Advertisement

ಉತ್ತರಕಾಂಡದ ಪೂರ್ವರಂಗ

03:45 AM Jan 15, 2017 | Harsha Rao |

ಉತ್ತರಕಾಂಡ ಕಾದಂಬರಿಯು ತನ್ನ ಹೆಸರಿನಿಂದಲೇ ತಿಳಿಸುವಂತೆ ರಾಮಾಯಣದ ಕಡೆಯ ಭಾಗವಾದ ಉತ್ತರಕಾಂಡದ ಕಥೆ. ಮಾತ್ರವಲ್ಲ, ನಿರಪರಾಧಿನಿಯಾಗಿ ನೊಂದ ಸೀತೆಯ ವ್ಯಥೆ. ಜೊತೆಗೆ ಈ ಕಾದಂಬರಿಯು ತನ್ನ ಬದುಕಿನ ಪ್ರಶ್ನೆಗಳಿಗೆ ಸೀತೆಯೇ ಕಂಡುಕೊಂಡ ಉತ್ತರಗಳ ಕಾಂಡ ಕೂಡ. ಆದರೆ ಈ ಕಾಂಡವು ಕೊನರಿ, ಮಲರಿ ಫ‌ಲಿಸದೆ ಹೋದದ್ದು ಸೀತೆಯ ಸಂಗತಿಗೆ ಮಾತ್ರವಲ್ಲದೆ ಮಾನವ ಜೀವನದ ವಿಕಟವಾಸ್ತವಗಳಿಗೇ ಹಿಡಿದ ರನ್ನಗನ್ನಡಿ.

Advertisement

ನಮ್ಮ ಬದುಕಿನ ಬರ್ಬರಾಮಾಧುರ್ಯಗಳ ವಿಲಕ್ಷಣತೆಯು ಎಲ್ಲ ಬಗೆಯ ಮುಗ್ಧರಮ್ಯತೆಗಳನ್ನೂ ನಿರ್ದಯವಾಗಿ, ನಿರ್ದಾಕ್ಷಿಣ್ಯವಾಗಿ ನಿಟ್ಟೊರೆಸಬಲ್ಲಂಥದ್ದು. ಹೀಗಾಗಿ, ಬಾಳಿಗೆ ನಿಷ್ಠನಾದ ಯಾವುದೇ ಮಹಾಕವಿಯೂ- ಅವನೆಷ್ಟೇ ಕಲ್ಪನಾಲೋಕದ ಸಾರ್ವಭೌಮನಾಗಿರಲಿ, ನಿಯತಿಕೃತ ನಿಯಮರಹಿತನಾಗಿರಲಿ – ತನ್ನ ಪಾತ್ರಗಳಿಗೆ ಕಾವ್ಯನ್ಯಾಯದ ಹೆಸರಿನಲ್ಲಿ ಅವಾಸ್ತವರಮಣೀಯತೆಗಳ ಪ್ರಸಾಧನ ಮಾತ್ರ ಮೌಲ್ಯದ (mere cosmetic value) ರಂಗು-ಸಿಂಗಾರಗಳನ್ನು ಕಟ್ಟಿಕೊಡಲಾರ. ಇದು ಆದಿಕವಿ ಮಹರ್ಷಿ ವಾಲ್ಮೀಕಿಯ ಮಟ್ಟಿಗೂ ಪರಮ ಸತ್ಯ. ಇದನ್ನು ಸಮಕಾಲೀನ ಭಾರತ ದೇಶದ ಭಾವ-ಭಾಷೆಗಳ ಸಾಮ್ರಾಟರಾದ ಭೈರಪ್ಪನವರು ಸದ್ಯದ ಕಾದಂಬರಿಯಲ್ಲಿ ಶೋಧಿಸಿ¨ªಾರೆ.

ಸಂಸ್ಕೃತಮೂಲದ ವಾಲ್ಮೀಕಿ ರಾಮಾಯಣವನ್ನು ಪರಿಷ್ಕಾರವಾಗಿ ಓದಿಕೊಂಡ ಭೈರಪ್ಪನವರು ಈಚಿನ ವರ್ಷಗಳಲ್ಲಿ ಇದಕ್ಕೆ ಪೂರಕವಾಗಿ ಬಂದ ಸಾಕಷ್ಟು ವಿಮರ್ಶನ ಹಾಗೂ ಸಂಶೋಧನ ಸಾಹಿತ್ಯವನ್ನೂ ಪರಿಶೀಲಿಸಿ ತಮ್ಮ ಕಲ್ಪನೆ-ಅನುಭವಗಳ ನೆರವಿನಿಂದ “ಉತ್ತರಕಾಂಡ’ವನ್ನು ಕಂಡರಸಿ¨ªಾರೆ. ಇದೊಂದು ರೀತಿಯಲ್ಲಿ ಪರ್ವದ ಜೊತೆಗಾರನೆನ್ನಬಹುದಾದರೂ ಅದಕ್ಕಿಂತ ಸಾಕಷ್ಟು ಭಿನ್ನವಾಗಿದೆ. ದಿಟವೇ, ಎರಡೂ ಕಾದಂಬರಿಗಳಲ್ಲಿ ಆರ್ಷಮಹಾಕಾವ್ಯಗಳ ಪಾತ್ರ ಮತ್ತು ಸಂದರ್ಭಗಳನ್ನು ವಾಸ್ತವತೆಯ ನೆಲೆಯಲ್ಲಿ ನಿರೂಪಿಸುವ ಹವಣಿದೆ;

