Advertisement

UV Fusion: ಎಲ್ಲರೊಳಗೊಂದಾಗಿ ಹರಿಯುವ ತುಂಗಭದ್ರೆ

12:53 PM Sep 10, 2023 | Team Udayavani |

ವಿಷ್ಣು ವರಾಹಾವತಾರ ಧರಿಸಿ ಹಿರಣ್ಯಾಕ್ಷನನ್ನು ವದಿಸಿದ. ಯುದ್ಧದಿಂದ ಬಹಳವಾಗಿ ದಣಿದಿದ್ದ ವರಾಹರೂಪಿ ವಿಷ್ಣು, ಭೂಲೋಕಕ್ಕಿಳಿದು ಪಶ್ಚಿಮ ಘಟ್ಟದ ಒಂದು ಪರ್ವತದ ಮೇಲೆ ದಣಿವಾರಿಸುತ್ತಿದ್ದನಂತೆ ಅದುವೇ “ವರಾಹ ಪರ್ವತ’. ಅವನ ಬೆವರಿನಿಂದ ಉದ್ಭವಿಸುವ ನದಿಗಳೇ ತುಂಗಾ – ಭದ್ರ ಎಂಬುದು ಪ್ರತೀತಿ.

Advertisement

ದಟ್ಟ ಹರಿದ್ವರ್ಣ ಪಶ್ಚಿಮಘಟ್ಟ ತಪ್ಪಲಿನ ಸಂಸೆಯ ಗಂಗಾಮೂಲದಿಂದ ಹುಟ್ಟುವ ತುಂಗಾ – ಭದ್ರರು, ಬೇರೆ ಬೇರೆ ದಿಕ್ಕುಗಳಲ್ಲಿ ಹರಿದು ಚಿಕ್ಕಮಗಳೂರು, ಶಿವಮೊಗ್ಗಗಳಲ್ಲಿ ಬೆಳೆದು, ಮತ್ತೆ ಕೂಡಲಿಯಲ್ಲಿ ಕೂಡಿ ಇಬ್ಬರು ಒಂದಾಗಿ – ತುಂಗಾಭದ್ರೆಯಾಗಿ ನವ ಚೈತನ್ಯದೊಂದಿಗೆ ನಿತ್ಯ ಕರ್ಮದ ಹಾದಿಗೆ ಮರಳುವಳು.

ಎಲ್ಲರೂ ನನ್ನವರೆ ಎನ್ನುತ್ತಾ, ಎಲ್ಲರ ದುಃಖ-ದುಮ್ಮಾನಗಳಿಗೆ ಶಾಂತಿಯಿಂದಲೇ ಕಿವಿಯೋಡ್ಡುತ್ತ, ರೈತರ ಜಮೀನುಗಳಿಗೆ ಜೀವ ನೀಡುತ್ತ, ತನ್ನ ಮಕ್ಕಳ ಈಜಾಟ – ತುಂಟಾಟಗಳನ್ನು ಖುಷಿಯಿಂದಲೇ ಕಾಣುತ್ತಾ, ದನ ಕರುಗಳನ್ನು ಕರೆದು-ಕರೆದು ಹಾಲುಣಿಸುತ್ತ, ಜೀವ ಸಂಕುಲವನ್ನು ತನ್ನ ಒಡಲಲ್ಲೇ ಪೋಷಿಸುತ್ತಾ, ತಾಯಂದಿರ ತಾಯಾಗಿ ಹರಿಯುವಳು ತುಂಗಭದ್ರೆ.

ಬಯಲುಸೀಮೆಯವರು ಹೊಸಪೇಟೆಯಲ್ಲಿ ಅವಳಿಗೆ ಅಡ್ಡಲಾಗಿ ನಿಂತು, ಕೈಮುಗಿದು ನಮ್ಮ ಕಡೆಗೂ ಬಾರವ್ವ ಎಂದಿದ್ದಕ್ಕೆ ಮಾತೃವಾತ್ಸಲ್ಯವೇ ಮೊದಲಾಗಿ, ಜೀವನಾಡಿಯಾಗಿ ಹರಿದು ಹಾಲುಣಿಸುತ್ತಿರುವ ಮಹಾತಾಯಿ ಈ ತುಂಗಭದ್ರೆ. ಕೊಪ್ಪಳ, ರಾಯಚೂರಿನ ಜನಮನಕೆ ಎಡದಂಡೆ ಕಾಲುವೆಯಾಗಿ ಬಂದು ತಣ್ಣನೆಯ ಬದುಕು ಕಟ್ಟಿ ಕೊಟ್ಟ ಸಿರಿವಂತಳಿವಳು.

ವಿಜಯನಗರದ ಗತವೈಭವ ಕಂಡರೂ, ವಿರುಪಾಕ್ಷನ ಸಾನಿಧ್ಯದಲ್ಲಿ ಸ್ಥಾನ ಪಡೆದರೂ, ತುಂಗಭದ್ರೆ ಈಗಲೂ ಅದೇ ಶಾಂತತೆ, ಅದೆ ಸೌಮ್ಯತೆಯಿಂದ ದಾವಣಗೆರೆ, ಬಳ್ಳಾರಿ, ವಿಜಯನಗರಗಳ ಜನ – ಜೀವನಕ್ಕೆ ಜೀವ ಜಲವಾಗಿ ಸಾಗಿ, ಕರ್ನಾಟಕದ ಸರಹದ್ದನ್ನೂ ಮೀರಿ ಆಂಧ್ರವನ್ನೂ ದಾಟಿ, ತೆಲಂಗಾಣದಲ್ಲಿ ತನ್ನ ಗೆಳತಿ ಕೃಷ್ಣೆಯ ಜತೆ ಸೇರಿ ಬಂಗಾಲ ಕೊಲ್ಲಿಯ ವಿಶಾಲತೆಯಲ್ಲಿ ವಿಲೀನಳಾಗುವಳು.

Advertisement

ಡಿವಿಜಿಯವರು ಎಲ್ಲರೊಳಗೊಂದಾಗು ಮಂಕುತಿಮ್ಮ ಎಂದಂತೆ ತುಂಗಭದ್ರಾ ಎಲ್ಲೋ ಹುಟ್ಟಿ, ಇನ್ನೆಲ್ಲೋ ಬೆಳೆದು-ಹರಿದು, ಮತ್ತೆಲ್ಲಿಗೋ ಸೇರುವ ಇವಳು ಎಲ್ಲರಲೂ ಒಂದಾಗಿಹಳು.

-ಲಿಂಗರಾಜ ಧಾರವಾಡ

Advertisement

Udayavani is now on Telegram. Click here to join our channel and stay updated with the latest news.

Next