Advertisement

UV Fusion: ಆರಾಮಕ್ಕಿರಲಿ  ವಿರಾಮ…

02:25 PM May 04, 2024 | Team Udayavani |

ಸುಲಭವಾದ ಮಾರ್ಗವನ್ನು ಮೀರಿದ ಸಾಹಸವು ಹೊಸ ಅನುಭವಗಳು, ದೃಷ್ಟಿಕೋನಗಳಿಗೆ ಬಾಗಿಲು ತೆರೆಯುತ್ತದೆ. ಇದು ಮನುಷ್ಯ ತನ್ನ ಆರಾಮ ವಲಯಗಳ ಮಿತಿಯಿಂದ ಹೊರಬರಲು ಮತ್ತು ಪ್ರಪಂಚದ ವಿಶಾಲತೆಯನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತದೆ.

Advertisement

ದೂರದ ದೇಶಗಳಿಗೆ ಪ್ರಯಾಣಿಸುವುದು, ಹೊಸ ವೃತ್ತಿ ಜೀವನದ ಹಾದಿಯನ್ನು ಅನುಸರಿಸುವುದು, ಪರಿಚಿತ ಗತಿಗಳ ಹೊರಗೆ ಹೆಜ್ಜೆ ಹಾಕುವುದು. ಇದು ಸೃಜನಶೀಲತೆ ಕುತೂಹಲ ಮತ್ತು ನಮ್ಮ ಸುತ್ತಲಿನ ಪ್ರಪಂಚದ ವಿಶಾಲವಾದ ತಿಳುವಳಿಕೆಯನ್ನು ಬೆಳೆಸುತ್ತದೆ.

ಎತ್ತರದ ಕಡೆಯಿಂದ ತಗ್ಗಿನ ಕಡೆಗೆ ಸುಲಭವಾಗಿ ಈಜಬಹುದು. ಆದರೆ ತಗ್ಗಿನ ಕಡೆಯಿಂದ ಎತ್ತರದ ಕಡೆಗೆ ಈಜಲು ಸಾಕಷ್ಟು ಶ್ರಮ, ಕೌಶಲ, ಧೈರ್ಯ ಬೇಕಾಗುತ್ತದೆ. ಅದೇ ರೀತಿ ಬೆಟ್ಟದಿಂದ ಕೆಳಗಡೆ ಇಳಿಯಲು ತುಂಬಾ ಸುಲಭ, ಆದರೆ ಬೆಟ್ಟ ಹತ್ತುವುದು ತ್ರಾಸದಾಯಕ, ಪರಿಶ್ರಮಪೂರಿತವಾದದ್ದು.

ನಮ್ಮ ಜೀವನಯಾನದಲ್ಲೂ ಅಷ್ಟೇ, ಹಲವಾರು ಸುಲಭವಾದ ಕೆಲಸಗಳನ್ನು ಸಲೀಸಾಗಿ ಮಾಡುತ್ತೇವೆ. ಆದರೆ ಅವುಗಳು ಬಹುತೇಕ ಸಂದರ್ಭಗಳಲ್ಲಿ ನಮಗೆ ಸಂತೋಷವನ್ನೇನೂ ಉಂಟು ಮಾಡುವುದಿಲ್ಲ. ಏಕೆಂದರೆ ಬೆಟ್ಟದಿಂದ ಕೆಳಗಿಳಿಯುವಂತೆ ಮತ್ತು ಎತ್ತರದ ಕಡೆಯಿಂದ ತಗ್ಗಿನ ಕಡೆಗೆ ಈಜಿದಂತೆ. ಎತ್ತರದ ಸ್ಥಾನಕ್ಕೆ ಹೋಗಲು, ಕಷ್ಟಗಳನ್ನು ಎದುರಿಸಲು, ಮಾನಸಿಕ ಸಿದ್ಧತೆ, ಪರಿಶ್ರಮ ಹಾಗೂ ಕೌಶಲಗಳ ಅಗತ್ಯವಿದೆ.

