Advertisement

ನಿತ್ಯ 10 ಕಿ.ಮೀ. ನಡೆಯುತ್ತಿದ್ದ ಮಕ್ಕಳಿಗೆ ವಾಹನ ವ್ಯವಸ್ಥೆ

09:16 PM Feb 29, 2020 | Lakshmi GovindaRaj |

ಹನೂರು: ಶಾಲೆಗೆ ಹೋಗಿ ಬರಲು ಕಡಿದಾದ ರಸ್ತೆಯಲ್ಲಿ ಪ್ರತಿದಿನ 10 ಕಿ.ಮೀ. ನಡೆದುಕೊಂಡು ಹೋಗುತ್ತಿದ್ದ ಕಾಡಂಚಿನ ಗ್ರಾಮಗಳ ವಿದ್ಯಾರ್ಥಿಗಳಿಗೆ ಕಡೆಗೂ ವಾಹನ ಸೌಲಭ್ಯ ದೊರೆತಿದೆ. ಶುಕ್ರವಾರದಿಂದ ವಾಹನ ವ್ಯವಸ್ಥೆ ಮಾಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳು ನಿತ್ಯ 10 ಕಿ.ಮೀ. ನಡೆಯುವುದು ತಪ್ಪಿದಂತಾಗಿದೆ.

Advertisement

ತಾಲೂಕಿನ ಪಚ್ಚೆದೊಡ್ಡಿ ಗ್ರಾಮದಲ್ಲಿ ಬಾಲಕಿಯರು ಸೇರಿದಂತೆ ವಿದ್ಯಾರ್ಥಿಗಳು ಶಾಲೆಗೆ ಹೋಗಿ ಬರಲು ದಟ್ಟ ಅರಣ್ಯದ ಮಧ್ಯೆ ಜೀವಭಯದಲ್ಲಿಯೇ 10 ಕಿ.ಮೀ. ಸಂಚರಿಸಬೇಕಾಗಿತ್ತು. ನಿತ್ಯ ನಡೆಯುವುದೇ ಹರಸಾಹಸವಾಗಿತ್ತು. ಸಂಜೆ ಮನೆ ಸೇರುವಷ್ಟರಲ್ಲಿ ಬಳವಳಿಯುತ್ತಿದ್ದರು. ನಿತ್ಯ ನಡೆದು ಹೈರಾಣಾಗುತ್ತಿರುವುದರಿಂದ ಮನೆಯಲ್ಲಿ ಓದಲು ತುಸು ಅಡಚಣೆ ಆಗಿತ್ತು.

ಸಚಿವರ ಶಾಲೆ ವಾಸ್ತವ್ಯ: ಈ ಮಕ್ಕಳ ಯಾತನೆ ಕುರಿತು ಉದಯವಾಣಿಯಲ್ಲಿ ಫೆ.6ರಂದು “ಶಾಲೆಗೆ ನಿತ್ಯ 10 ಕಿ.ಮೀ. ನಡೆಯಲೇಬೇಕು’ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್‌ಕುಮಾರ್‌ ಅವರು ಫೆ.10ರಂದು ಪಚ್ಚೆದೊಡ್ಡಿ ಗ್ರಾಮದ ಶಾಲೆಯಲ್ಲೇ ವಾಸ್ತವ್ಯ ಹೂಡಿ ಶಾಲಾ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದ್ದರು. ಈ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮುಂದಿನ 10 ದಿನಗಳೊಳಗಾಗಿ ಶಾಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಾಹನ ಸೌಲಭ್ಯ ಕಲ್ಪಿಸುವುದಾಗಿ ಘೋಷಣೆ ಮಾಡಿದ್ದರು.

ಅರಣ್ಯ ಇಲಾಖೆಗೆ ಜವಾಬ್ದಾರಿ: ಪಚ್ಚೆದೊಡ್ಡಿ ಗ್ರಾಮದಿಂದ ಕಾಂಚಳ್ಳಿ, ಅಜ್ಜೀಪುರ, ರಾಮಾಪುರ ಗ್ರಾಮಗಳಿಗೆ ತೆರಳುವ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಹಿತದೃಷ್ಟಿಯಿಂದ ವಾಹನ ಸೌಲಭ್ಯವನ್ನು ಅರಣ್ಯ ಇಲಾಖೆಯಿಂದ ಕಲ್ಪಿಸಲು ಮತ್ತು ನಿರ್ವಹಣಾ ಜವಾಬ್ದಾರಿಯನ್ನು ಪರಿಸರ ಅಭಿವೃದ್ಧಿ ಸಮಿತಿಗೆ ವಹಿಸಿಕೊಡಲಾಗಿತ್ತು. ಆದರಂತೆ, ಫೆ.28ರಂದು ಶುಕ್ರವಾರದಿಂದ ವಾಹನ ಸೌಲಭ್ಯ ಕಲ್ಪಿಸಿರುವ ಅಧಿಕಾರಿಗಳು ಶಾಲಾ ಮಕ್ಕಳನ್ನು ಕರೆದೊಯ್ಯಲು ಸರಕು ಸಾಗಣೆ ವಾಹನವನ್ನು ನಿಯೋಜಿಸಿದ್ದಾರೆ.

