Advertisement

ಉತ್ತರವಿಲ್ಲದ ಪ್ರಶ್ನೆಗಳ ವಿಸ್ಮಯಕಾರಿ ಚಿತ್ರ!

10:54 AM Jul 29, 2017 | Team Udayavani |

ಮುಂದಿನ ಕೊಲೆ ತನ್ನದೇ! ಹಾಗಂತ ಅವನಿಗೆ ಬಹಳ ಸ್ಪಷ್ಟವಾಗಿಬಿಡುತ್ತದೆ. ಮೊದಲ ಹೆಣ ಬಿದ್ದಾಗ, ಯಾವನೋ ಸೈಕೋಪಾತ್‌ ಈ ಕೊಲೆಗಳನ್ನು ಮಾಡುತ್ತಿರಬಹುದು ಎಂದು ಅವನಿಗೆ ಅನಿಸುತ್ತದೆ. ಎರಡನೆಯ ಹೆಣ ಬಿದ್ದಾಗ ತನ್ನ ಬುದ್ಧಿವಂತಿಕೆಯನ್ನು ಯಾರೋ ಚಾಲೆಂಜ್‌ ಮಾಡುತ್ತಿದ್ದಾರೆ ಅನಿಸುತ್ತದೆ. ಮೂರನೆಯ ಹೆಣ ಬಿದ್ದಾಗ, ಮೂರೂ ಕೊಲೆಗಳನ್ನು ಒಬ್ಬನೇ ಮಾಡಿದ್ದಾನೆ ಮತ್ತು ನಾಲ್ಕನೆಯ ಟಾರ್ಗೆಟ್‌ ತಾನು ಎಂದು ಸ್ಪಷ್ಟವಾಗಿಬಿಡುತ್ತದೆ …

Advertisement

“ವಿಸ್ಮಯ’ ಒಂದು ಪಕ್ಕಾ ಥ್ರಿಲ್ಲರ್‌ ಮತ್ತು ಮರ್ಡರ್‌ ಮಿಸ್ಟ್ರಿ ಚಿತ್ರ. ಇಲ್ಲಿ ಒಬ್ಟಾತ ಕೊಲೆಗಳನ್ನು ಮಾಡುವುದಷ್ಟೇ ಅಲ್ಲ, ಪ್ರತಿ ಬಾರಿಯೂ ಚಿತ್ರ ಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡುತ್ತಿರುತ್ತಾನೆ. ಕೊಲೆಯಾದವನ ಮುಖಕ್ಕೊಂದು ಮುಖವಾಡ ಹಾಕುವುದರ ಜೊತೆಗೆ ಬೆನ್ನಿನ ಮೇಲೆ ಒಂದು ಕೋಡ್‌ ನಂಬರ್‌ ಸಹ ಬರೆದಿರುತ್ತಾನೆ. ಇದೆಲ್ಲಾ ಆದ ಮೇಲೆ ಬುಲೆಟ್‌ ಹೊಡೆಯುತ್ತಿರುತ್ತಾನೆ. ಈ ಮೂಲಕ ಕ್ಲೂ ಕೊಡುತ್ತಿರುತ್ತಾನೆ. ಅಷ್ಟೇ ಅಲ್ಲ, ಮುಂದಿನ ಕೊಲೆಗೂ ಮುಂಚಿತವಾಗಿ ಒಂದು ಕ್ಲೂ ಕೊಟ್ಟು ಹೋಗುತ್ತಿರುತ್ತಾನೆ.

ಆದರೆ, ಇವೆಲ್ಲಾ ಅರ್ಥವಾಗುವುದಕ್ಕೆ ಕ್ರೈಮ್‌ ಸ್ಪೆಷಲಿಸ್ಟ್‌ ರಂಜಿತ್‌ ಕಾಳಿದಾಸ್‌ಗೆ ಸ್ವಲ್ಪ ಹೊತ್ತು ಹಿಡಿಯುತ್ತದೆ. ಈ ವಿಷಯಗಳು ಸ್ಪಷ್ಟವಾಗುತ್ತಿದ್ದಂತೆ, ಮುಂದೆ ಕೊಲೆಯಾಗೋದು ತಾನೆ ಎಂಬುದು ಸಹ ಅರ್ಥವಾಗುತ್ತದೆ. ಈ ಕೊಲೆಗಳನ್ನು ಮಾಡಿದ್ದು ಯಾರು ಎಂಬುದರ ಜೊತೆಗೆ ತಾನು ಸಾಯುವುದನ್ನು ತಪ್ಪಿಸಿಕೊಳ್ಳುವುದಕ್ಕೆ ಅವನು ಮಾಡಬೇಕಾಗಿರುವುದು ಅದೊಂದೇ. ತಲೆ ಓಡಿಸುವುದು. ತನ್ನನ್ನು ಸಾಯಿಸುವುದಕ್ಕೆ ಯಾವ ಘಟನೆ ಕಾರಣವಾಗಿರಬಹುದು ಎಂಬುದನ್ನು ಅವನು ಮೊದಲು ಯೋಚಿಸಬೇಕು.

