Advertisement

ಸಂಪರ್ಕ ರಸ್ತೆ ದುರವಸ್ಥೆ ಜನರ ನರಕಯಾತನೆ

02:21 PM Jun 30, 2021 | Team Udayavani |

ಹುಬ್ಬಳ್ಳಿ: ಏಷ್ಯಾದ ಅತಿದೊಡ್ಡ ತಾಲೂಕು ನ್ಯಾಯಾಲಯ, ಅಂತಾರಾಷ್ಟ್ರೀಯ ಮಾದರಿಯ ಬಸ್‌ ಟರ್ಮಿನಲ್‌, ಹಲವು  ಕ್ರೀಡಾ ಅಕಾಡೆಮಿಗಳು, ಮೇಲಾಗಿ ಹು-ಧಾ ರಸ್ತೆಗೆ ಪರ್ಯಾಯಮಾರ್ಗವಿದು. ಆದರೆ ಇಲ್ಲಿಯ ಸಂಪರ್ಕ ರಸ್ತೆಯ ದುರವಸ್ಥೆ ಹಾಗೂ ಇಲ್ಲಿಂದ ಸಂಚರಿಸುವ ಬಸ್‌ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಜನರು ನರಕಯಾತನೆ ಅನುಭವಿಸುವಂತಾಗಿದೆ.

Advertisement

ಕಮರಿಪೇಟೆ-ಗಿರಣಿಚಾಳ-ಉಣಕಲ್ಲ ಸಂಪರ್ಕಿಸುವ ವಾಣಿ ವಿಲಾಸ ವೃತ್ತದಿಂದ ಹೊಸ ಡಿಪೋವರೆಗಿನರಸ್ತೆ ದುರವಸ್ಥೆಯಿದು. ಮೂರು ವರ್ಷಗಳಿಂದ ಈ ರಸ್ತೆ ಕುಂಟುತ್ತಾ ತೆವಳುತ್ತಾ ಒಂದಿಷ್ಟು ಕಾಂಕ್ರಿಟ್‌ ರಸ್ತೆ ಕಂಡಿದ್ದು, ಉಳಿದ ಸುಮಾರು 500 ಮೀಟರ್‌ಅವ್ಯವಸ್ಥೆ ಆಗರವಾಗಿದೆ. ರಸ್ತೆಯುದ್ದಕ್ಕೂ ಒಂದು ಭಾಗಆಸ್ಪತ್ರೆಯೊಂದಕ್ಕೆ ಪಾರ್ಕಿಂಗ್‌ ಸ್ಥಳ, ಕಟ್ಟಡ ನಿರ್ಮಾಣಸಾಮಗ್ರಿ ಹಾಕುವ ಸ್ಥಳ, ಜನ ಬಳಕೆಗೆ ಸೀಮಿತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಇನ್ನೇನು ರಸ್ತೆ ನಿರ್ಮಾಣವಾಯಿತುಎನ್ನುವ ಭರವಸೆಯಲ್ಲೇ ವರ್ಷಗಳು ಕಳೆದಿದ್ದು, ಇದೀಗ ಅನುದಾನ ಕೊರತೆಯಿಂದ ಪಾಲಿಕೆಗೆ ರಸ್ತೆ ಮರಳಿಸಲು ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಮುಂದಾಗಿದ್ದಾರೆ.

