Advertisement

ಸಂಪತ್ತಿನ ಅಸಮಾನ ಹಂಚಿಕೆ: ಕೈಗನ್ನಡಿ ಹಿಡಿದ ವರದಿ 

08:56 AM Jan 23, 2018 | |

ದೇಶದಲ್ಲಿ ಕೋಟ್ಯಧೀಶರ ಸಂಖ್ಯೆ ಹೆಚ್ಚುತ್ತಿರುವುದು ಆರ್ಥಿಕವಾಗಿ ದೇಶ ಅಭಿವೃದ್ಧಿ ಹೊಂದುತ್ತಿರುವುದರ ಸಂಕೇತ ಎಂದು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ನಿಜವಾಗಿ ಇದು ಆರ್ಥಿಕ ನೀತಿಯ ವೈಫ‌ಲ್ಯದ ಸಂಕೇತ. 

Advertisement

ಸಿಂಗಾಪುರದ ದಾವೋಸ್‌ನಲ್ಲಿ ವಿಶ್ವ ಆರ್ಥಿಕ ಶೃಂಗ ನಡೆಯುತ್ತಿರುವ ಸಂದರ್ಭದಲ್ಲೇ ಬಿಡುಗಡೆಯಾಗಿರುವ ಜಗತ್ತಿನ ಸಂಪತ್ತಿನ ಹಂಚಿಕೆಯ ಕುರಿತಾದ ವರದಿ ಒಟ್ಟಾರೆ ಪರಿಸ್ಥಿತಿಯ ವಿಡಂಬನಾತ್ಮಕ ವ್ಯಂಗ್ಯದಂತಿದೆ. ಅದರಲ್ಲೂ ಭಾರತದ ಆರ್ಥಿಕ ಸ್ಥಿತಿಗೆ ಈ ವರದಿ ಕೈಗನ್ನಡಿ ಹಿಡಿದಿದೆ. ಜಗತ್ತಿನಾದ್ಯಂತ ಕಳೆದ ವರ್ಷ ಸೃಷ್ಟಿಯಾದ ಸಂಪತ್ತಿನ ಶೇ. 82 ಬರೀ ಶೇ. 1 ಶ್ರೀಮಂತರ ಪಾಲಾಗಿದೆ ಎನ್ನುತ್ತಿದೆ ಆಕ್ಸ್‌ಫಾಮ್‌ ಸಮೀಕ್ಷಾ ವರದಿ. ಜನಸಂಖ್ಯೆಯ ಅರ್ಧದಷ್ಟಾಗುವ ಸುಮಾರು 370 ಕೋಟಿ ಜನರ ಸಂಪತ್ತು ಕಳೆದ ವರ್ಷ ವೃದ್ಧಿಯಾಗಲೇ ಇಲ್ಲ. ಭಾರತದ ಪರಿಸ್ಥಿತಿ ಜಾಗತಿಕ ಪರಿಸ್ಥಿತಿಗಿಂತ ಭಿನ್ನವಾಗೇನೂ ಇಲ್ಲ. ದೇಶದ ಶೇ. 1 ಕುಬೇರರು ಶೇ. 73 ಸಂಪತ್ತನ್ನು ಬಾಚಿಕೊಂಡಿದ್ದಾರೆ. ಜಾಗತಿಕವಾಗಿ ಮತ್ತು ದೇಶದಲ್ಲಿ ಸಂಪತ್ತು ಅಸಮಾನ ರೀತಿಯಲ್ಲಿ ಹಂಚಿಕೆಯಾಗುತ್ತಿರುವುದು ಕಳವಳಕಾರಿ ಬೆಳವಣಿಗೆ. ಶ್ರೀಮಂತರು ಇನ್ನಷ್ಟು ಶ್ರೀಮಂತರಾಗುವ ಮತ್ತು ಬಡವರು ಮತ್ತಷ್ಟು ಬಡವರಾಗುವ ಪರಿಸ್ಥಿತಿಯೇ ಇಂದಿಗೂ ಮುಂದುವರಿ ದುಕೊಂಡು ಬಂದಿದೆ. ಜನರ ಜೀವನ ಮಟ್ಟ ಸುಧಾರಿಸಿದೆ, ಮಧ್ಯಮ ವರ್ಗದವರು ಹೆಚ್ಚಾಗಿದ್ದಾರೆ ಎಂದೆಲ್ಲ ನಾವು ನಮ್ಮ ಪ್ರಗತಿಯನ್ನು ಸಮರ್ಥಿಸಲು ಉಲ್ಲೇಖೀಸುತ್ತಿದ್ದ ವಿಷಯಗಳೆಲ್ಲ ಬರೀ ಅಂಕಿಸಂಖ್ಯೆಗಳ ಆಟ. ವಾಸ್ತವ ಬೇರೆಯೇ ಇದೆ ಎನ್ನುವುದು ಇದರಿಂದ ಅರಿವಾಗುತ್ತದೆ. 