ಬುದ್ಧ ಹೇಳುತ್ತಾನೆ ಸುಲಭವಾಗಿ ಕೆಟ್ಟ ಕೆಲಸಗಳನ್ನು ಮಾಡಬಹುದು. ಇದರಿಂದ ಬೇರೆಯವರಿಗೂ ತೊಂದರೆ, ನಿನಗೂ ತೊಂದರೆ. ಆದರೆ ಒಳ್ಳೆಯ ಕೆಲಸಗಳನ್ನು ಮಾಡಲು ಧೈರ್ಯ, ಚಾಣಾಕ್ಷತೆ, ಕಾರ್ಯಕ್ಷಮತೆ ಬೇಕಾಗುತ್ತದೆ. ಒಳ್ಳೆಯತನವು ನಿನಗೂ-ಬೇರೆಯವರಿಗೂ ಸಂತೋಷವನ್ನುಂಟು ಮಾಡುತ್ತದೆ. ಎಷ್ಟೊಂದು ಮಾರ್ಗದರ್ಶನದ ಮಾತುಗಳಲ್ಲವೇ.. ನಮ್ಮೆದುರಿಗೆ ಇಷ್ಟವಾದ ಹಾಗೂ ಕಷ್ಟಕರವಾದ ಎರಡು ಕೆಲಸಗಳನ್ನು ಇಟ್ಟಾಗ, ಸಾಮಾನ್ಯವಾಗಿ ನಮ್ಮ ಮನಸ್ಸು ಸುಲಭವಾದ ಕೆಲಸವನ್ನೇ ಆಯ್ದುಕೊಳ್ಳಲು ಇಚ್ಛಿಸುತ್ತದೆ.

Advertisement

ನಿಮ್ಮ ತೊಡೆಯ ಮೇಲೆ ಒಂದು ಸೊಳ್ಳೆ ಕೂತು ಕಚ್ಚುತ್ತಿರಬೇಕಾದರೆ ನೀವೇನು ಮಾಡುವಿರಿ? ಖಂಡಿತ ಹೊಡೆದು ಸಾಯಿಸುವಿರಿ. ಆದರೆ ಅದರ ಜೀವವನ್ನು ಉಳಿಸಲು ಸಂಯಮ, ಪ್ರೀತಿ, ತಾಳ್ಮೆ ಬೇಕಾಗುತ್ತದೆ. ಸಾಯಿಸುವುದು ಸುಲಭ, ಬದುಕಿಸುವುದು ಕಷ್ಟ. ಪ್ರತಿಕೂಲಕರ ಪರಿಸ್ಥಿತಿಯನ್ನು ಎದುರಿಸುವ ಸಂದರ್ಭ ಬಂದಾಗ ನಾಲಗೆ ತುದಿಯಿಂದ ಅನಾಯಾಸವಾಗಿ ಬಹುಬೇಗನೆ ಸುಳ್ಳುಗಳು ಹುಟ್ಟಿಕೊಳ್ಳುತ್ತವೆ. ಅಂತಹ ಪರಿಸ್ಥಿತಿಯನ್ನು ಎದುರಿಸಲು ಧೈರ್ಯ, ಜಾಣ್ಮೆ, ಪ್ರಾಮಾಣಿಕತೆ, ಸತ್ಯನಿಷ್ಠತೆ ಬೇಕಾಗುತ್ತದೆ.

ಬಹುಕಾಲದವರೆಗೆ ತನ್ನ ಶಿಷ್ಯರನ್ನು ಸನ್ಮಾರ್ಗದಲ್ಲಿ ತಿದ್ದಿ-ತೀಡಿದ ಸಾಕ್ರೆಟಿಸ್‌ನನ್ನು ಒಬ್ಬ ಪ್ರಶ್ನಿಸಿದ, “ಸಾಕ್ರೆಟಿಸ್‌, ನಿನ್ನ ಶಿಷ್ಯರನ್ನೆಲ್ಲ ತುಂಬಾ ಸಭ್ಯರನ್ನಾಗಿ ರೂಪಿಸಿರುವೆ ಎಂದು ಬೀಗುತ್ತಿರುವೆಯಲ್ಲ, ಕೆಲವು ದಿನಗಳ ಮಟ್ಟಿಗೆ ನನ್ನ ಜತೆ ಅವರನ್ನು ಕಳುಹಿಸು, ಅವರನ್ನೆಲ್ಲ ಹಾಳು ಮಾಡಿ ಕಳುಹಿಸುವೆ.’ ಸಾಕ್ರೆಟಿಸ್‌ ನಸುನಗುತ್ತಾ, “ಒಂದು ಬಂಡೆಯನ್ನು ಸ್ವಲ್ಪ ಸ್ವಲ್ಪವೇ ಉರುಳಿಸಿಕೊಂಡು ಪರ್ವತದೆತ್ತರಕ್ಕೆ ನಡೆಸುತ್ತಿದ್ದೇನೆ. ಅಲ್ಲಿಂದ ತಳ್ಳುವುದಕ್ಕೆ ಶ್ರಮವೇ ಬೇಕಾಗಿಲ್ಲ. ಸೂಜಿ ಮೊನೆ ತಾಕಿದರೂ ಆ ಬಂಡೆ ಉರುಳಿಕೊಂಡು ಕೆಳಗೆ ಬರುತ್ತದೆ. ಮೇಲಕ್ಕೆ ಎತ್ತುವುದು ಪ್ರಯಾಸ, ಕೆಳಗೆ ಉರುಳಿಸುವುದು ತುಂಬಾ ಸುಲಭ. ಮೇಲಿನಿಂದ ಕೆಳಕ್ಕೆ ತಳ್ಳಲು ನಿನ್ನ ಪಾಂಡಿತ್ಯದ ಅಗತ್ಯವಿದೆಯೇ? ಎನ್ನುತ್ತಾನೆ. ಪ್ರಶ್ನಿಸಿದವ ಮರು ಮಾತನಾಡದೆ ಜಾಗ ಖಾಲಿ ಮಾಡುತ್ತಾನೆ.

