Advertisement

UV Fusion: ಮಂಗನ ಕೈಯಲ್ಲಿದೆ ಮಾಣಿಕ್ಯ

03:52 PM Jul 27, 2024 | Team Udayavani |

ಮಂಗನ ಕೈಯಲ್ಲಿ ಮಾಣಿಕ್ಯ ಎಂಬುದು ಚಿರಪರಿಚಿತ ಗಾದೆ ಮಾತು. ಮಂಗನ ಕೈಗೆ ನೀವು ಬಾಳೆಹಣ್ಣನ್ನು ಕೊಟ್ಟರೆ ಅದು ಕ್ಷಣಮಾತ್ರದಲ್ಲಿ ಹೊಟ್ಟೆ ಸೇರುತ್ತದೆ. ಆದೇ ನೀವು ಬೆಲೆ ಬಾಳುವ ರತ್ನವನ್ನಿಟ್ಟಾಗ ಅದು ಮಂಗನ ಗಮನಕ್ಕೆ ಬಂದರೂ ಕುತೂಹಲದ ಭಾವ ವ್ಯಕ್ತಪಡಿಸುತ್ತದೆ. ಏಕೆಂದರೆ, ಅದರ ಉಪಯೋಗ ಮಂಗನಿಗೆ ತಿಳಿದಿರುವುದಿಲ್ಲ, ಬದಲಾಗಿ ಅದರ ಪ್ರಕಾರ ಮಾಣಿಕ್ಯ ಕೂಡ ಆಟಿಕೆಗೆ ಸಮವಾಗಿರುತ್ತದೆ.

Advertisement

ವಸ್ತುವಿನ ಉಪಯೋಗ ತಿಳಿಯದೆಯೇ ಅದು ಒಬ್ಬನ ಕೈಯಲ್ಲಿದೆ ಎಂದರೆ ಆ ವಸ್ತು ತನ್ನ ಬೆಲೆಯನ್ನು ಕಳೆದುಕೊಂಡಂತೆಯೇ ಸರಿ. ಆದರೆ ವೈಜ್ಞಾನಿಕಲೋಕದಲ್ಲಿ ಈ ಗಾದೆ ಮಾತಿಗೆ ಬೇರೆಯದೇ ಅರ್ಥವನ್ನು ಕಲ್ಪಿಸ ಬಹುದಾಗಿದೆ. ಹೇಗೆಂದರೆ ಔಷಧಲೋಕಕ್ಕೆ ಇಂದು ಮಂಗನ ಕೊಡುಗೆ ಅಪಾರವಾಗಿದೆ. ಸಂಶೋಧನಾಕಾರರ ಪ್ರಕಾರ ಇಂದು “ಔಷಧೀಯ ಸಸ್ಯಗಳು’ ಮಂಗನ ಕೈಯಲ್ಲಿರುವ ಮಾಣಿಕ್ಯವೇ ಆಗಿದೆ!

ಅದೊಂದು ಮಳೆಗಾಲದ ದಿನ. ಬೆಳಗ್ಗೆ ಮನೆಯ ಸುತ್ತ ಅಲೆದಾಡುತ್ತಿರುವಾಗ ಮಂಗಗಳ ದಂಡೊಂದು ಹಲಸಿನ ಮರ, ತೆಂಗಿನ ಮರಗಳಿಗೆ ದಾಳಿ ಮಾಡಿತು. ಸ್ವಲ್ಪ ಹೊತ್ತಿನಲ್ಲಿ ಒಂದು ಮಂಗ ಮರದಿಂದ ಕೆಳಗೆ ಇಳಿದು ಪಪ್ಪಾಯ ಗಿಡದ ಎಲೆಗಳನ್ನು ಕಿತ್ತು ತಿನ್ನಲು ಪ್ರಾರಂಭಿಸಿತು.

