Advertisement

Ventamuri incident: ನ್ಯಾಯಪೀಠದ ಸಲಹೆ ಯೋಗ್ಯ, ಕೂಡಲೇ ನಿಯಮವಾಗಲಿ

09:13 PM Dec 19, 2023 | Team Udayavani |

ರಾಜ್ಯವನ್ನು ಬೆಚ್ಚಿ ಬೀಳಿಸಿರುವ ಬೆಳಗಾವಿಯ ವಂಟಮೂರಿಯಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಾಜ್ಯದ ಹೈಕೋರ್ಟ್‌ ಸೋಮವಾರ ನೀಡಿರುವ ಸಲಹೆಯು ಕ್ರಿಯಾತ್ಮಕ ನ್ಯಾಯಾಂಗದ ದ್ಯೋತಕ, ಅದರ ಸಾಮಾಜಿಕ ಸುಧಾರಣೆಯ ಜವಾಬ್ದಾರಿ ನಿರ್ವಹಣೆಗೊಂದು ನಿದರ್ಶನವಾಗಿದೆ. ಘಟನೆಯ ಸಂದರ್ಭದಲ್ಲಿ ನಿಷ್ಕ್ರಿಯರಾಗಿದ್ದ ಗ್ರಾಮಸ್ಥರಿಗೂ ಸಾಮೂಹಿಕ ಜವಾಬ್ದಾರಿ ನಿಗದಿಪಡಿಸಿ ದಂಡ ವಿಧಿಸಬಹುದಾದಂತಹ ಮಾದರಿಯಲ್ಲಿ ಯೋಜನೆ ರೂಪಿಸಲು ಹೈಕೋರ್ಟ್‌ ಸರ್ಕಾರಕ್ಕೆ ಸಲಹೆ ನೀಡಿದೆ. ಅಮಾನವೀಯ, ಹೇಯ ಅಪರಾಧ ಕೃತ್ಯಗಳು ಕಣ್ಣೆದುರೇ ನಡೆಯುತ್ತಿದ್ದರೂ ಅದನ್ನು ತಡೆಯಲು ಮುಂದಾಗದೆ “ನನಗೇನು’ ಎಂಬಂತೆ ಸುಮ್ಮನಿರುವ, “ನನಗ್ಯಾಕೆ ಬೇಡದ ಉಸಾಬರಿ’ ಎಂದು ತನ್ನ ಪಾಡಿಗೆ ತಾನು ದೂರ ಸರಿಯುವ ಪ್ರತಿಯೊಬ್ಬನೂ ಎಚ್ಚರಿಕೆಯಿಂದ ಗಮನಿಸಿ ಅರಗಿಸಿಕೊಳ್ಳಬೇಕಾದ ವಿಷಯ ಇದು.

Advertisement

ಈ ಪ್ರಕರಣದಲ್ಲಿ ಹೈಕೋರ್ಟ್‌ ಸ್ವಯಂಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ. ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಮತ್ತು ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರಿರುವ ನ್ಯಾಯಪೀಠ ಈ ಹೆಜ್ಜೆ ಇರಿಸಿದೆ. ಘಟನೆ ನಡೆಯುತ್ತಿದ್ದಾಗ 50ರಿಂದ 60 ಮಂದಿ ಗ್ರಾಮಸ್ಥರು ಅಲ್ಲಿದ್ದರು, ಆದರೆ ಒಬ್ಬನ ವಿನಾ ಬೇರ್ಯಾರೂ ಮಹಿಳೆಯನ್ನು ರಕ್ಷಿಸಲು ಮುಂದಾಗಲಿಲ್ಲ ಎಂದು ಅಡ್ವೊಕೇಟ್‌ ಜನರಲ್‌ ನ್ಯಾಯಪೀಠಕ್ಕೆ ವಿವರಿಸಿದ್ದರು. ಇದನ್ನು ಆಲಿಸಿದ ನ್ಯಾಯಪೀಠವು, ದಾಳಿಕೋರರ ಕೃತ್ಯಕ್ಕಿಂತಲೂ ಸ್ಥಳದಲ್ಲಿ ಮೂಕಪ್ರೇಕ್ಷಕರಾಗಿದ್ದವರ ನಿಷ್ಕ್ರಿಯತೆ ಹೆಚ್ಚು ಅಪಾಯಕಾರಿ ಎಂಬುದಾಗಿ ಸರಿಯಾಗಿಯೇ ಅಭಿಪ್ರಾಯಪಟ್ಟಿದೆ. ಇದು ಗ್ರಾಮಸ್ಥರ ಹೇಡಿತನ, ಬೇಜವಾಬ್ದಾರಿ ಎಂದು ಹೇಳಿದೆ. ಅಲ್ಲದೆ ಇಂತಹ ನಿಷ್ಕ್ರಿಯತೆಯಿಂದ ದೂರ ಸರಿದು ಕನಿಷ್ಠ ರಕ್ಷಣೆಯ ಕ್ರಮಗಳಿಗೆ ಮುಂದಾಗುವಂತೆ ಮಾಡುವುದಕ್ಕಾಗಿ ದಂಡ ವಿಧಿಸುವ ಕ್ರಮಗಳ ಬಗ್ಗೆ ಯೋಜನೆ ರೂಪಿಸಿ ಎಂದು ಸರಕಾರಕ್ಕೆ ಸಲಹೆ ನೀಡಿದೆ. ತನ್ನ ನಿಲುವಿಗೆ ಪೂರಕವಾಗಿ ಬ್ರಿಟಿಶ್‌ ಆಡಳಿತ ಕಾಲದಲ್ಲಿ ವಿಲಿಯಂ ಬೆಂಟಿಂಕ್‌ ವಿಧಿಸುತ್ತಿದ್ದ “ಪುಂಡಗಂದಾಯ’ವನ್ನು ನ್ಯಾಯಪೀಠ ಉದಾಹರಿಸಿದೆ.

