Advertisement

ನಂದಿಗ್ರಾಮದಲ್ಲೇ ಹುಲಿ-ಆನೆ !

02:12 AM Mar 06, 2021 | Team Udayavani |

ಪಶ್ಚಿಮ ಬಂಗಾಲದ ಚುನಾವಣೆ ಕಣ ಗುರುವಾರ ದವರೆಗೂ ಒಂದು ಗತಿಯಲ್ಲಿ ಸಾಗಿತ್ತು. ಶುಕ್ರವಾರ ದಿಂದ ಗತಿ ಬದಲಾಗಿದೆ. ಕಾರಣ, ತೃಣಮೂಲ ಕಾಂಗ್ರೆಸ್‌ ನಾಯಕಿ ಮಮತಾ ಬ್ಯಾನರ್ಜಿ ನಂದಿ ಗ್ರಾಮದಿಂದ ಶಂಖ ಊದಿದ್ದಾರೆ. ಕಳೆದ ಚುನಾವಣೆ ಗಳಲ್ಲಿ ಅವರು ಗೆದ್ದದ್ದು ಭವಾನಿಪುರ್‌ ವಿಧಾನಸಭಾ ಕ್ಷೇತ್ರದಿಂದ. ಈಗ ಇದ್ದಕ್ಕಿದ್ದಂತೆ ಕ್ಷೇತ್ರ ಬದಲಾಯಿಸಿರುವ ಮಮತಾ ನಿನ್ನೆಯವರೆಗೂ ಯೋಜನೆ ರೂಪಿಸಿದ್ದ ಬಿಜೆಪಿಗೆ ಚೆಕ್‌ ಕೊಟ್ಟಿದ್ದಾರೆ. ಇನ್ನು ಮುಂದಿನ ಆಟಕ್ಕೆ ಕಾಯಬೇಕು.

Advertisement

ನಂದಿಗ್ರಾಮ ವಾಸ್ತವವಾಗಿ ಮಮತಾ ಅವರಿಗೆ ಹೊಸ ವರ್ಚಸ್ಸು ತಂದುಕೊಟ್ಟ ಸ್ಥಳ. 2007ರಲ್ಲಿ ಆಗಿನ ಎಡಪಕ್ಷಗಳ ಸರಕಾರವು ನಂದಿಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪನೆಯನ್ನು ಘೋಷಿಸಿತು. ಈ ಹಿನ್ನೆಲೆಯಲ್ಲಿ ರೈತರ ಜಮೀನನ್ನು ಬಲವಂತವಾಗಿ ಕಿತ್ತುಕೊಳ್ಳಲು ನಿರ್ಧರಿಸಿದಾಗಲೇ ಮಮತಾ “ಭೂ ಸ್ವಾಧೀನ ವಿರೋಧಿ’ ಚಳವಳಿ ಆರಂಭಿಸಿದ್ದು. ಇದ ರೊಂದಿಗೆ ಸಿಂಗೂರ್‌ ಸಹ. ಈ ಎರಡು ಸ್ಥಳಗಳಲ್ಲಿ ನಡೆಸಿದ ಹೋರಾಟ ಮಮತಾರಿಗೆ ರೈತ ಪರ ಎಂಬ ಅಭಿದಾನವನ್ನೂ ತಂದಿತು. ಮೂರೂವರೆ ದಶಕಗಳ ಎಡಪಕ್ಷಗಳ ಆಡಳಿತದ ಅಂತ್ಯಕ್ಕೆ ಮುನ್ನುಡಿ ಬರೆದದ್ದು ಇದೇ ನಂದಿಗ್ರಾಮದಿಂದಲೇ. ತನ್ನನ್ನು ದೊಡ್ಡಮಟ್ಟದ ನಾಯಕಿಯಾಗಿ ರೂಪಿಸಿದ ನಂದಿಗ್ರಾಮದಿಂದ ಮಮತಾ ಮತ್ತೂಂದು ಹೋರಾಟಕ್ಕೆ ಸಿದ್ಧವಾಗಿದ್ದಾರೆ ಎಂಬುದು ಒಂದು ವ್ಯಾಖ್ಯಾನ.

