Advertisement

Tourism: ಪ್ರಕೃತಿಯ ಮಡಿಲಲ್ಲಿ ಜಟಂಗಿ ರಾಮೇಶ್ವರ

07:32 AM Feb 06, 2024 | Team Udayavani |

ನಾಡಿನಾದ್ಯಂತ ಪ್ರತಿಯೊಂದು ಜಿಲ್ಲೆಯಲ್ಲೂ ಪೌರಾಣಿಕ ಮತ್ತು ಐತಿಹಾಸಿಕ ಸ್ಥಳಗಳು ಇದ್ದೇ ಇರುತ್ತವೆ  ರಾಮಾಯಣ ಮತ್ತು ಮಹಾಭಾರತದ ಹಲವು ಸಂದರ್ಭಗಳಿಗೆ ಹಿನ್ನೆಲೆಯಾಗಿರುವಂಥ ಸ್ಥಳಪುರಾಣ ಹೊಂದಿರುವ ಸ್ಥಳಗಳು ಎಲ್ಲೆಡೆಯೂ ಕಾಣಸಿಗುವುದಕ್ಕೆ ಇಂಥ ನಂಬಿಕೆಗಳೇ ಮುಖ್ಯ ಕಾರಣ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಅದೇ ರೀತಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿರುವ ಜಟಂಗಿ ರಾಮೇಶ್ವರ ದೇವಸ್ಥಾನ.

Advertisement

ಬೆಟ್ಟದ ಸುತ್ತ ಎತ್ತನೋಡಿದರತ್ತ ಹಾಸುಬಂಡೆಗಳ ರಾಶಿ ಕಣ್ಣಿಗೆ ರಾಚುತ್ತದೆ, ಇಲ್ಲಿರುವ ಕಲ್ಲಿನ ಕೋಟೆ, ಕೊತ್ತಲಗಳು, ಗುಹಾಂತರ ದೇಗುಲಗಳು, ಶಿಲ್ಪ ಕಲೆಗಳ ವೈಭವ ಮೇಲಿಂದ ಕಾಣುವ ಪ್ರಾಕೃತಿಕ ಸೊಬಗು, ಹೊಲ, ಕೆರೆ, ಅಂಕುಡೊಂಕಾಗಿ ಕಾಣುವ ರಸ್ತೆಗಳು, ದೂರದಿಂದ ಕಾಣುವ ರಾಂಪುರದ ಪರಿಸರದ ವೈಭವ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಈ ಬೆಟ್ಟ – ಗುಡ್ಡ ನಡುವೆ ಅಪರೂಪದ ತಾಣವೊಂದಿದೆ.

ಮೊಳಕಾಲ್ಮೂರು ತಾಲೂಕು ರೇಷ್ಮೆಗಳಿಗೆ ಖ್ಯಾತಿ ಪಡೆದಿರುವಂತೆಯೇ ಪ್ರಾಗೈತಿಹಾಸಿಕವಾಗಿ ಮತ್ತು ಐತಿಹಾಸಿಕವಾಗಿಯೂ ಖ್ಯಾತಿಯನ್ನು ಪಡೆದು ಚರಿತ್ರೆಯ ಪುಟಗಳಲ್ಲಿ ವಿಶೇಷ ಸ್ಥಾನ ಹೊಂದಿದೆ. ಇಲ್ಲಿನ ಪ್ರಾಗೈತಿಹಾಸಿಕ ನೆಲೆ, ದೇಗುಲಗಳು, ಕೋಟೆ  ಕೊತ್ತಲಗಳು, ಶಾಸನ, ವೀರಗಲ್ಲುಗಳು ಮೊದಲಾದ ಆಕರಗಳು ಪುರಾತತ್ವಜ್ಞರನ್ನು ಹಾಗೂ ವಿದ್ವಾಂಸರನ್ನು ಬಡಿದೆಬ್ಬಿಸುವಂತಿದೆ.