ನ್ಯಾಯಪೀಠ ಗುರುತಿಸಿದ ಇಂತಹ “ನಿಷ್ಕ್ರಿಯತೆ’, “ಹೊಣೆಗೇಡಿತನ’, “ಬೇಜವಾಬ್ದಾರಿ’ಗಳು ವೆಂಟಮೂರಿ ಘಟನೆಯಲ್ಲಿ ಮಾತ್ರವೇ ಅಲ್ಲ; ಇತರ ಹತ್ತು ಹಲವು ದುರ್ಘ‌ಟನೆಗಳು, ದುಷ್ಕೃತ್ಯಗಳ ಸಂದರ್ಭದಲ್ಲಿ ಪ್ರದರ್ಶನಗೊಳ್ಳುವುದನ್ನು ಕಾಣಬಹುದು. ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಒಂದು ಘಟನೆ ಇದಕ್ಕೆ ತಾಜಾ ಉದಾಹರಣೆ. ಅಲ್ಲಿ 17 ವರ್ಷದ ಯುವಕನೊಬ್ಬ ಮದ್ಯದ ಅಮಲಿನಲ್ಲಿ ಕೆಲವು ನೂರು ರೂಪಾಯಿಗಳ ವಿಚಾರಕ್ಕಾಗಿ ತನ್ನ ಸ್ನೇಹಿತನನ್ನೇ 50-60ಕ್ಕೂ ಅಧಿಕ ಬಾರಿ ಇರಿದು ಕೊಂದಿದ್ದ. ಈ ಕೃತ್ಯ ನಡೆಸುತ್ತಿದ್ದಾಗ ನೃತ್ಯವನ್ನೂ ಮಾಡುತ್ತಿದ್ದ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಆತ ಕೃತ್ಯ ಎಸಗುತ್ತಿದ್ದ ವೇಳೆ ಅಕ್ಕಪಕ್ಕ ದಾರಿಹೋಕರು ನಡೆದು ಹೋಗುತ್ತಿದ್ದುದು, ಒಂದೆರಡು ಮನೆಗಳವರು ಒಳಸೇರುವುದು ದಾಖಲಾಗಿತ್ತು. ರಸ್ತೆ ಅಪಘಾತದಂತಹ ದುರ್ಘ‌ಟನೆಗಳು ಇಂತಹ ಸಾಮೂಹಿಕ ಹೊಣೆಗೇಡಿತನ ಪ್ರದರ್ಶನವಾಗುವುದಕ್ಕೆ ಇನ್ನೊಂದು ನಿದರ್ಶನ. ಇಂತಹ ಘಟನೆಗಳು ನಡೆದಾಗ ಹಲವರು ಮೊಬೈಲ್‌ಗ‌ಳಲ್ಲಿ ಚಿತ್ರೀಕರಣ ನಡೆಸುತ್ತಾರೆ, ಪೊಲೀಸ್‌ ಕೇಸ್‌ ಅದೂ ಇದೂ ನಮಗ್ಯಾಕೆ ಎಂದುಕೊಂಡು ದೂರ ಸರಿಯುತ್ತಾರೆ. ಸಹಾಯಕ್ಕೆ ಧಾವಿಸುವವರು ಕೆಲವೇ ಕೆಲವರು.

ಈ ಹಿನ್ನೆಲೆಯಲ್ಲಿ ವೆಂಟಮೂರಿ ಘಟನೆಯ ವಿಚಾರಣೆಯ ಸಂದರ್ಭ ನ್ಯಾಯಪೀಠ ನೀಡಿರುವ ಸಲಹೆ ಸ್ವಾಗತಾರ್ಹ ಮತ್ತು ಕಡ್ಡಾಯ ಪಾಲನೆಯಾಗಬೇಕಾದುದು. ಸರ್ಕಾರ ತಡಮಾಡದೆ ಇದಕ್ಕೆ ತಕ್ಕ ನೀತಿ-ನಿಯಮಗಳನ್ನು ರೂಪಿಸಿ ಜಾರಿಗೆ ತರಬೇಕು. ಶಿಕ್ಷೆ-ದಂಡದ ಹೆದರಿಕೆಯಿಂದಾದರೂ ಸಾಮೂಹಿಕ ಹೊಣೆಗೇಡಿತನಗಳು ಕಡಿಮೆಯಾಗಬೇಕು.

Advertisement

Udayavani is now on Telegram. Click here to join our channel and stay updated with the latest news.

Next