶ್ಚಿಮ ಘಟ್ಟಗಳ ಸಾಲಿಗೆ ಸೇರಿರುವ ಅರಣ್ಯ ಪ್ರದೇಶ ಹೊಂದಿರುವ ನಾಗರಹೊಳೆ, ಬಂಡಿಪುರ, ಮಧುಮಲೆ, ವಯನಾಡು ಅರಣ್ಯ ಪ್ರದೇಶ ಚೈನ್‌ ಲಿಂಕ್‌ನಂತೆ ಏಷ್ಯಾದಲ್ಲೇ ಅತಿದೊಡ್ಡ ಆನೆ ಕಾರಿಡಾರ್‌ ಹೊಂದಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಗಜಗಣತಿಗೆ ಚಾಲನೆ ದೊರೆತಿದ್ದು, ಕಳೆದ ಐದು ವರ್ಷಗಳಲ್ಲಿ ಬಿದಿರಿನ ಮೇವು ಸೇರಿದಂತೆ ಆಹಾರ ಕೊರತೆಯಿಂದ ಸಾಕಷ್ಟು ಆನೆಗಳ ಸಾವಿನಿಂದ ಈ ಬಾರಿ ಆನೆಗಳ ಸಂಖ್ಯೆ ಕಡಿಮೆಯಾಗಿರಬಹುದೆಂಬ ಹಾಗೂ ಕಬಿನಿ ಹಿನ್ನೀರು, ಉದ್ಯಾನದ ಕೆರೆಕಟ್ಟೆಗಳಲ್ಲಿ ನೀರಿನ ಕೊರತೆಯ ಆತಂಕದ ನಡುವೆ ಆನೆಗಣತಿ ನಿರಾತಂಕವಾಗಿ ನಡೆದಿದೆ.

ನೆರೆಯ ರಾಜ್ಯಗಳಿಂದಲೂ ಬಂದ ಜನ: ಕಾಂಕ್ರೀಟ್‌ ಕಾಡಿನ ಜೀವನದಿಂದ ಹೈರಾಣಾಗಿರುವ ನಗರವಾಸಿಗಳು ಇತ್ತೀಚಿನ ವರ್ಷಗಳಲ್ಲಿ ವನ್ಯಜೀವಿ ಪ್ರವಾಸೋದ್ಯಮಕ್ಕೆ ಮುಗಿ ಬೀಳುತ್ತಿರುವ ಐಟಿ-ಬಿಟಿ, ವೈದ್ಯರು, ಎಂಜಿನಿಯರ್‌, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಅದರಲ್ಲೂ ಮಹಿಳೆಯರು ಮತ್ತು ಮಹಾರಾಷ್ಟ್ರ, ಆಂಧ್ರ ಪ್ರದೇಶಗಳಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತಿಯಿಂದ ಆನೆಗಣತಿಯಲ್ಲಿ ತೊಡಗಿಸಿಕೊಂಡಿರುವುದು ಈ ಬಾರಿಯ ವಿಶೇಷ.

ಸದಾ ನಗರದ ಜಂಜಾಟದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಇವರುಗಳು ಆಹಾರ, ನೀರಿನೊಂದಿಗೆ ಬ್ಯಾಗ್‌ನೇತು ಹಾಕಿಕೊಂಡು ಕಾಡಿನಲ್ಲಿ ಅರಣ್ಯ ಸಿಬ್ಬಂದಿಯೊಂದಿಗೆ ಹೆಜ್ಜೆಹಾಕುತ್ತಾ, ಅರಣ್ಯದ ಸೌಂದರ್ಯವನ್ನು ಸವಿಯುತ್ತಾ ಆನೆಗಳ ಹುಡುಕಾಟದಲ್ಲಿ ತಮ್ಮನ್ನು ತಾವು ಗಣತಿ ಕಾರ್ಯದಲ್ಲಿ ನಿರತರಾಗಿ ದ್ದರು. ಕೆಲವರು ಇದೇ ಮೊದಲು ಎಣಿಕೆ ಕಾರ್ಯದಲ್ಲಿ ಭಾಗವಹಿಸಿದ್ದರೆ, ಹಲವರು ಗಣತಿಯ ಪರಿಣಿತರಾಗಿದ್ದಾರೆ. ಸುಮಾರು 15-20 ಕಿ.ಮೀವರೆಗೆ ಅರಣ್ಯದಲ್ಲಿ ನಡೆದಾಡಿದ್ದರಿಂದ ಕೆಲ ಮಹಿಳಾ ಸ್ವಯಂ ಸೇವಕರು ಬಳಲಿದಂತೆ ಕಂಡುಬಂದರೆ, ಹಲವರು ಹುರುಪಿನಿಂದ ನಡೆಯುತ್ತಿದ್ದರು. ಬಿಸಿಲಿನ ತಾಪ ಕಡಿಮೆ ಇದ್ದುದ್ದರಿಂದ ನಡಿಗೆಗೆ ನೆರವಾಗಿತ್ತು.