ಪ್ರಜ್ಞಾಪ್ರವಾಹತಂತ್ರದ ಬಳಕೆಯೂ ಇದೆ. ಆದರೆ, ಉತ್ತರಕಾಂಡವು ಸಂಪೂರ್ಣವಾಗಿ ಸೀತೆಯೊಬ್ಬಳದೇ ಪಾತ್ರದ ಮೂಲಕ ಮಿಕ್ಕೆಲ್ಲ ಪಾತ್ರಗಳನ್ನೂ ಉಳಿದೆಲ್ಲ ಘಟನೆಗಳನ್ನೂ ಕಟ್ಟಿಕೊಡುವ ಕಟ್ಟುನಿಟ್ಟಿಗೆ ಒಳಪಟ್ಟ ಕಾರಣ-ಭಾರತೀಯ ಕಾವ್ಯಮೀಮಾಂಸೆಯ ಪರಿಭಾಷೆಯಲ್ಲಿ ಹೇಳುವುದಾದರೆ – ಅಪ್ಪಟವಾಗಿ ಕವಿನಿಬದ್ಧಪ್ರೌಢೋಕ್ತಿಯ ಅಸಿಧಾರಾವ್ರತ, ಅರ್ಥಾತ್‌, ಕತ್ತಿಯ ಮೇಲಣ ನಡಿಗೆ. ಪರ್ವ, ಸಾರ್ಥ, ಆವರಣ ಗಳಂಥ ಆಷೇìಯ-ಐತಿಹಾಸಿಕ ವಸ್ತುಕಗಳನ್ನು ರೂಪಿಸಿದ ಭೈರಪ್ಪನವರಿಗೆ ಉತ್ತರಕಾಂಡ’ವನ್ನು ರಚಿಸುವಲ್ಲಿ ವುÂತ್ಪತ್ತಿಸಂಬಂಧಿಯಾದ ಯಾವುದೇ ಪ್ರಶ್ನೆಗಳು ಕಾಡದಿರುವುದು ಸಹಜ. ಆದರೆ, ಪಾತ್ರಸ್ವಭಾವ ಮತ್ತು ಜೀವಗತಿಗಳ ತವಕ-ತಲ್ಲಣಗಳು ಅವರನ್ನು ಉತ್ತರಕಾಂಡದುದ್ದಕ್ಕೂ ಗಾಢವಾಗಿ ಆವರಿಸಿರುವುದು ಸಹೃದಯರಿಗೆಲ್ಲ ಸ್ವಯಂವೇದ್ಯ.

ಮೇಲ್ನೋಟಕ್ಕೆ ಉತ್ತರಕಾಂಡವು ಸ್ತ್ರೀವಾದಿಗಳ ವಿಜಯವೆಂದು ತೋರಬಹುದು; ಈ ಮೂಲಕ ಭೈರಪ್ಪನವರು ತಮ್ಮ ಇನ್ನಿತರ ಕಾದಂಬರಿಗಳಲ್ಲಿ ಸ್ತ್ರೀವಾದದ ವಿರುದ್ಧ ನಿಂತರೆಂದು ತೋರುವ ಕಳಂಕವನ್ನು ಕಳೆದುಕೊಂಡರೆಂದೂ ಹಲವರು ಹೇಳಬಹುದು. ಆದರೆ ಇಲ್ಲಿರುವುದು ಲಿಂಗಾತೀತವಾದ ಜೀವಭಾವ ಮೀಮಾಂಸೆ. ಇದೇ ರೀತಿ ಉತ್ತರಕಾಂಡದಲ್ಲಿ ಚಿತ್ರಿತನಾದ ರಾಮನನ್ನು ಕಂಡು ಕೆಲವರು ಭಕ್ತಭಾವುಕರು ವ್ಯಾಕುಲಗೊಳ್ಳಲೂ ಬಹುದು. ಆದರೆ ವಾಲ್ಮೀಕಿ ಹೃದಯವನ್ನು ಭೈರಪ್ಪನವರು ಹಿಡಿದ ಪರಿಯನ್ನು ಭಾವಿಸಿದಾಗ ಅವರಾದರೂ ಅಂತರ್ವಿಮರ್ಶೆಗೆ ತೊಡಗದಿರರು.

