Advertisement

ಆರೋಗ್ಯ ಕೇಂದ್ರಗಳಿಗೇ ಅನಾರೋಗ್ಯ

04:23 PM Oct 14, 2018 | Team Udayavani |

ಹಾವೇರಿ: ಗ್ರಾಮೀಣ ಜನತೆಗೆ ಸ್ಥಳದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ದೊರಕುವಂತಾಗಲಿ ಎಂಬ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಿರುವ ಆರೋಗ್ಯ ಕೇಂದ್ರಗಳು ಅವ್ಯವಸ್ಥೆಯ ಆಗರವಾಗಿದ್ದು ಪ್ರಾಥಮಿಕ ಚಿಕಿತ್ಸೆ ಹಳ್ಳಿಗರಿಗೆ ಗಗನಕುಸುಮವಾಗಿದೆ.

Advertisement

ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮೀಣ ಪ್ರದೇಶದಲ್ಲಿ ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳನ್ನು ಸರ್ಕಾರ ತೆರೆದಿದೆ. ಜಿಲ್ಲೆಯಲ್ಲಿ ಒಟ್ಟು 307 ಉಪಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಬಹುತೇಕ ಎಲ್ಲ ಆರೋಗ್ಯ ಕೇಂದ್ರಗಳು ಸಿಬ್ಬಂದಿ ಕೊರತೆ ಎದುರಿಸುತ್ತಿದ್ದು ಗ್ರಾಮೀಣ ಜನರಿಗೆ ಚಿಕಿತ್ಸೆ ಸಿಗುತ್ತಿಲ್ಲ. ಜಿಲ್ಲೆಯ 307 ಕೇಂದ್ರಗಳಿಗೆ ಹೆಚ್ಚುವರಿ ಹುದ್ದೆಗಳು ಸೇರಿ ಒಟ್ಟು 318 ಸಿಬ್ಬಂದಿ ಮಂಜೂರಾಗಿದೆ. ಆದರೆ, ಪ್ರಸ್ತುತ 227 ಜನರು ಕರ್ತವ್ಯದಲ್ಲಿದ್ದು, 91 ಸಿಬ್ಬಂದಿ ಹುದ್ದೆಗಳು ಖಾಲಿ ಇವೆ.

ಕಟ್ಟಡ ಸಮಸ್ಯೆ: ಆರೋಗ್ಯ ಕೇಂದ್ರಗಳು ಒಂದುಕಡೆ ಸಿಬ್ಬಂದಿ ಕೊರತೆ ಎದುರಿಸುತ್ತಿದ್ದರೆ ಮತ್ತೊಂದೆಡೆ ಸ್ವಂತ ಕಟ್ಟಡವಿಲ್ಲದೇ ಜನರಿಗೆ ಆರೋಗ್ಯ ಸೇವೆ ನೀಡಲಾಗುತ್ತಿಲ್ಲ. ಜಿಲ್ಲೆಯಲ್ಲಿರುವ 307 ಕೇಂದ್ರಗಳಲ್ಲಿ 164 ಕಡೆಗಳಲ್ಲಿ ಮಾತ್ರ ಸ್ವಂತ ಕಟ್ಟಡವಿದ್ದು, 143 ಕೇಂದ್ರಗಳು ಗ್ರಾಮದಲ್ಲಿರುವ ಅನ್ಯ ಕಟ್ಟಡಗಳಲ್ಲಿ ಇಲ್ಲವೇ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೇ ಈ ಕಟ್ಟಡಗಳು ಮೂಲ ಸೌಕರ್ಯಗಳಿಲ್ಲದೇ ನರಳುತ್ತಿವೆ.