ಈ ಹಿಂದೆ ಈ ದೃಶ್ಯವನ್ನು ಹಲವು ಬಾರಿ ಕಂಡಿದ್ದೆನಾದರೂ ಅಂದು ಆ ಕುರಿತು ವಿಶೇಷ ಆಸಕ್ತಿಯನ್ನು ಬೆಳೆಸಿ ಅದರ ಬಗ್ಗೆ ಮಾಹಿತಿಯನ್ನು ಹುಡುಕಾಡಿದೆ. ಆಗಲೇ ಮಂಗ, ಚಿಂಪಾಂಜಿ ಮೊದಲಾದ ಪ್ರçಮೇಟ್‌ ವರ್ಗಕ್ಕೆ ಸೇರಿದ ಸಸ್ತನಿಗಳಲ್ಲಿಯೂ ಒಬ್ಬ “ವೈದ್ಯ’ನು ಅಡಗಿದ್ದಾನೆ ಎಂಬ ಅಚ್ಚರಿಯ ಸಂಗತಿ ಅರಿವಿಗೆ ಬಂತು.

ಹೌದು, ನಾಗರಿಕತೆ, ಸಂಶೋಧನೆ ತಂತ್ರಜ್ಞಾನ ಮೊದಲಾದ ಕ್ಷೇತ್ರಗಳಲ್ಲಿ ಮಾನವ ಎಷ್ಟೇ ಮುಂದಿದ್ದರೂ ಕೆಲವೊಂದು ವಿಷಯಗಳಲ್ಲಿ ಭೂಮಿಯಲ್ಲಿರುವ ಇತರ ಜೀವರಾಶಿಗಳು ನಮಗೆ ಸಡ್ಡು ಹೊಡೆದಿವೆ. ಮನುಷ್ಯನ ಕಾಯಿಲೆಯನ್ನು ಗುಣಪಡಿಸಲು ಇಂದು ವೈದ್ಯನಿದ್ದಾನೆ. ಆದರೆ ಪ್ರಾಣಿಗಳು ಸ್ವತಃ ತಾವೇ ಪ್ರಕೃತಿಯಲ್ಲಿ ಅಡಗಿರುವ ಔಷಧಗಳನ್ನು ಜಾಲಾಡಿ ಕಾಯಿಲೆಯನ್ನು ವಾಸಿ ಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಒಳ್ಳೆಯ ದೃಷ್ಟಾಂತ ಹೇಳುವುದಾದರೆ ಡೆಂಗ್ಯೂ ಜ್ವರಕ್ಕೆ ಪಪ್ಪಾಯ ಎಲೆಯ ರಸದ ಬಳಕೆ. ಈ ಬೆಳವಣಿಗೆಗೆ ಕಾರಣವೇ ಸಂಶೋಧನಾಕಾರರು ಮಂಗಗಳು ಪಪ್ಪಾಯ ಎಲೆಯ ಸೇವನೆಯನ್ನು ಗಮನಿಸಿ ಅದರ ಕಾರಣವನ್ನು ಸಂಶೋಧಿಸಿದ್ದು. ಪಪ್ಪಾಯ ಎಲೆಯು ರಕ್ತದಲ್ಲಿರುವ ಪ್ಲೇಟ್ಲೆಟ್‌ ಸಂಖ್ಯೆಯನ್ನು ಹೆಚ್ಚಿಸುವ ಕಾರಣಕ್ಕೆ ಇದನ್ನು ಡೆಂಗ್ಯೂ ಜ್ವರಕ್ಕೆ ಔಷಧಿಯಾಗಿ ಬಳಸುತ್ತಾರೆ.

Advertisement

ಹೀಗಾಗಿ ಇದನ್ನು ಮಂಗಗಳು ಸೇವಿಸುವುದು. ಹಾಗೆಯೇ ಒಂದು ಜಾತಿಗೆ ಸೇರಿದ ಮಂಗ ಕಾಳುಮೆಣಸಿನ ಎಲೆಯನ್ನು ಕೀಟ ನಿವಾರಕವಾಗಿ ಉಪಯೋಗಿಸುತ್ತದೆ. ಈ ಮಂಗವು ಎಲೆಯನ್ನು ಮುಖದ ತುಂಬಾ ಉಜ್ಜಿಕೊಳ್ಳುವುದರಿಂದ ಕೀಟಗಳಿಂದ ಮುಕ್ತಿ ಪಡೆಯುತ್ತದೆ. ಮಾತ್ರವಲ್ಲದೆ, ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾಗಳಿಂದ ತಗಲುವ ರೋಗಗಳಿಂದ ರಕ್ಷಣೆಯನ್ನು ಪಡೆಯುತ್ತದೆ ಎಂಬುದು ಸಂಶೋಧನೆಯಿಂದ ಬೆಳಕಿಗೆ ಬಂದಿದೆ.

