Advertisement

Tungabhadra dam ; ನಾಲ್ಕೇ ದಿನದಲ್ಲಿ‌ ಯಶಸ್ವಿ ಕಾರ್ಯಾಚರಣೆ ನಡೆಸಿದ್ದೇವೆ: ಡಿಕೆಶಿ

02:21 PM Aug 21, 2024 | Team Udayavani |

ಕೊಪ್ಪಳ : ಇಡೀ ಭಾರತವೇ ತುಂಗಭದ್ರಾ ಡ್ಯಾಮ್ ನತ್ತ ನೋಡುತ್ತಿತ್ತು, ವಿರೋಧ ಪಕ್ಷದವರು ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದರು ನಮ್ಮ ಸರಕಾರ ನಾಲ್ಕೇ ದಿನದಲ್ಲಿ‌ ಯಶಸ್ವಿ ಕಾರ್ಯಾಚರಣೆ ನಡೆಸಿದೆ ‘ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಬುಧವಾರ(ಆ21) ಹೇಳಿಕೆ ನೀಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿ ‘ ಡ್ಯಾಂ ವಿಚಾರದಲ್ಲಿ ನಿಮಿಷವೂ ವಿಳಂಬ ಮಾಡದೇ ದಿನದ 24 ಗಂಟೆ ಕೆಲಸ ಮಾಡಿದ್ದೇವೆ. ನಮ್ಮ ಸಚಿವರು, ಶಾಸಕರು‌ ಹಗಲು ರಾತ್ರಿ‌ ನಿದ್ದೆ ಮಾಡದೇ ಜಾಗೃತಿ ವಹಿಸಿದ್ದರು. ಅವಘಡ ನಡೆದ ತತ್ ಕ್ಷಣವೇ ತಜ್ಞ ಕನ್ನಯ್ಯ ನಾಯ್ಡು ಸೇರಿದಂತೆ ಜಿಂದಾಲ್ ಕಂಪನಿಯನ್ನು ಸಂಪರ್ಕ ಮಾಡಿದೆವು. ಜಿಂದಾಲ್, ನಾರಾಯಣ ಮತ್ತು ಹಿಂದೂಸ್ಥಾನ್ ಈ ಮೂರು ಕಂಪನಿಗಳು ನಾಲ್ಕು ದಿನಗಳ ಕಾಲ ಶ್ರಮಿಸಿದರು. ನಾಲ್ಕು ದಿನದಲ್ಲಿ‌ ಕಾರ್ಯಾಚರಣೆ ಯಶಸ್ವಿ ಮಾಡಿದೆವು’ ಎಂದು ತಿಳಿಸಿದರು.

‘ಟೀಕೆಗಳು ಸಾಯುತ್ತವೆ, ಕೆಲಸ ಉಳಿಯುತ್ತದೆ. ಭಗವಂತನ ಕೃಪೆಯಿಂದ ಯಾವುದೇ ತೊಂದರೆ ಆಗಲಿಲ್ಲ. ರಾಜ್ಯದ ಎಲ್ಲ ಜಲಾಶಯಗಳ ಭದ್ರತೆಗೆ ಪರಿಶೀಲನೆಗೆ ಸಮಿತಿ ರಚನೆ ಮಾಡಿದ್ದು, ಈಗಾಗಲೇ ತಜ್ಞರು ಒಳಗೊಂಡ ಸಮಿತಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದೆ. ಡ್ಯಾಂ ಭದ್ರತೆಗೆ ನಮ್ಮ ಸರಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ.ಜಲಾಶಯದ ನೀರು ತಡೆದು ನಾವು ರೈತರನ್ನು‌ ಬದುಕಿಸಿದ್ದೇವೆ’ ಎಂದರು.

