Advertisement

Udupi: ಪುತ್ತಿಗೆ ಪರ್ಯಾಯಕ್ಕೆ “ರಾಜ ದರ್ಬಾರ್‌” ಮೆರುಗು

10:26 AM Jan 19, 2024 | Team Udayavani |

ಉಡುಪಿ: ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನಾಲ್ಕನೆಯ ಪರ್ಯಾಯ ಮಹೋತ್ಸವದ ಅಂಗವಾಗಿ ಗುರುವಾರ ಮುಂಜಾನೆ ರಾಜಾಂಗಣದ ನಡೆದ ಪರ್ಯಾಯ ದರ್ಬಾರ್‌ ರಾಜ ದರ್ಬಾರಿನ ಮೆರುಗು ಪಡೆದಿತ್ತು. ವೇದಿಕೆಯನ್ನು ವಿಶೇಷವಾಗಿ ಅಲಂಕರಿಸಿ, ದಶಾವತಾರದ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಪರ್ಯಾಯ ಮೆರವಣಿಗೆ ಸಂಪನ್ನಗೊಳಿಸಿ, ಕೃಷ್ಣ ಪೂಜಾಧಿಕಾರ ಪಡೆದ ಅನಂತರ ರಾಜಾಂಗಣಕ್ಕೆ ಯತಿ ದ್ವಯರು ಆಗಮಿಸಿದರು.

Advertisement

ದರ್ಬಾರ್‌ ಆರಂಭದಲ್ಲಿ ಪುತ್ತಿಗೆ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ವೇದಘೋಷ ಜರಗಿತು. ದರ್ಬಾರ್‌ ಕಾರ್ಯಕ್ರಮಕ್ಕೂ ಮೊದಲು ವಿ| ಎ. ಚಂದನ್‌ ಕುಮಾರ್‌ ಮತ್ತು ಬಳದಿಂದ ಕೊಳಲು ವಾದನ, ಪಟ್ಲ ಸತೀಶ್‌ ಶೆಟ್ಟಿ, ರತ್ನಕರ ಶೆಣೈ ಭಾಗವತಿಕೆಯಲ್ಲಿ ಬಡಗು, ತೆಂಕುತಿಟ್ಟು ಹಾಗೂ ಭರತನಾಟ್ಯ ಒಳಗೊಂಡ ಶ್ರೀಕೃಷ್ಣಗೀತಾ ರೂಪಕ ಪ್ರಸ್ತುತಗೊಂಡಿತು. ಅನಂತರ ಅಮೆರಿಕದ ಭಕ್ತನಿಂದ ಭಕ್ತಿಗೀತೆ, ನೃತ್ಯ ಗೋಪಾಲ (ಕಾಳಿಂಗ ಮರ್ದನ) ಗುಂಪುನೃತ್ಯ ನೆರವೇರಿತು.

ಕಲಿತದ್ದು 7ನೇ ತರಗತಿ- ನಿರರ್ಗಳ ಇಂಗ್ಲಿಷ್‌ ಭಾಷಣ
ವಿದೇಶಗಳ ಅತಿಥಿಗಳನ್ನುದ್ದೇಶಿಸಿ ಮಾತನಾಡುವಾಗ ಪುತ್ತಿಗೆ ಶ್ರೀಗಳು ನಿರರ್ಗಳವಾಗಿ ಇಂಗ್ಲಿಷ್‌ನಲ್ಲಿ ಮಾತನಾಡಿದರು. ಇವರು
ಅಧಿಕೃತವಾಗಿ ಓದಿದ್ದು ಕಾಪು ತಾಲೂಕಿನ ಕೆಮುಂಡೇಲು ಹಿ.ಪ್ರಾ. ಶಾಲೆಯಲ್ಲಿ ಏಳನೆಯ  ತರಗತಿವರೆಗೆ. ಅನಂತರ ಖಾಸಗಿಯಾಗಿ ಇಂಗ್ಲಿಷ್‌ ಕಲಿತು ವಿದೇಶಗಳಲ್ಲಿ ಇಂಗ್ಲಿಷ್‌ ಉಪನ್ಯಾಸ ಮಾಡುವುದನ್ನು ಕರಗತ ಮಾಡಿಕೊಂಡರು.

ಶ್ರೀಕೃಷ್ಣನ ಸೇವೆ ಜೀವನದ ಅಪೂರ್ವ ಅವಕಾಶ: ಪುತ್ತಿಗೆ ಶ್ರೀ
ಉಡುಪಿ: ಶ್ರೀಕೃಷ್ಣನ ಸೇವೆಯೇ ಜೀವನದ ಅಪೂರ್ವ ಅವಕಾಶ. ಗೀತೆಯಲ್ಲಿ ಹೇಳುವಂತೆ ಭಗವತ್‌ ಕೇಂದ್ರಿತ ಜೀವನವೇ ಮುಖ್ಯ ಎಂದು ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥರು ನುಡಿದರು. ಗುರುವಾರ ಬೆಳಗ್ಗೆ ರಾಜಾಂಗಣದಲ್ಲಿ ನಡೆದ ಪರ್ಯಾಯ ದರ್ಬಾರ್‌ ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ನಮಗೆ ಭಗವದ್ಗೀತೆಯೇ ಸ್ಫೂರ್ತಿ. ಭಗವಂತನನ್ನು ಸರ್ವಸ್ವ ಎಂದು ತಿಳಿದರೆ ಪಶ್ಚಾತ್ತಾಪ ಪಡುವಂತಿಲ್ಲ. ಭಗವಂತನ ಸಂಬಂಧವೇ ಶಾಶ್ವತ. ಉಳಿದ ಸಂಬಂಧಗಳು ಹೆಚ್ಚೆಂದರೆ ನೂರು ವರ್ಷ ಇರಬಹುದು ಎಂದರು.

ನಮಗೆ ಸನ್ಯಾಸವಾಗಿ 50 ವರ್ಷವಾಗಿದೆ. ಹೀಗಾಗಿ ಗೀತೆಯನ್ನು ಬೋಧಿಸಿದ ಶ್ರೀಕೃಷ್ಣನ (ಪಾರ್ಥಸಾರಥಿ ರೂಪ) ಸುವರ್ಣ ರಥವನ್ನು ಸಮರ್ಪಿಸಬೇಕೆಂದಿದ್ದೇವೆ. ಕೋಟಿ ಭಕ್ತರಿಂದ ಗೀತೆಯನ್ನು ಬರೆಸುವ ಕೋಟಿ ಲೇಖನ ಯಜ್ಞವನ್ನು ನಡೆಸಲಿದ್ದೇವೆ. ಅನ್ನದಾನಕ್ಕೆ ಗರಿಷ್ಠ ಆದ್ಯತೆ ನೀಡುತ್ತೇವೆ. ಅಖಂಡ ಗೀತಾ ಪಾರಾಯಣವೂ ಗೀತಾ ಮಂದಿರದಲ್ಲಿ ನಡೆಯಲಿದೆ ಎಂದು ಶ್ರೀಗಳು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next