ಪ್ರತಿಷ್ಠಿತ ರಸ್ತೆಯ ಅವ್ಯವಸ್ಥೆ: ರಾಜ್ಯದ ವಿವಿಧೆಡೆಯಿಂದ ಬಸ್‌ ಗಳು ಈ ಮಾರ್ಗದ ಮೂಲಕ ಹೊಸೂರು ಟರ್ಮಿನಲ್‌ಗೆ ಬಂದು ಹೋಗುತ್ತವೆ. ಈ ರಸ್ತೆಯ ಅವ್ಯವಸ್ಥೆ ಪರಿಣಾಮ ಬಸ್‌ ಟರ್ಮಿನಲ್‌ ಪೂರ್ಣಗೊಂಡರೂ ಒಂದೂವರೆ ವರ್ಷ ಬಸ್‌ ಗಳ ಸ್ಥಳಾಂತರ ಮಾಡಲಿಲ್ಲ. 2020 ಫೆಬ್ರವರಿಯಲ್ಲಿ ಟರ್ಮಿನಲ್‌ ಉದ್ಘಾಟನೆಗೊಂಡಿದ್ದರಿಂದ ಸ್ಥಳೀಯ ಜನಪ್ರತಿನಿಧಿಗಳು, ಬಿಆರ್‌ಟಿಎಸ್‌ಎಂಡಿ, ಜಿಲ್ಲಾಧಿಕಾರಿಯಿಂದ ಒತ್ತಡ ಹಾಕಿ ಬಸ್‌ ಸ್ಥಳಾಂತರಿಸುವ ಕೆಲಸ ಆಯಿತು. ರಸ್ತೆಯ ಪರಿಸ್ಥಿತಿ ಸುಧಾರಿಸದ ಹಿನ್ನೆಲೆಯಲ್ಲಿ ಕೆನರಾ ಹೋಟೆಲ್‌ಮುಂಭಾಗದಿಂದಲೇ ಸಾವಿರಾರು ಬಸ್‌ಗಳು ಹೊಸೂರು ಟರ್ಮಿನಲ್‌ ಪ್ರವೇಶಿಸುತ್ತಿದ್ದು, ಹು-ಧಾ ರಸ್ತೆ ಬಸ್‌ ಸಂಚಾರ ಮುಕ್ತ ಮಾಡಬೇಕು ಎನ್ನುವ ಬಿಆರ್‌ಟಿಎಸ್‌ ಯೋಜನೆಯ ಮೂಲ ಉದ್ದೇಶ ಈಡೇರದಂತಾಗಿದೆ.

ಹೆಚ್ಚುತ್ತಿರುವ ಬಸ್‌ಗಳು :  ಆರಂಭದಲ್ಲಿ 710 ಬಸ್‌ಗಳು, ನಂತರ ಮತ್ತೂಂದಿಷ್ಟು ಬಸ್‌ ಗಳನ್ನು ಸ್ಥಳಾಂತರ ಮಾಡಲಾಯಿತು. ಇದೀಗ ಹಳೇ ಬಸ್‌ ನಿಲ್ದಾಣ ಪುನರ್‌ ನಿರ್ಮಾಣ ಕಾಮಗಾರಿ ಹಿನ್ನೆಲೆಯಲ್ಲಿ ವೇಗದೂತ, ಉಪನಗರ ಸೇರಿ ಬರೋಬ್ಬರಿ 1450 ಬಸ್‌ಗಳು ಹಾಗೂ ನಗರಸಾರಿಗೆಯ 1000ಕ್ಕೂ ಹೆಚ್ಚು ಟ್ರಿಪ್‌ ಸೇರಿ ಸುಮಾರು 2500 ಸಾವಿರ ಬಸ್‌ಗಳು ಇಲ್ಲಿ ಸಂಚಾರ ಮಾಡಲಿವೆ. ಇದರೊಂದಿಗೆಇತರೆ ವಾಹನಗಳು, ಕೋರ್ಟ್‌ಗೆ ಬರುವ ವಕೀಲರು, ಕಕ್ಷಿಗಾರರು,ಜನರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ದಿನ ಕಳೆದಂತೆ ಬಸ್‌ಗಳ ಸಂಖ್ಯೆ ಹೆಚ್ಚಾಗಲಿದ್ದು, ಕಿರಿದಾದ ರಸ್ತೆಯಲ್ಲಿ ಬಸ್‌, ವಾಹನಗಳ ಚಾಲನೆ ಕಷ್ಟ ಕಷ್ಟ.

