Advertisement

ಇಬ್ಬರು ಮಕ್ಕಳ ಕೊಂದು ತಾಯಿ ಆತ್ಮಹತ್ಯೆ

01:13 AM Jun 12, 2019 | Lakshmi GovindaRaj |

ಬೆಂಗಳೂರು: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆ, ಡೆತ್‌ನೋಟ್‌ ಬರೆದಿಟ್ಟು ತನ್ನ ಐದು ತಿಂಗಳ ಮಗು ಸೇರಿ ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು, ಬಳಿಕ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಹೆಬ್ಬಾಳದ ಮನೋರಾಯನ ಪಾಳ್ಯದಲ್ಲಿ ಸೋಮವಾರ ರಾತ್ರಿ ನಡೆದಿದೆ.

Advertisement

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಪುಷ್ಪಾವತಿ (30) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದಕ್ಕೂ ಮುನ್ನ ತನ್ನ ಎಂಟು ವರ್ಷದ ಪುತ್ರ ಜೀವನ್‌ ಹಾಗೂ ಐದು ತಿಂಗಳ ಮಗುವಿಗೆ ಊಟದಲ್ಲಿ ವಿಷ ಬೆರೆಸಿ ತಾನೇ ಊಟ ಮಾಡಿಸಿ ಕೊಂದಿದ್ದಾರೆ. ರಾತ್ರಿ ಪತಿ ನಾಗರಾಜ್‌ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಆದರೆ, ಡೆತ್‌ನೋಟ್‌ ಪ್ರಕಾರ ಜೀವನದಲ್ಲಿ ಜಿಗುಪ್ಸೆಗೊಂಡು ಕೃತ್ಯ ಎಸಗುತ್ತಿರುವುದಾಗಿ ಪುಷ್ಪಾವತಿ ಹೇಳಿದ್ದಾರೆ. ಈ ಸಂಬಂಧ ಆಕೆಯ ಪತಿ ನಾಗರಾಜ್‌ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಅಂತರ್ಜಾತಿ ವಿವಾಹ ಹತ್ತು ವರ್ಷಗಳ ಹಿಂದೆ ಟ್ರಾವೆಲ್ಸ್‌ವೊಂದರಲ್ಲಿ ಕಾರು ಚಾಲಕನಾಗಿದ್ದ ನಾಗರಾಜ್‌ ಹೆಬ್ಬಾಳದಲ್ಲಿ ವಾಸವಾಗಿದ್ದರು. ಅದೇ ವೇಳೆ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ತೀರ್ಥಹಳ್ಳಿ ಮೂಲದ ಪುಷ್ಪಾವತಿಗೆ ಸ್ನೇಹಿತೆಯ ಮೂಲಕ ನಾಗರಾಜ್‌ ಪರಿಚಯವಾಗಿದೆ.

ಈ ವೇಳೆ ಇಬ್ಬರ ನಡುವೆ ಪ್ರೇಮಾಂಕುರವಾಗಿದ್ದು, ನಂತರ ಈ ವಿಚಾರವನ್ನು ಇಬ್ಬರು ತಮ್ಮ ಪೋಷಕರಿಗೆ ತಿಳಿಸಿ, ಮದುವೆ ಮಾಡುವಂತೆ ಮನವಿ ಮಾಡಿದ್ದರು. ಆದರೆ, ಜಾತಿ ಬೇರೆ ಆಗಿದ್ದರಿಂದ ಇಬ್ಬರ ಪೋಷಕರು ನಿರಾಕರಿಸಿದ್ದರು. ಹೀಗಾಗಿ ನಾಗರಾಜ್‌ ಮತ್ತು ಪುಷ್ಪಾವತಿ ಉಪನೊಂದಣಾಧಿಕಾರಿಗಳ ಕಚೇರಿಯಲ್ಲಿ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳು ಇದ್ದರು.

Advertisement

ಹೆಬ್ಬಾಳದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಈ ಮಧ್ಯೆ ಐದು ವರ್ಷಗಳ ಹಿಂದೆ ನಾಗರಾಜ್‌ ಖಾಸಗಿ ಕಂಪನಿಯಲ್ಲಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿಕೊಂಡಿದ್ದು, ಪುಷ್ಪಾವತಿ ಮನೆಯಲ್ಲೇ ಇರುತ್ತಿದ್ದರು. ಮೊದಲ ಪುತ್ರ ಜೀವನ್‌ ಖಾಸಗಿ ಶಾಲೆಯಲ್ಲಿ ಎರಡನೇ ತರಗತಿ ವ್ಯಾಸಂಗ ಮಾಡುತ್ತಿದ್ದ.