ಮಾನಸಿಕವಾಗಿ ಹಿಂದೆ ಹೋದರಷ್ಟೇ, ಮುಂದೆ ಹೋಗಿ ಕೊಲೆಗಾರನನ್ನು ಹಿಡಿಯಬಹುದು ಎಂದು ಸ್ಪಷ್ಟವಾಗುತ್ತದೆ. ಅಲ್ಲಿಂದ ಕ್ರಮೇಣ, ಅವನು ಹಿಂದಕ್ಕೆ ಓಡುತ್ತಾ ಹೋಗುತ್ತಾನೆ. ಹಾಗೆ ಹೋದವನು, ಕೊಲೆಗಾರನನ್ನು ಓವರ್‌ಟೇಕ್‌ ಮಾಡಿ, ರಹಸ್ಯವನ್ನು ಬಯಲು ಮಾಡುತಾನಾ ಎಂದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬಹುದು. ತಮಿಳಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಲವು ಮೈಂಡ್‌ ಗೇಮ್‌ ಚಿತ್ರಗಳು ಬಂದಿವೆ. ಅಂತಹ ಸಾಲಿಗೆ ಇದು ಸಹ ಒಂದು. ಹಾಗಂತ ಇದು ತಮಿಳಿನ ಚಿತ್ರದ ರೀಮೇಕ್‌ ಅಲ್ಲ.

ತಮಿಳು ನಿರ್ದೇಶಕ ಅರುಣ್‌ ವೈದ್ಯನಾಥನ್‌ ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ಮಾಡಿರುವ ಚಿತ್ರವಿದು. ಚಿತ್ರಕ್ಕೆ ಕಥೆಯೂ ಅವರದ್ದೇ. ಇಲ್ಲಿ ಅವರು ಯಾವುದೇ ಪಾಠ, ಸಂದೇಶ, ಪ್ರವಚನ ಕೊಡುವುದಕ್ಕೆ ಹೋಗಿಲ್ಲ. ನೇರವಾಗಿ ಒಬ್ಬ ಪೊಲೀಸ್‌ ಅಧಿಕಾರಿಯ ನೂರನೇ ಕೇಸ್‌ ಕುರಿತ ಚಿತ್ರವೊಂದು ಮಾಡಿದ್ದಾರೆ. ಕಥೆಗೆ ಸ್ಫೂರ್ತಿಯಾಗಿ ಅವರು ಕೆಲವು ವರ್ಷಗಳ ಹಿಂದೆ ನಡೆದ ಒಂದು ಘಟನೆಯನ್ನು ತೆಗೆದುಕೊಂಡಿದ್ದಾರೆ.

Advertisement

ಇಡೀ ದೇಶವನ್ನು ಬೆಚ್ಚಿಬೀಳಿಸಿದ ಆ ಘಟನೆಯನ್ನಿಟ್ಟುಕೊಂಡು ಈಗಾಗಲೇ ಕೆಲವು ಚಿತ್ರಗಳು ಬಂದಿವೆ. ಆ ಚಿತ್ರಗಳೆಲ್ಲಾ ಬರೀ ಆ ಘಟನೆ ಮತ್ತು ಆ ನಂತರ ಏನಾಗಿತ್ತು ಎನ್ನುವುದರ ಕುರಿತು ಹೇಳಿದ್ದವು. ಅರುಣ್‌ ಆ ಘಟನೆಯನ್ನು ಹಿನ್ನೆಲೆಯಾಗಿಟ್ಟುಕೊಂಡು, ಒಂದು ಕಾಲ್ಪನಿಕ ಮರ್ಡರ್‌ ಮಿಸ್ಟ್ರಿ ಹೆಣೆದಿದ್ದಾರೆ. ಒಂದು ಘಟನೆಯನ್ನು ಕಾಲ್ಪನಿಕವಾಗಿ ಹಾಗೂ ಮುಂದುವರೆಸಬಹುದು ಎಂದು ತೋರಿಸಿದ್ದಾರೆ.

ಒಂದು ಮರ್ಡರ್‌ ಮಿಸ್ಟ್ರಿಗೆ ಬೇಕಾದಂತಹ ಗಾಂಭೀರ್ಯ ಚಿತ್ರದಲ್ಲಿದೆ. ಇಲ್ಲಿ ಅರುಣ್‌ ಕಥೆ ಬಿಟ್ಟು ಹೋಗುವುದಿಲ್ಲ. ಹೇಳುವುದನ್ನು ನೇರವಾಗಿ ಹೇಳಿದ್ದಾರೆ. ಆದರೂ ರಂಜಿತ್‌ ಕಾಳಿದಾಸನ ಫ್ಯಾಮಿಲಿ ಲೈಫ‌ು ಬೋರು ಹೊಡೆಸುತ್ತದೆ. ಇನ್ನು ಚಿತ್ರದ ದೊಡ್ಡ ಸಮಸ್ಯೆಯೆಂದರೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಗದಿರುವುದು. ಪ್ರಮುಖವಾಗಿ ಮೂರನೆಯ ಕೊಲೆ ನಡೆಯುವ ಹೊತ್ತಿಗೆ, ರಂಜಿತ್‌ಗೆ ಹಲವು ವಿಷಯಗಳು ಜ್ಞಾನೋದಯವಾಗುತ್ತದೆ.

