Advertisement

Udupi: ಶಾಸಕರಿಗೆ ಇಂದ್ರಾಳಿ ನಿಲ್ದಾಣದ ಸತ್ಯ ದರ್ಶನ

03:25 PM Aug 03, 2024 | Team Udayavani |

ಉಡುಪಿ: ಉಡುಪಿಯ ಇಂದ್ರಾಳಿ ರೈಲ್ವೇ ನಿಲ್ದಾಣದ ಸಮಸ್ಯೆಗಳ ಬಗ್ಗೆ ಉದಯವಾಣಿಯ ಸುದಿನದಲ್ಲಿ ಸರಣಿ ವರದಿ ಪ್ರಕಟವಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಯಶ್‌ಪಾಲ್‌ ಎ.ಸುವರ್ಣ ಅವರು ಶುಕ್ರವಾರ ಭೇಟಿ ನೀಡಿ ಕೊಂಕಣ ರೈಲ್ವೇ ಅಧಿಕಾರಿಗಳು ಹಾಗೂ ರೈಲ್ವೇ ಪೊಲೀಸರನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ ವಿವಿಧ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸೂಕ್ತ ಸಲಹೆ-ಸೂಚನೆ ನೀಡಿದರು. ಶಾಸಕರಿಗೆ ನಿಲ್ದಾಣದ ಬಹುತೇಕ ಎಲ್ಲ ಸಮಸ್ಯೆಗಳ ಸತ್ಯದರ್ಶನವಾಯಿತು.

Advertisement

ಜಿಲ್ಲೆಯಲ್ಲಿ ವಿವಿಧ ಪ್ರಕಾರದ ಕಳ್ಳತನ ಪ್ರಕರಣಗಳು ಹೆಚ್ಚಳ ಕಂಡುಬರುತ್ತಿದ್ದು ಈ ನಿಟ್ಟಿನಲ್ಲಿ ರೈಲ್ವೇ ನಿಲ್ದಾಣದಲ್ಲಿ ಭದ್ರತೆಯನ್ನು ಹೆಚ್ಚಿಸುವ ಕೆಲಸವಾಗಬೇಕು. ಅನ್ಯ ರಾಜ್ಯದಿಂದ ಹಲವಾರು ಮಂದಿ ಆಗಮಿಸುವ ಕಾರಣ ರೈಲ್ವೇ ಪೊಲೀಸರು ಬೀಟ್‌ ರೀತಿ ಕಾರ್ಯಾಚರಣೆ ಮಾಡಬೇಕು ಎಂದರು.

ಈ ವೇಳೆ ಸಿಬಂದಿ ಸಮಸ್ಯೆಯ ಬಗ್ಗೆ ರೈಲ್ವೇ ಪೊಲೀಸರು ತಿಳಿಸಿದ್ದು, ಸಿಬಂದಿ ಆವಶ್ಯಕತೆಯ ಬಗ್ಗೆ ಸೂಕ್ತ ವರದಿ ನೀಡುವ ಜತೆಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ ಹೆಚ್ಚುವರಿ ಪೊಲೀಸರ ನೆರವು ಕೋರುವಂತೆ ತಿಳಿಸಿದರು.

ಬೇಡಿಕೆಗಳ ಪಟ್ಟಿ ನೀಡಲು ಸೂಚನೆ ತುರ್ತು ಆಗಬೇಕಿರುವ ಕ್ರಮಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಬೇಕು. ಸಿಎಸ್‌ಆರ್‌ ಫಂಡ್‌ ಮೂಲಕ ಇದರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ತಾನು ಗಮನಹರಿಸುವೆ. ಉಳಿದಂತೆ ಇರುವ ಬೇಡಿಕೆಗಳ ಬಗ್ಗೆ ಅತೀ ಶೀಘ್ರದಲ್ಲಿ ಪಟ್ಟಿ ಮಾಡಿ ನೀಡಬೇಕು.