ಪೌರಾಣಿಕ ಹಿನ್ನೆಲೆ

Advertisement

ಜಟಂಗಿ ರಾಮೇಶ್ವರ ದೇವಾಲಯವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದ್ದು, ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವ ಸಂದರ್ಭದಲ್ಲಿ ಜಟಾಯು ಪಕ್ಷಿ ಹೋರಾಟ ನಡೆಸುತ್ತದೆ, ಇದೇ ಸಮಯದಲ್ಲಿ ಪಕ್ಷಿಯ ರೆಕ್ಕೆಯನ್ನು ರಾವಣ ಕತ್ತರಿಸುತ್ತಾನೆ. ಗಾಯಗೊಂಡ ಪಕ್ಷಿಯ ಬೆಟ್ಟದ ಮೇಲೆ ಬೀಳುತ್ತದೆ. ಕೆಲ ದಿನಗಳ ತರುವಾಯ ಶ್ರೀರಾಮನು ಸೀತೆಯನ್ನು ಹುಡುಕಿಕೊಂಡು

ಇದೇ ಮಾರ್ಗನುಸಾರವಾಗಿ ಬಂದು, ರಾವಣ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸಿಕೊಂಡು ಹೋದ ಬಗ್ಗೆ ಜಟಾಯು ಪಕ್ಷಿ ಶ್ರೀರಾಮನಿಗೆ ತಿಳಿಸುತ್ತದೆ. ಆ ಪಕ್ಷಿಯ ಭಕ್ತಿಗೆ ಮೆಚ್ಚಿದ ರಾಮನು ಅದಕ್ಕೆ ಮೋಕ್ಷವನ್ನು ಕರುಣಿಸುತ್ತಾನೆ ಹಾಗೂ ಅದರ ಕೋರಿಕೆಯಂತೆ ಬೆಟ್ಟದಲ್ಲಿ 108 ಶಿವಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ ಎಂದು ಐತಿಹ್ಯವಿದೆ.

ವಿಸ್ಮಯಗಳ ಗಣಿ 

ಬೆಟ್ಟದ ತುತ್ತತುದಿಯಲ್ಲಿ ಸುತ್ತಲೂ ಕಲ್ಲಿನ ಕೋಟೆಯನ್ನು ನಿರ್ಮಿಸಲಾಗಿದ್ದು, ಒಳ ಹೋಗುತ್ತಿದ್ದಂತೆ ಮೆಟ್ಟಿಲುಗಳು ಕಾಣಸಿಗುತ್ತವೆ. ಮೆಟ್ಟಿಲುಗಳ ಇಕ್ಕೆಲಗಳಲ್ಲಿರುವ ಪಟ್ಟಿಕೆಗಳಲ್ಲಿ, ಒಂದು ಕಡೆ ಆನೆಗಳ ಸಾಲು ಹಾಗೂ ಮತ್ತೂಂದು ಕಡೆ ಸುಂದರವಾದ ಹೂವಿನ ಸಾಲಿನ ಕೆತ್ತನೆಗಳಿವೆ. ಮೆಟ್ಟಿಲುಗಳನ್ನೇರಿ ಮುಂದೆ ಸಾಗುತ್ತಿದ್ದಂತೆ ಮಹಾದ್ವಾರವಿದೆ. ಇಲ್ಲಿಂದಲೇ ಶ್ರೀ ಸ್ವಾಮಿಯ ದೇವಸ್ಥಾನ ಬಂಗಾರ ವರ್ಣದ ಗೋಪುರ ಕಾಣಿಸುತ್ತದೆ.

ದೇವಾಲಯದ ಪ್ರಾಂಗಣವನ್ನು ತಲುಪುತ್ತಿದ್ದಂತೆ ಹಲವಾರು ಉಪ ದೇಗುಲಗಳ ದರ್ಶನವಾಗುತ್ತದೆ. ಸೂರ್ಯನಾರಾಯಣ, ಗಣೇಶ ಗುಡಿಗಳಲ್ಲದೆ, ಈಶ್ವರನ ವಿವಿಧ ರೂಪಗಳಾದ ವೀರಭದ್ರ, ಮಹಾಬಲೇಶ್ವರ, ಚಂದ್ರಮೌಳೀಶ್ವರ, ಸೋಮೇಶ್ವರ ಮುಂತಾದ ದೇವರುಗಳ ಗುಡಿಗಳಿವೆ. ಪುಟ್ಟ ಗುಡಿಗಳ ಮಧ್ಯಭಾಗದಲ್ಲಿ ರಾಮೇಶ್ವರ ದೇವಾಲಯವಿದ್ದು, ಗರ್ಭಗೃಹ, ಅಂತರಾಳವಿರುವ ದೇವಾಲಯದ ಮುಂಭಾಗದಲ್ಲಿ ಸುಮಾರು 40 ಅಡಿ ಎತ್ತರವುಳ್ಳ ಏಕಶಿಲಾ ದೀಪಸ್ತಂಭವಿದೆ.