ಪ್ರಾಣಿಗಳ ಕಂಡು ದಿಗ್ಭ್ರಮೆ, ಸಂತಸ: ಬೆಳಗ್ಗೆ 6 ರಿಂದಲೇ ಸಿಬ್ಬಂದಿಯೊಂದಿಗೆ ನಾಗರಹೊಳೆ ಉದ್ಯಾನದಲ್ಲಿ ಆನೆಗಣತಿ ಮಾಡಲು ಹೊರಟ ಬಹುತೇಕ ತಂಡಗಳಿಗೆ ಆನೆಗಿಂತ  ಮೊದಲೇ ಹುಲಿರಾಯ ಕಾಣಿಸಿಕೊಂಡಿದ್ದು, ಆನೆಗಣತಿಯ ನಡುವೆಯೇ ಸ್ವಯಂಸೇವಕರು ವ್ಯಾಘ್ರನನ್ನು ಕಂಡು ದಿಗ್ಭ್ರಮೆಗೊಂಡರೆ, ಇನ್ನು ಕೆಲವರು ಹಿರಿ ಹಿಗ್ಗಿದರು, ಇಷ್ಟೆ ಅಲ್ಲದೆ ಕೆಲವರಿಗೆ ಚಿರತೆ, ಕಾಡುಹಂದಿ, ಕರಡಿ, ಉಡ, ಕಾಡುಕೋಣ, ಜಿಂಕೆಗಳ ಹಿಂಡು, ನವಿಲಿನ ನರ್ತನದ ದರ್ಶನವೂ ಆಗಿದೆ.

Advertisement

ನಾಗರಹೊಳೆ ಉದ್ಯಾನದ ಹುಲಿಯೋಜನೆ ನಿರ್ದೇಶಕ ಮಣಿಕಂಠನ್‌ ಮೇಲುಸ್ತುವಾರಿಯಲ್ಲಿ ಆಯಾ ವಿಭಾಗದ ಎ.ಸಿ.ಎಫ್ಗಳಾದ ಸತ್ಯನಾರಾಯಣ್‌, ಬೆಳ್ಳಿಯಪ್ಪ, ಪ್ರಸನ್ನಕುಮಾರ್‌ ಅವರುಗಳು ಎಲ್ಲಡೆ ಸುತ್ತಾಡಿ ಗಣತಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಆಯಾವಲಯದ ಅರಣ್ಯಾಧಿಕಾರಿಗಳಾದ ಅರವಿಂದ್‌, ಶಿವರಾಂ, ಮಧುಸೂಧನ್‌, ಕಿರಣ್‌ಕುಮಾರ್‌, ಮಹೇಶ್‌, ವಿನಯ್‌, ಶಿವಬಸಪ್ಪ ಅವರುಗಳು 63 ಬೀಟ್‌ಗಳಲ್ಲಿ ನಡೆಯುತ್ತಿರುವ ಇಡೀ ಗಣತಿಯ ಉಸ್ತುವಾರಿ ವಹಿಸಿದ್ದರು.

ಮಧ್ಯಾಹ್ನದೂಟದ ಮೆನು: ಸ್ವಯಂಸೇವಕರು ಸೇರಿದಂತೆ ಸಿಬ್ಬಂದಿಗೆ ಒಂದೊಂದು ವಲಯದಲ್ಲೂ ಬಗೆ ಬಗೆಯ ಊಟದ ವ್ಯವಸ್ಥೆ ಕಲ್ಪಿಸಿದ್ದರು. ವೀರನ ಹೊಸಹಳ್ಳಿವಲಯದಲ್ಲಿ ಪುಳಿಯೋಗರೆ, ಕಲ್ಲಹಳ್ಳ, ಆನೆ ಚೌಕೂರುವಲಯದಲ್ಲಿ ತರಕಾರಿಬಾತ್‌, ನಾಗರಹೊಳೆ ವಲಯದಲ್ಲಿ ಪಲಾವ್‌ನೊಂದಿಗೆ ಮೊಟ್ಟೆ, ಡಿ.ಬಿ.ಕುಪ್ಪೆ$ರೇಂಜ್‌ನಲ್ಲಿ ವೆಜಿಟೆಬಲ್‌ ಪಲಾವ್‌, ಮೊಸರನ್ನ, ಹಪ್ಪಳ ವ್ಯವಸ್ಥೆ ಮಾಡಲಾಗಿತ್ತಲ್ಲದೆ ಜೊತೆಗೆ ಮುಂಜಾನೆ ತೆರಳುವ ವೇಳೆ ಒಂದು ಪೌಂಡ್‌ನ‌ಷ್ಟು ಬ್ರೆಡ್‌ ಮತ್ತು ಬಾಳೆಹಣ್ಣನ್ನು ಸಹ ನೀಡಲಾಗಿತ್ತು.

