Advertisement

ಬಂಟರ ಮದುವೆಗೆ ವೈದಿಕ ಪದ್ಧತಿ ಸರಿಯಲ್ಲ: ಡಾ|ಸುನೀತಾ ಶೆಟ್ಟಿ

03:33 PM Apr 13, 2018 | |

ಪುಣೆ: ನಾವು ಬಂಟರು ಅಳಿಯಕಟ್ಟು ಪರಂಪರೆಯ ಮಾತೃ ಪ್ರಧಾನ ವ್ಯವಸ್ಥೆಯಲ್ಲಿ ಹಿರಿಯರ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬಂದವರಾಗಿದ್ದೇವೆ. ಸಮಾಜದಲ್ಲಿ ಹೆಣ್ಣಿಗೆ ಮಹತ್ವದ ಸ್ಥಾನವನ್ನು ನೀಡಲಾಗಿದೆ.  ಒಂದು ಕಾಲದಲ್ಲಿ ನಮ್ಮಲ್ಲೂ ಬಾಲ್ಯ ವಿವಾಹ ಪದ್ಧತಿಯಿತ್ತು. ಕ್ರಮೇಣ ವಿವೇಕ ಬೆಳೆದಂತೆ ವೈಚಾರಿಕತೆ ಬದಲಾದಂತೆ ಇದು ನಿವಾರಣೆಯಾಯಿತು. ಹೆಣ್ಣಿನ ಮದುವೆಯ ಸಂದರ್ಭಗಳಲ್ಲಿ ಬಹಳಷ್ಟು ಮೌಲ್ಯಾಧಾರಿತ ಪದ್ಧತಿಗಳನ್ನು ಪಾಲಿಸಿಕೊಂಡು ಬರಲಾಗಿತ್ತು. ಹಿಂದೆ ನಿಶ್ಚಿತಾರ್ಥ ಸಂದರ್ಭ ಉಂಗುರ ಹಾಕುವ ಕ್ರಮವಿರಲಿಲ್ಲ. ಹಿರಿಯರು ದೈವ-ದೇವರ ಎದುರಲ್ಲಿ  ನಿಂತು ಪವಿತ್ರ ವೀಳ್ಯದೆಲೆ ಅಡಿಕೆಗಳನ್ನು ಬದಲಿಸಿಕೊಂಡು ಪರಸ್ಪರ ಒಪ್ಪಿಗೆ ನೀಡುವ ಕ್ರಮವಿತ್ತು.  ನಮ್ಮಲ್ಲಿ ಕನ್ಯಾದಾನ ಎಂಬುದಿಲ್ಲ. ಕನ್ಯಾದಾನವೆಂಬುದು ಸುಮಾರು 7ನೇ ಶತಮಾನದಿಂದ ವೈದಿಕ ಸಂಪ್ರದಾಯಗಳು ಬಂದು ಅದನ್ನು ನಾವು ಅನುಕರಿಸಿಕೊಂಡಿರುವ ಸಂಪ್ರದಾಯವಾಗಿದೆ. ವೈದಿಕ ಸಂಪ್ರದಾಯಗಳಲ್ಲಿ ಬಹಳಷ್ಟು ಉತ್ತಮ ಅಂಶಗಳಿವೆ. ಆದರೆ ನಮ್ಮ ಬಂಟರ ಆಚಾರ ವಿಚಾರ, ಸಂಪ್ರದಾಯ ಪದ್ಧತಿಗಳು ಬೇರೆಯೇ ಆಗಿದ್ದು, ನಮಗೆ ನಮ್ಮದೇ ಆದ ಪರಂಪರೆಯಿದೆ. ಆದುದರಿಂದ ನಮ್ಮ ಸಮಾಜದ ಮದುವೆಗೆ ವೈದಿಕ ಪದ್ಧತಿ ಪಾಲಿಸುವುದು ಸರಿಯಲ್ಲ. ವೈದಿಕ ಆಚರಣೆಗಳು ನಮ್ಮ ಸಂಪ್ರದಾಯಗಳನ್ನು ಬದಿಗೆ ಸರಿಸಿವೆ ಎಂದು ಮುಂಬಯಿಯ ಸಾಹಿತಿ ಡಾ|  ಸುನೀತಾ ಎಂ.  ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಎ. 8ರಂದು ಪುಣೆ ಓಣಿಮಜಲು ಜಗನ್ನಾಥ ಶೆಟ್ಟಿ ಬಂಟರ ಭವನದ ಉದ್ಘಾಟನೆ ಸಂದರ್ಭ ಲತಾ ಸುಧೀರ್‌ ಶೆಟ್ಟಿ ವೇದಿಕೆಯಲ್ಲಿ ಬಂಟ ಮದಿಮೆ ಬೊಕ್ಕ ಸಾಂಸ್ಕೃತಿಕ ಪಲ್ಲಟ  ಎಂಬ ವಿಚಾರಗೋಷ್ಠಿಯನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಹಿರಿಯರು ಜಾತಕ ನೋಡಿ ಮದುವೆಯನ್ನು ನಿಶ್ಚಯಿಸುತ್ತಿರಲಿಲ್ಲ. ಆದರೆ ಆಧುನಿಕವಾಗಿ ನಾವು ಬೆಳೆದಂತೆ ಜಾತಕದ ಗೀಳು ನಮ್ಮನ್ನಾವರಿಸಿ ಅನಗತ್ಯ ಸಮಸ್ಯೆಗಳು ಎದುರಾಗುತ್ತಿರುವುದು ದುರಂತ. ಬಹಳಷ್ಟು ಸಂಬಂಧಗಳನ್ನು ಜಾತಕದ  ನೆಪ ಹೇಳಿ ಮಾಡಲಾಗುವುದಿಲ್ಲ. ಇದು ನಮ್ಮ ಹೆಣ್ಣುಮಕ್ಕಳಿಗೆ ಮಾಡುವ ಅಪಚಾರವಾಗಿದೆ. ಅದೇ ರೀತಿ ಹೆಣ್ಣಿಗೆ ಮದುವೆಯಲ್ಲಿ ಗಂಡನ ಕಡೆಯಿಂದ ಯಾವುದೇ ವಸ್ತು ಹೊಸದಾಗಿ ಸೇರಿಕೊಳ್ಳುವುದಿಲ್ಲ. ಕುಂಕುಮ, ಬಳೆಗಳನ್ನೂ ಮೊದಲೇ ಹಾಕಿಕೊಂಡಿರುತ್ತಾಳೆ ಆದ್ದರಿಂದ ಒಂದು ವೇಳೆ ಗಂಡ ಸತ್ತರೆ ಇದನ್ನು ಅಳಿಸುವ ಕ್ರಮ ಸರ್ವಥಾ ಒಪ್ಪಿಗೆಯಲ್ಲ ಎಂದು ನುಡಿದರು.