ತುಂಗಭದ್ರಾ ಡ್ಯಾಂ ಆಯಸ್ಸು  30 ವರ್ಷ ಎಂಬ ವಿಚಾರದ ಕುರಿತಾದ ಪ್ರಶ್ನೆಗೆ ಉತ್ತರಿಸಿ ‘ಡ್ಯಾಂ ಗೆ ಪ್ರತಿ ವರ್ಷ ಅರ್ಧ ಟಿಎಂಸಿ ಹೂಳು ತುಂಬುವ ವಿಚಾರ ನಮಗೆ ಗೊತ್ತಿದೆ. ನವಲಿ ಡ್ಯಾಂ ವಿಚಾರದಲ್ಲಿ ನಾವು ಏನು ಮಾಡಬೇಕೆಂದು ಚರ್ಚೆ ಮಾಡುತ್ತೇವೆ’ ಎಂದರು.

ಡ್ಯಾಂ ನ ಕ್ರಸ್ಟ್ ಗೇಟ್‌ಗಳ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ‘ತಜ್ಞ ಕನ್ನಯ್ಯ ನಾಯ್ಡು ಹೇಳಿದ್ದು, ಅದಕ್ಕೆ ನಮ್ಮ ಸರಕಾರ ಏನು ಮಾಡಬೇಕಿದೆಯೋ ಅದನ್ನು ಮಾಡುತ್ತದೆ.ನಾನು ಜಲಾಶಯದ ತಾಂತ್ರಿಕ ತಜ್ಞನಲ್ಲ. ನಾವು ರಚಿಸಿದ ಸಮಿತಿ ನೀಡುವ ವರದಿಯನ್ವಯ ಕ್ರಮ ಕೈಗೊಳ್ಳುತ್ತೇವೆ’ ಎಂದರು.

Advertisement

‘ತುಂಗಭದ್ರಾ ತುಂಬಿದ ನಂತರ ಬಾಗಿನ ಅರ್ಪಿಸಲು ಬರುತ್ತೇವೆ.ಗೇಟ್ ಅಳವಡಿಕಗೆ ಶ್ರಮಿಸಿದವರನ್ನು ಸತ್ಕರಿಸುತ್ತೇವೆ’ ಎಂದು ಡಿಸಿಎಂ ಹೇಳಿದರು.

ಸುರಕ್ಷತೆಗೆ ಸಮಿತಿ ರಚನೆ

ಸಚಿವ ಎಂ ಬಿ ಪಾಟೀಲ್ ಮಾತನಾಡಿ ‘ಡ್ಯಾಂ ನಿರ್ಮಾಣ ಮಾಡುವಾಗ ಪ್ರತಿ ವರ್ಷ 0.5 ಟಿಎಂಸಿ ಹೂಳು ತುಂಬುತ್ತದೆ. ಇದನ್ನು ನಮ್ಮ ಹಿರಿಯರು ಮೊದಲೇ ಹೇಳಿದ್ದಾರೆ. ಡ್ಯಾಂ ನಿರ್ಮಾಣವಾಗಿ ಈಗ 70 ವರ್ಷ ಆಗಿದೆ. 35 ಟಿಎಂಸಿ ಯಷ್ಟು ಹೂಳು ತುಂಬಿದೆ’ ಎಂದು ತಿಳಿಸಿದರು.

‘ಪ್ರತಿ ನೂರು ವರ್ಷಕ್ಕೆ ಹೊಸ ಡ್ಯಾಂ ಕಟ್ಟಬೇಕಾಗುತ್ತದೆ. ಈಗಾಗಲೇ ತುಂಗಭದ್ರಾ ಡ್ಯಾಂ ವಿಚಾರದಲ್ಲಿ ಸಮಿತಿ ರಚನೆ ಮಾಡಲಾಗಿದೆ.ಡ್ಯಾಂ ಗೇಟ್ ಸೇರಿ ಸುರಕ್ಷತೆಗೆ ಏನು ಮಾಡಬೇಕು ಎಲ್ಲವನ್ನೂ ಮಾಡುತ್ತೇವೆ. ಸರಕಾರ ಡ್ಯಾಂ ಸುರಕ್ಷತೆಗೆ ಸಮಿತಿ ರಚನೆ ಮಾಡಿದೆ. ವರದಿ ಅನುಸಾರ ಕ್ರಮ ಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next