Advertisement

ಬಿಜೆಪಿ ನಾಯಕರೊಂದಿಗೆ ಸಚಿವ ಪ್ರಮೋದ್‌ : ‘ಕೈ’ಪಾಳಯದಲ್ಲಿ ತಳಮಳ!

04:29 PM Oct 17, 2017 | Team Udayavani |

ಉಡುಪಿ: ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದಲ್ಲಿ ಪ್ರಭಾವಿ ಸಚಿವರಾಗಿರುವ ಯುವ ನಾಯಕ ಪ್ರಮೋದ್‌ ಮಧ್ವರಾಜ್‌ ಅವರು ಮುಂದಿನ ಚುನಾವಣೆಯ ವೇಳೆ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯೊಂದು ಕಳೆದ ಹಲವಾರು ಸಮಯಗಳಿಂದ ಉಡುಪಿ ಭಾಗದಾದ್ಯಂತ ಹರಡುತ್ತಿದ್ದು ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿಬಿಸಿ ಚರ್ಚೆಗಳೂ ನಡೆಯುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಅಕ್ಟೋಬರ್‌ 16ರ ಸೋಮವಾರದಂದು ಉಡುಪಿ ಬನ್ನಂಜೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಚಿವ ಪ್ರಮೋದ್‌ ಅವರು ಕೇಂದ್ರ ಸಚಿವ ಅನಂತಕುಮಾರ್‌ ಸಹಿತ ಬಿಜೆಪಿ ನಾಯಕರ ಗುಂಪನ್ನು ಭೇಟಿ ಮಾಡಿರುವುದು ಈ ಭಾಗದ ಕೈ ಪಾಳಯದಲ್ಲಿ ತಳಮಳಕ್ಕೆ ಕಾರಣವಾಗಿದೆ.

Advertisement

►Special Interview►ಸಚಿವ ಪ್ರಮೋದ್‌ ಮಧ್ವರಾಜ್‌ ಅವರೊಂದಿಗೆ ವಿಶೇಷ ಮಾತುಕತೆ: //bit.ly/2yvoCtl


ಆದರೆ ಈ ಸುದ್ದಿಯ ಸತ್ಯಾಸತ್ಯತೆ ಇಷ್ಟು:
ಬ್ರಹ್ಮಾವರದಲ್ಲಿ ಬಿ.ಜೆ.ಪಿ. ಆಯೋಜಿಸಿದ್ದ ಪರಿವರ್ತನಾ ಸಮಾವೇಶದಲ್ಲಿ ಭಾಗವಹಿಸಲು ಕೇಂದ್ರ ಸಚಿವ ಅನಂತಕುಮಾರ್‌, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುನಿಲ್‌ ಕುಮಾರ್‌ ಸಹಿತ ಸ್ಥಳೀಯ ಬಿಜೆಪಿ ನಾಯಕರು ಪ್ರವಾಸಿ ಮಂದಿರದಲ್ಲಿ ಸೇರಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲ್ಲಿಗೆ ಆಗಮಿಸಿದ ಸಚಿವ ಪ್ರಮೋದ್‌ ಅವರಿಗೆ ಬಿಜೆಪಿ ನಾಯಕರು ಅಲ್ಲಿರುವ ವಿಷಯ ತಿಳಿದು ಅವರನ್ನು ಭೇಟಿಯಾಗಬಹುದೇ ಎಂದು ಕೇಳಿದರು. ತಕ್ಷಣವೇ ಸಚಿವರನ್ನು ಬಿಜೆಪಿ ನಾಯಕರು ಆತ್ಮೀಯವಾಗಿ ಬರಮಾಡಿಕೊಂಡರು, ಪ್ರಮೋದ್‌ ಅವರೂ ಸಹ ನಗುಮುಖದಿಂಲೇ ಎಲ್ಲರಿಗೂ ನಮಸ್ಕರಿಸಿ ಅನಂತ ಕುಮಾರ್‌ ಅವರ ಪಕ್ಕದಲ್ಲಿಯೇ ಕುಳಿತು ಚಹಾ ಸೇವಿಸಿದರು.
ಈ ಸೆನ್ಸೇಷನಲ್‌ ಚಿತ್ರಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಚಿವ ಪ್ರಮೋದ್‌ ಮಧ್ವರಾಜ್‌ ಅವರು ಬಿಜೆಪಿ ಸೇರುತ್ತಿದ್ದಾರೆ ಎಂಬ ರೀತಿಯಲ್ಲಿ ಸಂದೇಶಗಳು ಹರಿದಾಡಲು ಪ್ರಾರಂಭವಾಗಿವೆ. ಆದರೆ ಇತ್ತೀಚೆಗಷ್ಟೆ ಉದಯವಾಣಿಗೆ ವಿಶೇಷ ಸಂದರ್ಶನ ನೀಡಿದ್ದ ಸಚಿವರು ತಾನು ಕಾಂಗ್ರೆಸ್‌ ಪಕ್ಷದಲ್ಲಿಯೇ ಸಂತೋಷದಿಂದ ಇದ್ದೇನೆ ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ಎಂಬ ಮಾತನ್ನು ಹೇಳಿದ್ದರು.

ಈ ರೀತಿಯಾಗಿ ಬಿಜೆಪಿ ನಾಯಕರೊಂದಿಗೆ ಸಚಿವ ಪ್ರಮೋದ್‌ ನಡೆಸಿದ ಸೌಹಾರ್ಧ ಭೇಟಿಯೊಂದು ಉಡುಪಿ ಭಾಗದಲ್ಲಿ ಬೇರೆಯದೇ ರೀತಿಯ ರಾಜಕೀಯ ಗಾಸಿಪ್‌ಗಳಿಗೆ ಕಾರಣವಾಗುತ್ತಿರುವುದು ಮಾತ್ರ ಸತ್ಯ.


ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next