ಕಳೆದ ವರ್ಷವೂ ಆಕ್ಸ್‌ಫಾಮ್‌ ಮಾಡಿದ ಸಮೀಕ್ಷೆಯಲ್ಲಿ ಭಾರತದ ಪರಿಸ್ಥಿತಿ ಇದೇ ರೀತಿ ಇತ್ತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಅಸಮಾನತೆ ಇನ್ನಷ್ಟು ಹೆಚ್ಚಿದೆ. ಅಂದರೆ ಆರ್ಥಿಕ ಸುಧಾರಣೆಗಳಿಂದ ಕೆಲವೇ ಮಂದಿಯ ಖಜಾನೆ ತುಂಬುತ್ತಿದೆ ಎಂದಾಯಿತು. 2017ರಲ್ಲಿ ದೇಶದ ಸಿರಿವಂತರ ಒಟ್ಟು ಸಂಪತ್ತಿನಲ್ಲಿ 20.9 ಲಕ್ಷ ಕೋ. ರೂ. ಹೆಚ್ಚಳವಾಗಿದೆ. ಇದು ಕೇಂದ್ರದ 2017-18ನೇ ಸಾಲಿನ ಬಜೆಟ್‌ ಗಾತ್ರಕ್ಕೆ ಸಮವಾಗಿರುವ ಮೊತ್ತ. ಕೋಟಿಗಟ್ಟಲೆ ಬಡವರು ಒಪ್ಪೊತ್ತಿನ ಊಟಕ್ಕೆ ಪರದಾಡುತ್ತಿರುವ ಹೊತ್ತಿನಲ್ಲೇ ಶ್ರೀಮಂತರ ಸಂಪತ್ತು ಇನ್ನಷ್ಟು ಬೆಳೆಯುತ್ತಲೇ ಹೋಗುತ್ತಿರುವುದು ಆರ್ಥಿಕ ನೀತಿಯ ಆಮೂಲಾಗ್ರ ಬದಲಾವಣೆಯ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಕೋಟ್ಯಧೀಶರ ಸಂಪತ್ತು ವಾರ್ಷಿಕ ಶೇ. 13ರ ದರದಲ್ಲಿ ಹೆಚ್ಚುತ್ತಿದ್ದರೆ ಇದೇ ವೇಳೆ ಬಡವರ ಸಂಪತ್ತಿನ ವೃದ್ಧಿ ದರ ಬರೀ ಶೇ. 2. ಭಾರತದಲ್ಲಿ ಜವುಳಿ ಕಂಪೆನಿಯೊಂದರ ಉನ್ನತ ಅಧಿಕಾರಿ ಒಂದು ವರ್ಷದಲ್ಲಿ ಪಡೆಯುವ ಸಂಬಳದಷ್ಟು ಹಣವನ್ನು ಗಳಿಸಲು ಗ್ರಾಮೀಣ ಭಾರತದ ಬಡ ಕೂಲಿ ಕಾರ್ಮಿಕನೊಬ್ಬ 941 ವರ್ಷ ನಿರಂತರವಾಗಿ ದುಡಿಯ ಬೇಕು ಎನ್ನುತ್ತದೆ ವರದಿ. 

