Advertisement

ನರೇಗಾ ಯೋಜನೆಗೆ ಉಡುಪಿ ಮಲ್ಲಿಗೆ ಸೇರ್ಪಡೆ !

12:28 AM Feb 12, 2020 | mahesh |

ಉಡುಪಿ: ಇದೇ ಮೊದಲ ಬಾರಿ ನರೇಗಾ ಯೋಜನೆಗೆ ಬಹು ವಾರ್ಷಿಕ ಪುಷ್ಪ ಬೆಳೆ ಉಡುಪಿ ಮಲ್ಲಿಗೆ ಸೇರ್ಪಡೆಯಾಗಿದೆ. ಕರಾವಳಿಗರ ಬಹುಕಾಲದ ಬೇಡಿಕೆ ಇದೀಗ ಈಡೇರಿದೆ..

Advertisement

ಇಲಾಖೆಯಿಂದ ಪ್ರಸ್ತಾವನೆ
ತೋಟಗಾರಿಕೆ ಇಲಾಖೆಯಲ್ಲಿ ನರೇಗಾ ಯೋಜನೆಗೆ ತೆಂಗು, ಅಡಿಕೆ, ಕಾಳು ಮೆಣಸು ಸೇರಿದಂತೆ ವಿವಿಧ ಬೆಳೆಗಳಿಗೆ ಒಳಪಟ್ಟಿದ್ದವು. ಜಿಲ್ಲೆಯಲ್ಲಿ ಬಾರಿ ಪ್ರಮಾಣದಲ್ಲಿ ಉಡುಪಿ ಮಲ್ಲಿಗೆ ಕೃಷಿ ಬೆಳೆಸುವುದರಿಂದ ತೋಟಗಾರಿಕಾ ಇಲಾಖೆಯ ವತಿಯಿಂದ ಮಲ್ಲಿಗೆ ಕೃಷಿಯನ್ನು ನರೇಗಾ ಯೋಜನೆಯಡಿ ತರುವಂತೆ ಪ್ರಸ್ತಾವನೆ ಸಲ್ಲಿಸಿತ್ತು. ಇದೀಗ ಉಡುಪಿ ಮಲ್ಲಿಗೆಯೂ ಸೇರಿದಂತೆ ಗುಲಾಬಿ ಕೃಷಿಯೂ ನರೇಗಾದಲ್ಲಿ ಸೇರ್ಪಡೆಯಾಗಿದೆ.

ಮಲ್ಲಿಗೆ ಬೆಳೆಯುವ ಪ್ರದೇಶ
ಕೊಡಿಬೆಟ್ಟು, ಮಣಿಪುರ, ಅಲೆವೂರು, ಶಿರ್ವ, ಬೆಳ್ಳೆ, ಕಟಪಾಡಿ, ಕುರ್ಕಾಲು, ಇನ್ನಂಜೆ, ಮುದರಂಗಡಿ, ಎಲ್ಲೂರು, ಮಜೂರು, ಕೋಟೆ ಗ್ರಾ.ಪಂ. ವ್ಯಾಪ್ತಿಯ ಬೆಳೆಗಾರರಿಗೆ ವಿಶೇವಾಗಿ ಅನುಕೂಲವಾಗಲಿದೆ. ಜಿಲ್ಲೆಯ ಉಳಿದ ಭಾಗದ ರೈತರೂ ಈ ಯೋಜನೆಯ ಲಾಭ ಪಡೆಯಬಹುದು.

ಸಣ್ಣ ಕೃಷಿಕರಿಗೆ ಲಾಭ
ಯೋಜನೆಯಡಿ 5, 25, 50, 100 ಸೆಂಟ್ಸ್‌ನಲ್ಲಿ ಮಲ್ಲಿಗೆ ಕೃಷಿ ವಿಸ್ತರಿಸಲು ಅವಕಾಶವಿದೆ. ಇದರಿಂದಾಗಿ ಸಣ್ಣ ರೈತರಿಗೆ, ಮಹಿಳಾ ರೈತರಿಗೆ ಅನುಕೂಲವಾಗಲಿದೆ. ಯೋಜನೆ ಲಾಭ ವನ್ನು ತಮ್ಮ ಗ್ರಾ.ಪಂ.ಗಳಿಂದ ಪಡೆದುಕೊಳ್ಳಬಹುದಾಗಿದೆ. ನರೇಗಾ ಉದ್ಯೋಗ ಚೀಟಿ ಹೊಂದಿರುವ ರೈತರಿಗೆ ಈ ಯೋಜನೆಯ ಪ್ರಯೋಜನ ಪಡೆಯಬಹುದು.

