Advertisement

Coastal Security: ಕರಾವಳಿ ತೀರ ರಕ್ಷಣೆಗೆ ತುರ್ತು ಕ್ರಮ: ಸಚಿವ ಮಂಕಾಳ ವೈದ್ಯ

02:17 AM Jul 28, 2024 | Team Udayavani |

ಪಡುಬಿದ್ರಿ: ಕರಾವಳಿ ತೀರವನ್ನು ಉಳಿಸಿ, ಕಾಪಾಡಿಕೊಳ್ಳುವ ಜವಾಬ್ದಾರಿ ಕರಾವಳಿಯವನಾದ ನನ್ನ ಮೇಲೆ ಹೆಚ್ಚು ಇದೆ. ಇದಕ್ಕೆ ತುರ್ತು ಕ್ರಮವಾಗಿ ಕಡಲ್ಕೊರೆತ ತಡೆಯಲು ತಾತ್ಕಾಲಿಕ ಕಾಮಗಾರಿಗೆ ಕರಾವಳಿಯ ಮೂರು ಜಿಲ್ಲೆಗಳಿಗೆ ತಲಾ 5 ಕೋ.ರೂ.ಗಳಂತೆ 15 ಕೋ. ರೂ.ಗಳನ್ನು ಬಿಡುಗಡೆಗೊಳಿಸಲಾಗುವುದು. ಮೀನುಗಾರಿಕೆ ರಸ್ತೆಯ ಸುರಕ್ಷೆಗೆ ಸಂಬಂಧಿಸಿದ ಕಾಮಗಾರಿಯನ್ನು ನಾಳೆಯಿಂದಲೇ ಆರಂಭಿ ಸಲು ಸೂಚಿಸಿರುವುದಾಗಿ ರಾಜ್ಯ ಬಂದರು, ಮೀನುಗಾರಿಕೆ ಇಲಾಖೆ ಸಚಿವ ಮಂಕಾಳ ವೈದ್ಯ ಹೇಳಿದರು.

Advertisement

ಅವರು ಜು. 27ರಂದು ಪಡು ಬಿದ್ರಿಯ ನಡಿಪಟ್ಣದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಮಾಧ್ಯಮ ದವರೊಂದಿಗೆ ಮಾತ ನಾಡಿದರು. ಸಮುದ್ರ ಕೊರೆತ ತಡೆಗೆ ಶಾಶ್ವತ ಕಾಮಗಾರಿಗಾಗಿ ಕೇಂದ್ರಕ್ಕೆ ರಾಜ್ಯ ಸರಕಾರದಿಂದ 480 ಕೋ. ರೂ. ಗಳ ಪ್ರಸ್ತಾವನೆಯನ್ನು ವರ್ಷದ ಹಿಂದೆಯೇ ಕಳುಹಿಸಲಾಗಿದೆ. ಪಡುಬಿದ್ರಿಯಲ್ಲಿ ಮೀನುಗಾರಿಕೆ ರಸ್ತೆಯ ತಳಭಾಗ ಕೊಚ್ಚಿ ಹೋಗಿದ್ದು, ಇದನ್ನು ಉಳಿಸಿಕೊಳ್ಳುವ ನಿಟ್ಟಿ ನಲ್ಲಿ ಈಗ ತುರ್ತಾಗಿ 1 ಕೋಟಿ ರೂ.ಗಳನ್ನು ತಾತ್ಕಾಲಿಕ ಕಾಮಗಾರಿಗಾಗಿ ಬಂದರು ಇಲಾಖೆಯಿಂದ ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಪಡುಬಿದ್ರಿಯ ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂ ಫ್ಲ್ಯಾಗ್‌ ಬೀಚ್‌ಗೆ ತೆರಳುವ ಕಾಂಕ್ರೀಟ್‌ ಸಂಪರ್ಕ ರಸ್ತೆಯ ತಳಭಾಗದ ಮರಳು ಜಾರಿರುವುದನ್ನೂ ಸಚಿವರು ವೀಕ್ಷಿಸಿ ದರು. ಮಹೇಶ್ವರೀ ಫಂಡ್‌ನ‌ವರ ಮೀನುಗಾರಿಕೆ ಶೆಡ್‌ನ‌ ಪ್ರದೇಶವನ್ನೂ ಪರಿಶೀಲಿಸಿದರು.