ಪಚ್ಚೆದೊಡ್ಡಿ ಗ್ರಾಮವು ಅರಣ್ಯ ಪ್ರದೇಶದೊಳಗಡೆ ಇದ್ದು, ಇಲ್ಲಿ ಸುಮಾರು 60ಕ್ಕೂ ಹೆಚ್ಚು ಕುಟುಂಬಗಳಿವೆ. ಈ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಿದ್ದು, 1ರಿಂದ 5ನೇ ತರಗತಿಯವರೆಗೆ ಶಿಕ್ಷಣ ನೀಡಲಾಗುತ್ತಿದೆ. ಆದರೆ, ಮುಂದಿನ ಶಿಕ್ಷಣಕ್ಕೆ 15ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾಂಚಳ್ಳಿ, ಅಜ್ಜೀಪುರ ರಾಮಾಪುರ ಕಡೆಗಳಿಗೆ ಅರಣ್ಯ ಪ್ರದೇಶದ ನಡುವೆ ಹಾದು ಹೋಗಿರುವ 5 ಕಿ.ಮೀ. ಮಣ್ಣಿನ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು.

Advertisement

ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌ ಸೂಚನೆಯಂತೆ ಶಾಲಾ ಮಕ್ಕಳಿಗೆ ವಾಹನ ಸೌಲಭ್ಯ ಕಲ್ಪಿಸುವ ಹೊಣೆಯನ್ನು ಅರಣ್ಯ ಇಲಾಖೆಗೆ ನೀಡಿ ಇಲಾಖೆಯಿಂದಲೇ ಖರ್ಚು ವೆಚ್ಚ ಭರಿಸುವಂತೆ ಸೂಚಿಸಲಾಗಿತ್ತು. ಈ ಹಿನ್ನೆಲೆ ಅರಣ್ಯ ಇಲಾಖಾ ಅಧಿಕಾರಿಗಳು ವಾಹನವನ್ನು ನಿಯೋಜಿಸಿದ್ದಾರೆ. ಈ ವಾಹನವು ಬೆಳಗ್ಗೆ 7 ಗಂಟೆಗೆ ಪಚ್ಚೆದೊಡ್ಡಿ ಗ್ರಾಮದಿಂದ ಹೊರಟು ಸಂಜೆ 4.30ಕ್ಕೆ ಅಜ್ಜೀಪುರ ಮತ್ತು 5.30ಕ್ಕೆ ಕಾಂಚಳ್ಳಿ ಗ್ರಾಮದಿಂದ ಹಿಂದಿರುಗಿ ಪಚ್ಚೆದೊಡ್ಡಿ ಗ್ರಾಮಕ್ಕೆ ತೆರಳಲಿದೆ.

ಶೀಘ್ರ ಓಮ್ನಿ ಮಾದರಿ ವಾಹನ ಬರುತ್ತೆ: ಪಚ್ಚೆದೊಡ್ಡಿ, ಅಜ್ಜೀಪುರ, ಕಾಂಚಳ್ಳಿ ಗ್ರಾಮದ ಶಾಲಾ ಮಕ್ಕಳನ್ನು ಕರೆದೊಯ್ಯಲು 20 ಜನ ಸಂಚರಿಸಲು ಸಾಧ್ಯವಾಗವಹುದಾದ ಓಮ್ನಿ ಮಾದರಿಯ ವಾಹನವನ್ನು ನಿಯೋಜಿಸಲಾಗಿದೆ. ಈ ವಾಹನ ಬರಲು ಇನ್ನೂ 4-5 ದಿನಗಳು ಆಗುವ ಸಾಧ್ಯತೆ ಇರುವುದರಿಂದ ಅಲ್ಲಿಯ ತನಕ ಶಾಲಾ ಮಕ್ಕಳು ನಡೆದು ಹೋಗುವುದು ಬೇಡ ಎಂಬ ನಿರ್ಧಾರ ಕೈಗೊಂಡು ತಾತ್ಕಾಲಿಕವಾಗಿ ಸರಕು ಸಾಗಣೆ ವಾಹನ ನಿಯೋಜಿಸಲಾಗಿದೆ. ಶೀಘ್ರದಲ್ಲೇ ಸಮರ್ಪಕ ವಾಹನ ವ್ಯವಸ್ಥೆ ಮಾಡಲಾಗುವುದು ಎಂದು ಮಲೆ ಮಹದೇಶ್ವರ ವನ್ಯಜೀವಿ ವಲಯ ಡಿಎಫ್ಒ ಏಳುಕುಂಡಲು ತಿಳಿಸಿದ್ದಾರೆ.