ಸದ್ಯಕ್ಕೆ ಮುಗಿಯುವ ಲಕ್ಷಣಗಳಿಲ್ಲ :  ರಸ್ತೆಯಲ್ಲಿರುವ ಮೂಲ ಸೌಲಭ್ಯಗಳ ಸ್ಥಳಾಂತರಜವಾಬ್ದಾರಿಯನ್ನು ಬಿಆರ್‌ಟಿಎಸ್‌ ನಿರ್ವಹಿಸಿದೆ. ಆದರೆರಸ್ತೆ ನಿರ್ಮಾಣ ಮಾಡಬೇಕಾದ ರಾಷ್ಟ್ರೀಯ ಹೆದ್ದಾರಿ(ಲೋಕೋಪಯೋಗಿ) ಇಲಾಖೆಯಿಂದ ಮಾತ್ರ ಕಾಮಗಾರಿಪೂರ್ಣ ಆಗಲಿಲ್ಲ. ಸಾರಿಗೆ ಸಂಸ್ಥೆ ಡಿಪೋವರೆಗೆ ಮಾತ್ರಸಿಆರ್‌ಎಫ್‌ ರಸ್ತೆ ಆಗಿದ್ದು, ವಾಣಿ ವಿಲಾಸ ವೃತ್ತದವರೆಗಿನ ರಸ್ತೆ ಅಯೋಮಯವಾಗಿದೆ. ಉಳಿದಿರುವ ರಸ್ತೆಗೆ ಅನುದಾನ ಕೊರತೆ ಉಂಟಾಗಿದ್ದು, ಈ ರಸ್ತೆಯನ್ನು ಪಾಲಿಕೆಗೆ ಮರಳಿಸಲು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮುಂದಾಗಿದ್ದಾರೆ. ಹೀಗಾಗಿ ಸದ್ಯಕ್ಕೆ ಈ ರಸ್ತೆ ನಿರ್ಮಾಣವಾಗುವ ಯಾವ ಲಕ್ಷಣಗಳಿಲ್ಲ.

Advertisement

ನಿರ್ಮಾಣಕ್ಕೆ ಅಡ್ಡಿಯಿದೆ! :

ಸಂಚಾರಕ್ಕೆ ತೊಂದರೆಯಾಗಿರುವ ಭಾಗದ ರಸ್ತೆ ನಿರ್ಮಾಣಕ್ಕೆ ಸ್ಲಂ ಅಡ್ಡಿಯಾಗಿದ್ದು, ಸ್ಮಾರ್ಟ್‌ಸಿಟಿ ಯೋಜನೆಯಡಿ ಅವರಿಗೆ ಮನೆ ನಿರ್ಮಾಣ ಮಾಡಿ ಸ್ಥಳಾಂತರ ಮಾಡಬೇಕು ಎನ್ನುವುದು ಸ್ಥಳೀಯ ಜನಪ್ರತಿನಿಧಿಗಳ ಲೆಕ್ಕಾಚಾರವಾಗಿದೆ. ಆದರೆ ಮೂರು ವರ್ಷ ಕಳೆದರೂಈ ವಿಚಾರದಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಆದರೆ ವಾಣಿ ವಿಲಾಸ ರಸ್ತೆಯಿಂದ ಕೋರ್ಟ್‌ ಕಡೆ ಹೋಗುವಎಡ ಭಾಗದಲ್ಲಿ ಸರಕಾರಿ ಜಾಗೆಯಿದ್ದು, ತಾತ್ಕಾಲಿಕರಸ್ತೆಯನ್ನಾದರೂ ನಿರ್ಮಾಣ ಮಾಡಿದರೆ ಸುಗಮ ಸಂಚಾರ ಕಲ್ಪಿಸಿದಂತಾಗಲಿದೆ. ಹೊಸ ಯೋಜನೆಗಳಿಗೆ ನೀಡುವ ಒತ್ತುಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪೂರ್ಣಗೊಳಿಸುವ ಇಚ್ಛಾಶಕ್ತಿ ಇಲ್ಲದಿರುವುದು ಈ ಸಮಸ್ಯೆಗೆ ಕಾರಣವಾಗಿದೆ.