ಇದರಲ್ಲಿ ನಗರಸಭೆ, ರೈಲ್ವೇ ಇಲಾಖೆ ಹಾಗೂ ಸಿಎಸ್‌ ಆರ್‌ ಅನುದಾನದಲ್ಲಿ ಯಾವುದನ್ನು ಮಾಡಬಹುದು ಎಂಬುವುದನ್ನು ಅನಂತರ ಸಭೆ ಮಾಡಿ ನಿರ್ಧಾರ ಮಾಡಲಾಗುವುದು ಎಂದರು. ಇದೇ ವೇಳೆ ಸ್ಥಳೀಯರು ಕೆಲವು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು. ರೈಲ್ವೇ ಪಿಆರ್‌ಒ ಸುಧಾಕೃಷ್ಣ ಮೂರ್ತಿ, ನಗರಸಭೆ ಪರಿಸರ ಎಂಜಿನಿಯರ್‌ ಸ್ನೇಹಾ, ತಾಲೂಕು ಆರೋಗ್ಯ ಅಧಿಕಾರಿ ಡಾ| ವಾಸು, ನಗರ ಸಭೆಯ ಅಧಿಕಾರಿಗಳು, ಸದಸ್ಯರು, ಸ್ಥಳೀಯರಿದ್ದರು.

Advertisement

ಪ್ರವೇಶ ದ್ವಾರದಲ್ಲಿ ತಪಾಸಣೆ ಅಗತ್ಯ

ರೈಲ್ವೇ ನಿಲ್ದಾಣಕ್ಕೆ ಆಗಮಿಸುವ ಹಾಗೂ ನಿರ್ಗಮಿಸುವ ದಾರಿಯಲ್ಲಿ ಸೂಕ್ತ ಭದ್ರತಾ ಸಿಬಂದಿ ಅಥವಾ ಪೊಲೀಸರನ್ನು ನಿಯೋಜಿಸಬೇಕು. ಕೆಮರಾಗಳನ್ನೇ ನಂಬಿಕೊಂಡು ಇರಬಾರದು ಎಂದು ಶಾಸಕರು ಎಚ್ಚರಿಕೆ ನೀಡಿದರು.

ಪಾರ್ಕಿಂಗ್‌ ಅನ್ನು ಕೂಡ ವ್ಯವಸ್ಥಿತವಾಗಿ ನಡೆಸುವ ಜತೆಗೆ ಈ ಭಾಗದಲ್ಲಿ ಸೂಕ್ತ ಇಂಟರ್‌ಲಾಕ್‌ ವ್ಯವಸ್ಥೆ ಮಾಡಲು ಶಾಸಕರು ಸೂಚಿಸಿದರು.

ಪ್ರವಾಸ ಮಾಹಿತಿ ಕೌಂಟರ್‌ ನಿರ್ಮಿಸಿ ಉಡುಪಿ ಜಿಲ್ಲೆಯ ಪ್ರವಾಸೋದ್ಯಮ ಮಾಹಿತಿಗಳನ್ನೊಳಗೊಂಡ ವಿವರಗಳನ್ನು ಪ್ರವೇಶ ದ್ವಾರದಲ್ಲಿ ಅಳವಡಿಸಬೇಕು. ಪ್ಯಾಕೇಜ್‌ ಟೂರ್‌ಗಳ ಮಾಹಿತಿಗಳನ್ನು ಇದರಲ್ಲಿ ನಮೂದಿಸಬೇಕು. ಜತೆಗೆ ವಿವಿಧ ಎಸ್ಕಲೇಟರ್‌ಗೆ ಅಳವಡಿಸಿರುವ ಛಾವಣೆಯ ಹಿಂಭಾಗದಲ್ಲಿ ಕರಾವಳಿ ವಿವಿಧ ಸಂಸ್ಕೃತಿ ಸಾರುವ ಪೈಂಟಿಂಗ್‌ಗಳನ್ನು ಪ್ರದರ್ಶಿಸಬೇಕು. ರೈಲ್ವೇ ನಿಲ್ದಾಣದ ಒಟ್ಟು ಸೌಂದರ್ಯ ವೃದ್ಧಿಗೆ ವಿಶೇಷ ಆದ್ಯತೆ ನೀಡಬೇಕು.

ಕಸ ವಿಲೇವಾರಿ ಸಮಸ್ಯೆ

ರೈಲ್ವೇ ನಿಲ್ದಾಣದ ಕಸವನ್ನು ನಗರಸಭೆಯ ಮೂಲಕ ವಿಲೇವಾರಿ ಮಾಡಲಾಗುತ್ತಿದೆಯಾದರೂ ಅದರಲ್ಲಿ ಮಲ-ಮೂತ್ರಗಳು ಸಹಿತ ಎಲ್ಲವನ್ನೂ ಒಂದರಲ್ಲಿ ಹಾಕುವ ಕಾರಣ ಪ್ರತ್ಯೇಕಿಸಲು ತೊಂದರೆ ಉಂಟಾಗುತ್ತಿದೆ ಎಂದು ನಗರಸಭೆ ಅಧಿಕಾರಿ ತಿಳಿಸಿದರು. ಕಸವನ್ನು ಪ್ರತ್ಯೇಕಿಸಿ ನೀಡಿದರಷ್ಟೇ ವಿಲೇವಾರಿ ಮಾಡುವಂತೆ ನಗರಸಭೆಗೆ ಸೂಚನೆ ನೀಡಲಾಗುವುದು ಎಂದು ಶಾಸಕರು ರೈಲ್ವೇ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಉದಯವಾಣಿ ವರದಿಗೆ ಮೆಚ್ಚುಗೆ