ಎಷ್ಟು ಮೊತ್ತ?
5 ಸೆಂಟ್ಸ್‌ ನಲ್ಲಿ ಮಲ್ಲಿಗೆ ಕೃಷಿ ಮಾಡುವವರಿಗೆ 2,345 ಕೂಲಿ ವೆಚ್ಚ ಹಾಗೂ 3,581 ರೂ. ಸಾಮಗ್ರಿ ವೆಚ್ಚ ಸೇರಿದಂತೆ ಒಟ್ಟು 5,925 ರೂ., 10 ಸೆಂಟ್ಸ್‌ಗೆ 4,690 ಕೂಲಿ ವೆಚ್ಚ, ಸಾಮಗ್ರಿ ವೆಚ್ಚ 4,161ರೂ. ಸೇರಿದಂತೆ ಒಟ್ಟು 8,851 ರೂ., 25 ಸೆಂಟ್ಸ್‌ 11725 ಕೂಲಿ ವೆಚ್ಚ, ಸಾಮಗ್ರಿ ವೆಚ್ಚ 5903 ರೂ. ಸೇರಿದಂತೆ ಒಟ್ಟು 17,627 ರೂ., 50 ಸೆಂಟ್ಸ್‌ಗೆ 23,450 ರೂ., ಸಾಮಗ್ರಿ ವೆಚ್ಚ 8,305 ಸೇರಿದಂತೆ ಒಟ್ಟು 32,225 ರೂ., 100 ಸೆಂಟ್ಸ್‌ಗೆ ಕೂಲಿ ವೆಚ್ಚ 46,899 ರೂ., ಸಾಮಗ್ರಿ 14,610 ರೂ. ಸೇರಿದಂತೆ ಒಟ್ಟು 61,509 ಮೊತ್ತವನ್ನು ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಭರಿಸಲಿದೆ.

Advertisement

ವಿಸ್ತೀರ್ಣ
ಕಾರ್ಕಳ, ಕುಂದಾಪುರ, ಉಡುಪಿ ತಾಲೂಕಿನಲ್ಲಿ ಒಟ್ಟು 116 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಮಲ್ಲಿಗೆ ಕೃಷಿ ಮಾಡಲಾಗುತ್ತಿದೆ. ಒಂದು ಹೆಕ್ಟೇರ್‌ನಲ್ಲಿ 10 ಲ.ರೂ. ಮೌಲ್ಯದ ಬೆಳೆ ತೆಗೆಯಬಹುದಾಗಿದೆ. ಕಾರ್ಕಳ ತಾ. 45 ಹೆ., ಕುಂದಾಪುರದಲ್ಲಿ 3 ಹೆ., ಉಡುಪಿ 63 ಹೆ. ವಿಸ್ತೀರ್ಣದಲ್ಲಿ ಮಲ್ಲಿಗೆ ಕೃಷಿ ಬೆಳೆಸಲಾಗುತ್ತಿದೆ.

ಪ್ರಸ್ತಾವನೆ ಸಲ್ಲಿಕೆ
ನರೇಗಾದಲ್ಲಿ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿರುವವರಿಗೆ ಮಲ್ಲಿಗೆ ಕೃಷಿ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ. ಉದ್ಯೋಗ ಚೀಟಿ ಇಲ್ಲದವರು ಆಯಾ ಗ್ರಾ.ಪಂ. ನಲ್ಲಿ ಶೀಘ್ರದಲ್ಲಿ ಉದ್ಯೋಗ ಚೀಟಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಜಿಲ್ಲಾ ಇಲಾಖೆಯಿಂದ ಮಲ್ಲಿಗೆ ಕೃಷಿಯನ್ನು ನರೇಗಾ ವ್ಯಾಪ್ತಿಗೆ ತರುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.-ಭುವನೇಶ್ವರಿ, ಉಪ ನಿರ್ದೇಶಕಿ,
ತೋಟಗಾರಿಕಾ ಇಲಾಖೆ ಉಡುಪಿ.

ಆರ್ಥಿಕ ಸ್ವಾಲಂಬಿಗಳಾಗಲು ಅನುಕೂಲ
ನರೇಗಾದ ಉದ್ಯೋಗ ಚೀಟಿ ಹೊಂದಿರುವವರಿಗೆ 5 ಸೆಂಟ್ಸ್‌ ಜಾಗದಲ್ಲಿ ಮಲ್ಲಿಗೆ ಕೃಷಿಗೆ ಮಾಡಲು ಅವಕಾಶ ನೀಡಿರುವುದು ಸಂತಸ ತಂದಿದೆ. ಮಹಿಳಾ ರೈತರಿಗೆ ಆರ್ಥಿಕವಾಗಿ ಸ್ವಾಲಂಬಿಗಳಾಗಲು ಅನುಕೂಲ ಮಾಡಿಕೊಡಲಿದೆ.
-ದಿವ್ಯಾ, ಅಲೆವೂರು.

ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next