Advertisement

ರಾಷ್ಟ್ರಧ್ವಜ ತಯಾರಿಸುವ ಮಹಿಳೆಯರ ಮಕ್ಕಳನ್ನು ದತ್ತು ಪಡೆದ ಅವಧೂತ ವಿನಯ ಗುರೂಜಿ

03:07 PM Jan 31, 2021 | Team Udayavani |

ಹುಬ್ಬಳ್ಳಿ: ಬೆಂಗೇರಿಯ ಖಾದಿ ಗ್ರಾಮೋದ್ಯೋಗ ಕೇಂದ್ರದಲ್ಲಿರುವ ರಾಷ್ಟ್ರಧ್ವಜ ತಯಾರಿಕೆ ಘಟಕದಲ್ಲಿ ಕಾರ್ಯನಿರ್ವಹಿಸುವ ಐವರು ಮಹಿಳೆಯರ ಮಕ್ಕಳನ್ನು ಶೈಕ್ಷಣಿಕವಾಗಿ ದತ್ತು ಪಡೆದು, ಅವರ ಶೈಕ್ಷಣಿಕ ವೆಚ್ಚವನ್ನು ಭರಿಸುವುದಾಗಿ ಮಹಾತ್ಮ ಗಾಂಧಿ ಸೇವಾ ಟ್ರಸ್ಟ್‌ ಸಂಸ್ಥಾಪಕ ಅವಧೂತ ವಿನಯ ಗುರೂಜಿ ಹೇಳಿದರು.

Advertisement

ಬೆಂಗೇರಿಯಲ್ಲಿ ಮಹಾತ್ಮ ಗಾಂಧೀಜಿ  ಹುತಾತ್ಮ ದಿನದ ಅಂಗವಾಗಿ ರಾಷ್ಟ್ರಧ್ವಜ ತಯಾರಿಸುವವರು ಹಾಗೂ ಖಾದಿ ಕೆಲಸಗಾರರಿಗೆ ಟ್ರಸ್ಟ್‌ನಿಂದ ಆಹಾರ ಧಾನ್ಯಗಳ ಕಿಟ್‌ ವಿತರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಖಾದಿ ಕ್ಷೇತ್ರಕ್ಕೆಬರಬೇಕಾದ ಅಂದಾಜು 2 ಕೋಟಿ ಬಾಕಿ ಹಣ ಬಿಡುಗಡೆ ಹಾಗೂ ವಿವಿಧ ಸೌಲಭ್ಯಗಳ ನೀಡಿಕೆ ನಿಟ್ಟಿನಲ್ಲಿ ಕೇಂದ್ರ-ರಾಜ್ಯ ಸರಕಾರಕ್ಕೆ ಮನವಿ ಮಾಡುವೆ ಎಂದರು.

ಪ್ರತಿಯೊಬ್ಬರ ದೇಹ ದೇವಸ್ಥಾನವಾಗಬೇಕು. ಆತ್ಮಶುದ್ಧಿ, ಅನುಭವದ ಪರಿಶುದ್ಧಿಯೇ ಪ್ರವಚನ. ಪ್ರತಿಯೊಬ್ಬರಲ್ಲೂ ದಯೆ-ಸೇವೆ ಮನೋಭಾವ ಮೂಡಬೇಕಾಗಿದೆ. ಮನಸ್ಸು ಮತ್ತು ಕೃತಿ ಒಂದೇ ಇರಬೇಕಾಗಿದೆ ಎಂದರು.

ಬಾಕಿ ಬಿಡುಗಡೆಗೆ ಯತ್ನ: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಮಾತನಾಡಿ, ಗಾಂಧೀಜಿ ಹುತಾತ್ಮ ದಿನದಂದು ರಾಷ್ಟ್ರಧ್ವಜ ತಯಾರಕರಿಗೆ ವಿನಯ ಗುರೂಜಿ ನೇತೃತ್ವದಲ್ಲಿ ಗೌರವ ಸಲ್ಲಿಸುತ್ತಿರುವುದು ಶ್ಲಾಘನೀಯ. ಟ್ರಸ್ಟ್‌ನ ರಚನಾತ್ಮಕ ಕಾರ್ಯ ಪ್ರೇರಣಾದಾಯಕವಾಗಿದೆ ಎಂದರು.