ಪಾಳುಬಿದ್ದ ಕಟ್ಟಡಗಳು: ಸ್ವಂತ ಕಟ್ಟಡ ಹೊಂದಿದ ಕೆಲವು ಆರೋಗ್ಯ ಕೇಂದ್ರಗಳು ಸಿಬ್ಬಂದಿ ಕೊರತೆಯಿಂದ ಪಾಳುಬಿದ್ದರೆ ಇದರ ಜತೆಗೆ ಕೆಲವೊಂದು ಕಡೆಗಳಲ್ಲಿ ಸಿಬ್ಬಂದಿ ಕೊಠಡಿ ಕಟ್ಟಡಗಳನ್ನು ಸಹ ಕಟ್ಟಲಾಗಿದ್ದು, ಈ ಕಟ್ಟಡಗಳಂತೂ ಉಪಯೋಗವೇ ಇಲ್ಲದಂತಾಗಿದೆ. ಇರುವ ಕೆಲ ಸಿಬ್ಬಂದಿ ನಗರದಲ್ಲಿ ಮನೆ ಮಾಡಿಕೊಂಡು ಓಡಾಡುತ್ತಿರುವುದರಿಂದ ಸಿಬ್ಬಂದಿ ಕೊಠಡಿಗಳು ಉಪಯೋಗವಾಗುತ್ತಿಲ್ಲ. ಹಾವೇರಿ ಸಮೀಪದಲ್ಲಿಯೇ ಇರುವ ಕನಕಾಪುರ, ಹೊಂಬರಡಿ ಸೇರಿದಂತೆ ಇತರೆಡೆ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಆದರೆ, ಇಲ್ಲಿ ಕಾರ್ಯನಿರ್ವಹಿಸಲು ಸಿಬ್ಬಂದಿ ಇಲ್ಲದೇ ಕಟ್ಟಡಗಳು ಪಾಳುಬಿದ್ದಿವೆ. ಒಟ್ಟಾರೆ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಉಪಕೇಂದ್ರಗಳು ಜಿಲ್ಲೆಯಲ್ಲಿ ಜನರಿಗೆ ಸಮರ್ಪಕ ಆರೋಗ್ಯ ಸೇವೆ ನೀಡುವಲ್ಲಿ ವಿಫಲವಾಗಿವೆ.

ಸಿಬ್ಬಂದಿ ಇಲ್ಲದೆ ಆರೋಗ್ಯ ಕೇಂದ್ರ ಹಾಳುಬಿದ್ದಿದೆ. ಹೊಸದಾಗಿ ಕಟ್ಟಡ ಕಟ್ಟಿದಾಗಿನಿಂದ ಬಾಗಿಲು ತೆಗೆದೇ ಇಲ್ಲ. ಕೇಳಿದರೆ ಸಿಬ್ಬಂದಿ ಸಮಸ್ಯೆ ಎನ್ನುತ್ತಾರೆ. ಸಿಬ್ಬಂದಿ ಇಲ್ಲ ಎನ್ನುವುದಾದರೆ ಕಟ್ಟಡ ಏಕೆ ಕಟ್ಟಬೇಕಿತ್ತು? ಇದರಿಂದ ಸರ್ಕಾರದ ಲಕ್ಷಾಂತರ ರೂ. ಪೋಲಾದಂತಾಗಿದೆ. ಆ ಕಟ್ಟಡವನ್ನು ಬೇರೆ ಉಪಯೋಗಕ್ಕಾದರೂ ನೀಡುವ ಕೆಲಸವಾಗಬೇಕು. ಇಲ್ಲವೇ ಸಿಬ್ಬಂದಿ ನೇಮಿಸಿ ಕೇಂದ್ರ ಕಾರ್ಯನಿರ್ವಹಿಸುವಂತೆ ಮಾಡಬೇಕು.
. ಎಸ್‌ಎಫ್‌ಎನ್‌ ಗಾಜೀಗೌಡ್ರ,
   ಕನಕಾಪುರ ನಿವಾಸಿ

Advertisement

ಗ್ರಾಮೀಣ ಭಾಗದ ಉಪಕೇಂದ್ರಗಳಲ್ಲಿನ ಸಿಬ್ಬಂದಿ ಸಮಸ್ಯೆ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸದ್ಯ ಕರ್ತವ್ಯದಲ್ಲಿರುವ ಸಿಬ್ಬಂದಿಯೇ ಎಲ್ಲ ಕಡೆಗಳಲ್ಲಿ ಸೇವೆ ನೀಡುವಂತೆ ಸೂಚಿಸಲಾಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು..
ಡಾ| ರಾಘವೇಂದ್ರಸ್ವಾಮಿ,
ಜಿಲ್ಲಾ ಆರೋಗ್ಯಾಧಿಕಾರಿ

ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next