ರಸ್ತೆ ಅಗಲೀಕರಣಕ್ಕೆ ಸ್ಲಂ ಅಡ್ಡಿಯಾಗಿದ್ದು, ಸ್ಮಾರ್ಟ್‌ಸಿಟಿ ಅಡಿಯಲ್ಲಿ ಮನೆ ನಿರ್ಮಿಸಿದ ನಂತರ ಅವರನ್ನು ಸ್ಥಳಾಂತರ ಮಾಡುವವರೆಗೂ ಕಷ್ಟವಾಗಲಿದೆ. ರಸ್ತೆ ಸುಧಾರಣೆಯಾಗುವವರೆಗೂ ಜನರು ಸುಧಾರಿಸಿಕೊಳ್ಳಬೇಕು. ಆದಷ್ಟು ಬೇಗ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಳಿಸುವಂತೆ ಸೂಚನೆ ನೀಡುತ್ತೇನೆ. -ಜಗದೀಶ ಶೆಟ್ಟರ, ಜಿಲ್ಲಾ ಉಸ್ತುವಾರಿ ಸಚಿವ

ಬಿಆರ್‌ಟಿಎಸ್‌ನಿಂದ ಮೂಲಸೌಲಭ್ಯಗಳ ಸ್ಥಳಾಂತರ ಮಾಡಲಾಗಿದ್ದು, ರಾಷ್ಟ್ರೀಯ ಹೆದ್ದಾರಿ ಇಲಾಖೆವತಿಯಿಂದ ರಸ್ತೆ ನಿರ್ಮಾಣವಾಗಬೇಕಾಗಿದೆ. ಬಸ್‌ಗಳ ಸಂಖ್ಯೆಹೆಚ್ಚಾಗುತ್ತಿದ್ದು, ವಾಹನಗಳ ಓಡಾಟಕ್ಕೆ ತೀರಾ ಕಷ್ಟವಾಗುತ್ತಿದೆ.ಖಾಲಿಯಿರುವ ಸ್ಥಳದಲ್ಲಿ ರಸ್ತೆ ನಿರ್ಮಾಣವಾದರೆ ಸುಗಮ ಸಂಚಾರ ಸಾಧ್ಯವಾಗಲಿದೆ. ಅನುದಾನ ನೀಡಿದರೆ ಬಿಆರ್‌ ಟಿಎಸ್‌ ವತಿಯಿಂದ ನಿರ್ಮಾಣ ಮಾಡಲಾಗುವುದು.-ಕೃಷ್ಣ ಬಾಜಪೇಯಿ, ಎಂಡಿ, ಬಿಆರ್‌ಟಿಎಸ್‌ ಹಾಗೂ ವಾಕರಸಾ ಸಂಸ್ಥೆ

ಕೋರ್ಟ್‌ ಉದ್ಘಾಟನೆ ಸಂದರ್ಭದಲ್ಲಿ ಹೈಕೋರ್ಟ್‌ ನ್ಯಾಯಾಧೀಶರು ರಸ್ತೆ ಬಗ್ಗೆ ಪ್ರಸ್ತಾಪಿಸಿದ್ದರು.ಸ್ಥಳೀಯ ನ್ಯಾಯಾಂಗ ಇಲಾಖೆಯಿಂದ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ವಕೀಲರಸಂಘದಿಂದಲೂ ಮನವಿ ಮಾಡಲಾಗಿದೆ. ವೋಟ್‌ ಬ್ಯಾಂಕ್‌ರಾಜಕಾರಣ, ಅಧಿಕಾರಿಗಳ ನಿರ್ಲಕ್ಷé ಬದಿಗಿಟ್ಟು ಮೊದಲು ರಸ್ತೆ ಅಗಲೀಕರಣ ಮಾಡಬೇಕು. ನಿರ್ಲಕ್ಷ್ಯ ಮಾಡಿದರೆ ವಕೀಲರು ಹೋರಾಟಕ್ಕೆ ಇಳಿಯಬೇಕಾಗುತ್ತದೆ. –ಅಶೋಕ ಅರ್ಣೇಕರ, ಪ್ರಧಾನ ಕಾರ್ಯದರ್ಶಿ, ಹುಬ್ಬಳ್ಳಿ ವಕೀಲರ ಸಂಘ

 

-ಹೇಮರಡ್ಡಿ ಸೈದಾಪುರ

Advertisement

Udayavani is now on Telegram. Click here to join our channel and stay updated with the latest news.

Next