Advertisement

#HamaraBajaj: ನಿಮ್ಮನ್ನು ಟೀಕಿಸುವುದೇ ತಪ್ಪಾ?; ಶಾ ಎದುರು ಬೋಲ್ಡ್ ಪ್ರಶ್ನೆ ಎಸೆದ ರಾಹುಲ್!

09:58 AM Dec 02, 2019 | Team Udayavani |

ನವದೆಹಲಿ: ಕೇಂದ್ರ ಸರಕಾರ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿಗಳು, ಕಾಂಗ್ರೆಸ್ ಚೇಲಾಗಳು ಎಂದೆಲ್ಲಾ ಟೀಕಿಸುವ ಪ್ರವೃತ್ತಿ ಕಳೆದ ಐದೂವರೆ ವರ್ಷಗಳಲ್ಲಿ ದೇಶದೆಲ್ಲೆಡೆ ಕಂಡುಬರುತ್ತಿದೆ ಎಂಬುದು ಹಲವರ ಆರೋಪವಾಗಿದೆ. ಈ ಮಧ್ಯೆ ಹಲವಾರು ವ್ಯಕ್ತಿಗಳು ಮೋದಿ ಸರಕಾರವನ್ನು ಮತ್ತು ಬಿಜೆಪಿಯನ್ನು ಟೀಕಿಸಿ ಕೇಸರಿ ಪಕ್ಷದ ಕಾರ್ಯಕರ್ತರ ಮತ್ತು ಬೆಂಬಲಿಗರ ಸಾರ್ವತ್ರಿಕ ಆಕ್ರೋಶಕ್ಕೆ ಗುರಿಯಾಗಿರುವ ಉದಾಹರಣೆಗಳೂ ಬಹಳಷ್ಟಿವೆ.

Advertisement

ಇದೆಲ್ಲದರ ನಡುವೆ ಉದ್ಯಮಿ ರಾಹುಲ್ ಬಜಾಜ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೇ ನೇರವಾಗಿ ಈ ಪ್ರಶ್ನೆಯನ್ನು ಕೇಳುವ ಮೂಲಕ ಇದೀಗ ದೇಶದ ಗಮನವನ್ನು ಸೆಳೆದಿದ್ದಾರೆ. ಮತ್ತು ರಾಹುಲ್ ಬಜಾಜ್ ಅವರ ಈ ವಿಡಿಯೋ ಕ್ಲಿಪ್ಪಿಂಗ್ ಇದೀಗ ನೆಟ್ಟಿಗರ ಪ್ರಶಂಸೆಗೆ ಪಾತ್ರವಾಗಿದೆ.

ಮುಂಬಯಿಯಲ್ಲಿ ಶನಿವಾರ ನಡೆದಿದ್ದ ಎಕನಾಮಿಕ್ಸ್ ಟೈಂಮ್ಸ್ ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿದ್ದರು ಮತ್ತು ಈ ಸಂದರ್ಭದಲ್ಲಿ ಗೃಹಸಚಿವರೊಂದಿಗೆ ಗಣ್ಯರ ಸಂವಾದ ನಡೆಯುತ್ತಿತ್ತು.


ಆ ಸಂದರ್ಭದಲ್ಲಿ ಎದ್ದು ನಿಂತು ಮಾತನಾಡಿದ ಬಜಾಜ್ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಹುಲ್ ಬಜಾಜ್ ಅವರು, ‘ದೇಶದಲ್ಲಿ ಸದ್ಯ ಭಯದ ವಾತಾವರಣ ಇದೆ. ಸರಕಾರವನ್ನು ಪ್ರಶ್ನೆ ಮಾಡುವುದಕ್ಕೆ ಜನರು ಹೆದರುವಂತಹ ಸ್ಥಿತಿ ನಿರ್ಮಾಣವಾಗಿದೆ ಮಾತ್ರವಲ್ಲದೇ ಹೀಗೆ ಸರಕಾರವನ್ನು ಟೀಕೆ ಮಾಡಿದರೆ ಅಂತಹ ವ್ಯಕ್ತಿಗಳಿಗೆ ಪ್ರಶಂಸೆ ಸಿಗುತ್ತದೆ ಎನ್ನುವ ವಿಶ್ವಾಸವೇ ಇಲ್ಲ’ ಎಂದು ಹೇಳಿದರು.