ಒಬ್ಬ ಪುಟ್ಟ ಹುಡುಗನನ್ನು ನೋಡಿ, ಆತನ ಹೆಸರು ಕೇಳುತ್ತಿದ್ದಂತೆಯೇ ಏನೋ ಹೊಳೆಯುತ್ತದೆ ಮತ್ತು ಅದರಿಂದ ಕೊಲೆಗಳಿಗೊಂದು ಲೀಡ್‌ ಸಿಗುತ್ತದೆ. ಅದೆಲ್ಲಾ ಹೇಗೆ ಸಾಧ್ಯವಾಗುತ್ತದೆ ಎಂಬುದಕ್ಕೆ ಯಾವುದೇ ಉತ್ತರ ಅಥವಾ ಸಮಜಾಯಿಷಿಗಳಿಲ್ಲ. ಇಂತಹ ಕೆಲವು ವಿಷಯಗಳನ್ನು ಸ್ಪಷ್ಟಪಡಿಸುವ ಅಗತ್ಯವಿತ್ತು. ಅದು ಬಿಟ್ಟರೆ, ಮಿಕ್ಕಂತೆ ಚಿತ್ರದ ಬಗ್ಗೆ ಹೆಚ್ಚು ತಪ್ಪುಗಳನ್ನು ಹುಡುಕುವುದು ಕಷ್ಟ.

ಅರ್ಜುನ್‌ ಸರ್ಜಾ ಅವರಿಗೆ ಹೇಳಿ ಮಾಡಿಸಿದಂತಹ ಪಾತ್ರವಿದೆ ಮತ್ತು ಅವರು ಬಹಳ ಚೆನ್ನಾಗಿ ಅದನ್ನು ಬಳಸಿಕೊಂಡಿದ್ದಾರೆ. ಒಬ್ಬ ಪೊಲೀಸ್‌ ಅಧಿಕಾರಿಯ ಚುರುಕುತನ ಮತ್ತು ಹತಾಶೆಗಳನ್ನು ಬಹಳ ಚೆನ್ನಾಗಿ ತಮ್ಮ ಪಾತ್ರದಲ್ಲಿ ಹಿಡಿದಿಟ್ಟಿದ್ದಾರೆ. ಶ್ರುತಿ ಹರಿಹರನ್‌ಗೆ ಹೆಚ್ಚು ಕೆಲಸವಿಲ್ಲ. ಪ್ರಸನ್ನ, ವರಲಕ್ಷ್ಮೀ, ಸುಹಾಸಿನಿ, ಸುಮನ್‌, ಸುಧಾರಾಣಿ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ತಮ್ಮ ಕೆಲಸವನ್ನು ನೀಟ್‌ ಆಗಿ ಮಾಡಿದ್ದಾರೆ.

ಅರ್ಜುನ್‌ ಬಿಟ್ಟರೆ, ಗಮನಸೆಳೆಯುವ ಮತ್ತೂಬ್ಬ ವ್ಯಕ್ತಿ ಎಂದರೆ ಅದು ಜೆಕೆ. ಬಹಳ ದಿನಗಳ ನಂತರ ಚಿತ್ರವೊಂದರಲ್ಲಿ ನಟಿಸಿರುವ ಜೆಕೆ, ಒಂದೊಳ್ಳೆಯ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ನವೀನ್‌ ಅವರ ಹಾಡುಗಳಿಗಿಂಥ ಹಿನ್ನೆಲೆ ಸಂಗೀತ ಚೆನ್ನಾಗಿದೆ. ಅರವಿಂದ್‌ ಕೃಷ್ಣ ಬಹಳ ಚೆನ್ನಾಗಿ ಚಿತ್ರದ ಮೂಡ್‌ ಕಟ್ಟಿಕೊಟ್ಟಿದ್ದಾರೆ.

ಚಿತ್ರ: ವಿಸ್ಮಯ
ನಿರ್ದೇಶನ: ಅರುಣ್‌ ವೈದ್ಯನಾಥನ್‌
ನಿರ್ಮಾಣ: ಉಮೇಶ್‌, ಸುಧನ್‌ ಸುಂದರಂ, ಜಯರಾಮ್‌ ಮತ್ತು ಅರುಣ್‌ ವೈದ್ಯನಾಥನ್‌
ತಾರಾಗಣ: ಅರ್ಜುನ್‌ ಸರ್ಜಾ, ಶ್ರುತಿ ಹರಿಹರನ್‌, ಪ್ರಸನ್ನ, ವರಲಕ್ಷ್ಮೀ ಶರತ್‌ ಕುಮಾರ್‌, ಜೆಕೆ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next