ಸರಕು ಸಾಗಣೆ ವಾಹನ ನಿಯೋಜನೆಗೆ ಟೀಕೆ: ಶಿಕ್ಷಣ ಸಚಿವರು ನೀಡಿದ್ದ ಭರವಸೆಯನ್ನು ಈಡೇರಿಸುವ ಭರದಲ್ಲಿ ಕಾನೂನು ಕಟ್ಟಳೆಗಳ ಪಾಲನೆ ಮಾಡಬೇಕಾದ ಅಧಿಕಾರಿಗಳೇ ನೀತಿ ನಿಯಮಗಳನ್ನು ಉಲ್ಲಂ ಸಿ ಶಾಲಾ ಮಕ್ಕಳ ಪ್ರಯಾಣಕ್ಕಾಗಿ ಸರಕು ಸಾಗಣೆ ವಾಹನ ನಿಯೋಜನೆ ಮಾಡಿರುವುದು ಸಾರ್ವಜನಿಕರ ವಲಯದಲ್ಲಿ ಟೀಕೆಗೆ ಕಾರಣವಾಗಿದೆ.

ಸಾರಿಗೆ ನಿಯಮಗಳ ಪ್ರಕಾರ ಸರಕು ಸಾಗಾಣಿಕೆ ವಾಹನದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಬಾರದು ಎಂಬ ನಿಯಮವಿದೆ. ಅಲ್ಲದೇ ನಿಯಮ ಉಲ್ಲಂ ಸಿದರೆ ದಂಡವನ್ನೂ ವಿಧಿಸಬಹುದು. ಅದರೆ, ಇದೀಗ ಪಚ್ಚೆದೊಡ್ಡಿ ಗ್ರಾಮದಿಂದ ಶಾಲಾ ಮಕ್ಕಳ ಅನುಕೂಲಕ್ಕಾಗಿ ಅಧಿಕಾರಿಗಳೇ ಸರಕು ಸಾಗಣೆ ವಾಹನ ನಿಯೋಜಿಸುವ ಮೂಲಕ ನಿಯಮಗಳನ್ನು ಉಲ್ಲಂ ಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.

ಇಷ್ಟು ದಿನ ಶಾಲೆಗೆ ನಡೆದುಹೋಗುವ ಮಾರ್ಗಮಧ್ಯೆ ಕಾಡುಪ್ರಾಣಿಗಳ ಹಾವಳಿಯಿಂದ ಜೀವಭಯದಲ್ಲಿ ಸಂಚರಿಸಬೇಕಿತ್ತು. ಇದೀಗ ಸರಕು ಸಾಗಣೆ ವಾಹನದಲ್ಲಿ ಮಕ್ಕಳು ಶಾಲಾ ಚೀಲವನ್ನು ಹೆಗಲಲ್ಲಿ ಹಾಕಿಕೊಂಡು ವಾಹನವನ್ನು ಹಿಡಿದುಕೊಂಡು ನಿಂತೇ ಸಂಚರಿಸಬೇಕಿದೆ. ಅಲ್ಲದೆ ಈ ರಸ್ತೆಯು ತೀರಾ ಹಳ್ಳ – ದಿಣ್ಣೆ, ಇಳಿಜಾರಿನಿಂದಲೂ ಕೂಡಿದೆ. ಇಂತಹ ರಸ್ತೆಯಲ್ಲಿ ಸರಕು ಸಾಗಣೆ ವಾಹನ ಕಲ್ಪಿಸಿರುವುದು ಅಪಾಯಕ್ಕೆ ಆಹ್ವಾನ ನೀಡುವ ಸಾಧ್ಯತೆ ಇದೆ. ಹೀಗಾಗಿ ಸಚಿವರು, ಮೇಲಧಿಕಾರಿಗಳು ಹಾಗೂ ಕ್ಷೇತ್ರ ಶಾಸಕರು ಗಮನ ಹರಿಸಿ ಸುಸಜ್ಜಿತ, ಸಮರ್ಪಕ ವಾಹನ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

* ವಿನೋದ್‌ ಎನ್‌.ಗೌಡ

Advertisement

Udayavani is now on Telegram. Click here to join our channel and stay updated with the latest news.

Next