Advertisement

ಮುಖ್ಯವಾಗಿ ಉತ್ತರಕಾಂಡ ದಲ್ಲಿ ಲಕ್ಷ್ಮಣ, ಊರ್ಮಿಳೆ, ವಿಶ್ವಾಮಿತ್ರ, ಅಹಲೆÂ, ಅತ್ರಿ, ಅನಸೂಯೆ ಮುಂತಾದ ಪೂರಕಪಾತ್ರಗಳ ಸಹಜಸ್ನಿಗ್ಧತೆಯನ್ನೂ ಧ್ವನಿದೀಪ್ತಿಯನ್ನೂ ಗಮನಿಸಿದಾಗ ವಾಲ್ಮೀಕಿರಾಮಾಯಣದ ಕಾವ್ಯಧರ್ಮವು ಭೈರಪ್ಪನವರಲ್ಲಿ ಪ್ರತಿಫ‌ಲಿಸಿದ ಬಗೆ ಮನದಟ್ಟಾಗದಿರದು. ಇದೇ ರೀತಿ ಅಯೋಧ್ಯೆ, ಕೇಕಯ, ಕಿಷ್ಕಿಂಧೆ ಹಾಗೂ ಲಂಕೆಗಳ ಒಳಗಣ ರಾಜಕೀಯ ಸೂಕ್ಷ¾ಗಳು; ಕೌಸಲೆÂ, ಕೈಕೇಯಿ, ಶೂರ್ಪಣಖೆ, ಮಂಡೋದರಿ ಮೊದಲಾದ ಪಾತ್ರಗಳ ರೋಷ-ರೊಚ್ಚುಗಳು ಭೈರಪ್ಪನವರ ಸಾಂದ್ರಲೋಕಾನುಭಾವದ ಮಗ್ಗುಲುಗಳಾಗಿ ಮೆಚ್ಚೆನಿಸದಿರವು.

ಮುಖ್ಯವಾಗಿ ಉತ್ತರಕಾಂಡವು ಪರಿಣತ ವಯಸ್ಸಿನ ಮಹಾಲೇಖಕರೊಬ್ಬರ ನಿರ್ಮಾಣವಾಗಿ ಸಾಹಿತ್ಯರಸಿಕರನ್ನು ಹಲಗಾಲ ಹಿಡಿಯದಿರದು. ಈಗಂತೂ ರಾಮಾಯಣವನ್ನು ಆಧರಿಸಿ ಬಂದ ಕಾದಂಬರಿಗಳಿಗೆ ಕೊರತೆಯೇನಿಲ್ಲ. ವಿಶೇಷತಃ ಪರ್ವದ ಬಳಿಕ ವಾಸ್ತವತೆಯ ಜಾಡಿನಲ್ಲಿ ವಿಗ್ರಹಭಂಜನೆಯ ಮೋಡಿಯಲ್ಲಿ ಉಕ್ಕಿ ಬಂದ ಕಥನಸಾಹಿತ್ಯ ಸಾಕಷ್ಟಿದೆ. ಬರಿಯ ಕನ್ನಡದಲ್ಲಿ ಮಾತ್ರವಲ್ಲ ಹಿಂದಿ, ತೆಲುಗು, ಮರಾಠಿ, ಇಂಗ್ಲಿಷ್‌ ಮುಂತಾದ ಹಲವು ಭಾಷೆಗಳಲ್ಲಿ ಬಂದ ಬರವಣಿಗೆಯು ಈಚಿನ ದಶಕಗಳ ಓದುಗರಿಗೆ ಚೆನ್ನಾಗಿಯೇ ಗೊತ್ತಿರುತ್ತದೆ. ಈ ಹಿನ್ನೆಲೆಯಲ್ಲಿ – ತಮ್ಮದೇ ಉಪಕ್ರಮದ ಹಾದಿಯು ಹೆ¨ªಾರಿಯಾಗಿರುವ ಹೊತ್ತಿನಲ್ಲಿ – ಇದೀಗ ಭೈರಪ್ಪನವರು ಹೊಸತಾಗಿ ತಮ್ಮೊಂದು ಪ್ರತಿಭಾಸೃಷ್ಟಿಯನ್ನು ಹರಿಯಬಿಟ್ಟಿರುವುದು ಅದೊಂದು ಬಗೆಯ ರೋಚಕ ಸಾಹಸವೆನ್ನಬೇಕು. ಈ ಸಾಹಿತ್ಯಯಾತ್ರೆಯಲ್ಲಿ ಪಯಣಿಗರಿಗೆ ಸದಾ ಸ್ವಾಗತವಿರುತ್ತದೆ.

– ಶತಾವಧಾನಿ ಆರ್‌. ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next