Advertisement

“ತಿಥಿ’ಪೂಜಾ ಹೊಸ ಚಿತ್ರ

10:32 AM Aug 30, 2017 | |

ಕನ್ನಡದಲ್ಲಿ ಈಗ ಒಂದಷ್ಟು ವಿಭಿನ್ನ ಹಾಗೂ ಹೊಸ ಶೈಲಿಯ ಶೀರ್ಷಿಕೆಗಳು ಬರುತ್ತಿವೆ. ಈ ಮೂಲಕ ಆರಂಭದಲ್ಲೇ ಆ ಚಿತ್ರಗಳು ಗಮನ ಸೆಳೆಯುತ್ತಿರುವುದಂತೂ ಸುಳ್ಳಲ್ಲ. “ದಯವಿಟ್ಟು ಗಮನಿಸಿ’, “ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಹೊಸ ಬಗೆಯ ಟೈಟಲ್‌ ಸಾಲಿಗೆ ಈಗ ಮತ್ತೂಂದು ಸೇರ್ಪಡೆಯಾಗಿದೆ. ಅದು “ನೀವು ಕರೆ ಮಾಡಿದ ಚಂದಾದಾರರು ಬಿಜಿಯಾಗಿದ್ದಾರೆ’. ಹೌದು, ಹೀಗೊಂದು ಶೀರ್ಷಿಕೆಯ ಸಿನಿಮಾ ಈಗ ಸೆಟ್ಟೇರಲು ರೆಡಿಯಾಗಿದೆ.

Advertisement

ಸಾಮ್ಯುವೆಲ್‌ ಟೋನಿ ಈ ಚಿತ್ರದ ನಿರ್ದೇಶಕರು. ಯಾರು ಈ ಸಾಮ್ಯುವೆಲ್‌ ಟೋನಿ ಎಂದರೆ ನಿಮಗೆ “ದೂದ್‌ ಸಾಗರ್‌’ ಚಿತ್ರ ತೋರಿಸಬೇಕು. ಮೂರು ವರ್ಷಗಳ ಹಿಂದೆ “ದೂದ್‌ ಸಾಗರ್‌’ ಎಂಬ ಚಿತ್ರವೊಂದು ಬಂದಿರೋದು ನಿಮಗೆ ನೆನಪಿರಬಹುದು. ಆ ಚಿತ್ರವನ್ನು ನಿರ್ದೇಶಿಸಿದ್ದು, ಇದೇ ಸಾಮ್ಯುವೆಲ್‌. ಈಗ ಎರಡನೇ ಸಿನಿಮಾ ಮಾಡಲು ರೆಡಿಯಾಗಿದ್ದಾರೆ. ಚಿತ್ರದ ಟೈಟಲ್‌ಗ‌ೂ ಕಥೆಗೂ ಏನು ಸಂಬಂಧ ಎಂದು ನೀವು ಕೇಳಬಹುದು.

ಚಿತ್ರದ ಟೈಟಲ್‌ನಲ್ಲೇ ಕಥೆ ಅಡಗಿದೆ ಎನ್ನುತ್ತಾರೆ ಸಾಮ್ಯುವೆಲ್‌. “ಸದ್ಯ ಎಲ್ಲರೂ ಬಿಜಿ ಎನ್ನುತ್ತಾರೆ. ಈ ನಡುವೆ ಸಂಬಂಧಗಳು ಕಳೆದುಹೋಗುತ್ತಿವೆ. ಆದರೆ, ಯಾಕಾಗಿ ಬಿಜಿಯಾಗಿರುತ್ತೇವೆ, ಬಿಜಿ ಬಿಜಿ ಎನ್ನುತ್ತಾ ನಾವು ಏನು ಸಾಧಿಸುತ್ತಿದ್ದೇವೆ ಎಂಬ ಅಂಶದೊಂದಿಗೆ ಈ ಸಿನಿಮಾ ಸಾಗುತ್ತದೆ. ಇಂದಿನ ಟ್ರೆಂಡ್‌ಗೆ ತಕ್ಕುದಾದ ಹೊಸ ವಿಷಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ’ ಎನ್ನುವುದು ನಿರ್ದೇಶಕ ಸಾಮ್ಯುವೆಲ್‌ ಮಾತು.  

ಈ ಚಿತ್ರದಲ್ಲಿ ಪೂಜಾ ನಾಯಕಿಯಾಗಿ ನಟಿಸುತ್ತಿದ್ದಾರೆ. “ತಿಥಿ’ ಚಿತ್ರದಲ್ಲಿ ಕಾವೇರಿ ಪಾತ್ರದ ಮೂಲಕ ಗಮನ ಸೆಳೆದ ಪೂಜಾ ಈಗ ಈ ಚಿತ್ರದ ನಾಯಕಿ. ಚಿತ್ರದಲ್ಲಿ ಅವರ ಪಾತ್ರ ಪ್ರಮುಖವಾಗಿದೆಯಂತೆ. “ಚಿತ್ರದಲ್ಲಿ ನಾಯಕಿಯ ಪಾತ್ರ ಕೂಡಾ ಪ್ರಮುಖವಾಗಿದ್ದು, ಪರ್‌ಫಾರ್ಮೆನ್ಸ್‌ಗೆ ಹೆಚ್ಚಿನ ಅವಕಾಶವಿದೆ. ಆ ಪಾತ್ರದಲ್ಲಿ ಪೂಜಾ ನಟಿಸುತ್ತಿದ್ದು, ಅವರು ಕಥೆ ಕೇಳಿ ತುಂಬಾ ಇಷ್ಟಪಟ್ಟರು’ ಎನ್ನುತ್ತಾರೆ ಸಾಮ್ಯುವೆಲ್‌.

ಚಿತ್ರದ ನಾಯಕ ಸೇರಿದಂತೆ ಇತರ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯುತ್ತಿದೆ. ಚಿತ್ರದ ಪ್ರಮುಖ ಪಾತ್ರವೊಂದಕ್ಕಾಗಿ ನಾನಾ ಪಾಟೇಕರ್‌ ಅವರನ್ನು ಕರೆತರುವ ಪ್ರಯತ್ನ ಕೂಡಾ ನಡೆಯುತ್ತಿದೆಯಂತೆ. ಚಿತ್ರ ಪ್ಲಸ್‌ ಸರ್ವೇಸ್‌ ಮೂವೀಸ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದೆ. ಸದ್ಯದಲ್ಲೇ ಚಿತ್ರದ ಮೋಶನ್‌ ಪೋಸ್ಟರ್‌ ಬಿಡುಗಡೆ ಮಾಡುವ ಉದ್ದೇಶ ಕೂಡಾ ಚಿತ್ರತಂಡಕ್ಕಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next