ದೇಶದಲ್ಲಿ ಕೋಟ್ಯಧೀಶರ ಸಂಖ್ಯೆ ಹೆಚ್ಚುತ್ತಿರುವುದು ಆರ್ಥಿಕವಾಗಿ ದೇಶ ಅಭಿವೃದ್ಧಿ ಹೊಂದುತ್ತಿರುವುದರ ಸಂಕೇತ ಎಂದು ಹೇಳಿಕೊಂಡು ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ನಿಜವಾಗಿ ಇದು ಆರ್ಥಿಕ ನೀತಿಯ ವೈಫ‌ಲ್ಯದ ಸಂಕೇತ. ಬಿಸಿಲು ಮಳೆ ಲೆಕ್ಕಿಸದೆ ಬೆವರು ಹರಿಸಿ ದುಡಿಯುವವರ, ನಮ್ಮ ಹೊಟ್ಟೆ ತುಂಬಿಸಲು ಹೊಲ ಗದ್ದೆಗಳಲ್ಲಿ ದುಡಿಯುವವರ, ಕಟ್ಟಡ ಕಾರ್ಮಿಕರ, ಫ್ಯಾಕ್ಟರಿ, ಕಾರ್ಖಾನೆಗಳ ನೌಕರರ ಬದುಕು ಹಸನಾಗುವ ತನಕ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ. ಎಂದಿನ ತನಕ ಅವರು ನಿತ್ಯದ ಅನ್ನಕ್ಕಾಗಿ, ಮಗುವಿನ ಶಿಕ್ಷಣಕ್ಕಾಗಿ, ಮನೆಯವರಿಗೆ ಔಷಧಿ ಖರೀದಿಸಲು ಹಣಕ್ಕಾಗಿ ಪರದಾಡುವ ಪರಿಸ್ಥಿತಿಯಿರುತ್ತದೋ ಅಂದಿನ ತನಕ ನಮ್ಮದು ಬಡ ದೇಶವಾಗಿಯೇ ಇರುತ್ತದೆ. ಬಡವರ ಮತ್ತು ಸಿರಿವಂತರ ನಡುವಿನ ಹೆಚ್ಚುತ್ತಿರುವ ಅಂತರ ಪ್ರಜಾಪ್ರಭುತ್ವವನ್ನು ವಿಫ‌ಲಗೊಳಿಸುತ್ತಿರುವುದು ಮಾತ್ರವಲ್ಲದೆ ದೇಶದಲ್ಲಿ ಭ್ರಷ್ಟಾಚಾರಕ್ಕೂ ಧಾರಾಳ ಪ್ರೋತ್ಸಾಹ ಸಿಗುತ್ತಿದೆ ಎನ್ನುವುದನ್ನು ತಿಳಿಸುತ್ತಿದೆ. 

ಅಭಿವೃದ್ಧಿ ಎನ್ನುವುದು ಎಲ್ಲರನ್ನೂ ಒಳಗೊಂಡಿರಬೇಕು ಅಥವಾ ಎಲ್ಲರ ಬದುಕನ್ನು ಬದಲಾಯಿಸಬೇಕು. ಇದನ್ನೇ ಸಮಗ್ರ ಅಭಿವೃದ್ಧಿ ಎನ್ನುವುದು. ಯಾರೋ ಬೆರಳೆಣಿಕೆಯ ಉದ್ಯಮಿಗಳು ಮಾತ್ರ ವರ್ಷದಿಂದ ವರ್ಷಕ್ಕೆ ದುಂಡಗಾಗುತ್ತಾ ಹೋಗುವುದು ನೈಜ ಅಭಿವೃದ್ಧಿಯಾಗುವುದಿಲ್ಲ. ಇದು ಬಂಡವಾಳಶಾಹಿ ವ್ಯವಸ್ಥೆಯ ಹಿಡಿತ ಇನ್ನಷ್ಟು ಬಲವಾಗಲು ಸಹಕಾರಿ ಯಾಗುತ್ತದೆಯಷ್ಟೆ. ಈ ನಿಟ್ಟಿನಲ್ಲಿ ಶ್ರೀಮಂತರ ಮೇಲೆ ಇನ್ನಷ್ಟು ತೆರಿಗೆ ಹಾಕುವ ಆಯ್ಕೆಯನ್ನು ಪರಿಗಣಿಸಬೇಕು. ಕಾರ್ಪೋರೇಟ್‌ ತೆರಿಗೆಯನ್ನು ಇನ್ನಷ್ಟು ಬಿಗುಗೊಳಿಸಬೇಕು ಹಾಗೂ ಇದೇ ವೇಳೆ ಸರಕಾರ ಹೆಚ್ಚು ನೌಕರಿ ಸೃಷ್ಟಿಯಾಗುವ ಕಾರ್ಮಿಕ ಕ್ಷೇತ್ರವನ್ನು ಉತ್ತೇಜಿಸುವಂತಹ ನೀತಿಗಳನ್ನು ರೂಪಿಸಬೇಕು. ಕೃಷಿಯಲ್ಲಿ ಹೆಚ್ಚಿನ ಹೂಡಿಕೆಗೆ ಮಾಡಬೇಕು ಮತ್ತು ಆರೋಗ್ಯ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕು. ದಾವೋಸ್‌ ಶೃಂಗದಲ್ಲಿ ಈ ಕುರಿತು ಕೂಡ ಚರ್ಚೆಯಾಗಲಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next