ಮಣಿಪಾಲದ ಉಪನ್ಯಾಸಕಿ ಅರ್ಪಿತಾ ಪಿ. ಶೆಟ್ಟಿ ಮಾತನಾಡಿ,  ಹಿಂದಿನಿಂದಲೂ ನಮ್ಮ ಸಮಾಜದಲ್ಲಿ ಬಳಿ ನೋಡಿ ಮದುವೆ ಸಂಬಂಧವನ್ನು ನಿಶ್ಚಯಿಸುತ್ತಿದ್ದರು.  ಬೇರೆ ಬೇರೆ  ಬಳಿಗಳ ಜನರ ಗುಣ ಸ್ವಭಾವಗಳ ಬಗ್ಗೆ  ಚರ್ಚೆಯಾಗುತ್ತಿತ್ತು. ಮಾವ, ತಂದೆ, ಹಿರಿಯರ ಮಾತಿಗೆ ಅಷ್ಟೊಂದು ಬೆಲೆ ಕೊಡುತ್ತಿದ್ದರು. ಇಂದು ಆಡಂಬರಗಳಿಗೆ ನಾವು ಮಾರುಹೋಗಿದ್ದೇವೆ ಎಂದರು.
ಪುಣೆ ತಿಲಕ್‌ ಮಹಾರಾಷ್ಟ್ರ ವಿದ್ಯಾಪೀಠದ ಮಾಜಿ ಉಪ ಕುಲಪತಿಗಳಾದ ಡಾ| ಹೀರಾ ಅಡ್ಯಂತಾಯ ಮಾತನಾಡಿ,  ಬಂಟ ಸಮಾಜದಲ್ಲಿ 22 ಬಳಿ ಗಳಿದ್ದು ಹಿಂದಿನ ಕಾಲದಲ್ಲಿಯೂ ಗಂಡು ಹೆಣ್ಣು ಒಂದೇ ಬಳಿಯವರಾಗಿದ್ದರೆ  ಮದುವೆ ಮಾಡುತ್ತಿರಲಿಲ್ಲ.  ಆ ಕಾಲದಲ್ಲಿಯೂ ಒಂದೇ ರಕ್ತದ ಗುಂಪು ಆಗಿದ್ದರೆ ಸಂಸಾರಕ್ಕೆ ತೊಂದರೆಯಾಗುತ್ತದೆ ಎಂಬ ವೈಜ್ಞಾನಿಕ ವಿಚಾರವನ್ನು ಪಾಲಿಸುತ್ತಿದ್ದರು ಎಂದರು.

