Advertisement

T. S. Srivatsa;ಮುನಿರತ್ನ ಬಂಧನ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ: ಆರೋಪ

07:19 PM Sep 16, 2024 | Team Udayavani |

ಮೈಸೂರು: ಶಾಸಕ ಮುನಿರತ್ನ ಬಂಧನ ವಿಚಾರದಲ್ಲಿ ಸರ್ಕಾರ ದ್ವಿಮುಖ ನೀತಿ ಅನುಸರಿಸಿದೆ ಎಂದು ಶಾಸಕ ಟಿ.ಎಸ್‌. ಶ್ರೀವತ್ಸ ಕಿಡಿಕಾರಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಮುನಿರತ್ನ ಅವರ ವಿಚಾರದಲ್ಲಿ ಇಬ್ಬಂದಿ ನೀತಿ ಅನುಸರಿಸಿದೆ. ಇದೇ ರೀತಿಯ ಆರೋಪಕ್ಕೆ ಗುರಿಯಾಗಿರುವ ಕಾಂಗ್ರೆಸ್‌ ಶಾಸಕ ಚೆನ್ನಾರೆಡ್ಡಿಯನ್ನು ಪೊಲೀಸರು ಇದುವರೆಗೂ ಬಂಧಿಸಿಲ್ಲ. ಚೆನ್ನಾರೆಡ್ಡಿ ಗೃಹ ಸಚಿವರ ನಿವಾಸದಲ್ಲೇ ಓಡಾಡಿಕೊಂಡಿದ್ದಾರೆ. ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಪ್ರಕರಣ ದಾಖಲಾಗಿ 24 ಗಂಟೆಯೊಳಗೆ ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಕರಣ ಸಂಬಂಧ ಬಿಡುಗಡೆಯಾಗಿರುವ ಆಡಿಯೋದಲ್ಲಿನ ಧ್ವನಿ ನನ್ನದಲ್ಲ ಎಂದು ಮುನಿರತ್ನ ಹೇಳಿದ್ದಾರೆ. ಹಾಗಾಗಿ ಎಫ್ಎಸ್ಸೆಲ್‌ ವರದಿ ಬರುವವರೆಗೂ ಕಾಯಬೇಕಿತ್ತು. ಒಂದು ವೇಳೆ ಮುನಿರತ್ನ ಎರಡು ಸಮುದಾಯಗಳನ್ನು ಗುರಿಯಾಗಿಸಿಕೊಂಡು ಅವಾಚ್ಯ ಶಬ್ದ ಬಳಸಿ ಟೀಕಿಸಿರುವುದು ಸತ್ಯವಾಗಿದ್ದರೆ ಖಂಡಿತವಾಗಿಯೂ ನಾವು ಒಪ್ಪುವುದಿಲ್ಲ ಎಂದರು.

ಮೈಸೂರಲ್ಲಿ ಬಾಂಗ್ಲಾ ದೇಶಿಯರು ಅಕ್ರಮವಾಗಿ ನೆಲೆಸಿದ್ದಾರೆ. ಕಳೆದ ತಿಂಗಳು ಬೆಂಗಳೂರಿನಿಂದ ಬಸ್‌ನಲ್ಲಿ ಬರುವಾಗ ಏಳು ಮಂದಿ ಬಾಂಗ್ಲಾದೇಶಿಯರು ಇದ್ದರು. ಅವರ ಬಳಿ ಎರಡು ಗುರುತಿನ ಚೀಟಿಗಳಿದ್ದವು. ನಾವು ಬಸ್ಸನ್ನು ನೇರವಾಗಿ ಲಷ್ಕರ್‌ ಪೊಲೀಸ್‌ ಠಾಣೆಗೆ ಕರೆತಂದೆವು. ಆಗ ಪೊಲೀಸರು ಏಳು ಮಂದಿಯನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡರು. ಇದು ಮೈಸೂರಿನಲ್ಲಿ ಅಕ್ರಮವಾಗಿ ಬಾಂಗ್ಲಾ ದೇಶೀಯರು ನೆಲೆಸಿರುವುದಕ್ಕೆ ಸಾಕ್ಷಿಯಾಗಿದೆ. ಈ ಬಗ್ಗೆ ಪೊಲೀಸ್‌ ಇಲಾಖೆ ಎಚ್ಚರಿಕೆ ವಹಿಸಬೇಕು. ಅಕ್ರಮವಾಗಿ ನೆಲೆಸಿರುವ ವಿದೇಶಿಗರನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next