ಉಡುಪಿ: ದೇಶದಲ್ಲಿ ಜಾರಿಗೆ ತರಲಾಗುವ ರಾಷ್ಟ್ರೀಯ ಸಹಕಾರಿ ನೀತಿಯಲ್ಲಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಏಕರೂಪಿ ತಂತ್ರಜ್ಞಾನದ ಅಳವಡಿಕೆಗೆ ಆದ್ಯತೆ ನೀಡಲಾಗಿದೆ ಎಂದು ಹೊಸ ರಾಷ್ಟ್ರೀಯ ಸಹಕಾರಿ ನೀತಿಯ ರಚನೆ ಸಮಿತಿ ಅಧ್ಯಕ್ಷ, ಕೇಂದ್ರದ ಮಾಜಿ ಸಚಿವ ಸುರೇಶ್ ಪಿ.ಪ್ರಭು ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ಹೋಟೇಲ್ ಡಯಾನದ ಸಭಾಂಗಣದಲ್ಲಿ ಸಹಕಾರ ಭಾರತಿ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಆಯೋಜಿಸಲಾದ ಸತ್ಕಾರ ಕೂಟದಲ್ಲಿ ಪಾಲ್ಗೊಂಡು ಮಾತನಾಡಿದರು.
ಭವಿಷ್ಯದ ಭಾರತದಲ್ಲಿ ಸಹಕಾರಿ ಕ್ಷೇತ್ರವು ಆರ್ಥಿಕ, ವಾಣಿಜ್ಯಿಕ, ಔದ್ಯಮಿಕ ಮತ್ತು ಸಾಮಾಜಿಕ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಲಿದ್ದು, ಸಹಕಾರಿ ಕ್ಷೇತ್ರದಲ್ಲಿ ದೇಶವ್ಯಾಪಿ ಏಕರೂಪಿ ತಂತ್ರಜ್ಞಾನ ಜಾರಿಗೆ ತಂದು ಭವಿಷ್ಯದ ಆರ್ಥಿಕತೆಯ ನಾಯಕತ್ವ ವಹಿಸಲು ಸಹಕಾರಿ ಕ್ಷೇತ್ರವನ್ನು ಸಜ್ಜುಗೊಳಿಸಲಾಗುವುದು ಎಂದರು.
ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಬೋಳ ಸದಾಶಿವ ಶೆಟ್ಟಿ ಅವರು ಸುರೇಶ್ ಪ್ರಭು, ಉಮಾ ಸುರೇಶ್ ಪ್ರಭು ದಂಪತಿ ಸಮ್ಮಾನಿಸಿದರು.
ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.ಸಹಕಾರ ಭಾರತಿ ವತಿಯಿಂದ ರಾಷ್ಟ್ರೀಯ ಮತ್ಸ್ಯ ಪ್ರಕೋಷ್ಠದ ಸಹ ಸಂಚಾಲಕ ಮಂಜುನಾಥ ಎಸ್.ಕೆ. ಅವರು, ನೂತನ ಸಹಕಾರಿ ನೀತಿಯಲ್ಲಿ ಹಾಲು ಉತ್ಪಾದಕರ ಸಂಘಗಳಿಗೆ ವಿವಿಧೋದ್ದೇಶ ಹೈನುಗಾರಿಕಾ ಸಂಘಗಳಾಗಿ ಪರಿವರ್ತಿಸಲು ಅವಕಾಶ, ಕೇಂದ್ರ ಸರಕಾರದಿಂದ ರೈತರ ಖಾತೆಗಳಿಗೆ ನೇರವಾಗಿ ಪ್ರತಿ ಲೀಟರ್ ಹಾಲಿಗೆ ಐದು ರೂ. ಪ್ರೋತ್ಸಾಹ ಧನ, ಜಿಲ್ಲಾ ಮಟ್ಟದಲ್ಲಿ ಪ್ರತ್ಯೇಕ ಸಹಕಾರಿ ನ್ಯಾಯಾಲಯಗಳ ಸ್ಥಾಪನೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಕೇಂದ್ರ ಸರಕಾರದಿಂದ ನಿರ್ವಹಿಸಲ್ಪಡುವ ಪ್ರತ್ಯೇಕ ರೈತ ಜನೋಪಯೋಗಿ ಕೇಂದ್ರಗಳ ಸ್ಥಾಪನೆ ಮೊದಲಾದ ವಿಚಾರಗಳನ್ನು ಅಳವಡಿಸಬೇಕೆಂದು ಮನವಿ ಸಲ್ಲಿಸಿದರು.
ಜಿಲ್ಲಾ ಸಹಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಸುಜಿತ್ ಶೆಟ್ಟಿ, ಜಿಲ್ಲಾ ಸಹಕಾರ ಭಾರತಿ ಪದಾಧಿಕಾರಿಗಳು ಹಾಗೂ ಜಿಲ್ಲೆಯ ವಿವಿಧ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳಾದ ರವೀಂದ್ರ ನಾಯಕ್ ನೀರೆ, ಮಧುಸೂದನ ನಾಯಕ್ ಭೈರಂಜೆ, ಗಿರೀಶ್ ಪೈ ಬ್ರಹ್ಮಾವರ, ಮುರಳೀಧರ ಪೈ ಕಟಪಾಡಿ, ವಿನಯ ಶೆಟ್ಟಿ ನೀರೆ, ವಿವೇಕ್ ಶೆಟ್ಟಿ ಎರ್ಲಪಾಡಿ, ಸತೀಶ್ ಬ್ರಹ್ಮಾವರ, ಪ್ರಕಾಶ್ ಸುವರ್ಣ ಕಟಪಾಡಿ, ಪ್ರಶಾಂತ್ ಕುಮಾರ್ ಶೀರೂರು, ರಘುರಾಮ ಮರಕಾಲ, ನ್ಯಾಯವಾದಿ ಸಹಕಾರಿ ಸಂಘದ ಸದಾಶಿವ ಶೆಟ್ಟಿ, ಪದ್ಮನಾಭ ಮೊದಲಾದವರು ಭಾಗವಹಿಸಿದ್ದರು. ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಠದ ಸಂಚಾಲಕ ಸಾಣೂರು ನರಸಿಂಹ ಕಾಮತ್ ಸ್ವಾಗತಿಸಿ, ನಿರೂಪಿಸಿದರು. ಕಾರ್ಕಳ ಪಿಕಾರ್ಡ್ ಬ್ಯಾಂಕಿನ ನಿರ್ದೇಶಕ ರಘುವೀರ ಶೆಣೈ ವಂದಿಸಿದರು.