ನಾಲ್ಕು ವರ್ಷಗಳಿಂದ ಮನೋರಾಯನಪಾಳ್ಯದ ಬಾಡಿಗೆ ಮನೆಯಲ್ಲಿ ನಾಗರಾಜ್‌ ಕುಟುಂಬ ಸಮೇತ ವಾಸವಾಗಿದ್ದರು. ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸೋಮವಾರ ಬೆಳಗ್ಗೆ ಕೂಡ ದಂಪತಿ ನಡುವೆ ಜಗಳ ನಡೆದಿದ್ದು, ನಾಗರಾಜ್‌ ಎಂದಿನಂತೆ ಕೆಲಸಕ್ಕೆ ಹೋಗಿದ್ದಾರೆ.

ಪುತ್ರ ಜೀವನನ್ನು ಶಾಲೆಗೆ ಕಳುಹಿಸದ ಪುಷ್ಪಾವತಿ, ನಂತರ ಇಬ್ಬರು ಮಕ್ಕಳಿಗೆ ಊಟದಲ್ಲಿ ವಿಷ ಬೆರೆಸಿ ತಾನೇ ಊಟ ಮಾಡಿಸಿ, ಕೊಂದಿದ್ದಾರೆ. ಅನಂತರ ಡೆತ್‌ನೋಟ್‌ ಬರೆದಿಟ್ಟು ಮನೆಯ ಮಧ್ಯದ ಕೊಣೆಯಲ್ಲಿ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಬಾಗಿಲು ಒಡೆದಾಗ ಪ್ರಕರಣ ಬೆಳಕಿಗೆ: ರಾತ್ರಿ ಎಂಟು ಗಂಟೆ ಸುಮಾರಿಗೆ ಮನೆಗೆ ಬಂದ ಪತಿ ನಾಗರಾಜ್‌ ಬಹಳಷ್ಟು ಬಾರಿ ಬಾಗಿಲು ಬಡಿದರೂ ಪ್ರತಿಕ್ರಿಯೆ ಇಲ್ಲ. ಅನುಮಾನಗೊಂಡು ಮನೆ ಮಾಲೀಕರನ್ನು ಕರೆತಂದು ನಕಲಿ ಕೀ ಮೂಲಕ ಬಾಗಿಲು ತೆರೆಯಲು ಯತ್ನಿಸಿದರು ಪ್ರಯೋಜನವಾಗಿಲ್ಲ.

ನಂತರ ಕಬ್ಬಿಣದ ರಾಡ್‌ನಿಂದ ಬಾಗಿಲು ಮೀಟಿ ಒಳ ಹೋದಾಗ ಪತ್ನಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಹಾಸಿಗೆ ಮೇಲೆ ಮಲಗಿದ್ದ ಐದು ವರ್ಷದ ಮಗುವಿನ ಬಾಯಲ್ಲಿ ನೊರೆ ಬರುತ್ತಿತ್ತು. ಎಂಟು ವರ್ಷದ ಪುತ್ರ ಜೀವನ್‌ ಮಂಚದ ಪಕ್ಕದಲ್ಲಿ ಮಲಗಿದಲ್ಲೇ ಮೃತಪಟ್ಟಿದ್ದ. ಕೂಡಲೇ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಹೆಬ್ಬಾಳ ಪೊಲೀಸರು ಮನೆಯಲ್ಲಿ ಪರಿಶೀಲಿಸಿದಾಗ ಡೆತ್‌ನೋಟ್‌ ಪತ್ತೆಯಾಗಿದೆ.

