Advertisement

ಕರಾವಳಿಯ ಪ್ರವಾಸಿ ಸ್ಥಳಗಳಿಗೆ ಜೀವಕಳೆ: ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡು

12:18 AM Apr 09, 2023 | Team Udayavani |

ಉಡುಪಿ/ಮಂಗಳೂರು: ನಿರಂತರ ರಜೆಯ ಹಿನ್ನೆಲೆಯಲ್ಲಿ ದ.ಕ. ಮತ್ತು ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಜೀವ ಕಳೆ ಬಂದಿದೆ. ಎಪ್ರಿಲ್‌ ತಿಂಗಳಲ್ಲಿ ಸರಕಾರಿ ರಜೆಯೂ ಹೆಚ್ಚಿರುವ ಜತೆಗೆ ಕೆಲವು ಶಾಲಾ ಮಕ್ಕಳಿಗೆ ಈಗಾಗಲೇ ರಜೆ ನೀಡಲಾಗಿದೆ. ಹಾಗೆಯೇ ಪಿಯುಸಿ ಪರೀಕ್ಷೆ ಪೂರ್ಣಗೊಂಡಿರುವ ಹಿನ್ನೆಲೆ ಯಲ್ಲಿ ಕುಟುಂಬ ಸಮೇತರಾಗಿ ಉಭಯ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.

Advertisement

ಕೊರೊನಾ ಅನಂತರ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನ ಜಂಗುಳಿ ದಿನೇದಿನೆ ಹೆಚ್ಚುತ್ತಿರುವುದು ಸ್ಥಳೀಯ ಆರ್ಥಿಕ ಅಭಿವೃದ್ಧಿಗೂ ವಿಶೇಷ ಬೂಸ್ಟ್‌ ಸಿಗುವಂತಿದೆ. ಅಲ್ಲದೆ ಪ್ರವಾಸಿ ಸ್ಥಳಗಳ ಸುತ್ತಲು ಇರುವ ಹೊಟೇಲ್‌, ರೂಮ್‌ಗಳಿಗೂ ಬೇಡಿಕೆ ಹೆಚ್ಚಾಗಿದೆ.

ಶ್ರೀ ಕೃಷ್ಣಮಠ, ಮಲ್ಪೆ ಬೀಚ್‌, ಸೈಂಟ್‌ ಮೇರಿಸ್‌ ಐಲ್ಯಾಂಡ್‌, ಮರವಂತೆ ಬೀಚ್‌, ಸೋಮೇಶ್ವರ ಬೀಚ್‌, ಕೊಲ್ಲೂರು ದೇಗುಲ, ಕಾಪು ದೀಪಸ್ತಂಭ, ಕಾರ್ಕಳದ ಗೋಮಟೇಶ್ವರ ಬೆಟ್ಟ, ಪರಶುರಾಮ ಪ್ರತಿಮೆ, ಕಟೀಲು, ಕದ್ರಿ ದೇಗುಲ, ಪಣಂಬೂರು ಬೀಚ್‌, ಶ್ರೀ ಕ್ಷೇತ್ರ ಧರ್ಮಸ್ಥಳ, ಸೌತಡ್ಕ ಶ್ರೀ ಮಹಾ ಗಣಪತಿ ದೇಗುಲ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ ನೋಡಲು ಅನೇಕರು ಬರುತ್ತಿದ್ದಾರೆ. ಜಲಪಾತಗಳಲ್ಲಿ ನೀರು ಕಡಿಮೆಯಿದ್ದರೂ ಜನ ಹೋಗುವುದು ಮಾತ್ರ ಕಡಿಮೆಯಾಗಿಲ್ಲ. ಹೊರ ಜಿಲ್ಲೆ, ಹೊರ ರಾಜ್ಯದ ಪ್ರವಾಸಿಗರ ಜತೆಗೆ ಸ್ಥಳೀಯರೂ ಹೆಚ್ಚೆಚ್ಚು ಇದ್ದಾರೆ.
ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಶಾಲಾ ಮಕ್ಕಳಿಗೆ ರಜೆ ಇರುವು ದರಿಂದ ಬಹುತೇಕರು ಕುಟುಂಬ ಪ್ರವಾಸವನ್ನು ಇದೇ ತಿಂಗಳಲ್ಲಿ ನಿಗದಿ ಮಾಡಿಕೊಳ್ಳುತ್ತಾರೆ. ಕರಾವಳಿ ಧಾರ್ಮಿಕ ಕೇಂದ್ರಗಳಲ್ಲಿ ವಾರಾಂತ್ಯ ದಲ್ಲಿ ಸರತಿ ಸಾಲು ಕಾಣಸಿಗುತ್ತಿದೆ. ಬೀಚ್‌ಗಳಲ್ಲಿ ಸೂರ್ಯಾಸ್ತದ ಬಳಿಕವೂ ಪ್ರವಾಸಿಗರು ಕಡಿಮೆಯಾಗುತ್ತಿಲ್ಲ.

ಎಚ್ಚರಿಕೆಯೂ ಬೇಕು
ನಿನ್ನೆಯಷ್ಟೆ ಬೈಂದೂರು ಬಳಿಯ ಜಲಪಾತದಲ್ಲಿ ವಿದ್ಯಾರ್ಥಿ ಮೃತಪಟ್ಟಿ ದ್ದಾನೆ. ಹೀಗಾಗಿ ಪ್ರವಾಸಿಗರಲ್ಲೂ ಎಚ್ಚರಿಕೆ ಇರಬೇಕು ಹಾಗೂ ಜಿಲ್ಲಾ ಡಳಿತವೂ ಈ ಬಗ್ಗೆ ವಿಶೇಷ ಗಮನ ಹರಿಸಬೇಕು. ಪ್ರವಾಸಿಗರಿಗೆ ಅಗತ್ಯ ಮಾಹಿತಿ ಸಿಗುವಂತೆ ಮಾಡಬೇಕು.
ಪ್ರವಾಸಿಗರು ಹೆಚ್ಚಿದ್ದರಿಂದ ಉಡುಪಿಯ ಕಲ್ಸಂಕ, ಕೆ.ಎಂ.ಮಾರ್ಗ, ಕರಾವಳಿ ಬೈಪಾಸ್‌ ಮೊದಲಾದೆಡೆ ವಾಹನ ದಟ್ಟಣೆ ಹೆಚ್ಚಿತ್ತು.