ಎರಡನೆಯದಾಗಿ, ಇತ್ತೀಚೆಗಷ್ಟೇ ಬಿಜೆಪಿಗೆ ಸೇರಿದ್ದ ಮಮತಾ ಬಂಟ ಸುವೇಂದು ಅಧಿಕಾರಿಯನ್ನು ಅವರ ಮನೆಯಂಗಳದಲ್ಲೇ ಮುಖಾಮುಖೀ ಎದುರಿಸುವ ಪ್ರಯತ್ನ. 2011ರ ಮಮತಾ ಪಕ್ಷದ ಜಯಭೇರಿಯಲ್ಲಿ ಸುವೇಂದು ಪಾತ್ರ ಹೆಚ್ಚಿತ್ತು. ಈಗ ಜನರು ನನ್ನ ಕೈ ಹಿಡಿಯುತ್ತಾರೋ, ಅವರ ಕೈ ಹಿಡಿಯುತ್ತಾರೋ ಎಂದು ಪರೀಕ್ಷಿಸುವುದು ಒಂದು ನೆಲೆಯಲ್ಲಾದರೆ, ಜನ ನನ್ನನ್ನು ಬೆಂಬಲಿಸಿ ಸುವೇಂದುವಿಗೆ ಮಣ್ಣು ಮುಕ್ಕಿಸಿದರೆ ಅವರ ರಾಜಕೀಯ ಭವಿಷ್ಯಕ್ಕೆ ಕೊನೆ ಮೊಳೆ ಹೊಡೆದಂತೆ ಎಂಬುದು ಮತ್ತೂಂದು ಲೆಕ್ಕಾಚಾರ. ಜತೆಗೆ ಸುವೇಂದುವಿನಿಂದ ಟಿಎಂಸಿ ಇಲ್ಲ, ಟಿಎಂಸಿಯಿಂದ ಸುವೇಂದು ಇದ್ದರು ಎಂಬುದನ್ನೂ ಸಾಬೀತುಪಡಿಸಬಹುದು. ಇಷ್ಟಕ್ಕೇ ಮುಗಿಯಲಿಲ್ಲ. ಪೂರ್ವ ಮತ್ತು ಪಶ್ಚಿಮ ಮಿಡ್ನಾಪುರ ಭಾಗದಲ್ಲಿ ಸುವೇಂದು ಪ್ರಭಾವ ಹೆಚ್ಚು. ಒಂದುವೇಳೆ ತನ್ನ ಸ್ಪರ್ಧೆಯ ಮೂಲಕ ಸುವೇಂದುವನ್ನು ಕಟ್ಟಿ ಹಾಕಿದರೆ, ಹೆಚ್ಚು ಕ್ಷೇತ್ರಗಳಲ್ಲಾಗುವ ನಷ್ಟ ತಡೆಯಬಹುದೆಂಬ ದೂರದ ಅಂದಾಜೂ ಸಹ ಇದೆ. ಇದರ ಬೆನ್ನಿಗೇ ಈ ಪ್ರದೇಶ ಇದುವರೆಗೂ ಸುವೇಂದು ಅಧಿಕಾರಿಯ ವ್ಯಾಪ್ತಿಯಲ್ಲೇ ಇತ್ತು. ಈಗ ಈ ಪ್ರದೇಶದಲ್ಲಿ ಮತಗಳನ್ನು ಸೆಳೆಯುವ ಮತ್ತೂಬ್ಬ ಜಗಜಟ್ಟಿ ಟಿಎಂಸಿಯಲ್ಲಿಲ್ಲ. ನಂದಿಗ್ರಾಮಕ್ಕೆ ಹೋಗದಿದ್ದರೆ ಆ ಪ್ರದೇಶವೆಲ್ಲ ಅಧಿಕಾರಿ ಬುಟ್ಟಿಗೆ ಬಿದ್ದರೆ ಆಗುವ ನಷ್ಟ ಅತ್ಯಂತ ದೊಡ್ಡದು ಎಂಬ ಲೆಕ್ಕವೂ ಇದೆ.

ಇದಲ್ಲದೆ ಮಮತಾರ ರಕ್ಷಣ ಆಟದ ಕ್ರಮವೂ ಇದಾಗಿದೆ. ಮಮತಾರ ಈಗಿನ ಕ್ಷೇತ್ರದ ಲಕ್ಷಣ ಎಲ್ಲವೂ ಹಿಂದಿನಂತಿಲ್ಲ. 2012ರ ಉಪ ಚುನಾವಣೆಯಲ್ಲಿ ಮಮತಾ 50 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆದರೆ 2016 ರಲ್ಲಿ ಈ ಅಂತರ 25 ಸಾವಿರಕ್ಕೆ ಇಳಿದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಭವಾನಿಪುರ್‌ ಕ್ಷೇತ್ರದಿಂದ ಸಿಕ್ಕ ಲೀಡ್‌ ಸುಮಾರು 3 ಸಾವಿರ ಮತಗಳಷ್ಟೇ. ಹಾಗಾಗಿ ಈ ಬಾರಿ ಒಂದು ವೇಳೆ ಚೂರು ಹೆಚ್ಚು ಕಡಿಮೆಯಾದರೆ ಮುಖಭಂಗಕ್ಕೀಡಾಗುವ ಭಯವೂ ಮಮತಾರಿಗಿದೆ.

ಇನ್ನೊಂದು ಮಹತ್ವದ ಅಂಶವೆಂದರೆ, ಮಮತಾ ಬಿಜೆಪಿಯನ್ನು ಹೆಡೆಮುರಿ ಕಟ್ಟಲು ಬಳಸಿರುವುದು “ನಾನು ಮನೆ ಮಗಳು, ಅವರು (ಬಿಜೆಪಿ) ಹೊರಗಿ ನವರು’ ಎಂಬ ವ್ಯಾಖ್ಯಾನವನ್ನು. ಪ್ರಸ್ತುತ ಭವಾನಿ ಪುರ್‌ ಕ್ಷೇತ್ರದಲ್ಲಿ ಶೇ. 70 ರಷ್ಟು ಮತದಾರರು ಮೂಲ ಬಂಗಾಲಿಗರಲ್ಲ. ಗುಜರಾತಿಗಳ ಪ್ರಮಾಣ ಹೆಚ್ಚಿದೆ. ಅವರೇನಾದರೂ ಮುನಿಸಿಕೊಂಡು ಮುಖ ತಿರುಗಿಸಿದರೆ ತಮ್ಮ ವ್ಯಾಖ್ಯಾನವೇ ತಮಗೆ ತಿರುಗು ಬಾಣವಾದೀತೆಂಬ ಆತಂಕವೂ ಮಮತಾರದ್ದು.
ಸದ್ಯಕ್ಕೆ ಮಮತಾರ ನಡೆ ಬಿಜೆಪಿ ಯೋಜನೆ “ಎ’ಯಲ್ಲಿ ಕೊಂಚ ಬದಲಾವಣೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದೆ.

Advertisement

– ಅಶ್ವಘೋಷ

Advertisement

Udayavani is now on Telegram. Click here to join our channel and stay updated with the latest news.

Next