ಆದರೆ ಯುಪಿಎ ಸರಕಾರದ ಎರಡನೇ ಅವಧಿಯಲ್ಲಿ ನಾವು ಯಾರನ್ನು ಬೇಕಾದರೂ ಟೀಕಿಸಬಹುದಿತ್ತು (ಹಮ್ ಕಿಸೀ ಕೋ ಭೀ ಗಾಲಿ ದೇ ಸಕ್ತೇ ಥೇ). ಆದರೆ ಈಗ ಆ ವಾತಾವರಣ ಇಲ್ಲ. ‘ನೀವು ಬಹಳ ಚೆನ್ನಾಗಿ ಕೆಲಸ ಮಾಡುತ್ತಿದ್ದೀರಿ, ಆದರೆ ನಿಮ್ಮ ಸರಕಾರವನ್ನು ಯಾರಾದರೂ ಟೀಕಿಸಿದರು ಎಂದಾದರೆ ಅವರಿಗೆ ಪ್ರಶಂಸೆ ಸಿಗುತ್ತದೆ ಎನ್ನುವ ವಾತಾವರಣ ಮಾತ್ರ ಈಗ ಇಲ್ಲ’ ಎಂದು ಉದ್ಯಮಿ ರಾಹುಲ್ ಬಜಾಜ್ ಅವರು ಬೇಸರ ವ್ಯಕ್ತಪಡಿಸಿದರು.

Advertisement

ಮಾತ್ರವಲ್ಲದೇ ಸಕಾರದ ತಪ್ಪು ನೀತಿಗಳ ವಿರುದ್ಧ ದೇಶದ ಉದ್ಯಮಿಗಳೂ ಧ್ವನಿ ಎತ್ತುತ್ತಿಲ್ಲ ಎಂದು ರಾಹುಲ್ ಬಜಾಜ್ ಅವರು ಸಮಾರಂಭದಲ್ಲಿದ್ದ ತನ್ನ ಉದ್ಯಮ ಮಿತ್ರರ ಕಾಲನ್ನೂ ಎಳೆದರು. ‘ನಮ್ಮೆಲ್ಲರ ಮನಸ್ಸಿನಲ್ಲಿ ಹಲವಾರು ವಿಚಾರಗಳಿವೆ, ಆದರೆ ಇವರ್ಯಾರೂ ಆ ಬಗ್ಗೆ ಮಾತನಾಡಲಾರರು, ಆದರೆ ನಾನು ಮಾತನಾಡುತ್ತೇನೆ’ ಎಂದು ರಾಹುಲ್ ಬಜಾಜ್ ಹೇಳಿದರು.

ಆದರೆ ರಾಹುಲ್ ಬಜಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅಮಿತ್ ಶಾ ಅವರು ದೇಶದಲ್ಲಿ ಆ ರೀತಿಯ ವಾತಾವರಣ ಇದೆ ಎಂಬುದನ್ನು ತಳ್ಳಿಹಾಕಿದರು. ‘ಯಾವುದರ ಬಗ್ಗೆಯೂ ಭಯಪಡುವ ಅಗತ್ಯವಿಲ್ಲ. ನರೇಂದ್ರ ಮೋದಿ ಸರಕಾರವನ್ನು ಮಾಧ್ಯಮಗಳಲ್ಲಿ ಪ್ರತಿನಿತ್ಯ ಟೀಕಿಸಲಾಗುತ್ತಿದೆ. ಆದರೆ ನೀವು ಹೇಳುವಂತೆ ಆ ರೀತಿಯ ವಾತಾವರಣ ಇದೆ ಎಂದಾದರೆ ನಾವದರ ಕುರಿತು ಖಂಡಿತಾ ಗಮನ ಹರಿಸಲಿದ್ದೇವೆ’ ಎಂದು ಅಮಿತ್ ಶಾ ಅವರು ಹಿರಿಯ ಉದ್ಯಮಿಯ ಮಾತಿಗೆ ಭರವಸೆಯ ಪ್ರತಿಕ್ರಿಯೆಯನ್ನು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next