ಒಳ್ಳೆಯದನ್ನು ಮಾಡಲು ನಮ್ಮ ಮನಸ್ಸು ಸದಾ ಒಳ್ಳೆಯದರ ಕಡೆಗೆ ಚಿಂತಿಸಬೇಕಾಗುತ್ತದೆ. ಕೆಟ್ಟದ್ದನ್ನು ಮಾಡಲು ಯಾವುದೇ ಚಿಂತನೆ ಪ್ರಾಯೋಗಿಕತೆಯ ಅವಶ್ಯಕತೆ ಇರುವುದಿಲ್ಲ. ಸುಲಭ ಸಾಧ್ಯವಾದ ಕೆಡುಕಿನ ವರ್ತನೆ, ಭವಿಷ್ಯವನ್ನು ಹಾಳುಗೆಡುವುತ್ತದೆ. ಇಂದು ಸ್ವಲ್ಪ ಕಷ್ಟವಾದರೂ ಭವಿಷ್ಯದಲ್ಲಿ ಒಳ್ಳೆಯ ಫ‌ಲಿತಾಂಶವನ್ನು ಕೊಡುವುದು ಸಕಾರಾತ್ಮಕ ಚಿಂತನೆ. ಮನುಷ್ಯ ತಾಂತ್ರಿಕತೆಯಲ್ಲಿ ಎಷ್ಟೇ ಮುಂದುವರೆದಿದ್ದರೂ, ದಯೆ, ಕರುಣೆ, ಪ್ರೀತಿ, ವಾತ್ಸಲ್ಯಗಳು ಮನದಲ್ಲಿ ಮನೆ ಮಾಡಬೇಕಾಗಿದೆ.

ಹೊಟ್ಟೆಯಲ್ಲಿನ ಹಸಿವು, ಮನಸ್ಸಿನಲ್ಲಿಯ ಮಮತೆ ಗುಟ್ಟು ಕೀಲುಗಳಿವು ಸೃಷ್ಟಿ ಯಂತ್ರದಲ್ಲಿ ಕಟ್ಟಿಪವು ಕೋಟೆಗಳ, ಕೀಳಿಪವು ತಾರೆಗಳ ಸೊಟ್ಟಾಗಿಪವು ನಿನ್ನ – ಮಂಕುತಿಮ್ಮ ಎನ್ನುವ ಡಿವಿಜಿಯವರ ಮಾತಿನಂತೆ ಏನನ್ನಾದರೂ ಮಾಡಲೇಬೇಕೆಂದು ತೀರ್ಮಾನಿಸಿದಾಗ ಕೋಟೆಗಳನ್ನು ಕಟ್ಟ ಬಹುದು, ಅಂಗೈನಲ್ಲಿ ತಾರೆಗಳನ್ನು ಹಿಡಿಯಬಹುದು. ಹರಿವ ನೀರಿ ನೊಟ್ಟಿಗೆ ಸಾಗಲು ಕಸ ಕಡ್ಡಿಸಾಕು ಆದರೆ ನೀರಿಗೆ ಎದುರಾಗಿ ಈಜಲು ಜೀವಂತ ಮೀನೇಬೇಕು.

- ಕೆ. ಟಿ. ಮಲ್ಲಿಕಾರ್ಜುನಯ್ಯ

ಶಿಕ್ಷಕ, ಕಳ್ಳಿಪಾಳ್ಯ ಕೊರಟಗೆರೆ

Advertisement

Udayavani is now on Telegram. Click here to join our channel and stay updated with the latest news.

Next