ದೇವಾಲಯದ ಮುಂಬದಿಯಲ್ಲಿ ನಾಗರ ಕಲ್ಲುಗಳು ಹಾಗೂ ಶಿಲಾಶಾಸನಗಳಿವೆ. ಅದಲ್ಲದೆ ಸೀತಾಕೊಳ, ತಾವರೆಕೊಳ ಹಾಗೂ ಏಕಾಂತ ತೀರ್ಥದ ನೀರಿನ ಕೊಳಗಳು ಕಾಣಸಿಗುತ್ತವೆ.ಪ್ರಾಚೀನ ಕಾಲದಿಂದಲೂ ಈ ಭಾಗದ ಜನರು ಶ್ರೀ ಸ್ವಾಮಿಯನ್ನು ಪೂಜಿಸುತ್ತಿದ್ದು, ಇಲ್ಲಿರುವ ಶಾಸನಗಳಲ್ಲಿ ಶ್ರೀರಾಮೇಶ್ವರ, ಜಟಂಗಿ ರಾಮಯದೇವ ಮುಂತಾದ ಹೆಸರುಗಳ ಉಲ್ಲೇಖಗಳಿವೆ. ಬಳೆಗಾರರ ಗುಂಡಿನಲ್ಲಿ ಸಾಮ್ರಾಟ್‌ ಅಶೋಕನ ಶಿಲಾಶಾಸನಗಳು, ವೀರಗಲ್ಲು ಮುಂತಾದ ಪುರಾತಣ್ತೀ ಆಧಾರಗಳು ಇಲ್ಲಿವೆ.

ಜಟಂಗಿ ರಾಮೇಶ್ವರ ಬೆಟ್ಟವನ್ನು ಹೊಂದಿಕೊಂಡು ಜಟಾಯು ಪಕ್ಷಿಯ ಸಮಾಧಿಯಿರುವ ದೊಡ್ಡ ಜಟಂಗಿ ಬೆಟ್ಟವಿದೆ. ಬೆಟ್ಟವನ್ನೇರಲು ಮೆಟ್ಟಿಲುಗಳಿಲ್ಲದ ಕಾರಣ ಕಲ್ಲು ಬಂಡೆಗಳ ಮೇಲೆ ನಡೆದುಕೊಂಡು, ಕೆಲವು ಕಡೆ ತೆವಳಿಕೊಂಡು ಹೋಗಬೇಕಾಗುತ್ತದೆ.  ಬಳ್ಳಾರಿಯಿಂದ 40 ಕಿ.ಮೀ,  ಮೊಳಕಾಲ್ಕೂರುನಿಂದ 30 ಕಿ.ಮೀ  ರಾಂಪುರಕ್ಕೇ ಬಂದು ಅಲ್ಲಿಂದ ದೇವಸಮುದ್ರ ಗ್ರಾಮದವರೆಗೆ ಸಾಗಿದರೆ ನಾಮಫ‌ಲಕ ಕಾಣಸಿಗುತ್ತದೆ.

ಜಟಂಗಿ ರಾಮೇಶ್ವರ ಬೆಟ್ಟದ ಸಮೀಪಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ವಿರಳವಾಗಿರುವುದರಿಂದ ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳುವುದು ಉತ್ತಮ, ಹತ್ತಿರದಲ್ಲಿ ಹೋಟೆಲ್‌ಗ‌ಳು ಇಲ್ಲ. ನೀರು, ಊಟ, ತಿಂಡಿ ವ್ಯವಸ್ಥೆಯನ್ನು ಮಾಡಿಕೊಂಡು ಹೋಗುವುದು ಉತ್ತಮ.

ಎಂ.ವಿ. ಶಿವಯೋಗಿ

ರಾಂಪು

Advertisement

Udayavani is now on Telegram. Click here to join our channel and stay updated with the latest news.

Next