ಮುಂಬಯಿ ಬಂಟರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರಂಜನಿ ಎಸ್‌. ಹೆಗ್ಡೆ ಮಾತನಾಡಿ,  ತಮ್ಮ ಕಾಲದ ಮದುವೆಯ ಬಗ್ಗೆ ಪ್ರಸ್ತಾವ ಮಾಡಿ, ಅಂದು ಹಿರಿಯರ ಮಾತಿಗೆ  ಬದ್ಧರಾಗಿ ನಡೆದುಕೊಂಡು ಸರಳವಾಗಿ ನಿಶ್ಚಿತಾರ್ಥ, ಮದುವೆ, ನೈಸರ್ಗಿಕ ಮದರಂಗಿ ಹಚ್ಚುವ ಕ್ರಮ ಮಾದರಿಯಾಗಿ ನಡೆಯುತ್ತಿತ್ತು. ಇಂದು ಎಲ್ಲವೂ ಕಾಲ ಬದಲಾದಂತೆ ಪರಿ ವರ್ತನೆ ಕಂಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸಂಧ್ಯಾ ವಿ. ಶೆಟ್ಟಿ ಮಾತನಾಡಿ, ಮನುಷ್ಯ ಜೀವನದಲ್ಲಿ  ಮದುವೆ ಎಂದರೆ ಎರಡು ಮನಸ್ಸುಗಳು, ಎರಡು ಮನೆ, ಎರಡು ಕುಟುಂಬಗಳು ಒಂದಾಗುವ ಪವಿತ್ರ ಸಂಬಂಧವಾಗಿದೆ. ಈ ಸಂಬಂಧವನ್ನು ಜೀವನಪೂರ್ತಿ ಪಾಲಿಸಿಕೊಂಡು ಸಂಸ್ಕಾರ ವಂತರಾಗಿ ಬಾಳುವುದೇ ನಮ್ಮ ಆಶಯವಾಗಬೇಕು ಎನ್ನುತ್ತಾ ಅತಿಥಿಗಳಿಗೆ ಧನ್ಯವಾದವನ್ನು ಸಲ್ಲಿಸಿದರು. ಕೊನೆಗೆ  ಕಾರ್ಯಕ್ರಮವನ್ನು ನಿರೂಪಿಸಿದ ಬಂಟರವಾಣಿಯ ಗೌರವ ಸಂಪಾದಕ ಅಶೋಕ್‌ ಪಕ್ಕಳ  ಚರ್ಚೆಯನ್ನು ಕೊನೆಗೊಳಿಸುತ್ತಾ ಮಾತನಾಡಿ,  ಗಂಡು ಹೆಣ್ಣು ಈ ಸಮಾಜದ ಎರಡು ಕಣ್ಣಿದ್ದಂತೆ, ಒಟ್ಟು ಜವಾಬ್ದಾರಿಗೆ ಎರಡು ಹೆಗಲಿದ್ದಂತೆ   ಸಾಮರಸ್ಯದ  ಬದುಕಿಗೆ ನಾಂದಿಯಾಗಿರಲಿ. ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಂಡು ತಿದ್ದಿಕೊಂಡು ಬಾಳುವಂತಾಗಲಿ. ಜಾತಕ, ಮೂಢನಂಬಿಕೆಗಳಿಗೆ ಬಲಿಯಾಗದೆ ನಮ್ಮ ಮೂಲ ನಂಬಿಕೆಗಳ ಆಧಾರದಲ್ಲಿ ಬಂಟರ ಮದುವೆ ನಡೆಯುವಂತಾಗಲಿ ಎಂದರು. ಅತಿಥಿಗಳನ್ನು ಸತ್ಕರಿಸಲಾಯಿತು.