ಮಂಗಗಳಿಗೂ ಮಾನವನಿಗೂ ಬಹುತೇಕ ಸಾಮ್ಯತೆ ಇರುವುದರಿಂದ ಯಾವುದೇ ಔಷಧಿಯನ್ನು ಮಾನವನಿಗೆ ಪ್ರಯೋಗಿಸುವ ಮುನ್ನ ಮಂಗಗಳ ಮೇಲೆ ಮೊದಲು ಪ್ರಯೋಗಿಸುತ್ತಾರೆ. ಅದೇ ರೀತಿ ನಿಸರ್ಗದಲ್ಲಿ ಮಂಗಗಳ ವರ್ತನೆ, ಅವುಗಳ ಆಹಾರ ಪದ್ಧತಿ, ಔಷಧೀಯ ಸಸ್ಯಗಳ ಸೇವನೆ ಹೀಗೆ ಹಲವಾರು ಅಂಶಗಳನ್ನು ಗಮನದಲ್ಲಿಟ್ಟು ಅಧ್ಯಯನವನ್ನು ಮಾಡುತ್ತಾರೆ. ಇದೇ ಕಾರಣದಿಂದ ರಂಗೂಟಾನ್‌, ಚಿಂಪಾಂಜಿ ಮೊದಲಾದ ಸಸ್ತನಿಗಳು ಇಂದು ಔಷಧೀಯಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿವೆ.

ಈ ಕುರಿತಂತೆ ಕೆ. ಎನ್‌. ಗಣೇಶಯ್ಯ ಅವರು “ಕಪಿಲಿಪಿಸಾರ’ ಎಂಬ ಕಾದಂಬರಿಯಲ್ಲಿ ವೈದ್ಯಕೀಯ ಸಂಶೋಧನೆಯಲ್ಲಿ ಮಂಗಗಳ ಪ್ರಾಮುಖ್ಯತೆಯ ಬಗೆಗಿನ ಅಚ್ಚರಿಯ ಸಂಗತಿಗಳನ್ನು ವಿವರಿಸಿದ್ದಾರೆ. ಸಮಸ್ಯೆ ಎಲ್ಲಿ ಉದ್ಭವವಾಗುತ್ತದೆಯೋ ಪರಿಹಾರವೂ ಕೂಡ ಅಲ್ಲಿ ಹುದುಗಿರುತ್ತದೆ. ಸಮಸ್ಯೆಯನ್ನು ಅರ್ಥೈಸಿಕೊಂಡು ಬಿಡಿಸಿದರೆ ಉತ್ತರದ ಬಾಗಿಲು ತಾನಾಗಿಯೇ ತೆರೆಯುತ್ತದೆ.

ಅದೇ ರೀತಿ ಕಾಯಿಲೆ ಎಲ್ಲಿ ಹುಟ್ಟುತ್ತದೆಯೋ ಅದಕ್ಕೆ ಔಷಧಿಯು ಕೂಡ ಅಲ್ಲಿಯೇ ಅಡಗಿರುತ್ತದೆ. ಹಿತ್ತಲ ಗಿಡ ಮದ್ದಲ್ಲ ಎಂಬ ಗಾದೆ ಮಾತು ಕೂಡ ಇಂದು ಬೇರೆ ರೂಪವನ್ನು ತಾಳಿದೆ. ಪ್ರತಿಯೊಂದು ಸಸ್ಯಕ್ಕೂ ತನ್ನದೇ ಆದ ಔಷಧೀಯ ಗುಣವಿರುತ್ತದೆ. ಅದರ ಹುಟ್ಟಿಗೆ ಕಾರಣವಿರುತ್ತದೆ. ಆ ಕಾರಣವನ್ನು ಕಂಡುಕೊಂಡರೆ ಇಂದು ಪ್ರಕೃತಿಯಲ್ಲಿ ಜೀವನವು ಸುಗಮವಾಗಿ ಸಾಗುತ್ತದೆ.

-ಮಧುರ

ಕಾಂಚೋಡು

Advertisement

Udayavani is now on Telegram. Click here to join our channel and stay updated with the latest news.

Next