ಉದಯವಾಣಿ ಪತ್ರಿಕೆಯು ಇಲ್ಲಿನ ಸಮಸ್ಯೆಗಳ ಬಗ್ಗೆ ನಿರಂತರ ವರದಿ ಪ್ರಕಟಿಸುವ ಮೂಲಕ ಅಧಿಕಾರಿಗಳ ಕಣ್ತೆರೆಸುವ ಕೆಲಸ ಮಾಡಿದೆ. ವರದಿಯಲ್ಲಿರುವ ಎಲ್ಲ ಅಂಶಗಳೂ ನೈಜತೆಯಿಂದ ಕೂಡಿವೆ. ಸಾಧ್ಯವಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹರಿಸುವಂತೆ ಸೂಚನೆ ನೀಡಿದ್ದೇನೆ. ಇನ್ನೊಂದು ಬಾರಿ ಇದೇ ರೀತಿ ದಿಢೀರ್‌ ಭೇಟಿ ನೀಡಿ ಇಲ್ಲಿನ ಕಾರ್ಯವೈಖರಿಗಳನ್ನು ಪರಿಶೀಲಿಸುವೆ. ಜಿಲ್ಲೆಯ ಕೇಂದ್ರ ನಿಲ್ದಾಣವಾದ ಇಲ್ಲಿ ಭದ್ರತೆ ಸಹಿತ ಮೂಲಸೌಕರ್ಯಗಳು ಇಲ್ಲದಿರುವುದು ಜಿಲ್ಲೆಗೂ ಮುಜುಗರ ತರುವಂತಿದೆ. ಈಗಾಗಲೇ ಅಮೃತ್‌ ಭಾರತ್‌ ಯೋಜನೆಯಡಿ ಈ ನಿಲ್ದಾಣ ಆಯ್ಕೆಯಾಗಿದ್ದು, ಮುಂದಿನ ದಿನಗಳಲ್ಲಿ ಸೂಕ್ತ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡಲಾಗುವುದು ಎಂದು ಶಾಸಕ ಯಶ್‌ಪಾಲ್‌ ಸುವರ್ಣ ಹೇಳಿದರು. ಉದಯವಾಣಿ ವರದಿಗೆ ಮೆಚ್ಚುಗೆ ಸುದಿನದಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖೀಸುತ್ತಲೇ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿದರು.

ಶಾಸಕರು ಬಂದರೂ ಎಸ್ಕಲೇಟರ್‌ ನಿರ್ಜೀವ!

ಗಣ್ಯ ವ್ಯಕ್ತಿಗಳು ಆಗಮಿಸುವಾಗ ಮಾತ್ರ ಜೀವ ಬರುವಎಸ್ಕಲೇಟರ್‌ ಅನ್ನು ವೀಕ್ಷಿಸಿದ ಶಾಸಕರು ಅದರ ನಿರ್ವಹಣೆ ಹಾಗೂ ಅಗತ್ಯತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಎಸ್ಕಲೇಟರ್‌ ಚೆನ್ನಾಗಿದೆ. ಯಾವ ಸಮಸ್ಯೆಯೂ ಇಲ್ಲ ಎಂದು ಪಿಆರ್‌ಒ ಮಾಹಿತಿ ನೀಡಿದರೂ ಅದು ಕೆಲಸ ಮಾಡಲೇ ಇಲ್ಲ! ಅನಂತರ ಶಾಸಕರು ಹಾಗೂ ಅಧಿಕಾರಿಗಳು ನಡೆದುಕೊಂಡೇ ಎಸ್ಕಲೇಟರ್‌ನಲ್ಲಿ ಇಳಿದರು. ಅಧಿಕಾರಿಗಳು, ಸಚಿವರು, ಗಣ್ಯರು ಬಂದಾಗ ಕಾಟಾಚಾರಕ್ಕೆ ಇದನ್ನು ಆನ್‌ ಮಾಡುವ ಬದಲು ದಿನನಿತ್ಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಾಡಬೇಕು ಎಂದು ಶಾಸಕರು ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next