ಸಂಘದ ಅಧ್ಯಕ್ಷ ಸಂತೋಷ್‌ ಶೆಟ್ಟಿಯವರು ಮಾತನಾಡಿ, ಜಾಗತಿಕ ಬಂಟರ ಒಕ್ಕೊಟದ ಅಧ್ಯಕ್ಷರ ನೇತೃತ್ವದಲ್ಲಿ ಈ ಬಗ್ಗೆ ನಿರ್ಣಯವೊಂದನ್ನು ಮಂಡಿಸಿ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು. ಈ ಬಗ್ಗೆ ಐಕಳ  ಹರೀಶ್‌ ಶೆಟ್ಟಿಯವರು ಯಾವುದೇ ವಿಷಯ ಚರ್ಚೆ ಯಾದರೆ ಸಮಾಜದ ಹಿತದೃಷ್ಟಿಯಿಂದ ಕಾರ್ಯರೂಪಕ್ಕೆ ಬರುವಂತಾಗಬೇಕು. ಇದಕ್ಕಾಗಿ ನಮ್ಮ ಸಂಘಟನೆ ಬಲ ಗೊಳ್ಳಬೇಕು ಎಂದರು. 

Advertisement

ನಮ್ಮ ಸಮಾಜದಲ್ಲಿ ಒಂದು ಕಾಲದಲ್ಲಿ ಹಣದ ಚಲಾವಣೆ ಹೆಚ್ಚಾದಂತೆ ವರದಕ್ಷಿಣೆ ಪಿಡುಗು ಜೋರಾಗಿತ್ತು. ಆನಂತರದ ದಿನಗಳಲ್ಲಿ ಮರೆಯಾಯಿತು. ಪ್ರತಿಯೊಬ್ಬ ತಂದೆಯೂ ತನ್ನ ಮಕ್ಕಳ ಮದುವೆಯ ಬಗ್ಗೆ ಅಪಾರವಾದ ಆಸೆಯೊಂದಿಗೆ ಸಂಪತ್ತನ್ನು ಕೂಡಿಡುತ್ತಾರೆ. ಜತೆಗೆ ದಾನ-ಧರ್ಮಗಳಿಗೂ ಹಣವನ್ನು ಮೀಸಲಿಡುತ್ತಾರೆ.  ಜೀವನದಲ್ಲಿ ಮದುವೆ ಎಂಬುದು ಸಂಭ್ರಮದ ದಿನವಾದ ಕಾರಣ ತನ್ನಿಷ್ಟದಂತೆ ಖರ್ಚು ಮಾಡುವುದು ಸಹಜ. ಇದನ್ನು ದುಂದುವೆಚ್ಚ ಎನ್ನುವುದು ಸಾಧುವಲ್ಲ. ನಮ್ಮ ಸಮಾಜದಲ್ಲಿ ಹಿಂದಿನ ಕಾಲದಿಂದ ಮದುವೆ ಸಂಪ್ರದಾಯಗಳು ಬಹಳಷ್ಟು ಬದಲಾವಣೆಗಳನ್ನು ಕಂಡಿವೆ. ಆದರೆ ಕಾಲಕ್ಕನುಗುಣವಾಗಿ ವಿವೇಚನೆ ಯೊಂದಿಗೆ ಮಾಡಿದ ಮೌಲ್ಯಾಧಾರಿತ ಬದಲಾವ ಣೆಗಳನ್ನು ನಾವು ಒಪ್ಪಬೇಕಾಗಿದೆ.
– ಡಾ| ವಿಜಯಕುಮಾರ್‌ ಶೆಟ್ಟಿ ತೋನ್ಸೆ,
ಸಂಸ್ಥಾಪಕರು, ಕಲಾಜಗತ್ತು ಮುಂಬಯಿ 