ಮೀನುಗಾರಿಕೆ ವಿ.ವಿ. ರಚನೆಗೆ ಪೂರಕ ಕೆಲಸ: ಮಂಕಾಳ ವೈದ್ಯ
ಮಂಗಳೂರು: ಮಂಗಳೂರಿನ ಮೀನುಗಾರಿಕೆ ಮಹಾ ವಿದ್ಯಾಲಯವನ್ನು ಮೀನುಗಾರಿಕೆ ವಿ.ವಿ.ಯನ್ನಾಗಿ ರೂಪಿಸುವ ನಿಟ್ಟಿನಲ್ಲಿ ಪೂರಕ ಕೆಲಸಗಳು ನಡೆಯುತ್ತಿವೆ ಎಂದು ಮೀನುಗಾರಿಕೆ, ಒಳನಾಡು ಸಾರಿಗೆ ಮತ್ತು ಬಂದರು ಸಚಿವ ಮಂಕಾಳ ಎಸ್‌. ವೈದ್ಯ ಹೇಳಿದರು.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಬೀದರ್‌, ಮೀನುಗಾರಿಕೆ ಮಹಾ ವಿದ್ಯಾಲಯ ಮಂಗಳೂರು, ಮೀನುಗಾರಿಕೆ ಇಲಾಖೆ ಕರ್ನಾಟಕ ಸರಕಾರ, ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹೈದರಾಬಾದ್‌ ಇವುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಮೀನುಗಾರಿಕೆ ಕಾಲೇಜಿನ ಆಡಿಟೋರಿಯಂನಲ್ಲಿ ಶನಿವಾರ ಹಮ್ಮಿಕೊಂಡ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಮತ್ತು ಬಿಗ್‌ ಫಿಶ್‌:2.0 ಒಂದು ದಿನದ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

Advertisement

ರಾಜ್ಯದ ಮೊದಲ ಮೀನುಗಾರಿಕೆ ಕಾಲೇಜು ಇದಾಗಿದ್ದು, ಇದನ್ನು ವಿಶ್ವವಿದ್ಯಾನಿಲಯವನ್ನಾಗಿ ರೂಪಿಸುವ ಚಿಂತನೆ ಇದೆ. ವಿ.ವಿ. ರಚನೆಗೆ ಬೇಕಾದ 65 ಎಕ್ರೆ ಜಮೀನು ಕೂಡ ಇಲ್ಲಿದೆ. ವಿ.ವಿ. ಮಾಡಲು ಕೆಲವು ಮಾನದಂಡಗಳಿದ್ದು, ಆ ಬಗ್ಗೆ ಕೆಲಸಗಳು ನಡೆಯುತ್ತಿವೆ ಎಂದರು.

ಮೀನುಗಾರರಿಗೆ ಈ ಹಿಂದೆ 1.5 ಲಕ್ಷ ಲೀ. ಡಿಸೇಲ್‌ ನೀಡಲಾಗುತ್ತಿದ್ದು, ಈಗ 2 ಲಕ್ಷ ಲೀ. ನೀಡುತ್ತಿದ್ದೇವೆ. ಸೀಮೆಎಣ್ಣೆ ಸಮಸ್ಯೆ ನೀಗಿಸಲೂ ಸರಕಾರ ಶ್ರಮಿಸುತ್ತಿದೆ. ಬೈಂದೂರಿನಲ್ಲಿ ಸೀಫುಡ್‌ ಪಾರ್ಕ್‌ ನಿರ್ಮಿಸಿ ಮೀನಿನ ಉತ್ಪನ್ನ, ಮೌಲ್ಯವರ್ಧನೆಗೆ ಆದ್ಯತೆ ನೀಡುವುದು ಸಹಿತ ಮೀನುಗಾರಿಕೆ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದರು.

ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಲ್ಲಿ ನಾಲ್ಕು ವರ್ಷಗಳ ಬಾಕಿ ಪರಿಹಾರವನ್ನು ಒದಗಿಸಲಾಗಿದೆ. ಬೋಟ್‌ ದುರಂತ ಸಂದರ್ಭದಲ್ಲೂ ಪರಿಹಾರ ನೀಡಲಾಗುತ್ತಿದ್ದು, ಅವಘಡಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ಮೀನುಗಾರರಿಗೆ 24 ಗಂಟೆಯಲ್ಲಿ 8 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸ ಲಾಗಿದೆ. ಅವಘಡದಿಂದ ಅಂಗಾಂಗ ಕಳೆದುಕೊಂಡು ಮತ್ತೆ ಮೀನುಗಾರಿಕೆ ನಡೆಸಲಾಗದ ಮೀನುಗಾರರಿಗೆ ವೈದ್ಯಕೀಯ ವೆಚ್ಚ ಸಹಿತ 4 ಲಕ್ಷ ರೂ. ಪರಿಹಾರ ಸೌಲಭ್ಯ ಒದಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ಡಾ| ವೈ. ಭರತ್‌ ಶೆಟ್ಟಿ, ವಿಧಾನಪರಿಷತ್‌ ಸದಸ್ಯ ಐವನ್‌ ಡಿ’ ಸೋಜಾ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಕಾರ್ಪೊರೇಟರ್‌ ಭರತ್‌ ಕುಮಾರ್‌, ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿವಿ ಬೀದರ್‌ನ ಕುಲಪತಿ ಪ್ರೊ| ಕೆ.ಸಿ. ವೀರಣ್ಣ, ಕೇರಳ ಮೀನುಗಾರಿಕೆ ಮತ್ತು ಸಾಗರ ಅಧ್ಯಯನ ವಿವಿ ಕೊಚ್ಚಿ ಕುಲಪತಿ ಪ್ರೊ| ಪ್ರದೀಪ್‌ ಕುಮಾರ್‌ ಪಿ., ಮೀನುಗಾರಿಕೆ ಇಲಾಖೆ ನಿರ್ದೇಶಕ ದಿನೇಶ್‌ ಕುಮಾರ್‌ ಕಳ್ಳೇರ್‌, ಯಶಸ್ವಿ ಕಡಲ ಉತ್ಪನ್ನಗಳ ಕಂಪೆನಿ ಉಡುಪಿಯ ಉದಯ ಕುಮಾರ್‌, ಮೀನುಗಾರಿಕೆ ಮಹಾ ವಿದ್ಯಾಲಯ ಮಂಗಳೂರು ಹಳೆ ವಿದ್ಯಾರ್ಥಿಗಳ ಸಂಘ (ಕೋಫಾ) ಅಧ್ಯಕ್ಷ ರಮೇಶ್‌ ಎಂ.ಆರ್‌. ಮತ್ತಿತರರು ಉಪಸ್ಥಿತರಿದ್ದರು.
ಮೀನುಗಾರರಿಗೆ ವಿವಿಧ ಸವಲತ್ತು ವಿತರಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳು ವಿವಿಧ ವಿಷಯಗಳ ಬಗ್ಗೆ ವಿಚಾರ ಮಂಡನೆ ಮಾಡಿದರು.
ಮೀನುಗಾರಿಕೆ ಮಹಾ ವಿದ್ಯಾ ಲಯ ಮಂಗಳೂರು ಡೀನ್‌ ಡಾ| ಎಚ್‌.ಎನ್‌. ಆಂಜನೇಯಪ್ಪ ಸ್ವಾಗತಿಸಿದರು. ಪ್ರಾಧ್ಯಾಪಕ ಶಿವಕುಮಾರ್‌ ಮಗದ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಚರ್ಚಿಸಲಾದ ವಿಷಯ
 ಮೀನುಗಾರಿಕೆ ಶಿಕಾರಿ ರಜೆಯನ್ನು 60ರಿಂದ 90 ದಿನಕ್ಕೆ ಏರಿಸುವುದು.
 ಭಾರತದ ಪಶ್ಚಿಮ ಕರಾವಳಿಗೆ ಏಕರೂಪ ಮೀನುಗಾರಿಕೆ ಸಂಹಿತೆ ಮತ್ತು ದಂಡ ಸಂಹಿತೆ.
 ಕಾಡ್‌ಎಂಡ್‌ ಬಲೆ ಕಣ್ಣಿನ ಅಗಲ ಮತ್ತು ರೂಪ.
 ಬೋಟ್‌ನಲ್ಲಿ ಬಳಸಬೇಕಾದ ಎಂಜಿನ್‌ನ ಸಾಮರ್ಥ್ಯ
 ಬೆಳಕು ಮೀನುಗಾರಿಕೆ, ಬುಲ್‌ ಟ್ರಾಲಿಂಗ್‌ ನಿಷೇಧ.

ದೇಶಕ್ಕೊಂದೇ ಕಾನೂನು ಇರಲಿ
ರಾಜ್ಯಕ್ಕೆ ಸಂಬಂಧಿಸಿ ಮೀನುಗಾರಿಕೆ ಕಾನೂನನ್ನು ಬದಲಾಯಿಸಬೇಕು ಎಂಬ ಮೀನುಗಾರರ ಆಗ್ರಹಕ್ಕೆ ಸಹಮತ ವ್ಯಕ್ತಪಡಿಸದ ಸಚಿವರು, ರಾಜ್ಯಕ್ಕೆ ಪ್ರತ್ಯೇಕ ಕಾನೂನಿಗೆ ನನ್ನ ವಿರೋಧ ಇದೆ. ದೇಶಕ್ಕೊಂದೇ ಕಾನೂನು ರೂಪಿಸುವುದಾದರೆ ಬೆಂಬಲ ಇದೆ ಹಾಗೂ ಆ ಬದಲಾವಣೆ ಮೀನುಗಾರರ ಹಿತವನ್ನು ಕಾಪಾಡುವಂತಿರಬೇಕು ಎಂದು
ಸಚಿವರು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next