ಕಾಡಿನಲ್ಲಿ ಹತ್ತಿರದಿಂದ ವನ್ಯಪ್ರಾಣಿ ನೋಡುವುದು ನಮ್ಮ ಪುಣ್ಯ: ಆನೆಗಣತಿಗೆ ಆಗಮಿಸಿರುವ ಕಾಂಕ್ರಿಟ್‌ ಕಾಡಿನಲ್ಲಿ ನಿತ್ಯ ಕೆಲಸಮಾಡುತ್ತಿರುವ ಮಂದಿ ಇದೀಗ ಕಾಡಿನೊಳಗಿರುವ ಆಂಟ್‌ ಪೌಂಚಿಂಗ್‌ ಕ್ಯಾಂಪ್‌ಗ್ಳಲ್ಲಿ ವಾಸ್ತವ್ಯ ಹೂಡಿರುವುದರಿಂದ ಮೊಬೈಲ್‌ ಟವರ್‌ಸಿಗದೆ ಬಂದಾಗಿದ್ದು, ಒಂದು ರೀತಿಯಾದರೆ ಮತ್ತೂಂದೆಡೆ ಅರಣ್ಯ ಸಿಬ್ಬಂದಿಗಳೊಂದಿಗೆ ಕಾಡಿನೊಳಗೆ ಮಲಗಿದ್ದೇವೆ, ಕಾಡಿನಲ್ಲಿ ನಡೆದು ಆನೆಗಣತಿ ಮಾಡುವ ಹಾಗೂ ಇತರೆ ವನ್ಯ ಪ್ರಾಣಿಗಳನ್ನು ಬರಿಗಣ್ಣಿನಲ್ಲಿ ಹತ್ತಿರದಿಂದ ಕಾಣುವ ಭಾಗ್ಯ ನಮ್ಮದಾಗಿದೆ ಎನ್ನುತ್ತಾರೆ ಐಟಿಬಿಟಿಯಲ್ಲಿ ಕೆಲಸ ನಿರ್ವಹಿಸುತ್ತಿರುವ, ಗಣತಿ ಕಾರ್ಯದಲ್ಲಿ ಭಾಗವಹಿಸಿರುವ ಬಹುತೇಕ ಸ್ವಯಂಸೇವಕರುಗಳು.

ತಾವು ಬಹುತೇಕ ಕಡೆಗಳಿಗೆ ಭೇಟಿ ನೀಡಿದ್ದೇನೆ, ಕೆಲ ಬೀಟ್‌ ಬಿಟ್ಟರೆ ಎಲ್ಲ ವಲಯಗಳಲ್ಲೂ ಆನೆಗಳು ಕಾಣಿಸಿಕೊಂಡಿವೆ, ಮೊದಲ ದಿನದ ಗಣತಿ ಕಾರ್ಯ ಯಾವುದೇ ತೊಂದರೆ ಇಲ್ಲದೆ ನಡೆದಿದೆ, ಬಹುತೇಕ ತಂಡಗಳಿಗೆ ಹುಲಿ, ಚಿರತೆ, ಉಡ, ಹಾವುಗಳ ದರ್ಶನವಾಗಿದೆ. ಟ್ರಾಂಜಾಕ್ಟ್ ಲೈನ್‌ ಗಣತಿ ನಡೆಯಲಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನ.ಹುಲಿಯೋಜನೆ ಕ್ಷೇತ್ರ ನಿರ್ದೇಶಕ ಮಣಿಕಂಠನ್‌ ಮಾಹಿತಿ ನೀಡಿದರು.

* ಸಂಪತ್‌ಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next