ಕೃಷಿ ಮೂಲದಿಂದ ಬಂದವರಾದ ನಾವು ಹೆಣ್ಣು ನೋಡುವ ಸಂದರ್ಭ ಕೃಷಿಯ ಬಗ್ಗೆ  ತಿಳಿದುಕೊಂಡು ಮುಂದಡಿಯಿಡುತ್ತಿದ್ದರು. ನಿಶ್ಚಿತಾರ್ಥ ಯಾವುದೇ ಗೌಜಿ ಗದ್ದಲಗಳಿಲ್ಲದೆ ಹೆಣ್ಣಿನ ಮನೆಯÇÉೇ ಧಾರ್ಮಿಕ ನಂಬುಗೆಯಡಿಯಲ್ಲಿ ನಡೆಯುತ್ತಿತ್ತು. ಆದರೆ ಇಂದು ಗೌಜಿ ಗದ್ದಲಗಳೊಂದಿಗೆ ಹಾಲ್‌ಗ‌ಳಲ್ಲಿ ನಡೆಯುತ್ತಿದೆ. ಬಡವನಾದವನು ಸಾಲ ಮಾಡಿ ನಿಶ್ಚಿತಾರ್ಥ, ಮದುವೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.  ವರದಕ್ಷಿಣೆ ಆರಂಭವಾಗುವ ಮೊದಲು ಕನ್ಯಾಶುಲ್ಕವೆಂದು ನೀಡುವ ಕ್ರಮವಿತ್ತು. ಧಾರ್ಮಿಕ ನೆಲೆಗಟ್ಟಿನಲ್ಲಿ ಹಿರಿಯರ ಆದೇಶದಂತೆ ಹೆಣ್ಣು ನೋಡಿ ನಿಶ್ಚಿತಾರ್ಥ, ಮದುವೆ  ಕಾರ್ಯಕ್ರಮಗಳು ಯಾವುದೇ ಬ್ರಾಹ್ಮಣರಿಲ್ಲದೆ ನಡೆಯುತ್ತಿತ್ತು. ಸತ್ಯದ ಸಿರಿ ಸಮಾನತೆಯ ಹಾದಿಯಲ್ಲಿ ಬಂಟ ಸಮಾಜಕ್ಕೆ ಆದರ್ಶಳಾಗಿ ಕಂಡು ಬರುತ್ತಾಳೆ. ಅದೇ ರೀತಿ 12 ವರ್ಷಗಳ ಕಾಲ ಗಂಡ ಮನೆಬಿಟ್ಟು ಹೋಗಿದ್ದರೆ, ಗುಣವಾಗದ ರೋಗಗಳಿಗೆ ಬಲಿಯಾದರೆ ಹೆಣ್ಣಿಗೆ ಮರು ಮದುವೆ (ಕೈ ಪತ್ತಾವುನು) ಮಾಡುವ ಪದ್ಧತಿ ಆ ಕಾಲದಲ್ಲಿ ಇತ್ತು. ಮಾನವೀಯ ಸಂಬಂಧಗಳ ಮೇಲೆ ನಂಬಿಕೆ ಕಡಿಮೆಯಾಗಿ ಮದುವೆಗೆ ಜಾತಕದ ನೆಪವನ್ನು ಪಾಲಿಸುತ್ತಿರುವುದು ದುರಂತವಾಗಿದೆ.
-ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ, ಸಂಪಾದಕರು, ಇಂಟರ್‌ ನ್ಯಾಶನಲ್‌ ಬಂಟ್ಸ್‌ ವೆಲ್ಫೆàರ್‌ ಟ್ರಸ್ಟ್‌ ಸದಾಶಯ ಪತ್ರಿಕೆ 

ಆಗಿನ ಕಾಲದಲ್ಲಿ ವರದಕ್ಷಿಣೆ ಎಂಬುವುದು ಹೆಣ್ಣಿಗೆ ಸಂಸಾರಕ್ಕೆ ತೊಂದರೆಯಾಗದಿರಲಿ ಎಂದು ತಂದೆ ತಾಯಂದಿರು ಖುಷಿ ಯಿಂದ ನೀಡುತ್ತಿದ್ದರೇ ಹೊರತು ಯಾವುದೇ ಒತ್ತಾಯ ಪೂರ್ವಕವಾಗಿ ಅಲ್ಲ. ಅಂದು ಕುಟುಂಬದ ಹಿರಿಯರ ಮೇಲಿನ ನಂಬಿಕೆ  ಬಲವಾಗಿತ್ತು. ಹೆಣ್ಣನ್ನು ಧಾರೆ ಎರೆದು ಕೊಡುತ್ತಿದ್ದರೇ ಹೊರತು ಕನ್ಯಾದಾನ ಮಾಡಿ ಅಲ್ಲ. ಅಗ್ನಿಸಾಕ್ಷಿಯಾಗಿ ಸಪ್ತಪದಿಯಾಗಿ ಮದುವೆ ನಮ್ಮಲ್ಲಿ ಸಲ್ಲದು. ಕುಟುಂಬದ ಗುರ್ಕಾರನ ಮಂತ್ರ  ಶ್ರೇಷ್ಠವಾದುದು. ಇಂದು  ಬ್ರಾಹ್ಮಣ ಸಂಪ್ರದಾಯವನ್ನು ಅಪ್ಪಿಕೊಂಡಿದ್ದೇವೆ.     
-ನವೀನ್‌ ಶೆಟ್ಟಿ, ಟಿವಿ ನಿರೂಪಕ

ಚಿತ್ರ-ವರದಿ : ಕಿರಣ್‌ ಬಿ. ರೈ ಕರ್ನೂರು

Advertisement

Udayavani is now on Telegram. Click here to join our channel and stay updated with the latest news.

Next