ಮಲ್ಪೆ ಬೀಚ್‌ಗೆ ಪ್ರವಾಸಿಗರ ದಂಡು
ಮಲ್ಪೆ: ಸರಣಿ ರಜೆಯಿಂದಾಗಿ ಧಾರ್ಮಿಕ ಹಾಗೂ ಪ್ರೇಕ್ಷಣೀಯ ಸ್ಥಳಗಳಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಮಲ್ಪೆ ಬೀಚ್‌ನಲ್ಲಿ ಜನ ಸಮೂಹ ಹೆಚ್ಚಾಗಿದೆ. ಕೇರಳ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಇನ್ನುಳಿದಂತೆ ಬೆಂಗಳೂರು, ಮೈಸೂರು ಕಡೆಗಳಿಂದ ಜನ ಕಡಲತೀರಕ್ಕೆ ಲಗ್ಗೆ ಇಡುತ್ತಿದ್ದಾರೆ. ಮುಂಬಯಿ ಕನ್ನಡಿಗರು ಊರಿನತ್ತ ಅಗಮಿಸುತ್ತಿದ್ದ ಜನ ಹೆಚ್ಚಳಕ್ಕೂ ಕಾರಣವಾಗಿದೆ. ಶನಿವಾರ ಮಲ್ಪೆ ಬೀಚ್‌ ಮತ್ತು ಸೈಂಟ್‌ ಮೇರಿ ಐಲ್ಯಾಂಡ್‌ನ‌ಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡು ಬಂದಿದ್ದಾರೆ. ನೂರಾರು ಪ್ರವಾಸಿ ವಾಹನಗಳು ಮಲ್ಪೆ ಕಡೆಗೆ ಅಗಮಿಸುತ್ತಿದ್ದು ಇದರಿಂದಾಗಿ ಪಾರ್ಕಿಂಗ್‌ ಏರಿಯ ಗಳಲ್ಲಿ ವಾಹನ ನಿಲುಗಡೆಗೆ ಜಾಗದ ಸಮಸ್ಯೆ ಉಂಟಾಗಿತ್ತು.

Advertisement

ಪ್ರವಾಸಿಗರು ಬಿಸಿಲಿನ ತಾಪ ತಡೆಯಲಾಗದೆ ನೀರಿನಲ್ಲೆ ಕುಳಿತು ಸಮಯ ಕಳೆಯುತ್ತಿರುವುದು ಕಂಡು ಬಂತು. ಕೆಲವರು ಜಲಸಾಹಸ ಕ್ರೀಡೆಯಲ್ಲಿ ತೊಡಗಿಕೊಂಡಿದ್ದರು. ರವಿವಾರ ಸ್ಥಳೀಯರು ಸೇರಿದಂತೆ ಇನ್ನೂ ಹೆಚ್ಚು ಜನ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

ವಸತಿ ಗೃಹಗಳಿಗೆ ಭಾರೀ ಬೇಡಿಕೆ
ರಜೆಯ ಹಿನ್ನಲೆಯಲ್ಲಿ ಕೆಲವೊಂದು ಪ್ರಮುಖ ಧಾರ್ಮಿಕ ಕೇಂದ್ರ, ಪ್ರವಾಸಿತಾಣಗಳಲ್ಲಿ ವಸತಿ ಗೃಹಗಳ ಸಮಸ್ಯೆ ಎದುರಾಗಿತ್ತು. ವಿವಿಧ ಭಾಗಗಳಿಂದ ಕುಟುಂಬ ಸಮೇತರಾಗಿ ಜನರು ಬಂದಿರುವುದರಿಂದ ವಸತಿ ಗೃಹಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ.

ಪಣಂಬೂರು ಬೀಚ್‌ನಲ್ಲೂ ಹೆಚ್ಚಳ
ಪಣಂಬೂರು: ಸರಣಿ ರಜೆಯ ಹಿನ್ನೆಲೆಯಲ್ಲಿ ಮತ್ತು ಸೆಕೆಯ ನಡುವೆ ಕಳೆದ ಎರಡು ದಿನಗಳಿಂದ ಪಣಂಬೂರು ಬೀಚ್‌ಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಯಲ್ಲಿ ಹೆಚ್ಚಳವಾಗಿದೆ.
ವಿವಿಧ ದೇವಸ್ಥಾನ, ಮಠ ಮಂದಿರಗಳಿಗೆ ಭೇಟಿ ನೀಡಿದ ಪ್ರವಾಸಿಗರು ಸಂಜೆಯಾದೊಡನೆ ಬೀಚ್‌ನತ್ತ ಮುಖ ಮಾಡಿ ಸಮುದ್ರದ ಅಲೆಗಳೊಂದಿಗೆ ಆಟವಾಡಿ ಮೈಮನ ತಂಪಾಗಿಸಿಕೊಂಡರು. ಸಮೀಪದ ತಣ್ಣೀರುಬಾವಿಗೂ ಪ್ರವಾಸಿಗರು ಭೇಟಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next