Advertisement

2006ರಲ್ಲಿ ಬೆಂಗೇರಿಯಲ್ಲಿ ರಾಷ್ಟ್ರಧ್ವಜ ತಯಾರಿಕೆಗೆ ಬಿಎಸ್‌ಐ ಮಾನ್ಯತೆ ದೊರೆತಿದೆ. ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅವರಿದ್ದಾಗ ಖಾದಿ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸರಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತಿದ್ದರು. ನಾನು ಮುಖ್ಯಮಂತ್ರಿಯಾಗಿದ್ದಾಗ ಹಲವು ಸೌಲಭ್ಯ ಜಾರಿಗೊಳ್ಳುವಂತೆ ಮಾಡಿದ್ದರು. ಖಾದಿ ಕ್ಷೇತ್ರಕ್ಕೆ ಬರಬೇಕಾದ ವಿವಿಧ ಬಾಕಿ ಹಣ ಬಿಡುಗಡೆಗೆ ಸರಕಾರ ಮಟ್ಟದಲ್ಲಿ ಪ್ರಾಮಾಣಿಕ ಯತ್ನ ಮಾಡುವುದಾಗಿ ಭರವಸೆ ನೀಡಿದರು.

ಟ್ರಸ್ಟ್‌ ಅಧ್ಯಕ್ಷ ರಾಘವೇಂದ್ರ ಬೇಳೂರು ಪ್ರಾಸ್ತಾವಿಕ ಮಾತನಾಡಿ, ವಿನಯ ಗುರೂಜಿ ಅವರು ಸರಕಾರದಿಂದ ಯಾವುದೇ ನೆರವು ಪಡೆಯದೆ ಟ್ರಸ್ಟ್‌ ಮೂಲಕ ಸಾಮಾಜಿಕ ಸೇವಾ ಕಾರ್ಯಕ್ಕೆ ಮುಂದಾಗಿದ್ದಾರೆ. ಪೌರಕಾರ್ಮಿಕರು, ರೈತರು, ಸೈನಿಕರಿಗೆ ನಿಧಿ ಸ್ಥಾಪನೆ ಮೂಲಕ ನೆರವು ನೀಡುತ್ತಿದ್ದು, ಇದೀಗ ಖಾದಿ ಕೆಲಸಗಾರರ ನೆರವಿಗೆ ಬಂದಿದ್ದಾರೆ ಎಂದರು.

ಇದನ್ನೂ ಓದಿ:ಕರ್ಮಯೋಗಿ ಸಿದ್ದರಾಮರಿಂದ ಶ್ರಮ ಸಂಸ್ಕೃತಿಗೆ ಶ್ರೀಕಾರ·: ಚನ್ನಬಸಪ್ಪ

ವಿಧಾನ ಪರಿಷತ್ತು ಮಾಜಿ ಸದಸ್ಯ ಶರವಣ, ನಯನಾ ಮೋಟಮ್ಮ, ಕೆ.ವಿ. ಪತ್ತಾರ ಮಾತನಾಡಿದರು. ಅಚ್ಯುತ್‌ಗೌಡ, ಮನೋಜಕುಮಾರ ಪಾಟೀಲ ಇದ್ದರು. ಪುಣ್ಯಪಾಲ ಸ್ವಾಗತಿಸಿದರು. ಡಾ| ಮಲ್ಲಿಕಾರ್ಜುನ ಬಾಳಿಕಾಯಿ ನಿರೂಪಿಸಿದರು. ರಜತ ಉಳ್ಳಾಗಡ್ಡಿಮಠ ವಂದಿಸಿದರು. ಹುಬ್ಬಳ್ಳಿ ಬೆಂಗೇರಿ ಹಾಗೂ ಗರಗದಲ್ಲಿ ಸುಮಾರು 250ಕ್ಕೂ ಹೆಚ್ಚು ಖಾದಿ ಕೆಲಸಗಾರರಿಗೆ ಆಹಾರ ಧಾನ್ಯಗಳ ಕಿಟ್‌ ವಿತರಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next