ಡೆತ್‌ನೋಟ್‌ನಲ್ಲಿ ಏನಿದೆ?: “ಜೀವನದಲ್ಲಿ ಜೀಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಆದರೆ, ನಾನು ಸತ್ತ ನಂತರ ನನ್ನ ಮಕ್ಕಳು ಅನಾಥರಾಗುತ್ತಾರೆ ಎಂಬ ಭಾವನೆಯಿಂದ ಅವರನ್ನು ಕೊಂದು, ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ಯಾರು ಕಾರಣರಲ್ಲ’. ಎಂದು ಪುಷ್ಪಾವತಿ ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ನೋಟ್‌ನಲ್ಲಿ ಉಲ್ಲೇಖೀಸಿದ್ದಾರೆ ಎಂದು ಪೊಲೀಸರು ಹೇಳಿದರು.

ದೂರ ಇಟ್ಟಿದ್ದ ಪೋಷಕರು: ನಾಗರಾಜ್‌ ಮತ್ತು ಪುಷ್ಪಾವತಿ ಅಂತರ್ಜಾತಿ ವಿವಾಹವಾದರಿಂದ ಅವರ ಪೋಷಕರು ಅವರನ್ನು ಮನೆಯಿಂದ ಹೊರ ಹಾಕಿದ್ದರು. ಹೀಗಾಗಿ ಹತ್ತು ವರ್ಷಗಳಿಂದ ಪೋಷಕರ ಸಂಪರ್ಕವಿಲ್ಲ. ನಾಗರಾಜ್‌ ಬೆಂಗಳೂರಿನವನಾದರೂ ಆತ ಕೂಡ ತನ್ನ ಸಂಬಂಧಿಕರ ಸಂಪರ್ಕದಲ್ಲಿ ಇರಲಿಲ್ಲ. ಹೀಗಾಗಿ ಮಂಗಳವಾರ ಮಧ್ಯಾಹ್ನದವರೆಗೂ ನಾಗರಾಜ್‌ ದಂಪತಿಯ ಪೋಷಕರ ಹುಡುಕಾಟ ನಡೆಯಿತು. ಸಂಜೆ ವೇಳೆ ಪುಷ್ಪಾವತಿ ಸೋದರ ಸಂಬಂಧಿ ಮಹಿಳೆಯೊಬ್ಬರ ಪತ್ತೆಯಾಗಿದ್ದು, ನಾಗರಾಜ್‌ ಸಂಬಂಧಿಯೊಬ್ಬರಿಗೂ ವಿಷಯ ತಿಳಿಸಲಾಯಿತು ಎಂದು ಪೊಲೀಸರು ಹೇಳಿದರು.

ಪತಿ ಬಂದಾಗ ಆಕೆ ಬಾಗಿಲು ತೆರೆದಿಲ್ಲ. ನಂತರ ಕಬ್ಬಿಣದ ರಾಡ್‌ನಿಂದ ಬಾಗಿಲು ಒಡೆದು ನೋಡಿದಾಗ ಪುಷ್ಪಾವತಿ ಇಬ್ಬರು ಮಕ್ಕಳನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು. ದಂಪತಿ ಮನೆಯಲ್ಲಿ ಜಗಳ ಆಡುತ್ತಿದ್ದ ಬಗ್ಗೆ ಮಾಹಿತಿಯಿಲ್ಲ.
-ಉನ್ನಿ, ಸ್ಥಳೀಯ ನಿವಾಸಿ

ಪುಷ್ಪಾವತಿ ಪ್ರೀತಿಸಿ ವಿವಾಹವಾದರಿಂದ ಆಕೆಯ ಪೋಷಕರು ಆಕೆಯನ್ನು ದೂರ ಮಾಡಿದ್ದರು. ಹತ್ತು ವರ್ಷಗಳಿಂದ ಯಾರೂ ಸಂಪರ್ಕದಲ್ಲಿ ಇರಲಿಲ್ಲ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್‌ ಬರೆದಿಟ್ಟಿದ್ದು, ಆಕೆಯ ಪೋಷಕರನ್ನು ಸಂಪರ್ಕಿಸಿ, ಅವರು ಬಂದ ನಂತರ ಮರಣೋತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಿದ್ದೇವೆ. ಸದ್ಯ ಪತಿ ನಾಗರಾಜ್‌ನನ್ನು ವಶಪಡಿಸಿಕೊಳ್ಳಲಾಗಿದೆ.
-ಎನ್‌.ಶಶಿಕುಮಾರ್‌, ಪೂರ್ವ ವಲಯ ಡಿಸಿಪಿ

Advertisement

Udayavani is now on Telegram. Click here to join our channel and stay updated with the latest news.

Next